ಯಾರೀತ ಗೋಪಾಲ್ ಕಾಂಡ? ಬಿಜೆಪಿ ಪಾಲಿಗೆ ವರವಾದ 'ಲೋಕಹಿತ' ನಾಯಕ
ಚಂದೀಗಢ, ಅಕ್ಟೋಬರ್ 25: ಹರ್ಯಾಣದಲ್ಲಿ ಲೋಕಹಿತ ಪಕ್ಷ ಮುಖ್ಯಸ್ಥ, ಮಾಜಿ ಸಚಿವ, ಸಿರ್ಸಾ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿದ್ದಲ್ಲದೆ, ಈ ಬಾರಿ ಪಕ್ಷೇತರರನ್ನು ಒಗ್ಗೂಡಿಸಿ ಕಿಂಗ್ ಮೇಕರ್ ಎನಿಸಿಕೊಂಡಿದ್ದಾರೆ. ಮಾಜಿ ಗಗನಸಖಿ ಗೀತಿಕಾ ಶರ್ಮ ಆತ್ಮಹತ್ಯೆ ಪ್ರಕರಣ, ಕಿಡ್ನಾಪ್ ಕೇಸ್ ಗಳಲ್ಲಿ ಜಾಮೀನು ಪಡೆದು ಹೊರ ಬಂದಿರುವ ಗೋಪಾಲ್ ಬೆಂಬಲ ಪಡೆಯದಂತೆ ಹಿರಿಯ ನಾಯಕಿ ಉಮಾ ಭಾರತಿ ಕಿವಿಮಾತು ಹೇಳಿದ್ದಾರೆ. ಇನ್ನು ಕೆಲವರು ಅವರ ಬೆಂಬಲ ಪಡೆದರೂ ಅವರನ್ನು ಸಚಿವ ಸಂಪುಟದಿಂದ ಹೊರಗಿಡುವಂತೆ ಸೂಚಿಸಿದ್ದಾರೆ.
ಹರ್ಯಾಣದ 90 ಕ್ಷೇತ್ರಗಳಿಗೆ ಅಕ್ಟೋಬರ್ 21ರಂದು ಮತದಾನ ನಡೆದು, ಅಕ್ಟೋಬರ್ 24ರಂದು ಫಲಿತಾಂಶ ಹೊರಬಂದಿದ್ದು ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ 40, ಕಾಂಗ್ರೆಸ್ 31, ಜೆಜೆಪಿ 10, ಸ್ವತಂತ್ರ ಅಭ್ಯರ್ಥಿ 8 ಹಾಗೂ ಐಎನ್ಎಲ್ ಡಿ 1 ಸ್ಥಾನ ಗೆದ್ದುಕೊಂಡಿವೆ. ಅಧಿಕಾರ ಸ್ಥಾಪಿಸಲು 46 ಸ್ಥಾನಗಳ ಅಗತ್ಯವಿದೆ.
ಮಹಾರಾಷ್ಟ್ರ, ಹರ್ಯಾಣ ಫಲಿತಾಂಶ 2019: ಗೆದ್ದವರು, ಸೋತವರು
ದುಷ್ಯಂತ್ ಚೌಟಾಲಾ ಅವರ ಜನನಾಯಕ ಜನತಾ ಪಕ್ಷ ಸೆಳೆಯಲು ಕಾಂಗ್ರೆಸ್ ಮುಂದಾಗಿದ್ದು, ಸಿಎಂ ಸ್ಥಾನ ನೀಡುವ ಭರ್ಜರಿ ಆಫರ್ ನೀಡಿದೆ. ಜೊತೆಗೆ 7 ಪಕ್ಷೇತರ ಅಭ್ಯರ್ಥಿಗಳು ಕೂಡ ಕಿಂಗ್ ಮೇಕರ್ಸ್ ಆಗಲಿದ್ದಾರೆ. ಬಿಜೆಪಿಗೆ ಈಗ ಎಲ್ಲಾ ಪಕ್ಷೇತರರ ಬೆಂಬಲ ಅಗತ್ಯವಾಗಿದೆ. ಮೆಹಮ್ ಕ್ಷೇತ್ರದ ಬಾಲ್ರಾಜ್ ಕುಂಡು, ಪ್ರಿತಾಲಾದ ನಯನಾ ಪಾಲ್ ರಾವತ್, ಪುಂಡ್ರಿಯ ರಣಧೀರ್ ಸಿಂಗ್ ಗೊಲ್ಲೆನ್, ಸಿರ್ಸಾದಲ್ಲಿ ಗೋಪಾಲ್ ಕಾಂಡಾ, ರನಿಯಾದ ರಂಜಿತ್ ಸಿಂಗ್ ಹಾಗೂ ಬಡಷಾಪುರ್ ಕ್ಷೇತ್ರದ ರಾಕೇಶ್ ದುಲ್ತಬಾದ್ ಪಕ್ಷೇತರರಾಗಿ ಜಯಗಳಿಸಿದ್ದಾರೆ. ಬಾಲ್ರಾಜ್ ಕುಂಡು ಹಾಗೂ ನಯನಾ ಪಾಲ್ ರಾವತ್ ಬಿಜೆಪಿ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಜಯ ಗಳಿಸಿದ್ದಾರೆ.
ಚೌಟಾಲಾ ಅವರ ಬಲಗೈ ಬಂಟನಾಗಿದ್ದರು
ಒಂದು ಕಾಲದಲ್ಲಿ ದುಷ್ಯಂತ್ ಚೌಟಾಲಾ ಅವರ ಬಲಗೈ ಬಂಟನಂತಿದ್ದ ಕಾಂಡಾ ಅವರು ಚೌಟಾಲಾರಿಗಿಂತ ಮುಂಚಿತವಾಗಿ ಬಿಜೆಪಿ ಬೆಂಬಲಿಸುವ ನಿರ್ಧಾರ ಮಾಡಿಕೂಂಡು 5 ಮಂದಿ ಶಾಸಕರನ್ನು ಚಾರ್ಟೆಡ್ ವಿಮಾನವೇರುವಂತೆ ಮಾಡಿ ದೆಹಲಿಯಲ್ಲಿ ಬಿಜೆಪಿ ಹೈಕಮಾಂಡ್ ಮುಂದೆ ನಿಲ್ಲಿಸಿದ್ದಾರೆ. ಈ ಮೂಲಕ ಮನೋಹರ್ ಲಾಲ್ ಕಟ್ಟರ್ ಅವರು ಎರಡನೇ ಅವಧಿಗೆ ಮುಖ್ಯಮಂತ್ರಿಯಾಗುವ ಅವಕಾಶ ಒದಗಿಸಿದ್ದಾರೆ. ಈ ಮೂಲಕ ಚೌಟಾಲಾಗೆ ಸಿಎಂ ಆಗುವ ಅವಕಾಶವನ್ನು ತಪ್ಪಿಸಿದ್ದಾರೆ.
ಆರೆಸ್ಸೆಸ್ ಜೊತೆ ಸಂಪರ್ಕವಿದೆ ಎಂದ ಕಾಂಡ
"ನನ್ನ ತಂದೆ 1926ರಿಂದ ಆರೆಸ್ಸೆಸ್ ಜೊತೆ ಸಂಪರ್ಕದಲ್ಲಿದ್ದರು. ಸ್ವತಂತ್ರ ನಂತರ ಜನಸಂಘದ ಟಿಕೆಟ್ ಪಡೆದು ಸ್ಪರ್ಧಿಸಿದ್ದರು. ನಾನು ನಡ್ಡಾಜೀ ಜೊತೆ ಮಾತುಕತೆ ನಡೆಸಿದ್ದೇನೆ, ಕಾಂಗ್ರೆಸ್ ಕೂಡಾ ಬೆಂಬಲ ಕೋರಿ ಮನವಿ ಮಾಡಿದೆ. ಆದರೆ, ಕಾಂಗ್ರೆಸ್ ಜೊತೆಗಿನ ಈ ಹಿಂದಿನ ಅನುಭವವನ್ನು ಮನಗಂಡು ಎಲ್ಲಾ ಪಕ್ಷೇತರರು ಈ ಬಾರಿ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಲು ಸಿದ್ಧ ಎಂದಿದ್ದಾರೆ. ಮೋದಿ ಸರ್ಕಾರದಿಂದ ದೇಶ ಪ್ರಗತಿ ಪಥದತ್ತ ಸಾಗಿದೆ. ನಾವೆಲ್ಲರೂ ಯಾವುದೇ ಷರತ್ತಿಲ್ಲದೆ ಬಿಜೆಪಿಯನ್ನು ಬೆಂಬಲಿಸುತ್ತಿದ್ದೇವೆ" ಎಂದು ಕಾಂಡಾ ಹೇಳಿದ್ದಾರೆ.
ವಿವಾದಿತ ರಾಜಕಾರಣಿ ಗೋಪಾಲ್ ಕಾಂಡಾ
ವಿವಾದಿತ ರಾಜಕಾರಣಿ ಗೋಪಾಲ್ ಕಾಂಡಾ ವಿರುದ್ಧವೇ ಬಿಜೆಪಿ ಮುಖಂಡ ಒಂದು ಕಾಲದಲ್ಲಿ ಪ್ರತಿಭಟನೆ ನಡೆಸಿದ್ದರು. 2012ರಲ್ಲಿ ಮಾಜಿ ಗಗನ ಸಖಿ ಗೀತಿಕಾ ಶರ್ಮಾ ಆತ್ಮಹತ್ಯೆಗೆ ಪ್ರಚೋದನೆ ಮಾಡಿದ ಆರೋಪದ ಮೇಲೆ ಕಾಂಡಾ ಬಂಧನವಾಗಿತ್ತು. ಭೂಪಿಂದರ್ ಸಿಂಗ್ ಹೂಡಾ ಅವರ ಕ್ಯಾಬಿನೆಟ್ ನಲ್ಲಿ ಸಚಿವರಾಗಿದ್ದಾಗಲೇ ಕಾಂಡಾ ಮೇಲೆ ಆರೋಪ ಕೇಳಿ ಬಂದಿತ್ತು. ಇನ್ನೊಂದು ಪ್ರಕರಣದಲ್ಲಿ ಮಹಿಳೆಯೊಬ್ಬರಿಗೆ ಕಿರುಕಳ ನೀಡಿದ ಆರೋಪ ಹೊತ್ತುಕೊಂಡರು. ಆ ಮಹಿಳೆ ಸೂಸೈಡ್ ನೋಟ್ ನಲ್ಲಿ ಗೋಪಾಲ್ ಹೆಸರು ಬರೆದು ಆತ್ಮಹತ್ಯೆಗೆ ಶರಣಾದರು. ಸಂತ್ರಸ್ತೆಯ ತಾಯಿ ಕೂಡಾ ಆತ್ಮಹತ್ಯೆ ಮಾಡಿಕೊಂಡರು.
ಗೋಪಾಲ್ ಪತ್ನಿ ವಿರುದ್ಧವೂ ಪ್ರಕರಣ
2009ರಲ್ಲಿ ಐಎನ್ಎಲ್ಡಿಯಲ್ಲಿದ್ದ ಗೋಪಾಲ್ ಗೆ ಚುನಾವಣೆ ಸ್ಪರ್ಧಿಸಲು ಟಿಕೆಟ್ ಸಿಗಲಿಲ್ಲ. ಸ್ವತಂತ್ರವಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದರು. ಹೂಡಾ ಸರ್ಕಾರದಲ್ಲಿ ಸಚಿವರಾದರು. ಕಾಂಡಾ ವಿರುದ್ಧ ಈ ಸಂದರ್ಭದಲ್ಲೇ ಮುರ್ನಾಲ್ಕು ಕ್ರಿಮಿನಲ್ ಕೇಸ್ ಗಳಿದ್ದವು. ಇದಲ್ಲದೆ ಕಾಂಡಾ ಪತ್ನಿ ವಿರುದ್ಧವೂ 40 ಕೋಟಿ ರು ಗಳಷ್ಟು ತೆರಿಗೆ ಹಣ ವಂಚನೆ ಮಾಡಿದ ಆರೋಪವಿದೆ. ಜೊತೆಗೆ ಐದಾರು ಚೆಕ್ ಬೌನ್ಸ್ ಪ್ರಕರಣಗಳಿವೆ.