ದೇವೇಗೌಡರ ಕುಟುಂಬಕ್ಕೆ ದೋಸ್ತಿ ನಾಯಕರದ್ದೇ ಭಯ..!
Recommended Video
ಹಾಸನ, ಏಪ್ರಿಲ್ 07:ಮೊಮ್ಮಕ್ಕಳಿಬ್ಬರನ್ನು ಹಾಸನ ಮತ್ತು ಮಂಡ್ಯದಲ್ಲಿ ಕಣಕ್ಕಿಳಿಸಿ ತಾವು ತುಮಕೂರಲ್ಲಿ ಸ್ಪರ್ಧಿಸಿರುವ ದೇವೇಗೌಡರ ಕುಟುಂಬಕ್ಕೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೋಸ್ತಿಗಳೇ ಕಂಟಕವಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಇದುವರೆಗಿನ ಚುನಾವಣೆಗಳಲ್ಲಿ ಎದುರಾಳಿಗಳ ವಿರುದ್ಧ ಹೋರಾಟ ಮಾಡಿದ್ದರೆ ಸಾಕಾಗುತ್ತಿತ್ತು. ಆದರೆ ಈ ಬಾರಿ ಹಾಗಿಲ್ಲ. ತಮ್ಮ ದೋಸ್ತಿ ಪಕ್ಷವಾದ ಕಾಂಗ್ರೆಸ್ನ ಮುಖಂಡರು ಮತ್ತು ಕಾರ್ಯಕರ್ತರನ್ನು ಮನವೊಲಿಸಿಕೊಂಡು ಎದುರಾಳಿ ಬಿಜೆಪಿಯೊಂದಿಗೆ ಹೋರಾಡಬೇಕಾಗಿದೆ. ಇದು ಅಷ್ಟು ಸುಲಭವಲ್ಲ ಎಂಬುದು ದೇವೇಗೌಡರಿಗೂ ಗೊತ್ತಾಗಿ ಹೋಗಿದೆ.
ಜ್ಯೋತಿಷ್ಯ ವಿಶ್ಲೇಷಣೆ: ಈ 'ಪ್ರತಿಷ್ಠಿತ' ಕ್ಷೇತ್ರಗಳಲ್ಲಿ ಯಾರು ಗೆಲ್ಲಬಹುದು?
ಜತೆಗೆ ಕಾಂಗ್ರೆಸ್ ಮುಖಂಡರು ತಮಗೆ ಸಕರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ದೋಸ್ತಿಯಾಗಿದ್ದರೂ ಮಂಡ್ಯದಲ್ಲಿ ಸುಮಲತಾರಿಗೆ, ಹಾಸನದಲ್ಲಿ ಬಿಜೆಪಿ ಅಭ್ಯರ್ಥಿ ಎ.ಮಂಜು ಅವರಿಗೆ ಬೆಂಬಲ ನೀಡುತ್ತಿದ್ದಾರೆ ಎಂಬುದು ಗೊತ್ತಾಗಿ ಹೋಗಿದೆ. ಹೀಗಾಗಿಯೇ ಅವರು ರಾಹುಲ್ ಗಾಂಧಿಗೆ ದುಂಬಾಲು ಬಿದ್ದು ಅವರ ಮೂಲಕ ರಾಜ್ಯ ಕಾಂಗ್ರೆಸ್ ನಾಯಕರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಿದ್ದಾರೆ.
ರಾಹುಲ್ ಗಾಂಧಿ ಅವರ ಮೂಲಕ ಸೂಚನೆ ಬರುತ್ತಿದ್ದಂತೆಯೇ ಸಿದ್ದರಾಮಯ್ಯ ಕೂಡ ತಮ್ಮ ಪಕ್ಷದ ನಾಯಕರಿಗೆ ಖಡಕ್ ಸಂದೇಶ ರವಾನಿಸಿ ಜೆಡಿಎಸ್ ಅಭ್ಯರ್ಥಿ ಪರ ಕೆಲಸ ಮಾಡುವಂತೆ ಸೂಚಿಸಿದ್ದಾರೆ. ದೇವೇಗೌಡರು ತಮ್ಮ ಮೊಮ್ಮಕ್ಕಳನ್ನು ಕಣಕ್ಕಿಳಿಸಿ ಅವರ ಗೆಲುವಿಗೆ ಕಾಂಗ್ರೆಸ್ ನಾಯಕರು ಸಹಕರಿಸಬೇಕು, ಕೆಲಸ ಮಾಡಬೇಕು ಎಂಬ ಸೂಚನೆ ನೀಡಿದರೆ ಅದನ್ನು ಕಾಂಗ್ರೆಸ್ ಮುಖಂಡರು ಸ್ವೀಕರಿಸುವ ಮನಸ್ಥಿತಿಯಲ್ಲಿಲ್ಲ.
ಹಾಸನ, ಮಂಡ್ಯ ಕಾಂಗ್ರೆಸ್ ನಾಯಕರಿಗೆ ಸಿದ್ದರಾಮಯ್ಯ ಟ್ರೀಟ್ಮೆಂಟ್?
ಹೀಗಾಗಿ ಕಾಂಗ್ರೆಸ್ ಮುಖಂಡರೇ ತಿರುಗಿ ಬಿದ್ದಿದ್ದಾರೆ. ಕಾಂಗ್ರೆಸ್ ಮುಖಂಡ ಮಾಜಿ ಶಾಸಕ ಹೆಚ್.ಎಂ. ವಿಶ್ವನಾಥ್ ಹಾಸನದಲ್ಲಿ ಬಹಿರಂಗವಾಗಿಯೇ ದೇವೇಗೌಡರ ಕುಟುಂಬದ ವಿರುದ್ಧ ಹರಿಹಾಯ್ದಿದ್ದು ಅದನ್ನು ನೋಡಿದರೆ ಹಾಸನದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗುವುದು ಕನಸಿನ ಮಾತು ಎಂಬುದು ಸ್ಪಷ್ಟವಾಗುತ್ತದೆ. ಇಷ್ಟಕ್ಕೂ ಮಾಜಿ ಶಾಸಕ ಹೆಚ್.ಎಂ. ವಿಶ್ವನಾಥ್ ಹೇಳಿದ್ದೇನು ಎಂಬುದು ಇಲ್ಲಿದೆ...
ಕುಟುಂಬ ರಾಜಕಾರಣದ ವಿರುದ್ಧ ಮತ ಚಲಾಯಿಸಿ
ಎಚ್.ಡಿ.ದೇವೇಗೌಡರ ಕುಟುಂಬ ರಾಜಕಾರಣ ವಿರುದ್ಧ ಮತ ಚಲಾಯಿಸಬೇಕಾಗಿದೆ. ಅವರ ಹಿಂದಿನ ಹೋರಾಟವನ್ನು ಇಂದು ನಾವು ಮಾಡುತ್ತಿದ್ದೇವೆ. ಇಂದು ಅವರದೇ ಸರ್ವಾಧಿಕಾರ, ಕುಟುಂಬವೇ ಆಡಳಿತ ನಡೆಸುವ ಪರಿಸ್ಥಿತಿ ಬಂದೊದಗಿದೆ. ಎಚ್.ಡಿ.ದೇವೇಗೌಡರ ಪುತ್ರ ಎಚ್.ಡಿ.ರೇವಣ್ಣರಿಂದಾಗಿ ಜನರು ಅಘೋಷಿತ ತುರ್ತು ಪರಿಸ್ಥಿತಿಯಲ್ಲಿ ಬದುಕುತ್ತಿದ್ದು, ಈ ಪಾಳೆಗಾರಿಕೆ ಸಂಸ್ಕೃತಿಯನ್ನು ಕೊನೆಗಾಣಿಸಬೇಕಾಗಿದೆ.
ದೇವೇಗೌಡರೊಂದಿಗೆ ನಾನು ಕೂಡ ದುಡಿದಿದ್ದೇನೆ
70ರ ದಶಕದಲ್ಲಿ ಎಚ್.ಡಿ.ದೇವೇಗೌಡರು ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿ ಸೆರೆಮನೆ ವಾಸ ಅನುಭವಿಸಿದ್ದರು. ಈ ತುರ್ತು ಪರಿಸ್ಥಿತಿಯ ನಡುವೆ ಜಯಪ್ರಕಾಶ್ ನಾರಾಯಣ್ ಅವರ ನೇತೃತ್ವದಲ್ಲಿ ಸ್ಥಾಪನೆಯಾದ ಜನತಾ ಪಕ್ಷ ಮೊಟ್ಟ ಮೊದಲ ಬಾರಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಾಯಿತು. ಜನತಾ ಪಕ್ಷ ಕಟ್ಟುವಲ್ಲಿ ದೇವೇಗೌಡರೊಂದಿಗೆ ನಾನು ಕೂಡ ದುಡಿದಿದ್ದೇನೆ. ಅಂದಿನ ಜನತಾಪಕ್ಷದ ಮುಖ್ಯ ಧ್ಯೇಯ ಸರ್ವಾಧಿಕಾರ ಹಾಗೂ ವಂಶಪಾರಂಪರ್ಯ ಆಡಳಿತ ಕೊನೆಗೊಳಿಸಿ ದೇಶದಲ್ಲಿ ಪ್ರಜಾಪ್ರಭುತ್ವ ಪುನಃ ಸ್ಥಾಪಿಸುವುದು ಎಂಬುದಾಗಿತ್ತು.
ಸಿದ್ದರಾಮಯ್ಯ ಅವರನ್ನು ಸೋಲಿಸಿದ್ದು ಜನತೆ, ನಾವಲ್ಲ: ಎಚ್ ಡಿ ದೇವೇಗೌಡ
ರೇವಣ್ಣ ಸರ್ವಾಧಿಕಾರ ಆಡಳಿತ ನಡೆಸುತ್ತಿದ್ದಾರೆ
ರೇವಣ್ಣ ಅವರು ಒಂದು ರೀತಿ ಸರ್ವಾಧಿಕಾರ ಆಡಳಿತ ನಡೆಸುತ್ತಿದ್ದಾರೆ. ಇಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಬೆಲೆಯೇ ಇಲ್ಲ. ಹಿಂದೆ ದೇವೇಗೌಡರು ವಂಶ ಪರಂಪಾರ್ಯ ಆಡಳಿತದ ವಿರುದ್ಧ ಹೋರಾಟ ಮಾಡಲು ನಮಗೆ ಸ್ಫೂರ್ತಿಯಾಗಿದ್ದರು. ಈಗ ಅವರ ವಿರುದ್ಧವೇ ನಾವು ಹೋರಾಡುವಂತಹ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ. ಇಡೀ ದೇಶದಲ್ಲಿ ಒಂದೇ ಕುಟುಂಬದಿಂದ ಮೂವರು ಎಂಪಿ ಅಭ್ಯರ್ಥಿಗಳಾಗುವ ಅವಕಾಶವನ್ನು ಯಾರೂ ಪಡೆದುಕೊಂಡಿಲ್ಲ. ಆದ್ದರಿಂದ ಪ್ರಜ್ಞಾವಂತ ಮತದಾರರು ಇದರ ಬಗ್ಗೆ ಜಾಗ್ರತೆ ವಹಿಸಬೇಕು.
ಕಾಲಿಗೆ ಬೀಳಿಸುತ್ತಿರುವುದು ಎಷ್ಟು ಸರಿ?
"ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡುವುದಾದರೆ, ಜಿಲ್ಲೆಯಲ್ಲಿ ಮೈತ್ರಿ ವಿರುದ್ಧ ಮಾತನಾಡುತ್ತಿರುವ ಅದೆಷ್ಟೋ ಕಾರ್ಯಕರ್ತರು, ಮುಖಂಡರನ್ನು ಉಚ್ಚಾಟನೆ ಮಾಡಲಿ. ಕಾಂಗ್ರೆಸ್ ಪಕ್ಷದ ನಾಯಕ ಶಿವರಾಮ್ ಅವರು ಜೆಡಿಎಸ್ ವರಿಷ್ಠರ ಕಾಲಿಗೆ ಬೀಳಲಿ. ಆದರೆ ನಿಷ್ಠಾವಂತ ಕಾರ್ಯಕರ್ತರನ್ನು ಕೂಡ ರೇವಣ್ಣನವರ ಕಾಲಿಗೆ ಬೀಳಿಸುತ್ತಿರುವುದು ಎಷ್ಟು ಸರಿ? ಯಾವ ಕಾರಣಕ್ಕೂ ಪಾಳೇಗಾರಿಕೆ ವಂಶಕ್ಕೆ ಮತ ನೀಡಬೇಡಿ" ಎನ್ನುವ ಮೂಲಕ ಪರೋಕ್ಷವಾಗಿ ಬಿಜೆಪಿ ಅಭ್ಯರ್ಥಿ ಎ.ಮಂಜು ಅವರನ್ನು ಬೆಂಬಲಿಸಿದ್ದಾರೆ ಹೆಚ್.ಎಂ. ವಿಶ್ವನಾಥ್.
ಚುನಾವಣೆಗೆ ದಿನಗಳು ಹತ್ತಿರವಾಗುತ್ತಿದ್ದಂತೆಯೇ ಈ ರೀತಿಯ ಬೆಳವಣಿಗೆಗಳು ದೇವೇಗೌಡರ ಕುಟುಂಬವನ್ನು ಆತಂಕಕ್ಕೆ ತಳ್ಳುವಂತೆ ಮಾಡಿದೆ. ಮುಂದಿನ ಬೆಳವಣಿಗೆಗಳನ್ನು ಕಾದು ನೋಡಬೇಕಾಗಿದೆ.