ಬಿಎಸ್ವೈ ದೆಹಲಿಗೆ ದೌಡು: ಕುತೂಹಲಕ್ಕೆ ಕಾರಣವಾದ 3 ಅಂಶಗಳು
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಕೇಂದ್ರೀಯ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿಗೆ ಆಯ್ಕೆ ಮಾಡಿದ ನಂತರ, ರಾಜ್ಯ ಬಿಜೆಪಿ ವಲಯದಲ್ಲಿ ಸ್ವಲ್ಪ ಚುರುಕುತನ ಕಾಣಿಸಿದ್ದಂತೂ ಹೌದು.
ಸಾವರ್ಕರ್ ಅವರ ರಥಯಾತ್ರೆಯನ್ನು ಮೈಸೂರಿನಿಂದ ಉದ್ಘಾಟಿಸಲು ಬಂದಿದ್ದ ಯಡಿಯೂರಪ್ಪನವರಿಗೆ ಭರ್ಜರಿ ಸ್ವಾಗತವನ್ನೇ ಕಾರ್ಯಕರ್ತರು ಕೋರಿದ್ದರು. ಈ ರಥಯಾತ್ರೆಯ ಮೂಲಕ ಒಂದು ರೀತಿಯಲ್ಲಿ ಚುನಾವಣೆಗೆ ಪೂರ್ವಭಾವಿ ಸಿದ್ದತೆಯನ್ನು ಬಿಜೆಪಿ ಆರಂಭಿಸಿದಂತಿದೆ.
ಉನ್ನತ ಹುದ್ದೆ ಸಿಕ್ಕಿದ ನಂತರ ಯಡಿಯೂರಪ್ಪ ಮೊದಲ ಬಾರಿಗೆ ದೆಹಲಿಗೆ ಶುಕ್ರವಾರ (ಆ 26) ಪ್ರಯಾಣಿಸಿದ್ದಾರೆ. ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಯಡಿಯೂರಪ್ಪ, "ಎರಡು ದಿನಗಳ ದೆಹಲಿ ಪ್ರವಾಸದಲ್ಲಿ ಇರುತ್ತೇನೆ, ಇಂದು ಸಂಜೆ ಪ್ರಧಾನಿ ಮೋದಿಯವರನ್ನು ಭೇಟಿಯಾಗಲಿದ್ದೇನೆ"ಎಂದು ಹೇಳಿದರು.
ಯಡಿಯೂರಪ್ಪನವರ ದೆಹಲಿ ಪ್ರವಾಸ ರಾಜಕೀಯದಲ್ಲಿ ಮೂರು ಕಾರಣಕ್ಕಾಗಿ ಕುತೂಹಲವನ್ನು ಮೂಡಿಸಿದೆ. ಯಡಿಯೂರಪ್ಪನವರು ತಮ್ಮ ಸಲಹೆಗಳನ್ನು ವರಿಷ್ಠರಿಗೆ ನೀಡಲಿದ್ದಾರೆ ಎನ್ನುವ ಮಾತು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ.

ಹೊಸ ಜವಾಬ್ದಾರಿ ಸಿಕ್ಕ ನಂತರ ಮಾರ್ಗದರ್ಶನ
ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಯಡಿಯೂರಪ್ಪ,"ಪ್ರಧಾನಿಯವರ ಭೇಟಿಯ ನಂತರ ಅಮಿತ್ ಶಾ, ಜೆ.ಪಿ.ನಡ್ಡಾ, ರಾಜನಾಥ್ ಸಿಂಗ್ ಅವರನ್ನೂ ಭೇಟಿಯಾಗಲಿದ್ದೇನೆ. ಅವಕಾಶ ಸಿಕ್ಕಿದರೆ ದತ್ತಾತ್ರೇಯ ಹೊಸಬಾಳೆಯವರನ್ನೂ ಭೇಟಿಯಾಗುತ್ತೇನೆ. ಹೊಸ ಜವಾಬ್ದಾರಿ ಸಿಕ್ಕ ನಂತರ ಮಾರ್ಗದರ್ಶನ ಪಡೆಯುವುದು ನನ್ನ ಕರ್ತವ್ಯ. ನನ್ನದಾದ ಸಲಹೆಗಳನ್ನೂ ನೀಡಲಿದ್ದೇನೆ"ಎಂದು ಯಡಿಯೂರಪ್ಪ ಹೇಳಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ
ಸೆಪ್ಟಂಬರ್ 8ರಂದು ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಸರ್ಕಾರದ ಜನೋತ್ಸವ ಕಾರ್ಯಕ್ರಮ ಹಾಗೂ ಸೆಪ್ಟಂಬರ್ 11ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ನಿಗದಿಯಾಗಿದೆ. ಅದಕ್ಕೆ ಮುನ್ನ, ಮೂರು ವಿಚಾರಗಳಿಗೆ ವರಿಷ್ಠರು ತಮ್ಮ ನಿಲುವನ್ನು ಸ್ಪಷ್ಟ ಪಡಿಸಿದರೆ ಸೂಕ್ತ ಎನ್ನುವುದು ಬಿಎಸೈ ಅಭಿಪ್ರಾಯ ಎಂದು ಹೇಳಲಾಗುತ್ತಿದೆ. ಚುನಾವಣಾ ವರ್ಷವಾಗಿರುವುದರಿಂದ ಕಾರ್ಯಕರ್ತರು ಮತ್ತು ಸ್ಥಳೀಯ ಮುಖಂಡರಿಗೆ ಗೊಂದಲ ಇರಬಾರದು ಎನ್ನುವ ತಮ್ಮ ನಿಲುವನ್ನು ಬಿಎಸ್ವೈ ವರಿಷ್ಠರ ಮುಂದೆ ಇಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಜ್ಯ ಘಟಕದ ಅಧ್ಯಕ್ಷರ ಬದಲಾವಣೆ
ರಾಜ್ಯ ಘಟಕದ ಅಧ್ಯಕ್ಷರ ಬದಲಾವಣೆ ಮೂರು ವಿಚಾರಗಳಲ್ಲಿ ಒಂದು ಎಂದು ಹೇಳಲಾಗುತ್ತಿದೆ. ಹಾಲೀ ಅಧ್ಯಕ್ಷ ನಳಿನ್ ಕಟೀಲ್ ಅವರ ಅವಧಿ ಇನ್ನೆರಡು ದಿನಗಳಲ್ಲಿ ಮುಗಿಯಲಿದೆ. ಈ ಹುದ್ದೆಗೆ ಸಿ.ಟಿ.ರವಿ, ಶೋಭಾ ಕರಂದ್ಲಾಜೆ ಮತ್ತು ಸುನೀಲ್ ಕುಮಾರ್ ಅವರ ಹೆಸರು ಮಂಚೂಣಿಯಲ್ಲಿದೆ. ಈ ವಿಚಾರದಲ್ಲಿ ಹೈಕಮಾಂಡ್ ಅಂತಿಮ ನಿರ್ಧಾರವನ್ನು ತೆಗೆದುಕೊಂಡರೆ ಸೂಕ್ತ ಎನ್ನುವ ಅಭಿಪ್ರಾಯವನ್ನು ಯಡಿಯೂರಪ್ಪ ಮಂಡಿಸಬಹುದು.

ಸಂಪುಟ ವಿಸ್ತರಣೆ ವಿಚಾರ ಮತ್ತೆ ರಾಜ್ಯ ರಾಜಕೀಯದಲ್ಲಿ ಸುದ್ದಿ
ಇನ್ನೊಂದು ವಿಚಾರ ಏನೆಂದರೆ ಸಂಪುಟ ವಿಸ್ತರಣೆ. ಈ ವಿಚಾರದ ಬಗ್ಗೆ ಮತ್ತೆ ರಾಜ್ಯ ರಾಜಕೀಯದಲ್ಲಿ ಸುದ್ದಿಗಳು ಹರಿದಾಡುತ್ತಲೇ ಇವೆ. ಇದು ಕಾರ್ಯಕರ್ತರನ್ನು ಗೊಂದಲಕ್ಕೆ ದೂಡಬಹುದು. ಐದು ಖಾಲಿ ಸಚಿವ ಸ್ಥಾನಗಳನ್ನು ಭರ್ತಿ ಮಾಡಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವುದು ಉತ್ತಮ. ಚುನಾವಣಾ ಹತ್ತಿರ ಇರುವುದರಿಂದ ಸರಕಾರದ ಕೆಲಸವನ್ನು ಜನರಿಗೆ ಮುಟ್ಟಿಸಲು ಇದು ಸೂಕ್ತ ದಾರಿಯಾಗಬಹುದು ಎನ್ನುವ ಸಲಹೆಯನ್ನು ಯಡಿಯೂರಪ್ಪ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ನಲವತ್ತು ಪರ್ಸೆಂಟ್ ಕಮಿಷನ್ ವಿಚಾರ ರಾಜ್ಯದಲ್ಲಿ ಮತ್ತೆ ಸದ್ದು
ಮತ್ತೊಂದು ವಿಚಾರ, ನಲವತ್ತು ಪರ್ಸೆಂಟ್ ಕಮಿಷನ್ ವಿಚಾರ ರಾಜ್ಯದಲ್ಲಿ ಮತ್ತೆ ಸುದ್ದಿ ಮಾಡುತ್ತಿದೆ. ಇದು ಸರಕಾರಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಮುಜುಗರಕ್ಕೆ ಕಾರಣವಾಗಬಹುದು ಮತ್ತು ಮುಂದಿನ ಚುನಾವಣೆಗೆ ನಿರ್ಣಾಯಕ ವಿಷಯವಾಗಬಹುದು. ಇದಕ್ಕೆ ಈ ಕೂಡಲೇ ದಿಟ್ಟ ಹೆಜ್ಜೆಯನ್ನು ಇಡಬೇಕಾಗಿದೆ, ಹಾಗಾಗಿ ಬೊಮ್ಮಾಯಿ ಸರಕಾರಕ್ಕೆ ಈ ಸಂಬಂಧ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ಸೂಚಿಸಬೇಕು ಎಂದು ವರಿಷ್ಠರನ್ನು ಯಡಿಯೂರಪ್ಪ ಕೇಳಿಕೊಳ್ಳುವ ಸಾಧ್ಯತೆಯಿದೆ.












Click it and Unblock the Notifications