ಖರ್ಗೆ ಬಹುತೇಕ ಎಐಸಿಸಿ ಬಾಸ್: ದೆಹಲಿಯಲ್ಲಿ 5 ಕನ್ನಡಿಗರ ಕಲರವ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಹಿರಿಯ ನಾಯಕ, ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಸಿದ್ದಾರೆ. ಜೊತೆಗೆ, ಅವರಿಗಿರುವ ಗಾಂಧಿ ಕುಟುಂಬದ ಶ್ರೀರಕ್ಷೆ ಮತ್ತು ಬೆಂಬಲವನ್ನು ಅವಲೋಕಿಸುವುದಾದರೆ ಅವರೇ ಬಹುತೇಕ ಎಐಸಿಸಿಗೆ ಬಾಸ್.
ಸಾಮಾನ್ಯವಾಗಿ ಏನನ್ನೂ ಡಿಮಾಂಡ್ ಮಾಡದೇ ಪಕ್ಷದ ಶಿಸ್ತಿನ ಸಿಪಾಯಿಯಂತಿರುವ ಖರ್ಗೆಯವರು ಹಿಂದಿನಿಂದಲೂ ಹೈಕಮಾಂಡಿನ ಆಪ್ತನಿಷ್ಟರಲ್ಲೊಬ್ಬರು. ಖರ್ಗೆಯವರ ನಾಮಪತ್ರಕ್ಕೆ ಜಿ23 ಗುಂಪಿನ ನಾಯಕರೊಬ್ಬರು ಅನುಮೋದನೆ ನೀಡುವ ಮೂಲಕ ಅವರ ಜಯ ನಿಚ್ಚಳವಾಗಿದೆ.
ರಾಜ್ಯಸಭೆ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ರಾಜೀನಾಮೆ, ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಖಚಿತ ?
ಮಲ್ಲಿಕಾರ್ಜುನ ಖರ್ಗೆಯವರು ಎಐಸಿಸಿಯ ಅಧ್ಯಕ್ಷರಾದರೆ, ಒಟ್ಟು ಐದು ಜನ ಕರ್ನಾಟಕದ ಮೂಲದವರು ರಾಷ್ಟ್ರ ಮಟ್ಟದಲ್ಲಿ ಪ್ರಭಾವೀ ಹುದ್ದೆಯಲ್ಲಿ ಇದ್ದಂತಾಗುತ್ತದೆ. ಎಐಸಿಸಿ ಹುದ್ದೆಯ ರೇಸ್ ನಲ್ಲಿದ್ದ ಕೆ.ಎನ್.ತ್ರಿಪಾಠಿಯವರ ನಾಮಪತ್ರ ತಿರಸ್ಕೃತಗೊಂಡಿದೆ.
ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ನಲ್ಲಿ ರಾಜ್ಯದ ಐದು ಮುಖಂಡರು ಆಯಕಟ್ಟಿನ ಸ್ಥಾನದಲ್ಲಿದ್ದಾರೆ. ಆ ನಾಯಕರ ಹೆಸರು ಮತ್ತು ಕಿರು ಪರಿಚಯವನ್ನು (ಮಲ್ಲಿಕಾರ್ಜುನ ಖರ್ಗೆ ಹೊರತಾಗಿ) ಸ್ಲೈಡಿನಲ್ಲಿ ಮುಂದುವರಿಸಲಾಗಿದೆ:
ಸೋನಿಯಾ ಗಾಂಧಿ ಮುಂದೆ ಮಂಡಿಯೂರಿದರೇ ಸಚಿನ್ ಪೈಲಟ್: ಅಸಲಿಯತ್ತೇನು?
ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಇತ್ತೀಚೆಗೆ ಬಿಜೆಪಿಯ ರಾಷ್ಟ್ರೀಯ ಸಂಸದೀಯ ಮತ್ತು ಚುನಾವಣಾ ಮಂಡಳಿಗೆ ಆಯ್ಕೆಯಾಗಿದ್ದಾರೆ. ಆ ಮೂಲಕ, ಮುಂಬರುವ ಚುನಾವಣೆಗಳಲ್ಲಿ ಯಡಿಯೂರಪ್ಪನವರ ಪಾತ್ರ ಮುಖ್ಯವಾಗುವ ಸಾಧ್ಯತೆಯಿದೆ. ಶಾಸಕರಾಗಿ ಮತ್ತು ಸಂಸದರಾಗಿಯೂ ಯಡಿಯೂರಪ್ಪನವರು ಕೆಲಸ ನಿರ್ವಹಿಸಿದ್ದರು.
ಕರ್ನಾಟಕ ಮೂಲದ ಬಿ.ಎಲ್.ಸಂತೋಷ್
ಕರ್ನಾಟಕ ಮೂಲದ ಬಿ.ಎಲ್.ಸಂತೋಷ್ ಅವರು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕರ್ನಾಟಕ ಬಿಜೆಪಿಯ ಆಗುಹೋಗುಗಳ ಮೇಲೆ ಸಂತೋಷ್ ಹಿಡಿತವನ್ನು ಹೊಂದಿದ್ದಾರೆ. ಉಡುಪಿ ಮೂಲದವರಾದ ಸಂತೋಷ್, ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು ಮತ್ತು ಪಕ್ಷದ ಹೈಕಮಾಂಡ್ ಮಟ್ಟದಲ್ಲೂ ಉತ್ತಮ ಹಿಡಿತವನ್ನು ಹೊಂದಿದ್ದಾರೆ.
ಯುವ ಘಟಕದ ಅಧ್ಯಕ್ಷರಾಗಿರುವ ಶ್ರೀನಿವಾಸ್ ಬಿ.ವಿ
ಎಐಸಿಸಿಯ ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿರುವವರು ಶ್ರೀನಿವಾಸ್ ಬಿ.ವಿ. ಪಕ್ಷದ ಯುವ ಕಾರ್ಯಕರ್ತರನ್ನು ಸಕ್ರಿಯರನ್ನಾಗಿಸುವ ಶ್ರೀನಿವಾಸ್ ಅವರ ಪ್ರಯತ್ನ ಇತ್ತೀಚಿನ ದಿನಗಳಲ್ಲಿ ಯಶಸ್ಸನ್ನು ಪಡೆದುಕೊಳ್ಳುತ್ತಿದೆ. ಶಿವಮೊಗ್ಗದಲ್ಲಿ ಜನಿಸಿರುವ ಶ್ರೀನಿವಾಸ್, ಪಕ್ಷದ ವಿದ್ಯಾರ್ಥಿ (NSUI) ಸಂಘಟನೆಯ ಸದಸ್ಯರೂ ಆಗಿದ್ದರು.
ಸಿ.ಟಿ.ರವಿ ಈಗ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ಕರ್ನಾಟಕ ಸರಕಾರದಲ್ಲಿ ಸಚಿವರಾಗಿ ಕೆಲಸ ನಿರ್ವಹಿಸುತ್ತಿದ್ದ ಸಿ.ಟಿ.ರವಿ ಈಗ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಲೊಬ್ಬರು. ಚಿಕ್ಕಮಗಳೂರು ಅಸೆಂಬ್ಲಿ ಕ್ಷೇತ್ರವನ್ನು ಪ್ರತಿನಿಧಿಸುವ ರವಿಯವರು ಪಕ್ಷದ ಮಹಾರಾಷ್ಟ್ರ, ಗೋವಾ ಮತ್ತು ತಮಿಳುನಾಡು ಬಿಜೆಪಿ ಘಟಕದ ಉಸ್ತುವಾರಿಯಾಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ.
ತೇಜಸ್ವಿ ಸೂರ್ಯ ಹಾಲೀ ಬಿಜೆಪಿ ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷ
ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ತೇಜಸ್ವಿ ಸೂರ್ಯ ಹಾಲೀ ಬಿಜೆಪಿ ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷರು ಕೂಡಾ. ಪಶ್ಚಿಮ ಬಂಗಾಳದ ಚುನಾವಣೆಯ ಸಂದರ್ಭದಲ್ಲಿ ಪಕ್ಷದ ಪರವಾಗಿ ಪ್ರಚಾರ ನಡೆಸಿದ್ದ ತೇಜಸ್ವಿ ಸೂರ್ಯ ಬೆಂಗಳೂರು ಮೂಲದವರು. ಎಬಿವಿಪಿ ಮತ್ತು ಭಾರತೀಯ ಜನತಾ ಮೋರ್ಚಾದ ಸದಸ್ಯರು ಕೂಡಾ ಆಗಿದ್ದಾರೆ.