ತಬ್ಲಿಘಿ ಜಮಾತ್ ಮರ್ಕಾಜ್ : ಭಾರತದ ಕೊರೊನಾ ಹಾಟ್ ಸ್ಪಾಟ್ ಎನಿಸಿದ್ದೇಕೆ?
ನವದೆಹಲಿ, ಏಪ್ರಿಲ್.08: ಕೊರೊನಾ ವೈರಸ್ ಎಂಬ ಮಹಾಮಾರಿ ಭಾರತದಲ್ಲಿ ಅಟ್ಟಹಾಸ ಮೆರೆಯಬಾರದು. ಭಾರತೀಯರನ್ನು ಮಾರಕ ರೋಗದಿಂದ ರಕ್ಷಿಸಲು ಹಲವು ಬಗೆ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗಿತ್ತು. ವಿದೇಶಗಳಿಂದ ಆಗಮಿಸುವ ಪ್ರತಿಯೊಬ್ಬರ ಮೇಲೆ ಹದ್ದಿನಗಣ್ಣು ಇರಿಸಲಾಗಿತ್ತು.
ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆಯುಳ್ಳ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. 130 ಕೋಟಿ ಜನಸಂಖ್ಯೆಯುಳ್ಳ ದೇಶದಲ್ಲಿ ಕೊರೊನಾ ವೈರಸ್ ಸೋಂಕು ಮೂರನೇ ಹಂತಕ್ಕೆ ತಲುಪಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಇದನ್ನು ತಡೆಯುವ ನಿಟ್ಟಿನಲ್ಲಿ ಕಳೆದ ಮಾರ್ಚ್.24ರಂದೇ ಭಾರತ ಲಾಕ್ ಡೌನ್ ಗೆ ಕರೆ ನೀಡಿಲಾಗಿತ್ತು.
ದೇಶದಲ್ಲಿ ಕೊರೊನಾ ವೈರಸ್ ಕಡಿವಾಣಕ್ಕೆ ಇಷ್ಟೆಲ್ಲ ಸುರಕ್ಷತಾ ಕ್ರಮ ಕೈಗೊಂಡಿದ್ದರೂ ಸೋಂಕಿತರ ಸಂಖ್ಯೆಯು ಶರವೇಗದಲ್ಲಿ ಏರಿಕೆಯಾಗುತ್ತಿದೆ. ರಾಷ್ಟ್ರ ರಾಜಧಾನಿ ನವದೆಹಲಿ ನಿಜಾಮುದ್ದೀನಿ ಮರ್ಕಾಜ್ ನಲ್ಲಿ ನಡೆದ ತಬ್ಲಿಘಿ ಜಮಾತ್ ಧರ್ಮಸಭೆಯೇ ಈ ಅವಾಂತರಕ್ಕೆ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಅಲ್ಜಜಿರಾ ಸುದ್ದಿ ಸಂಸ್ಥೆ ನಡೆಸಿದ ತನಿಖಾ ವರದಿ ಪ್ರಿಯ ಓದುಗರಿಗಾಗಿ.

ದೆಹಲಿಯಲ್ಲಿ ಎರಡು ದಿನ ನಡೆದ ತಬ್ಲಿಘಿ ಜಮಾತ್ ಧರ್ಮಸಭೆ
ನವದೆಹಲಿ ನಿಜಾಮುದ್ದೀನ್ ಮರ್ಕಾಜ್ ನಲ್ಲಿ ಎರಡು ದಿನಗಳ ಕಾಲ ತಬ್ಲಿಘಿ ಜಮಾತ್ ಧರ್ಮಸಭೆಯನ್ನು ನಡೆಸಲಾಯಿತು. ಮಾರ್ಚ್.13ರಿಂದ 15ರವರೆಗೂ ನಡೆದ ಧರ್ಮಸಭೆಯಲ್ಲಿ ಕನಿಷ್ಠ 2,500ಕ್ಕೂ ಅಧಿಕ ಮಂದಿ ಮುಸ್ಲಿಮರು ಭಾಗವಹಿಸಿದ್ದರು. ಮಾರ್ಚ್.22ರಂದು ನಿಜಾಮುದ್ದೀನ್ ಮರ್ಕಾಜ್ ನಲ್ಲಿ ಸಾವಿರಾರು ಜನರಿದ್ದ ಐದು ಅಂತಸ್ತಿನ ಕಟ್ಟಡವನ್ನೇ ಅಧಿಕಾರಿಗಳು ಬಂದ್ ಮಾಡಿಸಿದರು.

ಜಮಾತ್ ಕೇಂದ್ರ ಸ್ಥಾನಕ್ಕೆ 8 ಸಾವಿರ ಜನರು ಭೇಟಿ ನೀಡಿದ್ದರು
ಭಾರತದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಈಗಾಗಲೇ 5,000ದ ಗಡಿ ದಾಟಿದೆ. ದೇಶದಲ್ಲಿ ಸೋಂಕು ಮೂರನೇ ಹಂತಕ್ಕೆ ತಲುಪಿದೆಯಾ ಎಂಬ ಅನುಮಾನಗಳೂ ಕೂಡಾ ಬಲಗೊಳ್ಳುತ್ತಿವೆ. ಇದಕ್ಕೆ ಪುಷ್ಠಿ ನೀಡುತ್ತಿರುವುದು ನವದೆಹಲಿಯ ನಿಜಾಮುದ್ದೀನ್ ಮರ್ಕಾಜ್ ಗೆ ಭೇಟಿ ನೀಡಿದವರ ಅಂಕಿ-ಸಂಖ್ಯೆಗಳು. ಏಕೆಂದರೆ ಕಳೆದ ಮಾರ್ಚ್ ನಲ್ಲಿ ತಬ್ಲಿಘಿ ಜಮಾತ್ ನಡೆದ ನಿಜಾಮುದ್ದೀನ್ ಮರ್ಕಾಜ್ ಗೆ ವಿದೇಶಿಗರೂ ಸೇರಿದಂತೆ ಬರೋಬ್ಬರಿ 8,000 ಸಾವಿರ ಮಂದಿ ಭೇಟಿ ನೀಡಿದ್ದರು ಎಂದು ತಿಳಿದು ಬಂದಿದೆ.

ತಬ್ಲಿಘಿ ಜಮಾತ್ ನಲ್ಲಿ ಕೊರೊನಾ ವೈರಸ್ ಬಗ್ಗೆ ನಿರ್ಲಕ್ಷ್ಯ
ಕೊರೊನಾ ವೈರಸ್ ಒಂದು ಸಾಂಕ್ರಾಮಿಕ ಪಿಡುಗು ಎಂಬು ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆಯೇ ಘೋಷಿಸಿದ್ದರೂ, ತಬ್ಲಿಘಿ ಜಮಾತ್ ನಲ್ಲಿ ಈ ಕುರಿತು ದಿವ್ಯ ನಿರ್ಲಕ್ಷ್ಯ ವಹಿಸಲಾಗಿತ್ತು. ಕೊರೊನಾ ವೈರಸ್ ಹರಡುವಿಕೆ ಮುನ್ನೆಚ್ಚರಿಕೆ ವಹಿಸುವಲ್ಲಿ ಕೇಂದ್ರ ಸರ್ಕಾರದ ವಿಳಂಬ ಧೋರಣೆ ವಿರುದ್ಧ ದೂಷಿಸಲಾಗುತ್ತಿದೆ. ಡೇಂಜರ್ ಝೋನ್ ನಲ್ಲಿದ್ದ ಮಲೇಶಿಯಾ ಮತ್ತು ಇಂಡೋನೆಷ್ಯಾದಿಂದ ಆಗಮಿಸಿದ ವಿದೇಶಿಗರನ್ನು ಜಮಾತ್ ನಲ್ಲಿ ಭಾಗವಹಿಸಲು ಅನುಮತಿ ನೀಡಿದ್ದೇ ಇಷ್ಟೆಲ್ಲ ಅವಾಂತರಕ್ಕೆ ಕಾರಣ ಎಂದು ಆರೋಪಿಸಲಾಗುತ್ತಿದೆ.

ವಿಮಾನ ನಿಲ್ದಾಣಗಳಲ್ಲಿ ನಡೆಯಲಿಲ್ವಾ ಸ್ಕ್ರೀನಿಂಗ್?
ವಿದೇಶಗಳಿಂದ ಭಾರತಕ್ಕೆ ಆಗಮಿಸಿದ ಪ್ರತಿಯೊಬ್ಬ ಪ್ರಯಾಣಿಕರನ್ನೂ ಏರ್ ಪೋರ್ಟ್ ಗಳಲ್ಲಿ ಸ್ಕ್ರೀನಿಂಗ್ ಗೆ ಒಳಪಡಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಮರ್ಕಾಜ್ ಗೆ ಆಗಮಿಸುವ ಮೊದಲೇ ಅವರನ್ನು ಏರ್ ಪೋರ್ಟ್ ಗಳಲ್ಲಿ ಸ್ಕ್ರೀನಿಂಗ್ ಗೆ ಒಳಪಡಿಸಲು ವ್ಯವಸ್ಥೆಯೇ ಇರಲಿಲ್ಲ ಎಂದು ತಬ್ಲಿಘಿ ಜಮಾತ್ ವಕ್ತಾರ ಮಜೀರ್ ಉರ್ ರೆಹಮಾನ್ ಆರೋಪಿಸಿದ್ದಾರೆ.

ಲಾಕ್ ಡೌನ್ ಘೋಷಣೆ ಬಳಿಕ ಮರ್ಕಾಜ್ ನಲ್ಲಿ ಸ್ಕ್ರೀನಿಂಗ್
ಕೊರೊನಾ ವೈರಸ್ ವಿರುದ್ಧ ಹೋರಾಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಮಾರ್ಚ್.24ರಿಂದ 21 ದಿನಗಳ ಕಾಲ ಭಾರತ ಲಾಕ್ ಡೌನ್ ಘೋಷಿಸಿದರು. ಅದಾಗಿ ಎರಡು ದಿನಗಳ ನಂತರ ಅಂದರೆ ಮಾರ್ಚ್.26ರಂದು ತಬ್ಲಿಘಿ ಜಮಾತ್ ನಲ್ಲಿ ಭಾಗವಹಿಸಿ ನಿಜಾಮುದ್ದೀನ್ ಮರ್ಕಾಜ್ ನಲ್ಲಿ ವಾಸ್ತವ್ಯ ಹೂಡಿದ್ದ ನೂರಾರು ಮಂದಿ ವಿದೇಶಿ ಬೋಧಕರನ್ನು ಸ್ಕ್ರೀನಿಂಗ್ ಗೆ ಒಳಪಡಿಸಲಾಯಿತು.

ಮರ್ಕಾಜ್ ನಿಂದ ಮೂರೇ ದಿನಗಳಲ್ಲಿ ಎಲ್ಲರೂ ತೆರವು
ನಿಜಾಮುದ್ದೀನ್ ನಗರದಲ್ಲಿರುವ ಮರ್ಕಾಜ್ ನಲ್ಲಿ ವಾಸ್ತವ್ಯ ಹೂಡಿದ್ದ 2,361ಕ್ಕೂ ಅಧಿಕ ಜನರು ಎಷ್ಟೇ ದಿನಗಳಾದರೂ ಹೊರಗಡೆ ಕಾಲಿಡದಂತೆ 64 ವರ್ಷ ವರ್ಷದ ಮಸೀದಿ ಮುಖ್ಯಸ್ಥ ಮೊಹಮ್ಮದ್ ಜಯನುಲ್ ಅಬ್ದಿನ್ ಸೂಚನೆ ನೀಡಿದ್ದರು. ಅದಾಗಿ ಮಾರ್ಚ್.30 ರಿಂದ ಏಪ್ರಿಲ್.01ರ ನಡುವೆ ಅಂದರೆ ಮೂರು ದಿನಗಳಲ್ಲಿ ಮರ್ಕಾಜ್ ನಲ್ಲಿದ್ದ ಎಲ್ಲರನ್ನೂ ತೆರವುಗೊಳಿಸಲಾಯಿತು ಎಂದು ಹೇಳಲಾಗುತ್ತಿದೆ.

ನಿವೃತ್ತ ಶಿಕ್ಷಕ ಮಾಡಿರುವ ಆರೋಪ ನಿಜವೇ?
ಅಸ್ಸಾಂ ಮೂಲದ ನಿವೃತ್ತ ಮುಖ್ಯ ಶಿಕ್ಷಕ ಅಬ್ದಿನ್ ರನ್ನು ನವದೆಹಲಿ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಜಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಐಸೋಲೇಟೆಡ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಬ್ದಿನ್ ತಮ್ಮ ಸಂಬಂಧಿಕರ ಜೊತೆ ದೂರವಾಣಿಯಲ್ಲಿ ಮಾತನಾಡುವಾಗ ವೈದ್ಯರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಇಲ್ಲಿ ವೈದ್ಯರು ಪದೇ ಪದೆ ತಮ್ಮ ಮೂಗಿನಲ್ಲಿ ಪೈಪ್ ನ್ನು ಅಳವಡಿಸುತ್ತಾರೆ. ಅದೆಷ್ಟು ಬಾರಿ ಮಾದರಿ ತಪಾಸಣೆ ನಡೆಸುತ್ತಾರೆ ಎಂದು ದೂಷಿಸಿದ್ದಾರೆ ಎನ್ನಲಾಗಿದೆ.

ದೇಶದಲ್ಲಿ ಆತಂಕ ಸೃಷ್ಟಿಸಿದ ತಬ್ಲಿಘಿ ಜಮಾತ್
ನವದೆಹಲಿಯಲ್ಲಿ ನಡೆದ ತಬ್ಲಿಘಿ ಜಮಾತ್ ಇಡೀ ದೇಶದಲ್ಲೇ ಆತಂಕ ಸೃಷ್ಟಿಸಿತು. ನಿಜಾಮುದ್ದೀನ್ ಮರ್ಕಾಜ್ ನಲ್ಲಿ ಭಾಗವಹಿಸಿದವರ ಹುಡುಕಾಟಕ್ಕಾಗಿ ಕಾರ್ಯಾಚರಣೆ ಚುರುಕಾಯಿತು. ಸೋಮವಾರದ ಅಂಕಿ-ಅಂಶಗಳ ಪ್ರಕಾರ ದೇಶದ 15 ರಾಜ್ಯಗಳಲ್ಲಿ ಇರುವ 25,000 ಸಾವಿರ ಜಮಾತ್ ಸದಸ್ಯರನ್ನು ಪಟ್ಟಿ ಮಾಡಿ ಗೃಹ ದಿಗ್ಬಂಧನದಲ್ಲಿ ಇರಿಸಲಾಯಿತು.

ದುರಾದೃಷ್ಟವಶಾತ್ ಕೊರೊನಾ ಜಿಹಾದ್ ಎಂದುಕೊಂಡರೇ?
ದೇಶದಲ್ಲಿ ಕೊರೊನಾ ವೈರಸ್ ಸೋಂಕು ಹರಡುವಿಕೆ ಪ್ರಮಾಣ ತಬ್ಲಿಘಿ ಜಮಾತ್ ನಲ್ಲಿ ಭಾಗವಹಿಸಿ ವಾಪಸ್ ಆಗಿರುವ ಜನರಿಂದ ವೇಗವಾಗಿ ಹರಡುತ್ತಿರುವುದು ತನಿಖಾ ವರದಿಯಿಂದ ತಿಳಿದು ಬಂದಿದೆ. ಒಂದು ಸಮುದಾಯದ ಜನರು ದುರಾದೃಷ್ಟವಶಾತ್ ಕೊರೊನಾ ಸೋಂಕು ಹರಡಿಸುವುದನ್ನೇ ಜಿಹಾದ್ ಎಂದುಕೊಂಡಿದ್ದಾರೆ ಎಂದು ಸಾಂವಿಧಾನಿಕ ತಜ್ಞ ಫೈಜನ್ ಮುಸ್ತಫಾ ಆತಂಕ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ 10 ಲಕ್ಷದಲ್ಲಿ ಒಬ್ಬರಿಗೆ ಕೊರೊನಾ ಪಾಸಿಟಿವ್
ಭಾರತದ ಜನಸಂಖ್ಯೆಯನ್ನೊಮ್ಮೆ ಗಮನಿಸಿದಾಗ ಈಗಿರುವ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಅಷ್ಟೇನು ದೊಡ್ಡದಾಗಿಲ್ಲ. 10 ಲಕ್ಷ ಜನರಲ್ಲಿ 93 ಜನರಿಗೆ ಕೊರೊನಾ ಪಾಸಿಟಿವ್ ಎಂದು ಲೆಕ್ಕ ಹಾಕಲಾಗುತ್ತಿದೆ. ಆದರೆ ಮರ್ಕಾಜ್ ನಲ್ಲಿ ಭಾಗವಹಿಸುವ ಮೊದಲು ವಿದೇಶಗಳಿಂದ ಆಗಮಿಸಿದ 1,000ಕ್ಕೂ ಅಧಿಕ ಜನರು ದೇಶದ ವಿವಿಧ ಪ್ರದೇಶಗಳಲ್ಲಿ ಸಂಚರಿಸಿದ್ದಾರೆ. ಈ ಪೈಕಿ ಹಲವರಿಗೆ ಸೋಂಕು ತಗಲಿರಬಹುದು ಎಂದು ಶಂಕಿತಸಲಾಗಿದೆ.

ತಮಿಳುನಾಡಿನಲ್ಲಿ 500ಕ್ಕೂ ಅಧಿಕ ಮಂದಿಗೆ ಜಮಾತ್ ನಂಟು
ಭಾರತದ ದಕ್ಷಿಣ ಭಾಗದಲ್ಲಿ ಇರುವ ತಮಿಳುನಾಡಿನಲ್ಲಿ ಪತ್ತೆಯಾಗಿರುವ 610 ಮಂದಿ ಕೊರೊನಾ ವೈರಸ್ ಸೋಂಕಿತರ ಪಟ್ಟಿಯಲ್ಲಿ 570ಕ್ಕೂ ಅಧಿಕ ಮಂದಿ ದೆಹಲಿಯ ತಬ್ಲಿಘಿ ಜಮಾತ್ ನಂಟು ಹೊಂದಿದ್ದಾರೆ. ದೆಹಲಿಯಲ್ಲಿ ನಡೆದ ಧರ್ಮಸಭೆಯಲ್ಲಿ ಭಾಗವಹಿಸಿದವರು ತಾವಾಗೇ ಸ್ವಯಂ ತಪಾಸಣೆಗೆ ಮುಂದೆ ಬರುವಂತೆ ರಾಜ್ಯ ಸರ್ಕಾರವು ಮನವಿ ಮಾಡಿಕೊಳ್ಳುತ್ತಿದಂತೆ 500ಕ್ಕೂ ಅಧಿಕ ಮಂದಿ ತಾವು ಧರ್ಮಸಭೆಯಲ್ಲಿ ಭಾಗವಹಿಸಿದ್ದೇವು ಎಂದು ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ತೆಲಂಗಾಣದಲ್ಲಿ ಕೊರೊನಾಗೆ ಬಲಿಯಾದವರಿಗೆ ತಬ್ಲಿಘಿ ಜಮಾತ್ ನಂಟು
ದೇಶದಲ್ಲಿ ಕೊರೊನಾ ವೈರಸ್ ಹಾವಳಿಗೆ ತಲುಗಿದ ರಾಷ್ಟ್ರಗಳಲ್ಲಿ ತೆಲಂಗಾಣ ಕೂಡಾ ಒಂದಾಗಿದ್ದು, ಅತ್ಯಂತ ದುಸ್ಥಿತಿಯನ್ನು ಎದುರಿಸುತ್ತಿದೆ. ತೆಲಂಗಾಣದಲ್ಲಿ ಇದುವರೆಗೂ 11 ಮಂದಿ ಕೊರೊನಾ ವೈರಸ್ ನಿಂದ ಪ್ರಾಣ ಬಿಟ್ಟಿದ್ದು, ಎಲ್ಲರಿಗೂ ನವದೆಹಲಿಯಲ್ಲಿ ನಡೆದ ತಬ್ಲಿಘಿ ಜಮಾತ್ ನಂಟು ಇರುವುದು ಪತ್ತೆಯಾಗಿದೆ. ಇನ್ನು, ತಬ್ಲಿಘಿ ಜಮಾತ್ ನಲ್ಲಿ ಭಾಗವಹಿಸಿದ 265 ಮಂದಿಗೆ ಕೊರೊನಾ ವೈರಸ್ ಸೋಂಕು ಪಾಸಿಟಿವ್ ಎಂಬ ವರದಿ ಬಂದಿದೆ. ಇದರ ನಡುವೆ ರಾಜ್ಯದಿಂದ ತಬ್ಲಿಘಿ ಜಮಾತ್ ಗೆ ತೆರಳಿದವರ ಹೆಸರನ್ನು ಪಟ್ಟಿ ಮಾಡಲಾಗಿದ್ದು, ಎಲ್ಲರನ್ನೂ ಪತ್ತೆ ಮಾಡಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತದೆ ಎಂದು ಸಚಿವ ಕೆ.ಟಿ.ರಾಮರಾವ್ ತಿಳಿಸಿದ್ದಾರೆ.

ತಬ್ಲಿಘಿಯಲ್ಲಿ ಭಾಗವಹಿಸಿದ ಆಂಧ್ರದ 243 ಮಂದಿಗೆ ಕೊರೊನಾ
ಆಂಧ್ರ ಪ್ರದೇಶದಿಂದ 100 ಮಂದಿ ತಬ್ಲಿಘಿ ಜಮಾತ್ ನಲ್ಲಿ ಭಾಗವಹಿಸಿದ್ದು ಇವರ ಜೊತೆ 25 ಜನರು ಸಂಪರ್ಕದಲ್ಲಿದ್ದರು ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ದಾಮೋದರ್ ಗೌತಮ್ ಸಾವಂಗ್ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಇದುವರೆಗೂ ಪತ್ತೆಯಾಗಿರುವ 260 ಕೊರೊನಾ ಸೋಂಕಿತ ಪ್ರಕರಣಗಳ ಪೈಕಿ 243 ಮಂದಿಗೆ ತಬ್ಲಿಘಿ ಜಮಾತ್ ನಂಟು ಇರುವುದು ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ. ಧಾರ್ಮಿಕ ಮುಖಂಡರು ಮತ್ತು ಪ್ರಭಾವಿ ನಾಯಕರಿಂದ ಸೋಂಕಿತರು ತಾವಾಗೇ ಆಸ್ಪತ್ರೆಗೆ ದಾಖಲಾಗುವುದು ಹಾಗೂ ಗೃಹ ದಿಗ್ಬಂಧನವನ್ನು ಪಾಲಿಸುವ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ದಾಮೋದರ್ ಗೌತಮ್ ಸಾವಂಗ್ ತಿಳಿಸಿದರು.

ಅಸ್ಸಾಂ ಸರ್ಕಾರದ ಎದುರು ತಬ್ಲಿಘಿ ಜಮಾತ್ ಸವಾಲು
ಇನ್ನು, ಅಸ್ಸಾಂ ಸರ್ಕಾರಕ್ಕೆ ತಬ್ಲಿಘಿ ಜಮಾತ್ ನಲ್ಲಿ ಭಾಗವಹಿಸಿದ ಸದಸ್ಯರನ್ನು ಪತ್ತೆ ಮಾಡುವುದೇ ದೊಡ್ಡ ಸವಾಲ್ ಆಗಿ ಪರಿಣಮಿಸಿದೆ. 835 ತಬ್ಲಿಘಿ ಜಮಾತ್ ಸದಸ್ಯರ ಪೈಕಿ 400 ಮಂದಿಯನ್ನು ಗೃಹ ದಿಗ್ಬಂಧನದಲ್ಲಿ ಇರಿಸಲಾಗಿದ್ದು, ಇದುವರೆಗೂ ಒಬ್ಬರೇ ಒಬ್ಬರು ಆಸ್ಪತ್ರೆಗೆ ತಾವಾಗೇ ಬಂದು ವೈದ್ಯಕೀಯ ತಪಾಸಣೆ ಮಾಡಿಸಿಕೊಂಡಿಲ್ಲ. ಇದರ ನಡುವೆ ರಾಜ್ಯದಲ್ಲಿ 25 ಮಂದಿಗೆ ಕೊರೊನಾ ವೈರಸ್ ಸೋಂಕು ಇರುವುದು ಪತ್ತೆಯಾಗಿದೆ.

ಸರ್ಕಾರದ ಆದೇಶವನ್ನು ಉಲ್ಲಂಘಿಸಿ ತಬ್ಲಿಘಿ ಜಮಾತ್
ದೆಹಲಿ ಸರ್ಕಾರವು 50ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ ಎಂದು ಖಡಕ್ ಸೂಚನೆಯನ್ನು ನೀಡಲಾಗಿತ್ತು. ಆದರೆ ನಿಜಾಮುದ್ದೀನ್ ಮರ್ಕಾಜ್ ನಲ್ಲಿ ನಡದೆ ತಬ್ಲಿಘಿ ಜಮಾತ್ ಧರ್ಮಸಭೆಯಲ್ಲಿ ಸರ್ಕಾರಿ ಆದೇಶವನ್ನು ಗಾಳಿಗೆ ತೂರಲಾಗಿದೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.

ಕೊರೊನಾ ವೈರಸ್ ನ್ನು 'ಆಜಾಬ್' ಎಂದು ಕರೆದ ಮೌಲಾನಾ
ಕಳೆದ ಮಾರ್ಚ್.19ರಂದು ಮರ್ಕಾಜ್ ಯೂ ಟ್ಯೂಬ್ ಚಾನೆಲ್ ನಲ್ಲಿ 28 ನಿಮಿಷಗಳ ಆಡಿಯೋವನ್ನು ಅಪ್ ಲೋಡ್ ಮಾಡಿದ್ದು, ಅದರಲ್ಲಿ ಜಮಾತ್ ಮುಖ್ಯಸ್ಥ ಮೌಲಾನಾ ಸಾದ್ ಕೊರೊನಾ ವೈರಸ್ ಎಂಬುದು ದೇವರೇ ನೀಡಿದ ಶಿಕ್ಷೆ(ಆಜಾಬ್) ಎಂದು ಹೇಳಿದ್ದರು. ಅಲ್ಲದೇ ತಬ್ಲಿಘಿ ಜಮಾತ್ ನಲ್ಲಿ ಭಾಗವಹಿಸಿದ್ದಕ್ಕೆ ಸೋಂಕು ಹೆಚ್ಚಾಗಿ ಹರಡುತ್ತಿದೆ ಎಂಬುದು ಸುಳ್ಳು ಎಂದು ಆಡಿಯೋದಲ್ಲಿ ಹೇಳಿದ್ದರು. ಅದಾಗಿ ಕೆಲಹೊತ್ತಿನಲ್ಲೇ ಮತ್ತೊಂದು ಆಡಿಯೋ ಅಪ್ ಲೋಡ್ ಮಾಡಿದ ಮೌಲಾನಾ ಸಾದ್, ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವಂತೆ ಹಿಂಬಾಲಕರಲ್ಲಿ ಮನವಿ ಮಾಡಿಕೊಂಡಿದ್ದರು.

ಮೌಲಾನಾ ಸಾದ್ ವಿರುದ್ಧ ದೆಹಲಿ ಪೊಲೀಸರಿಂದ ಪ್ರಕರಣ
ದೇಶದಲ್ಲಿ ಒತ್ತಡ ಹೆಚ್ಚಾಗುತ್ತಿದ್ದಂತೆ ದೆಹಲಿ ಕ್ರೈಂ ಬ್ರಾಂಚ್ ಪೊಲೀಸರು ಅಲರ್ಟ್ ಆದರು. ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ನಿಯಮ ಉಲ್ಲಂಘಿಸಿದ ಮೌಲಾನಾ ಸಾದ್ ವಿರುದ್ಧ ಬ್ರಿಟಷ್ ಕಾಲದ ಸಾಂಕ್ರಾಮಿಕ ರೋಗ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಯಿತು. ಈ ಕಾನೂನಿನ ಪ್ರಕಾರ ತಪ್ಪಿತಸ್ಥರಿಗೆ 6 ತಿಂಗಳ ಜೈಲುಶಿಕ್ಷೆ ಅಥವಾ 1 ಸಾವಿರ ರೂಪಾಯಿ ದಂಡ ಇಲ್ಲವೇ ಎರಡನ್ನೂ ವಿಧಿಸಲು ಅವಕಾಶವಿರುತ್ತದೆ.

ಮೌಲಾನಾ ತಪ್ಪಿಸಿಕೊಳ್ಳಲು ಯತ್ನಿಸಿದ್ದು ಸುಳ್ಳು ಸುದ್ದಿ
ಇನ್ನು, ಮೌಲಾನಾ ಸಾದ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದರು ಎಂಬುದು ಸುಳ್ಳು ಸುದ್ದಿ ಎಂದು ವಕೀಲ ಮಜೀಬ್-ಉರ್-ರೆಹಮಾನ್ ಸ್ಪಷ್ಟನೆ ನೀಡಿದ್ದಾರೆ. ಕೋರ್ಟ್ ನೀಡಿದ ಸಮನ್ಸ್ ಪಾಲಿಸಲು ಗೃಹ ದಿಗ್ಬಂಧನದಲ್ಲಿದ್ದರು. ಸರ್ಕಾರ ಆದೇಶಿಸುತ್ತಿದ್ದಂತೆ ಮಾರ್ಚ್.22ರಂದೇ ಮರ್ಕಾಜ್ ಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಇಷ್ಟಾಗಿಯೂ ತಬ್ಲಿಘಿ ಜಮಾತ್ ಒಂದನ್ನೇ ಸೋಂಕು ಹರಡಲು ಮುಖ್ಯ ಕಾರಣ ಎನ್ನುವಂತೆ ದೂಷಿಸುವುದು ತರವಲ್ಲ ಎಂದು ವಕೀಲ ಮಜೀಬ್-ಉರ್-ರೆಹಮಾನ್ ತಿಳಿಸಿದ್ದಾರೆ.

ದೇಶದಲ್ಲಿ ಮಾರ್ಚ್.13 ಆರೋಗ್ಯ ತುರ್ತು ಪರಿಸ್ಥಿತಿ ಇರಲಿಲ್ಲ
ಭಾರತದಲ್ಲಿ ಮಾರ್ಚ್.13ರಂದು ಕೇಂದ್ರ ಆರೋಗ್ಯ ಸಚಿವಾಲಯದಿಂದ ಯಾವುದೇ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ ಆಗಿರಲಿಲ್ಲ. ಸಿಖ್ ದೇಗುಲಗಳು, ಹಿಂದೂ ಮಂದಿರಗಳು ಎಲ್ಲವೂ ತೆರೆದಿದ್ದವು. ಅದರಂತೆ ತಬ್ಲಿಘಿ ಜಮಾತ್ ನಲ್ಲೂ ಕೂಡಾ ಧರ್ಮಸಭೆಯನ್ನು ಮಾಡಲಾಯಿತು. ಮಾರ್ಚ್ ಅಂತ್ಯದವರೆಗೂ ಸ್ಕ್ರೀನಿಂಗ್ ವ್ಯವಸ್ಥೆ ಮಾಡುವಲ್ಲಿ ಸರ್ಕಾರಗಳು ವೈಫಲ್ಯತೆ ಅನುಭವಿಸಿದವು. ಇದರಿಂದ ಮರ್ಕಾಜ್ ಸದಸ್ಯರಲ್ಲಿ ಕೊರೊನಾ ವೈರಸ್ ಸೋಂಕಿದ್ದರೂ ಸರಿಯಾದ ತಪಾಸಣೆ ನಡೆಸಲಿಲ್ಲ. ಹೀಗಾಗಿ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡಿದೆ ಎಂದು ವಕೀಲ ಮಜೀಬ್-ಉರ್-ರೆಹಮಾನ್ ಸ್ಪಷ್ಟನೆ ನೀಡಿದ್ದಾರೆ.

ದೆಹಲಿ ಲೋಕಲ್ ಮ್ಯಾಜಿಸ್ಟ್ರೇಟರ್ಸ್ ಸ್ಪಂದಿಸಲಿಲ್ಲವೇ?
ಮಾರ್ಚ್.22ರಂದು ನಡೆದ ಜನತಾ ಕರ್ಫ್ಯೂ ನಂತರ ತಬ್ಲಿಘಿ ಜಮಾತ್ ಅಧಿಕಾರಿಗಳು ಸ್ಥಳೀಯ ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದರು. ಜಮಾತ್ ನಲ್ಲಿ ಭಾಗವಹಿಸಿದವರು ತೆರಳುವುದಕ್ಕೆ ಅನುಮತಿ ನೀಡುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಮಾರ್ಚ್.25ರಂದು ಜಮಾತ್ ಅಧಿಕಾರಿಗಳು ಉಪ-ವಿಭಾಗದ ಮ್ಯಾಜಿಸ್ಟ್ರೇಟ್ ಅಧಿಕಾರಿಗಳನ್ನು ಭೇಟಿ ಮಾಡಿದ್ದು, ಪಾಸ್ ನೀಡುವಂತೆ ಕೋರಿದರೂ ಅಧಿಕಾರಿಗಳು ಸ್ಪಂದಿಸಲಿಲ್ಲ. ಸರ್ಕಾರಿ ಪ್ರಾಧಿಕಾರಗಳ ನಿರ್ಲಕ್ಷ್ಯದಿಂದ ತಬ್ಲಿಘಿ ಜಮಾತ್ ನಡೆದಿದೆ ಎಂದು ಎಂದು ವಕೀಲ ಮಜೀಬ್-ಉರ್-ರೆಹಮಾನ್ ಆರೋಪಿಸಿದ್ದಾರೆ.

ಜಮಾತ್ ಗೆ ಆಗಮಿಸಿದ ವಿದೇಶಿಗರ ಮೇಲೇಕೆ ನಿರ್ಲಕ್ಷ್ಯ?
ಕೇಂದ್ರ ಸರ್ಕಾರದ ನಿಯಮವನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ 960 ವಿದೇಶಿಗರ ವೀಸಾವನ್ನು ಕಪ್ಪು ಪಟ್ಟಿಗೆ ಸೇರಿಸಿದೆ. ಆದರೆ ಸರ್ಕಾರದ ಅಂಕಿ-ಅಂಶಗಳ ಪ್ರಕಾರ ಕಳೆದ ಮಾರ್ಚ್ ತಿಂಗಳಿನಲ್ಲಿ 2,100ಕ್ಕೂ ಹೆಚ್ಚು ವಿದೇಶಿಗರು ತಬ್ಲಿಘಿ ಜಮಾತ್ ನಲ್ಲಿ ಭಾಗವಹಿಸಲು ದೇಶಕ್ಕೆ ಆಗಮಿಸಿದ್ದರು. ಈ ಪೈಕಿ ಚೀನಾ ಮತ್ತು ಇಟಲಿ ಪ್ರಜೆಗಳ ಮೇಲೆ ಮಾತ್ರ ಸರ್ಕಾರವು ಲಕ್ಷ್ಯ ವಹಿಸಿತ್ತು. ಮಲೇಶಿಯಾದ ಕೌಲಾಲಂಪುರದಲ್ಲಿ ಇರುವ ಸ್ರಿ ಪೆತಲಿಂಗ್ ಮಸೀದಿಯಲ್ಲಿ ನಡೆದ ಸಾಮೂಹಿಕ ಧಾರ್ಮಿಕ ಸಭೆಯನ್ನು ಮುಗಿಸಿಕೊಂಡ ಹಲವು ಮಂದಿ ದೆಹಲಿಯ ಜಮಾತ್ ನಲ್ಲಿ ಭಾಗವಹಿಸಲು ಫೆಬ್ರವರಿ.27ರಿಂದ ಮಾರ್ಚ್.01ಕ್ಕೂ ಮೊದಲೇ ಭಾರತಕ್ಕೆ ಆಗಮಿಸಿದ್ದರು.

ಕೊರೊನಾ ವೈರಸ್ ಲಿಂಕ್: ಮಲೇಶಿಯಾ ಟು ಇಂಡಿಯಾ?
ಕೊರೊನಾ ವೈರಸ್ ಸೋಂಕು ಹರಡುವ ಭೀತಿ ನಡುವೆಯೂ ಮಲೇಶಿಯಾದ ಕೌಲಾಲಂಪುರ್ ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ 16,500ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಮಲೇಶಿಯಾ ಅಷ್ಟೇ ಅಲ್ಲದೇ ಕಾಂಬೋಡಿಯಾ, ಸಿಂಗಾಪೂರ್, ಥೈಲಾಂಡ್, ಫಿಲಿಫೈನ್ಸ್ ನಿಂದಲೂ ಜನರು ಈ ಧರ್ಮಸಭೆಯಲ್ಲಿ ಭಾಗಿಯಾಗಿದ್ದರು. ಅಲ್ಲಿ ಭಾಗವಹಿಸಿದ ಬೋಧಕರೇ ದೆಹಲಿಯ ತಬ್ಲಿಘಿ ಜಮಾತ್ ನಲ್ಲಿ ಭಾಗವಹಿಸಲು ಫೆಬ್ರವರಿಯಲ್ಲೇ ಭಾರತಕ್ಕೆ ಆಗಮಿಸಿದ್ದರು. ಅಂಥವರಿಂದ ಕೊರೊನಾ ಸೋಂಕು ಹರಡಿರುವುದನ್ನೂ ತಳ್ಳಿ ಹಾಕುವಂತಿಲ್ಲ ಎಂಬುದು ವಕೀಲ ಮಜೀಬ್-ಉರ್-ರೆಹಮಾನ್ ವಾದ.

ತೆಲಂಗಾಣದಲ್ಲಿ ಮೊದಲ ವಿದೇಶಿ ಬೋಧಕನಿಗೆ ಸೋಂಕು
ಕಳೆದ ಮಾರ್ಚ್.16ರಂದು ತೆಲಂಗಾಣ ರಾಜಧಾನಿ ಹೈದ್ರಾಬಾದ್ ನಲ್ಲಿ ಇಂಡೋನೆಷ್ಯಾ ಮೂಲದ 10 ಮಂದಿ ಧರ್ಮ ಬೋಧಕರನ್ನು ಐಸೋಲೇಟೆಡ್ ವಾರ್ಡ್ ನಲ್ಲಿ ದಾಖಲು ಮಾಡಿಕೊಳ್ಳಲಾಯಿತು. ಮರುದಿನ ಈ ಪೈಕಿ ಒಬ್ಬರಲ್ಲಿ ಕೊರೊನಾ ವೈರಸ್ ಸೋಂಕು ಇರುವುದು ಪತ್ತೆಯಾಯಿತು. ನಂತರ ಮಾರ್ಚ್.21ರಂದು ಎಲ್ಲ 10 ಜನರಿಗೆ ಕೊರೊನಾ ಸೋಂಕು ಪಾಸಿಟಿವ್ ಎಂದು ತಿಳಿದು ಬಂತು. ಆದರೆ ಮಾರ್ಚ್.26ರಂದು ಕಾಶ್ಮೀರದಲ್ಲಿ ಯಾವುದೇ ಪ್ರಯಾಣದ ಹಿನ್ನೆಲೆ ಇಲ್ಲದೇ ಧರ್ಮಬೋಧಕರೊಬ್ಬರು ಕೊರೊನಾ ವೈರಸ್ ನಿಂದ ಪ್ರಾಣ ಬಿಟ್ಟರು.

ಜಮಾತ್ ನಿಂದ ರಾಜಕೀಯದ ಹೊರತಾದ ಸಂದೇಶ
ತೆಲಂಗಾಣದಲ್ಲಿ ಇಂಡೋನೆಷ್ಯಾ ಮೂಲದ 10 ಮಂದಿಗೆ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ ಸೋಂಕು ಹರಡುವುದಕ್ಕೆ ತಬ್ಲಿಘಿ ಜಮಾತ್ ಕಾರಣವೆಂದು ದೂಷಿಸುವುದು ಸರಿಯಲ್ಲ ಎಂದು ಸಾಂವಿಧಾನಿಕ ತಜ್ಞ ಫೈಜಲ್ ಮುಸ್ತಫಾ ತಿಳಿಸಿದ್ದಾರೆ. ಅಲ್ಲದೇ 1926ರಲ್ಲಿ ಹರಿಯಾಣದ ಮೇವಾತ್ ಪ್ರದೇಶದ ಮೌಲಾನಾ ಮಹಮ್ಮದ್ ಇಲ್ಯಾಸ್ ಕಂಧಲ್ವಿ ಆರಂಭಿಸಿದ ಜಮಾತ್, ಪ್ರವಾದಿ ಮೊಹಮ್ಮದ ಸಂದೇಶವನ್ನು ಸಾರುವುದೇ ಆಗಿದೆ. ಸದ್ಯ ಅವರ ಮೊಮ್ಮಗ ಮೌಲಾನಾ ಸಾದ್ ಈ ಕಾರ್ಯವನ್ನು ಮಾಡುತ್ತಿದ್ದಾರೆ.

ಕೆಲವರ ತಪ್ಪಿಗೆ ಇಡೀ ಸಮುದಾಯವನ್ನು ದೂಷಿಸುವುದೇ?
ಕೊರೊನಾ ವೈರಸ್ ಹರಡುವುದಕ್ಕೆ ಒಂದು ಸಮುದಾಯವೇ ಕಾರಣ ಎಂದು ಮುಖ್ಯವಾಹಿನಿಯಲ್ಲಿ ಬಿಂಬಿಸಲಾಗುತ್ತಿದೆ. ವಿಶ್ವದಾದ್ಯಂತ 80 ಸಾವಿರಕ್ಕೂ ಅಧಿಕ ಬಲಿ ಪಡೆದ ಕೊರೊನಾ ವೈರಸ್ ಹರಡಲು ಭಾರತದಲ್ಲಿ ಇರುವ 20 ಕೋಟಿ ಜನಸಂಖ್ಯೆಯುಳ್ಳ ಒಂದು ಸಮುದಾಯವನ್ನು ಗುರಿಪಡಿಸುವುದು ನ್ಯಾಯವೇ ಎಂಬ ಪ್ರಶ್ನೆ ಎದುರಾಗಿದೆ. ಇದರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ '#CoronaJihad' ಟ್ರೆಂಡಿಂಗ್ ನಲ್ಲಿದೆ. ಮಾರ್ಚ್.28ರಿಂದ ಈಚೆಗೆ '#CoronaJihad' ಅಡಿಯಲ್ಲಿ 3 ಲಕ್ಷಕ್ಕೂ ಅಧಿಕ ಸಂದೇಶಗಳನ್ನು ಟ್ವೀಟ್ ಮಾಡಲಾಗಿದೆ. 16 ಕೋಟಿಗೂ ಅಧಿಕ ಮಂದಿ ಈ ಟ್ವೀಟ್ ಗಳನ್ನು ನೋಡಿದ್ದಾರೆ. ತಬ್ಲಿಘಿ ಜಮಾತ್ ಒಂದು ಕೊರೊನಾ ಭಯೋತ್ಪಾದನೆ ಎಂದು ಕೆಲವರು ದೂಷಿಸುತ್ತಿದ್ದಾರೆ. ಕೇಂದ್ರ ಸಚಿವರೊಬ್ಬರು ಮರ್ಕಾಜ್ ನಲ್ಲಿ ನಡೆದ ಧರ್ಮಸಭೆ 'ತಾಲಿಬಾನ್ ಅಪರಾಧ' ಎಂದು ಕಿಡಿ ಕಾರಿದ್ದಾರೆ.

ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಒಗ್ಗಟ್ಟೇ ಮಂತ್ರ
ಭಾರತದಲ್ಲಿ ಕೊರೊನಾ ವೈರಸ್ ವಿರುದ್ಧ ಹೋರಾಡುವ ಸಂದರ್ಭದಲ್ಲಿ ಕೊರೊನಾ ಜಿಹಾದ್ ಎಂದು ಬಿಂಬಿಸುತ್ತಿರುವುದು ಹಾನಿಕಾರಕ ಬೆಳವಣಿಗೆಯಾಗಿದೆ. ಮಾರಕ ಸೋಂಕನ್ನು ದೇಶದಿಂದ ಹೊಡೆದೋಡಿಸಲು ಧರ್ಮಗಳಿಂದ ಆಚೆಗೆ ಎಲ್ಲರೂ ಒಂದಾಗಬೇಕು. ಕೋಮು-ಸಮುದಾಯಗಳನ್ನು ಬದಿಗಿಟ್ಟು ಒಗ್ಗಟ್ಟಾಗಿ ಸರ್ಕಾರದ ನಿಯಮಗಳನ್ನು ಪಾಲಿಸುತ್ತಾ ಎದುರಾಗಿರುವ ಗಂಡಾಂತರದಿಂದ ಭಾರತವನ್ನೂ ಮತ್ತು ಭಾರತೀಯರನ್ನೂ ರಕ್ಷಿಸಬೇಕಿದೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications