ಅರ್ಧದರಕ್ಕೆ ಮದ್ಯ, ಉಚಿತ ಮೇಕೆ, ಆಭರಣ : ಇದು ಪ್ರಣಾಳಿಕೆ
ನವದೆಹಲಿ, ಏಪ್ರಿಲ್ 17: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳು ತಮ್ಮ ಮತದಾರರನ್ನು ಸೆಳೆಯಲು ನಾನಾ ರೀತಿಯ ಆಶ್ವಾಸನೆ, ಭರವಸೆಗಳ ಮಹಾಪೂರ ಹರಿಸುವುದು ಮಾಮೂಲಿ. ಕೆಲ ಪಕ್ಷಗಳ, ಅಭ್ಯರ್ಥಿಗಳ ಪ್ರಣಾಳಿಕೆಯಲ್ಲಿ ಅನೇಕ ಅಂಶಗಳು ಹುಬ್ಬೇರಿಸುವುದಷ್ಟೇ ಅಲ್ಲ, ಅಚ್ಚರಿ ಮೂಡಿಸುತ್ತವೆ.
ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಪ್ರಣಾಳಿಕೆಗಳ ಬಗ್ಗೆ ಚರ್ಚೆ ಇನ್ನೂ ಮುಂದುವರಿದಿದೆ. ಉದ್ಯೋಗ ಸೃಷ್ಟಿ, ರೈತರ ಸಮಸ್ಯೆ ಎಲ್ಲಾ ಪಕ್ಷಗಳಲ್ಲಿ ಪ್ರಮುಖಾಂಶಗಳಾಗಿವೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪ್ರತ್ಯೇಕ 'ಕಿಸಾನ್ ಬಜೆಟ್' ಪ್ರತಿ ವರ್ಷ ಮಂಡಿಸುವ ಭರವಸೆ ನೀಡಲಾಗಿದೆ. ರಾಷ್ಟ್ರೀಯ ಕೃಷಿ ಅಭಿವೃದ್ಧಿ ಹಾಗೂ ಯೋಜನಾ ಆಯೋಗ ಸ್ಥಾಪನೆಯ ಭರವಸೆ ನೀಡಲಾಗಿದೆ.

ಇನ್ನು ಬಿಜೆಪಿ ಕೂಡಾ ಪ್ರಣಾಳಿಕೆಯಲ್ಲಿ ರೈತರ ಪರ ಅಂಶಗಳನ್ನು ಸೇರಿಸಿದ್ದು, 1 ಲಕ್ಷ ರುವರೆಗೆ ಕೃಷಿ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ 1 -5 ವರ್ಷ ಅವಧಿಗೆ ನೀಡಲು ಮುಂದಾಗಿದ್ದು, ಅಸಲು ವಾಪಸ್ ಮಾಡುವ ಷರತ್ತು ವಿಧಿಸಲಾಗಿದೆ. 2022ರ ಅವಧಿಯೊಳಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಆಶ್ವಾಸನೆ ನೀಡಲಾಗಿದೆ.
ಈಗ ಇಲ್ಲೊಂದು ಪಕ್ಷದ ಪ್ರಣಾಳಿಕೆ ಎಲ್ಲರ ಹುಬ್ಬೇರುವಂತೆ ಮಾಡುತ್ತದೆ ಓದಿ. ದೆಹಲಿಯ ಸಾಂಝಿ ವಿರಾಸತ್ ಪಕ್ಷದ ಪ್ರಣಾಳಿಕೆಯಂತೆ ಶೇ 50ರ ರಿಯಾಯಿತಿ ದರದಲ್ಲಿ ಮದ್ಯ ನೀಡಲಾಗುತ್ತದೆ. ಮುಸ್ಲಿಮರಿಗೆ ಈದ್ ಸಂದರ್ಭದಲ್ಲಿ ಕುರಿ, ಮೇಕೆ ನೀಡುವ ಭರವಸೆ ನೀಡಲಾಗಿದೆ. ಮಹಿಳೆಯರಿಗೆ ವಿಶೇಷ ಸಂದರ್ಭದಲ್ಲಿ ಉಚಿತ ಚಿನ್ನಾಭರಣ ಕೊಡುವ ಆಶ್ವಾಸನೆ ನೀಡಲಾಗಿದೆ.
ಹೀಗೊಂದು ಭರವಸೆ ಹೊತ್ತ ಪೋಸ್ಟರ್ ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೆಯಾಗುತ್ತಿದೆ. ಈ ಪಕ್ಷದ ಅಭ್ಯರ್ಥಿ ಅಮಿತ್ ಶರ್ಮ ಅವರು ಈಶಾನ್ಯ ದೆಹಲಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಅಮಿತ್ ಅವರು ನೀಡಿರುವ ಭರವಸೆಗಳು ಇಲ್ಲಿವೆ:

* ಪಿಎಚ್ ಡಿ ತನಕ ಎಲ್ಲರಿಗೂ ಉಚಿತ ಶಿಕ್ಷಣ.
* ದೆಹಲಿಯಲ್ಲಿ ವಿದ್ಯಾರ್ಥಿಯರಿಗೆ ಉಚಿತ ಮೆಟ್ರೋ, ಬಸ್ ಸೇವೆ.
* ಖಾಸಗಿ ಶಾಲೆಗಳಲ್ಲೂ ವಿದ್ಯಾರ್ಥಿಗಳಿಗೆ ಯಾವುದೇ ಬೋಧನಾ ಶುಲ್ಕವಿಲ್ಲ.
* ಉಚಿತ ರೇಷನ್, ನವಜಾತ ಹೆಣ್ಣು ಶಿಶುವಿಗೆ 50,000 ರು.
* ಹೆಣ್ಣು ಮಕ್ಕಳ ಮದುವೆಗಾಗಿ 2,50,000 ರು
* ನಿರುದ್ಯೋಗಿಗಳಿಗೆ ತಿಂಗಳಿಗೆ 10,000 ರು ಹಾಗೂ ವಯೋವೃದ್ಧ, ವಿಧವೆ, ಅಂಗವಿಕಲರಿಗೆ 5000 ರು ಪಿಂಚಣಿ
* ಖಾಸಗಿ ಆಸ್ಪತ್ರೆಯಲ್ಲಿ ಉಚಿತ ವೈದ್ಯಕೀಯ ತಪಾಸಣೆ 10,00,000 ರುತನಕ.
ಏಪ್ರಿಲ್ 16ರಿಂದ ನಾಮಪತ್ರ ಸಲ್ಲಿಕೀ ಆರಂಭವಾಗಿದೆ. ಮೇ 12ರಂದು ಮತದಾನ ನಡೆಯಲಿದ್ದು, ಮೇ 23ರಂದು ಫಲಿತಾಂಶ ಹೊರಬರಲಿದೆ.












Click it and Unblock the Notifications