ಬಿಜೆಪಿಯ ಮಾಸ್ಟರ್ಸ್ಟ್ರೋಕ್ ಮತ್ತು ಏಕನಾಥ್ ಶಿಂಧೆ ಸಿಎಂ
ಮುಂಬೈ, ಜೂನ್ 30: ರಾಜಕೀಯವಾಗಿ ಅಚ್ಚರಿಯ ನಡೆಗಳಿಗೆ ಬಿಜೆಪಿ ಹೆಸರುವಾಸಿಯಾಗಿದೆ. ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವಿಸ್ ಸಿಎಂ ಆಗುತ್ತಾರೆಂದು ಯಾರೂ ನಿರೀಕ್ಷಿಸಿರಲಿಲ್ಲ. ಈಗ ಶಿವಸೇನಾ ಭಿನ್ನಮತೀಯರಿಗೆ ಸಿಎಂ ಸ್ಥಾನ ಕೊಡುತ್ತಾರೆಂಬ ನಿರೀಕ್ಷೆ ಯಾರಿಗೂ ಇರಲಿಲ್ಲ.
ರಾಷ್ಟ್ರಪತಿ ಚುನಾವಣೆಯಲ್ಲಿ ದ್ರೌಪದಿ ಮುರ್ಮು ಅವರನ್ನು ಎನ್ಡಿಎ ಅಭ್ಯರ್ಥಿಯಾಗಿ ಮಾಡಲಾಗಿತ್ತು. ಅದೊಂದು ರೀತಿ ವಿಪಕ್ಷಗಳಿಗೆ ಬಿಜೆಪಿ ಹಾಕಿದ ಚೆಕ್ಮೇಟ್ ನಡೆ ಎನಿಸಿದೆ. ಈಗ ಅದಕ್ಕಿಂತಲೂ ಅಚ್ಚರಿಯ ನಡೆ ಮಹಾರಾಷ್ಟ್ರದಲ್ಲಿನದ್ದು.
ಮಹಾರಾಷ್ಟ್ರ ಸಿಎಂ ಆಗಲ್ಲ ದೇವೇಂದ್ರ ಫಡ್ನವೀಸ್; ಲೆಕ್ಕಾಚಾರವೆಲ್ಲ ಉಲ್ಟಾ-ಪಲ್ಟಾ!
ಉದ್ಧವ್ ಠಾಕ್ರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಭಿನ್ನಮತೀಯರು ಗುವಾಹಟಿಯಿಂದ ಆಗಮಿಸಿದ್ದೂ ಆಯಿತು. ಶಿವಸೇನಾ ಭಿನ್ನಮತೀಯರ ಜೊತೆ ಬಿಜೆಪಿ ಸರಕಾರ ರಚಿಸುವುದು ಖಾತ್ರಿಯಾಯಿತು. ದೇವೇಂದ್ರ ಫಡ್ನವಿಸ್ ಸಿಎಂ ಮತ್ತು ಏಕನಾಥ್ ಶಿಂಧೆ ಡಿಸಿಎಂ ಆಗುತ್ತಾರೆ ಎಂಬುದೂ ಫಿಕ್ಸ್ ಆಗಿ ಹೋಗಿತ್ತು.
ಆದರೆ, ಫಡ್ನವಿಸ್ ಮತ್ತು ಶಿಂದೆ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಅನಿರೀಕ್ಷಿತ ನಿರ್ಧಾರ ಪ್ರಕಟವಾಯಿತು. ಏಕನಾಥ್ ಶಿಂಧೆ ಸಿಎಂ ಆಗುತ್ತಾರೆ ಎಂದು ದೇವೇಂದ್ರ ಫಡ್ನವಿಸ್ ಘೋಷಿಸಿದರು. ತಾನು ಸರಕಾರದಿಂದ ಹೊರಗಿದ್ದು ಸಲಹೆ ನೀಡುವ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.
ಫಡ್ನವಿಸ್ ಹೇಳಿದ್ದೇನು?
ಸುದ್ದಿಗೋಷ್ಠಿಯಲ್ಲಿ ದೇವೇಂದ್ರ ಫಡ್ನವಿಸ್ ಮಾತನಾಡುತ್ತಾ, ಹಿಂದುತ್ವವನ್ನು ಉಳಿಸಲು ಶಿವಸೇನಾ ಶಾಸಕಾಂಗ ಪಕ್ಷದ ನಾಯಕ ಏಕನಾಥ್ ಶಿಂಧೆಗೆ ಬೆಂಬಲ ಕೊಡಲು ಬಿಜೆಪಿ ನಿರ್ಧರಿಸಿತು ಎಂದಿದ್ದಾರೆ.
ಉದ್ಧವ್ ಠಾಕ್ರೆಯನ್ನು ತರಾಟೆಗೆ ತೆಗೆದುಕೊಂಡ ಫಡ್ನವೀಸ್, ಅಧಿಕಾರದ ಆಸೆಗೋಸ್ಕರ ಠಾಕ್ರೆ ಬಿಜೆಪಿಯ ನಂಬಿಕೆಗೆ ದ್ರೋಹ ಬಗೆದರು ಎಂದು ಕಿಡಿಕಾರಿದ್ದಾರೆ.
"ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ನಡೆಸಿದ ಚಿತಾವಣೆ ಅಧಾಗಿತ್ತು. ಮಹಾರಾಷ್ಟ್ರದ ಜನರು ಶಿವಸೇನಾ ಮತ್ತು ಬಿಜೆಪಿ ಮೈತ್ರಿಕೂಟಕ್ಕೆ ಮತ ಚಲಾಯಿಸಿದ್ದರು. ಆದರೆ, ಉದ್ಧವ್ ಠಾಕ್ರೆ ಜನಾದೇಶಕ್ಕೆ ಬೆಲೆ ಕೊಡದೇ ಎನ್ಸಿಪಿ ಮತ್ತು ಕಾಂಗ್ರೆಸ್ ಜೊತೆ ಹೋದರು" ಎಂದು ಮಾಜಿ ಮುಖ್ಯಮಂತ್ರಿಯೂ ಆದ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.
ಸರ್ಕಾರ ರಚನೆಗೂ ಮುನ್ನವೇ ಶಿಂಧೆ-ಬಿಜೆಪಿ ನಡುವೆ ಖಾತೆ ಹಂಚಿಕೆ ಜಟಾಪಟಿ ಆರಂಭ
ಇದು ಬಿಜೆಪಿಯ ಮಾಸ್ಟರ್ ಸ್ಟ್ರೋಕ್?
ಬಿಜೆಪಿ ಮನಸು ಮಾಡಿದ್ದರೆ ಸಿಎಂ ಸ್ಥಾನವನ್ನು ಉಳಿಸಿಕೊಳ್ಳುವುದು ಸುಲಭವಿತ್ತು. ಆದರೂ ಕೂಡ ಸಿಎಂ ಸ್ಥಾನವನ್ನು ಶಿವಸೇನಾ ಭಿನ್ನಮತೀಯರಿಗೆ ಕೊಡುವ ಮೂಲಕ ಬಿಜೆಪಿ ಅನೇಕ ಕಲ್ಪನೆಗಳಿಗೆ ಆಸ್ಪದ ಮಾಡಿಕೊಟ್ಟಿದೆ.
ಮೇಲ್ನೋಟಕ್ಕೆ ಬಿಜೆಪಿಯ ಈ ನಡೆ ಒಂದು ಮಾಸ್ಟರ್ ಸ್ಟ್ರೋಕ್ ಎಂದನಿಸುವುದಲ್ಲಿ ಅನುಮಾನವಿಲ್ಲ. ಒಂದು ವೇಳೆ, ಬಿಜೆಪಿಯೇ ಸಿಎಂ ಸ್ಥಾನ ಇಟ್ಟುಕೊಂಡಿದ್ದರೆ ಅದು ಉದ್ಧವ್ ಠಾಕ್ರೆಗೆ ಮುಂಬರುವ ದಿನಗಳಲ್ಲಿ ಪ್ರಬಲ ಅಸ್ತ್ರವಾಗಿ ಪರಿಣಸುವ ಸಾಧ್ಯತೆ ಇತ್ತು.
ಏಕನಾಥ್ ಶಿಂಧೆ ಡಿಸಿಎಂ ಸ್ಥಾನಕ್ಕೋಸ್ಕರ ಶಿವಸೇನಾದಿಂದ ಬಿಟ್ಟು ಬಿಜೆಪಿಯ ಜೊತೆ ಹೋಗಬೇಕಿತ್ತಾ ಎಂದು ಕೆಲ ದಿನಗಳ ಹಿಂದೆಯೇ ಉದ್ಧವ್ ಠಾಕ್ರೆ ಕೆದಕಲು ಆರಂಭಿಸಿದ್ದರು. ಅಲ್ಪ ಅಧಿಕಾರದ ಆಸೆಗೋಸ್ಕರ ಶಾಸಕರು ಪಕ್ಷ ತೊರೆದು ಹೋದರು ಎಂಬ ಅನುಕಂಪದ ಸಹಾಯವನ್ನು ಶಿವಸೇನಾ ಪುನರ್ನಿರ್ಮಾಣದಲ್ಲಿ ಬಳಸಿಕೊಳ್ಳುವುದು ಉದ್ಧವ್ ಠಾಕ್ರೆ ಯೋಜನೆಯಾಗಿತ್ತು. ಶಿಂಧೆಯನ್ನೇ ಸಿಎಂ ಮಾಡುವ ಮೂಲಕ ಬಿಜೆಪಿ ಸದ್ಯ ಇಂಥದ್ದೊಂದು ಅವಕಾಶ ತಪ್ಪಿಸಿದೆ.
ಭಿನ್ನಮತೀಯರ ಬೇಡಿಕೆಗಳ ಭಾರ
ಈಗ ರಚನೆಯಾಗಲಿರುವ ಸರಕಾರದಲ್ಲಿ ಏಕನಾಥ್ ಶಿಂಧೆ ನೇತೃತ್ವದ ಭಿನ್ನಮತೀಯರ ಗುಂಪು ದೊಡ್ಡ ಬೇಡಿಕೆಗಳ ಪಟ್ಟಿಯನ್ನೇ ಮುಂದಿಟ್ಟಿತ್ತು. ಪ್ರಮುಖ ಸಚಿವ ಸ್ಥಾನಗಳಿಗೆ ಈ ರೆಬೆಲ್ಗಳು ದುಂಬಾಲು ಬಿದ್ದಿದ್ದರು. ಇವರಲ್ಲಿ ಅನೇಕರಿಗೆ ಸಚಿವ ಸ್ಥಾನ ಕೊಡದೇ ಬಿಜೆಪಿಗೆ ಬೇರೆ ವಿಧಿ ಇಲ್ಲ. ದೊಡ್ಡ ಸ್ಥಾನಗಳನ್ನು ಕೊಟ್ಟು ಬಿಟ್ಟರೆ ಬಿಜೆಪಿ ಪಾಲಿಗೆ ಅದೊಂದು ಹಲ್ಲು ಕಿತ್ತ ಹಾವಿನಂತಿರುವ ಅಧಿಕಾರ ಇದ್ದಂತಾಗುತ್ತದೆ. ಹೀಗಾಗಿ, ಬಿಜೆಪಿ ಸಿಎಂ ಸ್ಥಾನವನ್ನು ಏಕನಾಥ್ ಶಿಂಧೆಗೆ ಕೊಡಲು ನಿರ್ಧರಿಸಿರುವ ಸಾಧ್ಯತೆ ಇದೆ. ಈಗ ರಿಮೋಟ್ ಕಂಟ್ರೋಲ್ ಮೂಲಕ ಬಿಜೆಪಿ ಹೆಚ್ಚು ಅಧಿಕಾರಯುತವಾಗಿ ಸರಕಾರವನ್ನು ನಿಭಾಯಿಸಬಹುದು. ಈ ಕಾರಣಕ್ಕೆ ಇದನ್ನು ಮಾಸ್ಟರ್ ಸ್ಟ್ರೋಕ್ ಎನ್ನಲಡ್ಡಿ ಇಲ್ಲ.
ಏಕನಾಥ್ ಶಿಂಧೆ ಹೇಳಿಕೆ
ಆಟೋಚಾಲಕನಾಗಿದ್ದ ಏಕನಾಥ್ ಶಿಂಧೆ ಈಗ ಸಿಎಂ ಸ್ಥಾನದವರೆಗೆ ಬೆಳೆದದ್ದು ಸಾಮಾನ್ಯ ಸಂಗತಿಯಲ್ಲ. ಶಿವಸೇನಾ ಪಕ್ಷದೊಳಗೆ ಬಂಡಾಯ ಎದ್ದ ಶಿಂದೆ ಮೊದಲು ಎತ್ತ ಅಪಸ್ವರ ಎಂದರೆ ಹಿಂದುತ್ವದ ಕುರಿತಾದದ್ದು.
"ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಶಿವಸೇನಾ ಹಿಂದುತ್ವವನ್ನು ಮರೆತಿದೆ. ಉದ್ಧವ್ ಠಾಕ್ರೆ ಶಿವಸೇನಾ ಶಾಸಕರನ್ನು ಕಡೆಗಳಿಸಿ ಎನ್ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಹೆಚ್ಚು ಆದ್ಯತೆ ಕೊಡುತ್ತಿದ್ದರು. ನಾವು ಅನೇಕ ಶಾಸಕರು ಉದ್ಧವ್ ಠಾಕ್ರೆಗೆ ಈ ಎಂವಿಎ ಸಹವಾಸ ಬಿಟ್ಟು ಬಿಜೆಪಿಗೆ ಬೆಂಬಲ ನೀಡುವಂತೆ ಹೇಳಿದ್ದವು. ಅದರೂ ಕೇಳಲಿಲ್ಲ" ಎಂದು ಎಕನಾಥ್ ಶಿಂಧೆ ತಮ್ಮ ಅಸಮಾಧಾನಕ್ಕೆ ಕಾರಣ ಬಿಚ್ಚಿಟ್ಟಿದ್ದಾರೆ.
ಗುರುವಾರ ಸಂಜೆಯ ನಂತರ ಏಕನಾಥ್ ಶಿಂದೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸಿಎಂ ಬಿಟ್ಟು ಬೇರೆ ಯಾವ ಸಚಿವರೂ ಇಂದು ಪ್ರಮಾಣವಚನ ಪಡೆಯುವ ಸಾಧ್ಯತೆ ಇಲ್ಲ. ಮಹಾರಾಷ್ಟ್ರದ ಈ ವಿಧಾನಸಭೆಯ ಕಾಲಾವಧಿ ಇನ್ನೂ ಎರಡೂವರೆ ವರ್ಷ ಇದೆ. ಅಲ್ಲಿಯವರೆಗೆ ಈ ಹೊಸ ಮೈತ್ರಿ ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂಬ ಕುತೂಹಲ ಸದ್ಯಕ್ಕೆ ಉಳಿದಿದೆ.
Recommended Video