ಮನೆಗೆ ಶೋಭೆ ತರುವ ತುತ್ತೂರಿ ಹೂ: ಬೆಳೆಸುವುದು ಹೇಗೆ?
ಈಗ ಮನೆ ಸುತ್ತಲೂ ಹೂಗಿಡಗಳನ್ನು ಬೆಳೆಸುವುದರತ್ತ ಜನ ಆಸಕ್ತಿ ತೋರಿಸುತ್ತಿದ್ದಾರೆ. ಅದರಲ್ಲೂ ಹೂಬಳ್ಳಿಯಿಂದ ಮನೆ ಮತ್ತು ಮನೆ ಮುಂದಿನ ಆವರಣವನ್ನು ಅಲಂಕರಿಸುವುದು ಮನೆಗೆ ಶೋಭೆ ತರುತ್ತದೆ. ಹೀಗಾಗಿ ಅಂತಹ ಹೂಬಳ್ಳಿಯನ್ನು ಕೆಲವು ಇಷ್ಟಪಟ್ಟು ಬೆಳೆಸುತ್ತಾರೆ. ಇದು ಹಬ್ಬಿ ಹೂ ಬಿಟ್ಟಾಗ ಅದನ್ನು ನೋಡುವುದೇ ಕಣ್ಣಿಗೆ ಹಬ್ಬವಾಗುತ್ತದೆ. ಜೊತೆಗೆ ಮನೆ ಸೌಂದರ್ಯವನ್ನು ಹೆಚ್ಚಿಸುತ್ತದೆ.
ನಗರಗಳಲ್ಲಿ ಮನೆ ಕಟ್ಟುವವರು ಮನೆಯ ತಾರಸಿ, ಮೆಟ್ಟಿಲು ಹೀಗೆ ಎಲ್ಲಿ ಸ್ಥಳ ಸಿಗುತ್ತದೆಯೋ ಅಲ್ಲೆಲ್ಲ ಹೂಕುಂಡಗಳನ್ನಿಟ್ಟು ಗಿಡಗಳನ್ನು ಬೆಳೆಸುತ್ತಾರೆ. ಇನ್ನು ಮನೆಯ ಸುತ್ತ ಒಂದಷ್ಟು ಜಾಗವಿದ್ದರೆ ಹೂಗಿಡಗಳನ್ನು ನೆಟ್ಟು ಬೆಳೆಸುವ ಹವ್ಯಾಸ ಬೆಳೆಸಿಕೊಂಡರೆ ಅದರ ಒಡನಾಟದಲ್ಲಿ ಸಮಯ ಕಳೆಯುವುದರಿಂದ ಮಾನಸಿಕವಾಗಿಯೂ ನೆಮ್ಮದಿಯಾಗಿರಲು ಸಾಧ್ಯವಿದೆ.

ಮೊಬೈಲ್ ಬದಿಗಿಟ್ಟು ಗಿಡ ನೆಡುವುದು, ಕಳೆ ತೆಗೆಯುವುದು ನೀರು ಹಾಕುವುದು ಹೀಗೆ ಒಂದಲ್ಲ ಒಂದು ರೀತಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ಸಮಯ ಸರಿಯುವುದೇ ತಿಳಿಯುವುದಿಲ್ಲ. ಜತೆಗೆ ಗಿಡಗಳ ಜತೆಗೆ ಸಮಯ ಕಳೆಯುವುದರಿಂದ ಮನಸ್ಸಿಗೆ ಸಂತಸವೂ ಸಿಗುತ್ತದೆ. ಹಳ್ಳಿಯಲ್ಲಿದ್ದು, ಮನೆ ಸುತ್ತಮುತ್ತ ಜಾಗವಿದ್ದರೆ ಹೂಗಿಡ ನೆಡಬಹುದು. ನಾವು ಪಟ್ಟಣದಲ್ಲಿರುವುದು ನಮಗೆಲ್ಲಿ ಜಾಗವಿದೆ ಎಂದು ಕೆಲವರು ಕೇಳಬಹುದು.
ಮನೆಯಂಗಳದ ಮಿಂಚುಬಳ್ಳಿ ತುತ್ತೂರಿ ಹೂ
ನೀವು ನಿಮ್ಮ ಮನೆ ಮುಂದೆ ಪುಟ್ಟ ಗಿಡ ನೆಟ್ಟು ಪ್ರತಿದಿನ ನೀರು ಹಾಕುತ್ತಾ ಅದು ಬೆಳೆಯುವುದನ್ನು ನೋಡುತ್ತಾ ಖುಷಿ ಪಡಬಹುದು. ಮನೆಯ ತಾರಸಿಯಲ್ಲಿ ಕುಂಡಗಳನ್ನಿಟ್ಟು ಮನೆಯಲ್ಲಿ ಬಳಸಿ ಚೆಲ್ಲುವ ನೀರನ್ನೇ ಗಿಡಗಳಿಗೆ ಹಾಕಬಹುದಾಗಿದೆ. ಇದರಿಂದ ಹೂಗಿಡಕ್ಕಾಗಿಯೇ ಹೆಚ್ಚಿನ ನೀರು ವ್ಯಯಿಸುವ ಅಗತ್ಯವಿರುವುದಿಲ್ಲ. ಕುಂಡಗಳಲ್ಲಿ ಕ್ಯಾಕ್ಟಸ್ ಜಾತಿಯ ಗಿಡಗಳನ್ನು ನೆಡುವುದರಿಂದ ಅವು ಹೆಚ್ಚಿನ ನೀರು ಮತ್ತು ಗೊಬ್ಬರವನ್ನು ಅಪೇಕ್ಷಿಸುವುದಿಲ್ಲ. ಜತೆಗೆ ಅವುಗಳ ನಿರ್ವಹಣೆಯೂ ಕಷ್ಟವಾಗುವುದಿಲ್ಲ.

ಆಂಥೋರಿಯಂ ಗಿಡಗಳನ್ನು ಕೂಡ ಕುಂಡಗಳಲ್ಲಿ ನೆಡಬಹುದಾಗಿದೆ. ಇನ್ನು ಹೂಬಳ್ಳಿಯನ್ನು ನೆಡುವುದರಿಂದ ಮನೆಗೆ ಇನ್ನಷ್ಟು ಸೌಂದರ್ಯ ಹೆಚ್ಚಿಸಲು ಸಾಧ್ಯವಾಗಲಿದೆ. ಮನೆಗೊಂದು ಮಿಂಚುಬಳ್ಳಿಯಾಗಿ ಮನೆಯ ಛಾವಣಿಯಲ್ಲಿ, ಹೂತೋಟದ ಮರಗಳಲ್ಲಿ, ಚಪ್ಪರಗಳಲ್ಲಿ, ಕಾಂಪೌಂಡ್ನಲ್ಲಿ ಹೀಗೆ ಎಲ್ಲೆಂದರಲ್ಲಿ ಹಬ್ಬಿ ದೊಡ್ಡ ದೊಡ್ಡ ಗೊಂಚಲುಗಳಲ್ಲಿ ಬೆಳೆದು ತುತ್ತೂರಿಯಾಕಾರದ ಹೂಗಳೊಂದಿಗೆ ಕಣ್ಮನ ಸೆಳೆಯುವ ಪಿರೋಸ್ಟೇಜಿಯಾ ವೀನ್ ಸ್ಟಾ ಎಂಬ ಸುಂದರ ಹೂಬಳ್ಳಿ ಮನೆಗೊಂದು ಸೊಬಗು ಎಂದರೆ ತಪ್ಪಾಗಲಾರದು.
ಉದ್ಯಾನವನಕ್ಕೆ ಮೆರಗು ತರುವ ಹೂಬಳ್ಳಿ
ಇದನ್ನು ಕೆಲವರು ಜಿಲೇಬಿ ಹೂವೆಂದು ಕರೆದರೆ, ಮತ್ತೆ ಕೆಲವರು ತುತ್ತೂರಿ ಹೂ ಎಂದೇ ಕರೆಯುತ್ತಾರೆ. ಈ ಹೂಬಳ್ಳಿ ಚಪ್ಪರದಲ್ಲೋ, ಕಾಂಪೌಂಡ್ನಲ್ಲೋ ಹಬ್ಬಿ ಹೂಬಿಟ್ಟಿತೆಂದರೆ ಅದರ ಸೌಂದರ್ಯವನ್ನು ಸವಿಯುವುದೇ ಒಂದು ರೀತಿಯ ಮಜಾ. ಹಾಗಾಗಿ ಇದನ್ನು ಮನೆಯ ಮುಂದಿನ ಚಿನ್ನದ ಮಳೆಗೆರೆವ ಹೂಬಳ್ಳಿ ಎಂದರೂ ತಪ್ಪಾಗಲಾರದು. ಸದಾ ಹೂಬಿಟ್ಟು ಕಂಗೊಳಿಸುತ್ತಾ ಮನೆಗೆ, ಉದ್ಯಾನವನಕ್ಕೆ ಮೆರಗು ತರುವ ಈ ಹೂಬಳ್ಳಿ ಮೂಲತಃ ಬ್ರೆಜಿಲ್ ದೇಶದ್ದು ಎನ್ನಲಾಗಿದೆ.

ಉಷ್ಣವಲಯ ಹಾಗೂ ಸಮಶೀತೋಷ್ಣವಲಯದಲ್ಲಿ ಹುಲುಸಾಗಿ ಬೆಳೆಯುತ್ತದೆ. ನಮ್ಮ ದೇಶದಲ್ಲಿ ಕರ್ನಾಟಕ, ಕೇರಳ, ತಮಿಳುನಾಡುಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ದಕ್ಷಿಣ ಅಮೇರಿಕಾದಲ್ಲಿ ಪಿರೋಸ್ಟೆಜಿಯಾ ವೀನ್ ಸ್ಟಾಗೆ ಸೇರಿದ ಐದು ತಳಿಗಳಿವೆ ಎಂದು ಹೇಳಲಾಗಿದೆ. ಮನೆಯ ಮುಂದೆ ಚಪ್ಪರ ಹಾಕಿ ಹಬ್ಬಿಸಿದ್ದೇ ಆದರೆ ಸದಾ ಹೂಬಿಟ್ಟು ಮನೆಗೆ ಶೋಭೆ ತರುವುದರೊಂದಿಗೆ ತಂಪು ವಾತಾವರಣವನ್ನು ನಿರ್ಮಾಣ ಮಾಡುತ್ತದೆ.
ಬಳ್ಳಿಯಿಂದಲೇ ಸಸ್ಯಾಭಿವೃದ್ಧಿ ಸಾಧ್ಯ
ಇದನ್ನು ಬೃಂದಾವನಗಳಲ್ಲಿ ಸುಂದರವಾಗಿ ವಿವಿಧ ವಿನ್ಯಾಸದಲ್ಲಿ ಹಬ್ಬಿಸಲಾಗುತ್ತದೆ. ಇದು ಹೂಬಿಟ್ಟಾಗ ತನ್ನ ಚೆಲುವಿನಿಂದ ದೂರದಿಂದಲೇ ಪುಷ್ಪಪ್ರೇಮಿಗಳನ್ನು ತನ್ನತ್ತ ಸೆಳೆಯುತ್ತದೆ. ಸಾಮಾನ್ಯವಾಗಿ ಜನವರಿಯಿಂದ ಏಪ್ರಿಲ್ ನಡುವೆ ಬಳ್ಳಿಯ ತುಂಬಾ ಕಡು ಕೇಸರಿ ಬಣ್ಣದ ತುತ್ತೂರಿ ಆಕಾರದ ಹೂಗಳು ಗೊಂಚಲು ಗೊಂಚಲಾಗಿ ಬಳ್ಳಿ ತುಂಬಾ ಅರಳಿ ಕಂಗೊಳಿಸುವುದರೊಂದಿಗೆ ನೋಡುಗರನ್ನು ತನ್ನತ್ತ ಸೆಳೆಯುತ್ತವೆ.
ಬಳ್ಳಿಯನ್ನೇ ಕತ್ತರಿಸಿ ನೆಡುವ ಮೂಲಕ ಸಸ್ಯಾಭಿವೃದ್ಧಿಯನ್ನು ಮಾಡಬಹುದಾಗಿದೆ. ಒಂದು ವರ್ಷವಾಗಿರುವ ಬಳ್ಳಿಯನ್ನು ಕತ್ತರಿಸಿ ಸುಮಾರು ಇಪ್ಪತ್ತು ಸೆಂಟಿ ಮೀಟರ್ ಉದ್ದಕ್ಕೆ ತುಂಡುಗಳನ್ನಾಗಿ ಮಾಡಿ ನಾವು ಆಯ್ಕೆ ಮಾಡಿಕೊಂಡ ಸ್ಥಳದಲ್ಲಿ ಸುಮಾರು ಒಂದೂವರೆ ಅಡಿಯಷ್ಟು ಉದ್ದ ಹಾಗೂ ಅಗಲದ ಗುಂಡಿ ತೋಡಿ ಅದರಲ್ಲಿ ಕೊಟ್ಟಿಗೆ ಗೊಬ್ಬರ ಹಾಗೂ ಮಣ್ಣನ್ನು ಬೆರೆಸಿ ನಾಟಿ ಮಾಡಬೇಕು. ಮಣ್ಣಿನ ತೇವಾಂಶ ನೋಡಿಕೊಂಡು ನೀರು ಹಾಕಬೇಕು.
ಮನೆ ಅಂಗಳದಲ್ಲಿ ಜಾಗ ನೀಡಿ
ಕೆಲವು ದಿನಗಳಲ್ಲಿ ನೆಟ್ಟ ಬಳ್ಳಿ ಚಿಗುರೊಡೆದು ಹಬ್ಬಲಾರಂಭಿಸುತ್ತದೆ ಈ ಸಂದರ್ಭ ಆಧಾರ ನೀಡಿ ಹಬ್ಬಿಸಬೇಕು. ಇನ್ನು ಪಾಲಿಥೀನ್ ಚೀಲದಲ್ಲಿ ಬಳ್ಳಿಯನ್ನು ಕತ್ತರಿಸಿ ಒಂದು ಚೀಲದಲ್ಲಿ ಎರಡರಿಂದ ಮೂರು ಬಳ್ಳಿಯನ್ನು ನೆಡಬೇಕು ಅದು ಚಿಗುರಿದ ಬಳಿಕ ನಮಗೆ ಎಲ್ಲಿ ಬೇಕೋ ಅಲ್ಲಿ ಸೂಕ್ತ ಸ್ಥಳದಲ್ಲಿ ಅದನ್ನು ನೆಟ್ಟು ಬೆಳೆಸಬಹುದು.
ಬಳ್ಳಿ ನೆಟ್ಟು ಒಂದೆರಡು ವರ್ಷದಲ್ಲಿ ಹೂಬಿಡಲು ಆರಂಭಿಸುತ್ತದೆ. ಅಷ್ಟೇ ಅಲ್ಲ ಹೂಗಳು ಹೆಚ್ಚು ಸಮಯ ಬಳ್ಳಿಯಲ್ಲಿದ್ದು ಮನೆಯಂಗಳದ ಚೆಲುವನ್ನು ಇಮ್ಮಡಿಗೊಳಿಸುತ್ತವೆ. ಇನ್ನೇಕೆ ತಡ ಮಾಡುತ್ತೀರಾ ಸಾಧ್ಯವಾದರೆ ಮನೆ ಬಳಿ ಜಾಗವಿದ್ದರೆ ಈಗಲೇ ಬಳ್ಳಿಯನ್ನು ನೆಟ್ಟು ಪೋಷಿಸಲು ಆರಂಭಿಸಿ... ಅದು ಬೆಳೆಯುತ್ತಾ ಹೋದಂತೆ ನಿಮ್ಮಲ್ಲೂ ಸಂತಸ ಹೆಚ್ಚಾಗುತ್ತಾ ಹೋಗುತ್ತದೆ.
-
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Anushka Shetty Marriage: ಬೆಂಗಳೂರಿನ ಖ್ಯಾತ ಉದ್ಯಮಿ ಜೊತೆ ನಟಿ ಅನುಷ್ಕಾ ಶೆಟ್ಟಿ ಮದುವೆ, ಈ ವರ್ಷದಲ್ಲೇ ಮುಹೂರ್ತ: ವರದಿ -
1 ರೂಪಾಯಿಗೆ 1 ಲೀಟರ್ ಹಾಲು: ಫ್ಲಿಪ್ಕಾರ್ಟ್ ವಿರುದ್ಧ ಸಿಡಿದೆದ್ದ ಡಿ.ಕೆ. ಸುರೇಶ್; ಪ್ರಧಾನಿ ಮೋದಿಗೆ ದೂರು -
ಬಿಜೆಪಿಯಿಂದ ನಟ ವಿಜಯ್ಗೆ ಡಿಸಿಎಂ ಹುದ್ದೆ, 80 ಸೀಟುಗಳ ಆಫರ್; ತಮಿಳುನಾಡು ಚುನಾವಣೆಗೆ ಹೊಸ ಮೈತ್ರಿ ಲೆಕ್ಕಾಚಾರ -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
LPG New Rule: ಎಲ್ಪಿಜಿ ಹೊಸ ನಿಯಮ: ಪಿಎನ್ಜಿ ಸಂಪರ್ಕ ಇದ್ದರೆ ಇನ್ನು ಮುಂದೆ ಸಿಲಿಂಡರ್ ಸಿಗಲ್ಲ -
Government Employees: ಪಶ್ಚಿಮ ಬಂಗಾಳ ಸರ್ಕಾರಿ ನೌಕರರಿಗೆ ಸಿಎಂ ಮಮತಾ ಬ್ಯಾನರ್ಜಿ ಬಂಪರ್ ಕೊಡುಗೆ -
ರಾಜ್ಯದಲ್ಲಿ ಕಮರ್ಷಿಯಲ್ ಉದ್ದೇಶಕ್ಕೆ ಗೃಹಬಳಕೆ LPG ಸಿಲಿಂಡರ್ ಬಳಸಿದವರ ಮೇಲೆ ಅಧಿಕಾರಿಗಳ ಖಡಕ್ ದಾಳಿ -
ಬೆಂಗಳೂರು 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ vs ಹೊಸೂರು ಏರ್ಪೋರ್ಟ್: ಯೋಜನೆ ಯಾವ ಹಂತದಲ್ಲಿದೆ












Click it and Unblock the Notifications