Get Updates
Get notified of breaking news, exclusive insights, and must-see stories!

ವಿದೇಶದಲ್ಲೂ ಕನ್ನಡದ ಬೊಂಬೆಗಳ ಸೊಬಗು ತೋರಿದ ಅನುಪಮಾ ಹೊಸಕೆರೆ

Recommended Video

      ವಿದೇಶದಲ್ಲೂ ಕನ್ನಡದ ಬೊಂಬೆಗಳ ಸೊಬಗು ತೋರಿದ ಅನುಪಮಾ ಹೊಸಕೆರೆ | Oneindia Kannada

      ಧಾತು ಪಪ್ಪೆಟ್ ಬಸ್ ನಿಲ್ದಾಣ... ಬೆಂಗಳೂರಿನ ಬನಶಂಕರಿ ಎರಡನೇ ಹಂತದಲ್ಲಿ ದಿನನಿತ್ಯ ಓಡಾಡುವವರು ಈ ವಿಭಿನ್ನ ಬಸ್ ನಿಲ್ದಾಣವನ್ನು ಹಲವು ಬಾರಿ ಕಂಡಿರಬಹುದು. ಬೆಂಗಳೂರಿನಲ್ಲಿರುವ ಬಹುಪಾಲು ಬಸ್ ನಿಲ್ದಾಣಗಳೆಲ್ಲ ಸರ್ಕಾರ, ಬಿಬಿಎಂಪಿ, ಸಿನೆಮಾ ಜಾಹೀರಾತುಗಳಿಂದ ತುಂಬಿ ತುಳುಕುವಾಗ ಕರ್ನಾಟಕದ ಸಾಂಪ್ರದಾಯಿಕ ಬೊಂಬೆಗಳನ್ನು ಒಪ್ಪವಾಗಿ ಜೋಡಿಸಿಟ್ಟ ಈ ಬಸ್ ನಿಲ್ದಾಣ ಅಚ್ಚರಿ ಮೂಡಿಸಿದರೆ ತಪ್ಪೇನಿಲ್ಲ!

      ಆ ಬಸ್ ನಿಲ್ದಾಣದ ಹಿಂದಿರುವ ಉದ್ದೇಶದ ಜಾಡುಹಿಡಿದು ಹೊರಟಾಗ ಸಿಕ್ಕಿದ್ದು, ಕನ್ನಡ ಭಾಷೆ ಮತ್ತು ಕನ್ನಡ ಸಂಸ್ಕೃತಿಯನ್ನು ಉಳಿಸುವುದಕ್ಕಾಗಿ ಹೊರಟ ಮಹಿಳೆಯೊಬ್ಬರ ಸಾಧನೆಯ ಕತೆ, ಸಿಗಲಿದ್ದ ಉನ್ನತ ಹುದ್ದೆಗಳನ್ನೆಲ್ಲ ತೊರೆದು ಬೊಂಬೆಗಳ ಕಾಲ್ಪನಿಕ ಬದುಕಲ್ಲೇ ತಮ್ಮ ನೈಜ ಬದುಕನ್ನು ಕಂಡುಕೊಂಡ ಅನುಪಮಾ ಹೊಸಕೆರೆಯವರ ಯಶೋಗಾಥೆ!

      ಬೆಂಗಳೂರಿನ ಬಸವನಗುಡಿಯಲ್ಲಿ ಹುಟ್ಟಿ ಬೆಳೆದ ಅನುಪಮಾ ಹೊಸಕೆರೆ ತಮ್ಮ ಪತಿ ವಿದ್ಯಾಶಂಕರ್ ಹೊಸಕೆರೆ ಅವರೊಟ್ಟಿಗೆ ಸೇರಿ 1995 ರಲ್ಲಿ ಆರಂಭಿಸಿದ 'ಧಾತು' ಎಂಬ ಸರ್ಕಾರೇತರ ಸಂಸ್ಥೆ (ಎನ್ ಜಿಒ) ಕನ್ನಡ ಸಂಸ್ಕೃತಿಯ ಉಳಿವಿಗಾಗಿ ಶ್ರಮಿಸುತ್ತಿದೆ. ಕರ್ನಾಟಕದ ಸಾಂಪ್ರದಾಯಿಕ ಬೊಂಬೆಗಳ ಕುರಿತು ಅಧ್ಯಯನ ಮಾಡಿ ಗತಕಾಲದ ವೈಭವವನ್ನು ಮತ್ತೊಮ್ಮೆ ನಮ್ಮ ಕಣ್ಮುಂದೆ ತರುವ ಪ್ರಯತ್ನ ಮಾಡುತ್ತಿದೆ.

      ದೇಶ ವಿದೇಶಗಳಲ್ಲಿ ಕನ್ನಡದಲ್ಲೇ ಬೊಂಬೆಯಾಟ ಪ್ರದರ್ಶಿಸಿ, ಅಲ್ಲಿನ ಮಕ್ಕಳಿಗೂ ಕನ್ನಡಲ್ಲೇ ಪಾಠ ಮಾಡಿ ಕನ್ನಡ ಭಾಷಾಪ್ರೇಮ ಮೆರೆದ ಕೀರ್ತಿ ಇವರದು. ಬೆಂಗಳೂರಿನ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರ್ ಪದವಿ ಪಡೆದ ಇವರು ಅಮೆರಿಕದ ಪ್ರತಿಷ್ಟಿತ ಕ್ಯಾಲಿಫೋರ್ನಿಯಾ ಸ್ಟೇಟ್ ಯುವಿನರ್ಸಿಟಿ ಮತ್ತು ಲಾಂಗ್ ಬೀಚ್ ಅಂಡ್ ಯುನಿವರ್ಸಿಟಿ ಆಫ್ ಕೊಲಾರಾಡೋದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಭರತನಾಟ್ಯ ಕಲಾವಿಧೆಯೂ ಆಗಿರುವ ಅನುಪಮಾ ಅವರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯೆಯೂ ಹೌದು.

      ಕರ್ನಾಟಕದ ಸಾಂಪ್ರದಾಯಿಕ ಬೊಂಬೆಗಳ ಮೂಲಕ ಕನ್ನಡ ಸಂಸ್ಕೃತಿಗೆ ಕೊಡುಗೆ ನೀಡುತ್ತಿರುವ ಅನುಪಮಾ ಹೊಸಕೆರೆ ಅವರು ನಮ್ಮ ಈ ವಾರದ ಸಾಧಕಿ. ಬೊಂಬೆಗಳೊಂದಿಗಿನ ಬದುಕು ಅವರ ಮುಂದೊಂದು ಹೊಸ ಪ್ರಪಂಚವನ್ನು ತೆರೆದಿಟ್ಟ ಕುರಿತು ಒನ್ ಇಂಡಿಯಾ ಕನ್ನಡಕ್ಕೆ ಅವರು ನೀಡಿದ ಸಂದರ್ಶನ ಇಲ್ಲಿದೆ.

      ಅನರ್ಘ್ಯ ಸಂಸ್ಕೃತಿ ನಮ್ಮದು

      ಅನರ್ಘ್ಯ ಸಂಸ್ಕೃತಿ ನಮ್ಮದು

      "ಚಿಕ್ಕ ವಯಸ್ಸಿನಿಂದಲೇ ನಾನು ಬೊಂಬೆಗಳನ್ನು ನೋಡುತ್ತ ಬೆಳೆದವಳು. ಮನೆಯಲ್ಲಿ ಇಡುತ್ತಿದ್ದ ನವರಾತ್ರಿ ಬೊಂಬೆಗಳು, ಅವುಗಳ ಹಿಂದಿದ್ದ ಪೌರಾಣಿಕ ಕತೆ ಇವನ್ನೆಲ್ಲ ಕೇಳುತ್ತ ನಮ್ಮ ಸಂಸ್ಕೃತಿಯ ಬಗ್ಗೆ ಗೌರವ ಬೆಳೆದಿತ್ತು. ಆದರೆ ನಮ್ಮ ಸಂಸ್ಕೃತಿ, ಸಂಪ್ರದಾಯ, ಆಚರಣೆಗಳ ಮಹೋನ್ನತಿ ಸ್ಪಷ್ಟವಾಗಿ ಅರ್ಥವಾಗಿದ್ದು ನಾನು ಓದುವುದಕ್ಕೆಂದು ವಿದೇಶಕ್ಕೆ ಹೋದಾಗ. ಅಲ್ಲಿ ಯಾವುದೇ ಪ್ರದರ್ಶನಕ್ಕೆ ಹೋದರೂ ತುಂಬಾ ಸುಂದರವಾದ ಏನನ್ನೇ ಕಂಡರೂ ಅದು ಭಾರತದ್ದು ಎಂಬುದು ತಿಳಿದು ಅಚ್ಚರಿಯಾಗುತ್ತಿತ್ತು. ನನ್ನ ದೇಶದಲ್ಲಿ ಇಷ್ಟೇಲ್ಲ ಅನರ್ಘ್ಯ ಸಂಪತ್ತಿದೆಯಾ ಎನ್ನಿಸುತ್ತಿತ್ತು. ಸಾಂಪ್ರದಾಯಿಕ ಬೊಂಬೆಯಾಟದ ಕುರಿತು ಅಭ್ಯಸಿಸುವ ಆಸಕ್ತಿ ಬೆಳೆದಿದ್ದೂ ಆಗಲೇ..."

      ಹತ್ತುಸಾವಿರದ ಬೊಂಬೆಗಳು

      ಹತ್ತುಸಾವಿರದ ಬೊಂಬೆಗಳು

      "ಪ್ರತಿಯೊಬ್ಬ ಭಾರತೀಯನೂ ರಾಮಾಯಣ ಮತ್ತು ಮಹಾಭಾರತಗಳನ್ನು ಓದಲೇಬೇಕು ಅನ್ನೋದು ನನ್ನ ಭಾವನೆ. ಈ ಮಹಾಗ್ರಂಥಗಳು ಕೇವಲ ಪುಸ್ತಕಗಳಲ್ಲ, ಜೀವನ ದರ್ಶನ. ಅವುಗಳನ್ನೇ ಇಟ್ಟುಕೊಂದು ನಾವು ಬೊಂಬೆಗಳ ಮೂಲಕ ಕತೆ ಹೇಳುತ್ತಿದ್ದೇವೆ. ಇಂದಿನ ಮಕ್ಕಳಿಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸುವ ಜೊತೆಗೆ, ಅವರಲ್ಲಿ ಮೌಲ್ಯಗಳನ್ನು ಬಿತ್ತುವ ಉದ್ದೇಶವೂ ಇದರ ಹಿಂದಿದೆ. ಈಗಾಗಲೇ ಸುಮಾರು 10,000ದಷ್ಟು ಬೊಂಬೆಗಳು ನಮ್ಮಲ್ಲಿವೆ"

      ವಿದೇಶಿಗರನ್ನೂ ಸೆಳೆದ ಕನ್ನಡದ ಬೊಂಬೆ!

      ವಿದೇಶಿಗರನ್ನೂ ಸೆಳೆದ ಕನ್ನಡದ ಬೊಂಬೆ!

      "ಸಾಂಪ್ರದಾಯಿಕ ಬೊಂಬೆಯಾಟವನ್ನು ನೋಡಿದ ಪರಿಚಿತ ವಿದೇಶಿಯರು ಆಕರ್ಷಿತರಾಗಿ ನಮ್ಮನ್ನು ತಮ್ಮ ದೇಶಕ್ಕೆ ಕರೆಸಿಕೊಂಡು ಬೊಂಬೆಯಾಟದ ಪ್ರದರ್ಶನ ಮತ್ತು ತರಗತಿಗಳನ್ನೂ ನಮ್ಮಿಂದ ಮಾಡಿಸುವುದಕ್ಕೆ ಆರಂಭಿಸಿದರು. ಪ್ಯಾರಿಸ್, ಬೆಲ್ಜಿಯಂ, ನೀಸ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪ್ರದರ್ಶನ ನೀಡಿದ್ದೇವೆ. ಅಲ್ಲಿನ ಜನರು ಕಲೆಗೆ ನೀಡುವ ಪ್ರಾಶಸ್ತ್ಯವನ್ನು ಕಂಡು ಬೆರಗಾಗಿದ್ದೇವೆ. "

      ವಿದೇಶದಲ್ಲೂ ಕನ್ನಡ ಪಾಠ!

      ವಿದೇಶದಲ್ಲೂ ಕನ್ನಡ ಪಾಠ!

      "ಫ್ರಾನ್ಸ್ ನಲ್ಲಿ ಮಕ್ಕಳಿಗೆ ಫ್ರೆಂಚ್ ಭಾಷೆಯಲ್ಲದೆ ಬೇರೆ ಭಾಷೆ ಅರ್ಥವಾಗೋಲ್ಲ. ಅಲ್ಲಿ ಬೊಂಬೆಯಾಟದ ಕುರಿತು ಪಾಠ ಮಾಡುವಾಗ ನಾನ್ಯಾಕೆ ಇಂಗ್ಲಿಷ್ ಬದಲಿಗೆ ಕನ್ನಡದಲ್ಲೇ ಮಾತನಾಡಬಾರದು? ಅನ್ನಿಸಿತು. ಆ ಮಕ್ಕಳಿಗೆ ಹೇಗೂ ಇಂಗ್ಲಿಷ್ ನಲ್ಲಿ ಮಾತನಾಡಿದರೂ ಅರ್ಥವಾಗೋಲ್ಲ! ನಂಗೆ ಫ್ರೆಂಚ್ ಬರೋಲ್ಲ! ಹೀಗೇ ಕನ್ನಡದಲ್ಲೇ ಶುರುವಾಯ್ತು ಪಾಠ. ಅಚ್ಚರಿ ಎಂಬಂತೆ ಕನ್ನಡ ಹಾಡುಗಳನ್ನು ಆ ಮಕ್ಕಳು ತುಂಬಾನೇ ಇಷ್ಟಪಟ್ಟರು. ಕೆಲವು ಶಬ್ದಗಳನ್ನು ಗ್ರಹಿಸಿಕೊಂಡು ಹಾಡತೊಡಗಿದರು! ಆ ಮಕ್ಕಳ ಬಾಯಲ್ಲಿ ಕನ್ನಡ ಕೆಲ ಶಬ್ದಗಳನ್ನು ಕೇಳುವಾಗ ನನಗಾದ ಹೆಮ್ಮೆ ವರ್ಣಿಸಲಸದಳ!"

      ಬೊಂಬೆಯಾಟಕ್ಕೆ ಪುನರುಜ್ಜೀವನ

      ಬೊಂಬೆಯಾಟಕ್ಕೆ ಪುನರುಜ್ಜೀವನ

      ನಾವು ಕನ್ನಡಿಗರು ಜೀವನವನ್ನು ಬದುಕುತ್ತೇವೆ, ಮ್ಯೂಸಿಯಂ ನಲ್ಲಿ ಇಡೋಲ್ಲ! ಅದಕ್ಕೇ ಇರಬೇಕು, ಫ್ರಾನ್ಸ್, ಅಮೆರಿಕ, ಚೀನಾ ಗಳಂತೆ ನಾವು ಸಾಂಪ್ರದಾಯಿಕ ಕಲೆ, ಐತಿಹಾಸಿಕ ವಸ್ತುಗಳನ್ನು ಸಂರಕ್ಷಿಸುವ ಗೋಜಿಗೆ ಹೋದದ್ದು ಕಡಿಮೆ. ಬೊಂಬೆಯಾಟದ ವಿಷಯದಲ್ಲಿ ಆದದ್ದೂ ಅದೇ. ಅದಕ್ಕೊಂದು ಪುನರುಜ್ಜೀವನ ನೀಡುವ ಕೆಲಸವನ್ನು ಧಾತು ಮಾಡುತ್ತಿದೆಯಷ್ಟೇ!

      ಬೊಂಬೆ ತಯಾರಿಸುವುದೂ ನಾವೇ!

      ಬೊಂಬೆ ತಯಾರಿಸುವುದೂ ನಾವೇ!

      "ಇಲ್ಲಿನ ಬೊಂಬೆಗಳನ್ನು ನಾವೇ ತಯಾರಿಸುತ್ತೇವೆ. ಇವಕ್ಕೆ ಬಣ್ಣ ಹಚ್ಚುತ್ತೇವೆ, ಸಿಂಗರಿಸುತ್ತೇವೆ. ಬೊಂಬೆಯಾಟಕ್ಕೆ ಸ್ಕ್ರಿಪ್ಟ್, ಹಾಡು, ಸಂಗೀತ-ನೃತ್ಯ ಸಂಯೋಜನೆ, ಎಲ್ಲವನ್ನೂ ನಾವೇ ಮಾಡುತ್ತೇವೆ. ಪ್ರತಿ ಶನಿವಾರ ಮತ್ತು ಭಾನುವಾರ ಬೊಂಬೆಯಾಟದ ತರಗತಿಗಳು ನಡೆಯುತ್ತವೆ, ಆಗಾಗ ಕಾರ್ಯಾಗಾರಗಳು ನಡೆಯುತ್ತವೆ, ತಿಂಗಳಿಗೊಮ್ಮೆ ಬೊಂಬೆಯಾಟದ ಪ್ರದರ್ಶನ ನಡೆಯುತ್ತದೆ. ಬೇರೆ ಬೇರೆ ಸ್ಥಳಗಳಲ್ಲಿ ಪಪ್ಪೆಟ್ ಫೆಸ್ಟ್ ಕೂಡ ನಡೆಯುತ್ತದೆ."

      ಸರ್ಕಾರದ ಸಹಕಾರ ಬೇಕು

      ಸರ್ಕಾರದ ಸಹಕಾರ ಬೇಕು

      "ಇಂದಿನ ಮಕ್ಕಳೂ ಬೊಂಬೆಯಾಟವನ್ನು ಸಾಕಷ್ಟು ಸಂಭ್ರಮಿಸುತ್ತಾರೆ. ಆದರೆ ಇಂಥದೊಂದು ಕಲಾಪ್ರಕಾರವಿದೆ ಎಂಬುದೇ ಹಲವರಿಗೆ ತಿಳಿದಿಲ್ಲದಿರುವುದು ಶೋಚನೀಯ ಸಂಗತಿ. ಕರ್ನಾಟಕದ ಹಲವು ರೋಚಕ ಕತೆಗಳನ್ನೇ ನಾವು ಬೊಂಬೆಯಾಟದ ಮೂಲಕ ಮಕ್ಕಳಿಗೆ ಪರಿಚಯಿಸಬಹುದು. ಇದಕ್ಕಾಗಿಯೇ ಒಂದು ಸಮಿತಿ ಮಾಡಿ ಬೊಂಬೆಯಾಟದ ಕಲೆಯ ಸುವರ್ಣಯುಗವನ್ನು ಕಣ್ಮುಂದೆ ತರುವುದು ಸರ್ಕಾರ ಮನಸ್ಸು ಮಾಡಿದರೆ ಸುಲಭಸಾಧ್ಯ."

      ವಿಭಿನ್ನ ಬಸ್ ನಿಲ್ದಾಣ

      ವಿಭಿನ್ನ ಬಸ್ ನಿಲ್ದಾಣ

      "ಧಾತು ಪಪ್ಪೆಟ್ ಬಸ್ ನಿಲ್ದಾಣ ಅನ್ನೋದು ಕರ್ನಾಟಕದ ಶ್ರೀಮಂತ ಸಂಸ್ಕೃತಿ ಮತ್ತು ಕಲೆಯನ್ನು ಪರಿಚಯಿಸುವ ಸಣ್ಣ ಪ್ರಯತ್ನವಷ್ಟೇ. ಎರಡು ವರ್ಷದ ಹಿಂದೆ ಈ ಬಸ್ ನಿಲ್ದಾಣ ಸ್ಥಾಪನೆಯಾಯ್ತು. ಈ ಬಸ್ ನಿಲ್ದಾಣದಲ್ಲಿ ಕರ್ನಾಟಕದ ಸಾಂಪ್ರದಾಯಿಕ ಬೊಂಬೆಗಳನ್ನಿಟ್ಟಿದ್ದೇವೆ. ವಾರಕ್ಕೊಮ್ಮೆ ಈ ಬಸ್ ನಿಲ್ದಾಣವನ್ನು ನಾವೇ ಸ್ವಚ್ಛಗೊಳಿಸುತ್ತೇವೆ. ದಿನವೂ ನೂರಾರು ಜನ ಈ ಬಸ್ ನಿಲ್ದಾಣದ ಮೂಲಕ ಹಾದುಹೋದರೂ ಈ ಯಾ ಬೊಂಬೆಗಳೂ ಊನವಾಗಿಲ್ಲ. ಆಗಾಗ ಗ್ಲಾಸ್ ಗಳ ಮೇಲೆ ಸಿನೆಮಾ ಸ್ಟಿಕ್ಕರ್ ಗಳಿರುತ್ತವೆ ಅನ್ನೋದನ್ನು ಬಿಟ್ಟರೆ ಜನರು ಇದಕ್ಕೆ ಯಾವುದೇ ಹಾನಿ ಆಡಿಲ್ಲ. ನಮ್ಮ ಕನ್ನಡಿಗರು ಎಷ್ಟು ಸಂಭಾವಿತರು ಅನ್ನೋದಕ್ಕೆ ಇದೊಂದು ಸಾಕ್ಷಿ. ಹೀಗೆ ಬಸ್ ನಿಲ್ದಾಣದಲ್ಲಿ ಒಂದು ಕಲೆಯ ಪ್ರದರ್ಶನ ಮಾಡುತ್ತಿರುವ ನಿದರ್ಶನ ನನಗೆ ತಿಳಿದ ಮಟ್ಟಿಗೆ ಭಾರತದಲ್ಲೇ ಎಲ್ಲೂ ಇಲ್ಲ!"

      ಮನೆಯಿಂದ ಸಾಕಷ್ಟು ಬೆಂಬಲ

      ಮನೆಯಿಂದ ಸಾಕಷ್ಟು ಬೆಂಬಲ

      "ಈ ಎಲ್ಲ ಕೆಲಸ ಮಾಡೋದಕ್ಕೆ ನನಗೆ ಮನೆಯಿಂದ ಸಾಕಷ್ಟು ಬೆಂಬಲವಿದೆ. ಪತಿ ವಿದ್ಯಾಶಂಕರ್ ಅವರಿಗೂ ಕಲೆಯಲ್ಲಿ ಆಸಕ್ತಿ ಇರುವುದರಿಂದ ಅವರ ಕಡೆಯಿಂದ ನನಗೆ ನಿರೀಕ್ಷೆಗೂ ಮೀರಿ ಬೆಂಬಲ ಸಿಗುತ್ತಿದೆ. ಹಾಗೆಯೇ ಮೂವರು ಮಕ್ಕಳಿಗೂ ಬೊಂಬೆಯಾಟ, ಭರತನಾಟ್ಯದ ಕುರಿತು ಎಲ್ಲಿಲ್ಲದ ಆಸಕ್ತಿ. ಒಟ್ಟಿನಲ್ಲಿ ಹಣಗಳಿಸುವ ಉತ್ತಮ ಹುದ್ದೆ ಸಿಗುತ್ತದೆಂದರೂ ಎಡಗಣ್ಣಲ್ಲೂ ನೋಡದ ಮಟ್ಟಿಗೆ ಈ ಬೊಂಬೆಗಳು ನನ್ನನ್ನು ಸುಸತ್ತುವರಿದಿವೆ. ಈ ಬೊಂಬೆಗಳ ಕಾಲ್ಪನಿಕ ಲೋಕದಲ್ಲೇ ನನ್ನ ಜಗತ್ತನ್ನೂ ಕಂಡುಕೊಂಡಿದ್ದೇನೆ"

      ಬೆಂಬಲ ಸಿಕ್ಕರೆ ಪುರುಷನನ್ನು ಮೀರಬಲ್ಲಳು ಮಹಿಳೆ

      ಬೆಂಬಲ ಸಿಕ್ಕರೆ ಪುರುಷನನ್ನು ಮೀರಬಲ್ಲಳು ಮಹಿಳೆ

      "ಮಹಿಳೆಯಾಗಿ ಯಾವುದಾದರೊಂದು ಗುರಿ ಸಾಧಿಸುವುದು ಅಂದ್ರೆ ಸುಲಭದ ಮಾತಲ್ಲ. ಈ ಸಮಾಜದಲ್ಲಿ ಎಷ್ಟೇ ಸಮಾನತೆ ಇದೆ ಎಂದರೂ ಮಹಿಳೆಗೆ ಸಾಕಷ್ಟು ಅಡೆತಡೆಗಳು ಇದ್ದೇ ಇರುತ್ತವೆ. ಕುಟುಂಬ, ಮಕ್ಕಳು, ವೈಯಕ್ತಿಕ ಕೆಲಸಗಳು, ವೃತ್ತಿ... ಎಲ್ಲವುಗಳ ನಡುವಲ್ಲೂ ಹವ್ಯಾಸ ಬೆಳೆಸಿಕೊಳ್ಳೋದು ಮತ್ತು ಗುರಿ ತಲುಪೋದು ಕಷ್ಟವೇ. ಈ ಎಲ್ಲಕ್ಕೂ ಕುಟುಂಬದಿಂದ ಬೆಂಬಲ ಅತ್ಯಗತ್ಯ. ಅದೊಂದು ಸಿಕ್ಕರೆ ಮಹಿಳೆ ಪುರುಷನನ್ನು ಮೀರಿ ಬೆಳೆಯಬಲ್ಲಳು ಅನ್ನೋದು ನನ್ನ ಅಭಿಪ್ರಾಯ "

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+