Get Updates
Get notified of breaking news, exclusive insights, and must-see stories!

ವಾರದ ಸಾಧಕಿ: ಹಿಮಾಲಯದ ಮೇಲೆ ಕನ್ನಡಧ್ವಜ ಹಾರಿಸಿದ ರೂಪಾ ಸತೀಶ್

"ಕನ್ನಡ ಮಾತಾಡಿ ಅಂತ ಕನ್ನಡಿಗರನ್ನೇ ಅಂಗಲಾಚುವ ಸ್ಥಿತಿಯಿದೆಯಲ್ಲ, ಅದಕ್ಕಿಂದ ದೈನೇಸಿ ಸ್ಥಿತಿ ಬೇರೆ ಇಲ್ಲ ಅನ್ಸುತ್ತೆ. ಯಾಕೆ ಕನ್ನಡದ ಬಗ್ಗೆ ಕನ್ನಡಿಗರಲ್ಲೇ ತಾತ್ಸಾರ ಭಾವನೆ ಇದೆ? ಪ್ರತಿ ಮನೆಯಲ್ಲಿಯೂ ಕನ್ನಡ ವಾತಾವರಣ ಸೃಷ್ಟಿಯಾಗೋಕೆ ಏನು ಮಾಡಬಹುದು?

ಬಳಕೆಯಲ್ಲಿಲ್ಲದ ಭಾಷೆ ನಶಿಸಿಹೋಗುತ್ತೆ. ಆದ್ದರಿಂದ ಭಾಷೆಯ ನಿರಂತರ ಬಳಕೆ ಮತ್ತು ಆ ಮೂಲಕ ಒಂದು ಭಾಷೆ ಮತ್ತು ಭಾಷಿಕ ಸಮುದಾಯವನ್ನು ಉಳಿಸುವ ಪ್ರಯತ್ನ ಇಂದು ಜರೂರಾಗಿ ಆಗಬೇಕಿದೆ" ಎಂದು ಕನ್ನಡದ ಕುರಿತ ತುಂಬು ಕಾಳಜಿಯಿಂದಲೇ ಮಾತು ಆರಂಭಿಸಿದವರು ರೂಪಾ ಸತೀಶ್.

ಅಮೆರಿಕ ಮೂಲದ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಮಾರ್ಕೆಟಿಂಗ್ ಎಕ್ಸಿಕ್ಯುಟಿವ್ ಆಗಿರುವ ರೂಪಾ ಸತೀಶ್ ಅವರ ಮಾತೃ ಭಾಷೆ ತೆಲುಗು ಎಂದರೆ ಕರ್ನಾಟಕದಲ್ಲಿದ್ದುಕೊಂಡು ಕನ್ನಡ ಮಾತನಾಡಲು ಹಿಂಜರಿಯುವ ಅನೇಕರಿಗೆ ಅಚ್ಚರಿಯಾಗಬಹುದು!

ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ರೂಪಾ ಅವರಿಗೆ ಕನ್ನಡವೆಂದರೆ ತುಂಬು ಅಕ್ಕರೆ. ಎಂಎನ್ ಸಿ ಕೆಲಸದ ಜೊತೆಗೆ ಬ್ಲಾಸಮ್ಸ್ ಇಂಟರ್ನಾಶನಲ್ ಪ್ಲೇಸ್ಕೂಲ್ ಎಂಬ ಶಾಲೆಯನ್ನೂ ನಡೆಸುತ್ತಿರುವ ರೂಪಾ ಅವರು, ಕನ್ನಡ ಭಾಷೆಯ ಕುರಿತು ಬೇರೆ ಭಾಷಿಕರಲ್ಲಿ ಅಭಿಮಾನ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ಇದರೊಟ್ಟಿಗೆ ಟ್ರೆಕ್ಕಿಂಗ್, ಕಥಕ್ ನೃತ್ಯಗಳಲ್ಲಿ ಆಸಕ್ತಿ ಹೊಂದಿರುವ ರೂಪಾ ಅವರು ಹಿಮಾಲಯದ ಮೇಲೆ ಕನ್ನಡದ ಬಾವುಟ ಹಾರಿಸಿದ ಹೆಗ್ಗಳಿಕೆ ಪಾತ್ರರಾದವರು. ಹಲವು ಅನಾಥಾಶ್ರಮಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವ ಇವರು ತಮ್ಮ ಕೈಲಾದ ನೆರವು ನೀಡುತ್ತ ಬಂದಿದ್ದಾರೆ. ಕನ್ನಡ ರಾಜ್ಯೋತ್ಸವ ಸಮೀಪಿಸುತ್ತಿರುವ ಹೊತ್ತಲ್ಲಿ, ಕನ್ನಡದ ಕುರಿತು ನೈಜ ಕಾಳಜಿಯಿಂದ ಕೆಲಸ ಮಾಡುತ್ತಿರುವ ರೂಪಾ ಸತೀಶ್ ಅವರೊಂದಿಗಿನ ಸಂದರ್ಶನ ಇಲ್ಲಿದೆ. ಅವರು ನಮ್ಮ ಈ ವಾರದ ಸಾಧಕಿ.

ಕನ್ನಡ ಮಾತನಾಡುವವರಿಗೆ ಬರ!

ಕನ್ನಡ ಮಾತನಾಡುವವರಿಗೆ ಬರ!

"ನಾನು ಮೊತ್ತ ಮೊದಲು ಕೆಲಸಕ್ಕೆ ಸೇರಿದಾಗ ನಾನಿದ್ದ ಆಫೀಸಿನಲ್ಲಿ ಕನ್ನಡ ಮಾತನಾಡುತ್ತಿದ್ದವರಂದ್ರೆ ನಾನು ಮತ್ತು ಆಫೀಸ್ ಬಾಯ್ ಇಬ್ಬರೇ! ಉಳಿದವರೆಲ್ಲ ಬೇರೆ ಬೇರೆ ರಾಜ್ಯದಿಂದ ಇಲ್ಲಿಗೆ ಬಂದು ಹಲವು ವರ್ಷವಾದರೂ ಕನ್ನಡ ಕಲಿಯುವ ಪ್ರಯತ್ನವನ್ನೂ ಮಾಡಿರಲಿಲ್ಲ. ಎಷ್ಟೋ ಆಫೀಸು ಬದಲಿಸಿದರೂ ಪರಿಸ್ಥಿತಿ ಬದಲಾಗಲಿಲ್ಲ. ಕನ್ನಡದವರೇ ಕನ್ನಡ ಮಾತನಾಡುವುದಕ್ಕೆ ಹಿಂಜರಿಯುತ್ತಿದ್ದುದನ್ನೂ ಗಮನಿಸಿದ್ದೆ. ಇವನ್ನೆಲ್ಲ ಕಂಡು ಮೊದಲ ಬಾರಿಗೆ ಆರ್ಕುಟ್ ನಲ್ಲಿ 3K ಎಂಬ ಗ್ರೂಪ್ ಶುರುಮಾಡಿದೆ. 3K ಅಂದರೆ ಕನ್ನಡ, ಕವಿತೆ, ಕಥನ ಅಂತ. ಆಗ ನನ್ನ ಜೊತೆಗಿದ್ದಿದ್ದು ಇಬ್ಬರು ಮಲ್ಯಾಳಿ ಹುಡುಗಿಯರಷ್ಟೇ!"

3K ಆರಂಭದ ಕತೆ

3K ಆರಂಭದ ಕತೆ

"3K ಯಲ್ಲಿ ಮೊದಲು ನನ್ನದೇ ಕವಿತೆಗಳನ್ನು ಬರೆದು ಪೋಸ್ಟ್ ಮಾಡುತ್ತಿದ್ದೆ. ಕ್ರಮೇಣ ಇದಕ್ಕೆ ಒಬ್ಬೊಬ್ಬರೇ ಸೇರುತ್ತ 13 ಜನ ಸದಸ್ಯರಾದರು. ನಮ್ಮ ಕವಿತೆ, ಕಥನ ಮತ್ತು ಕನ್ನಡಕ್ಕೆ ಸಂಬಂಧಿಸಿದ ಚರ್ಚೆಗಳಿಗೆ 3K ಒಂದು ವೇದಿಕೆಯಾಯಿತು. ನಮಗ್ಯಾರಿಗೂ ಮುಖತಃ ಪರಿಚಯವಿರಲಿಲ್ಲ. ಎಲ್ಲರೂ ಸಾಮಾಜಿಕ ಮಾಧ್ಯಮದ ಮೂಲಕ ಪರಿಚಿತರಾದವರು. ನಂತರ ಒಂದು ದಿನ ಎಲ್ಲರೂ ಭೇಟಿ ಮಾಡಬೇಕು ಎಂದು ನಿರ್ಧರಿಸಿ ಮಲ್ಲೇಶ್ವರಂ ನ ಕಾಫಿ ಡೇಯಲ್ಲಿ ಭೇಟಿಯಾದೆವು."

3000 ಸದಸ್ಯರು

3000 ಸದಸ್ಯರು

"ಒಬ್ಬೊಬ್ಬರನ್ನೇ ಪರಿಚಯ ಮಾಡಿಕೊಳ್ಳುವಾಗ ಗೊತ್ತಾಯ್ತು, ಈ ಭೇಟಿಗೆಂದೇ ಒಬ್ಬರು ಬಾಂಬೆಯಿಂದ ಬೆಳಿಗ್ಗೆ ವಿಮಾನದಲ್ಲಿ ಬಂದಿದ್ದರು ಎಂಬುದು! ರಾತ್ರಿ ಮಂಗಳೂರಿನಿಂದ ಬಸ್ಸಿಗೆ ಹೊರಟು ಮತ್ತೊಬ್ಬರು ಬಂದಿದ್ದರು, ಬಳ್ಳಾರಿ, ಚಿಕ್ಕಬಳ್ಳಾಪುರದಿಂದಲೂ ಜನ ಬಂದಿದ್ದರು! 3K ಯನ್ನು ಇಷ್ಟೇಲ್ಲ ಗಂಭಿರವಾಗಿ ತೆಗೆದುಕೊಂಡಿದ್ದಾರೆ ಎಂಬುದು ನನಗೆ ಗೊತ್ತಾಗಿದ್ದೇ ಆಗ! ನಾನಿದನ್ನು ಗಂಭಿರವಾಗಿ ಪರಿಗಣಿಸಿ, ಬೇರೇನಾದರೂ ಮಾಡಬೇಕು ಎಂದು ಆಗಲೇ ನಿರ್ಧಾರಕ್ಕೆ ಬಂದೆ. ಆರ್ಕುಟ್ ಹೋಯ್ತು, ಫೇಸ್ ಬುಕ್ ಬಂತು. ನಮ್ಮ 13 ಜನ ಸದಸ್ಯರು 3Kಯ ಕೋರ್ ಕಮಿಟಿ ಮಾಡಿಕೊಂಡೆವು. ಸದ್ಯಕ್ಕೆ 3Kಯಲ್ಲಿ 3000 ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಈಗಾಗಲೇ ಮೂರು ಪುಸ್ತಕ ಬಿಡುಗಡೆಯಾಗಿದೆ. ಕನ್ನಡದ ಕುರಿತು ನಿರಂತರ ಚರ್ಚೆ, ಕನ್ನಡದ ಕೆಲಸಗಳು, ಸಾಹಿತ್ಯ ಸಂಬಂಧಿ ಕಾರ್ಯಕ್ರಮಗಳು 3K ವತಿಯಿಂದ ನಡೆಯುತ್ತಲೇ ಇರುತ್ತವೆ."

ಕಾವ್ಯ ಸಂಚಾರ

ಕಾವ್ಯ ಸಂಚಾರ

ಬೇರೆ ಬೇರೆ ಊರುಗಳಿಗೆ ಹೋಗಿ ಅಲ್ಲಿನ ಕವಿಗಳನ್ನು ಗುರುತಿಸಿ, ಅಲ್ಲಿ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನೂ ಮಾಡುತ್ತಿದ್ದೇವೆ. ಕಾವ್ಯ ಸಂಚಾರ ಎಂಬ ಹೆಸರಿನಲ್ಲಿ ಈ ಕಾರ್ಯಕ್ರಮ ಆಗಾಗ ನಡೆಯುತ್ತದೆ. ಗೀತರಚನಕಾರ ಕವಿರಾಜ ಅವರ 'ಕಂಕಣ' ಎಂಬ 'ಕನ್ನಡ ಮಾತನಾಡಿ' ಅಭಿಯಾನಕ್ಕೂ ನಾವೆಲ್ಲರೂ ಬೆಂಬಲ ಸೂಚಿಸುತ್ತ, ಕನ್ನಡ ಮಾತನಾಡುವಂತೆ ಅಭಿಯಾನ ಆರಂಭಿಸುತ್ತಿದ್ದೇವೆ.

ಸಮಾಜ ಸೇವೆಯಲ್ಲಿ...

ಸಮಾಜ ಸೇವೆಯಲ್ಲಿ...

"ಇದರೊಂದಿಗೆ ಶಿಶುಮಂದಿರ, ನಿವೇದಿತಾ ನೆಲೆ, ನರೇಂದ್ರ ನೆಲೆ, ಸಹಸ್ರ ದೀಪಿಕಾ ಮುಂತಾದ ಅನಾಥಾಶ್ರಮಗಳೊಂದಿಗೂ ನಿರಂತರ ಸಂಪರ್ಕದಲ್ಲಿದ್ದೇನೆ. ಈ ಮಕ್ಕಳೊಂದಿಗಿನ ಒಡನಾಟ ಹೊಸ ಜಗತ್ತನ್ನು ಪರಿಚಯಿಸುತ್ತದೆ ಎಂಬ ಭಾವನೆ ನನ್ನದು"

ಹಿಮಾಲಯದಲ್ಲಿ ಕನ್ನಡ ಬಾವುಟ

ಹಿಮಾಲಯದಲ್ಲಿ ಕನ್ನಡ ಬಾವುಟ

"ಟ್ರೆಕ್ಕಿಂಗ್ ಎಂದರೆ ನಂಗೆ ಎಲ್ಲಿಲ್ಲದ ಇಷ್ಟ. ಕೆಲ ವರ್ಷಗಳ ಹಿಂದೆ ವಾಹನಾಪಘಾತದಲ್ಲಿ ಕಾಲಿಗೆ ಪೆಟ್ಟು ಬಿದ್ದು, ಸ್ವಲ್ಪ ಜಾಸ್ತಿ ನಡದೆದರೂ ಮಂಡಿ ನೋವು ಆರಂಭವಾಗುತ್ತಿತ್ತು. ಆದರೆ ಟ್ರೆಕ್ಕಿಂಗ್ ಮಾಡುತ್ತ ಮಾಡುತ್ತ ನಾನು ಮತ್ತಷ್ಟು ಗಟ್ಟಿಯಾದೆ. ನನ್ನಿಂದ ಆಗೋಲ್ಲ ಎಂಬ ಭಾವನೆಯನ್ನೇ ಸುಳ್ಳಾಗಿಸಿ, ನನ್ನನ್ನು ಹಿಮಾಲಯವನ್ನೂ ಏರುವ ಮಟ್ಟಿಗೆ ಸನ್ನದ್ಧಗೊಳಿಸಿದ್ದು ಮನೋಬಲ. ಹಿಮಾಲಯದ ತುದಿಯಲ್ಲಿ ಕನ್ನಡ ಧ್ವಜ ಹಾರಿಸುತ್ತಿದ್ದಂತೆಯೇ ಉಮ್ಮಳಿಸಿಬಂದ ಆನಂದಭಾಷ್ಪ ಆ ದೈತ್ಯ ಪರ್ವತವನ್ನೇರಿದ ಸುಸ್ತನ್ನೆಲ್ಲ ದೂರಾಗಿಸಿಬಿಟ್ಟಿತ್ತು!"

ಹೆಮ್ಮೆಯಿಂದ ಕನ್ನಡ ಮಾತಾಡಿ

ಹೆಮ್ಮೆಯಿಂದ ಕನ್ನಡ ಮಾತಾಡಿ

"ಕನ್ನಡ ಮಾತನಾಡುವುದಕ್ಕೆ ಖಂಡಿತವಾಗಿಯೂ ಹಿಂಜರಿಕೆ ಬೇಡ. ತಂದೆ-ತಾಯಿ ತಮ್ಮ ಮಕ್ಕಳೊಂದಿಗೆ ಇಂಗ್ಲಿಷ್ ನಲ್ಲೇ ಮಾತನಾಡುವುದನ್ನು ದಯವಿಟ್ಟು ಬಿಟ್ಟು ಬಿಡಿ. ವ್ಯಾವಹಾರಿಕ ಭಾಷೆಯನ್ನು ಮಗು ಹೇಗೋ ಕಲಿತೇ ಕಲಿಯುತ್ತದೆ. ಆದರೆ ಮಾತೃಭಾಷೆಯನ್ನು ತಂದೆ-ತಾಯಿಯೇ ಕಲಿಸಬೇಕು. ಹಾಗೆಯೇ ಸರ್ಕಾರಗಳೂ ಕನ್ನಡದ ಉಳಿವಿಗೆ ಕಂಕಣಬದ್ಧರಾಗಬೇಕು. ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ, ಸರ್ಕಾರಿ ಅರ್ಜಿಗಳನ್ನು ಕಡ್ಡಾಯವಾಗಿ ಕನ್ನಡದಲ್ಲೇ ಭರ್ತಿ ಮಾಡುವಂತೆ ಮಾಡುವುದು, ಕರ್ನಾಟಕದಲ್ಲಿ ನೆಲೆಸಿರುವ ಬೇರೆ ಭಾಷಿಕರಿಗೆ ಕನ್ನಡ ಕಲಿಯುವ ಅನಿವಾರ್ಯತೆ ಸೃಷ್ಟಿಯಾಗುವಂತೆ ಮಾಡುವುದು ಇಂದು ತುರ್ತಾಗಿ ಆಗಬೇಕಾದ ಕೆಲಸ. ಆಗ ಕನ್ನಡ ಖಂಡಿತ ಉಳಿದೀತು"

ಕುಟುಂಬದ ಸಹಕಾರ

ಕುಟುಂಬದ ಸಹಕಾರ

ನನ್ನ ತಂದೆ-ತಾಯಿಯರಿಂದ ಕನ್ನಡ ಕೆಲಸಕ್ಕೆ ನನಗೆ ನಿರಂತರ ಪ್ರೋತ್ಸಾಹ ಸಿಗುತ್ತಲೇ ಇದೆ. ನಾನು ಮದುವೆಯಾದ ಮೇಲೆ ಕನ್ನಡದ ಕುಟುಂಬವನ್ನೇ ಸೇರಿದ್ದು ನನಗೆ ಮತ್ತಷ್ಟು ಸಂತಸದ ವಿಷಯ. ಪತಿಯ ಮನೆಯಿಂದಲೂ ನನಗೆ ಸಾಕಷ್ಟು ಬೆಂಬಲವಿದೆ. ನಾಲ್ಕು ವರ್ಷದ ಹಿಂದೆ ಪತಿ ಹೃದಯಾಘಾತವಾಗಿ ತೀರಿಕೊಂಡಾಗ ನಿಜಕ್ಕೂ ಬದುಕು ಸಾಕೆನ್ನಿಸಿತ್ತು. ಆದರೆ ಅವರೇ ನನ್ನೊಳಗೆ ಶಕ್ತಿ ತುಂಬುತ್ತಿದ್ದಾರೆಂದು ನಂಬಿ ನನ್ನನ್ನು ಈಗ ಬೇರೆ ಬೇರೆ ಕೆಲಸಗಳಲ್ಲಿ ನಿಯೋಜಿಸಿಕೊಳ್ಳುತ್ತಿದ್ದೇನೆ. ಮುದ್ದಿನ ಮಗಳು ಫ್ಯಾಶನ್ ಡಿಸೈನಿಂಗ್ ಓದುತ್ತಿದ್ದಾಳೆ. ಅವರಿಲ್ಲ ಎಂಬ ಕೊರತೆಯೊಂದನ್ನು ಬಿಟ್ಟರೆ ಬದುಕು ತುಂಬಾ ಚೆನ್ನಾಗಿದೆ. ನಮ್ಮೆಲ್ಲರ ಮನಸ್ಸಿನಲ್ಲಿ ಅವರಿನ್ನೂ ಜೀವಂತವಾಗಿಯೇ ಇದ್ದಾರೆ"

 ಅಡುಗೆ ಮನೆಯಿಂದ ಆಚೆ ಬನ್ನಿ...

ಅಡುಗೆ ಮನೆಯಿಂದ ಆಚೆ ಬನ್ನಿ...

ಪ್ರತಿಯೊಬ್ಬ ಮಹಿಳೆಯರಿಗೂ ನನ್ನ ಸಲಹೆ ಇಷ್ಟೇ. ದಯವಿಟ್ಟು ಅಡುಗೆ ಮನೆಯಿಂದ ಆಚೆ ಬನ್ನಿ. ಅಡುಗೆ ಮಾಡುವುದೂ ಒಂದು ಸವಾಲಿನ ಕೆಲಸ ಅನ್ನೋದು ನಿಜ. ಆದರೆ ಅದೊಂದೇ ಬದುಕಲ್ಲ. ಪ್ರತಿ ಮಹಿಳೆಯಲ್ಲೂ ಪ್ರತಿಭೆಯಿದೆ. ಆಕೆ ಸಮಾಜದ ಮುಂದೆ ತೆರೆದುಕೊಳ್ಳುವುದಕ್ಕೆ ಕುಟುಂಬದ ಜನರಿಂದ ಪ್ರೋತ್ಸಾಹ ಬೇಕಷ್ಟೇ. ಒಂದೇ ಒಂದು ಬಾರಿ, ನಿಮ್ಮ ಒಂದು ಹೆಜ್ಜೆಯನ್ನು ಹೊರಗಿಟ್ಟು ನೋಡಿ. ಜಗತ್ತು ಎಷ್ಟೆಲ್ಲ ಮುಂದೆ ಹೋಗುತ್ತಿದೆ ಎಂಬುದು ತಿಳಿಯುತ್ತದೆ. ಅಡುಗೆ ಮನೆಯ ನಾಲ್ಕು ಗೋಡೆಯ ನಡುವೆ ಕೂಪ ಮಂಡೂಕಗಳಂತೆ ಬದುಕು ಕಳೆಯಬೇಡಿ. ಇದು ನನ್ನ ಕಳಕಳಿಯ ವಿನಂತಿ."

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+