ಕರ್ನಾಟಕದಲ್ಲಿ ಬಿಜೆಪಿಯ ರೊಟ್ಟಿ ಜಾರಿ ತುಪ್ಪದಲ್ಲಿ ಬೀಳುವ ಹೊತ್ತು!
ಕರ್ನಾಟಕದ ರಾಜಕೀಯ ಬೆಳವಣಿಗೆಗಳನ್ನು ನೋಡುತ್ತಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರ ರೊಟ್ಟಿ ಜಾರಿ ತುಪ್ಪದಲ್ಲಿ ಬೀಳುವಂತೆ ಕಾಣುತ್ತಿದೆ. ಅಂದರೆ? ಕರ್ನಾಟಕದ ವಿಧಾನಸಭಾ ಚುನಾವಣೆ ನಿರ್ಮಿಸಿದ ಅತಂತ್ರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿದಾಗ ಬಿಜೆಪಿ ಹೈಕಮಾಂಡ್ ಒಂದು ಲೆಕ್ಕಾಚಾರಕ್ಕೆ ಬಂದಿತ್ತು.
ಅದೆಂದರೆ, ಸದ್ಯದ ಪರಿಸ್ಥಿತಿಯಲ್ಲಿ ಅದೇನೇ ಹರಸಾಹಸ ಮಾಡಿದರೂ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಣ ಕಚ್ಚಾಟ ಕಡಿಮೆಯಾಗುವುದಿಲ್ಲ. ಹಾಗಂತ ಈ ಸರ್ಕಾರ ಬಿದ್ದರೂ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಸಮಂಜಸವೇ ಅಲ್ಲ. ಹೀಗಾಗಿ ತಮಗೆ ಅನುಕೂಲಕರವಾದ ಸನ್ನಿವೇಶ ನಿರ್ಮಾಣವಾದರೆ ಕರ್ನಾಟಕವನ್ನು ರಾಷ್ಟ್ರಪತಿ ಆಳ್ವಿಕೆಗೆ ಒಳಪಡಿಸಬೇಕು ಎಂಬುದೇ ಆ ಲೆಕ್ಕಾಚಾರ.
ಆದರೆ ಈ ಲೆಕ್ಕಾಚಾರ ಈಡೇರುತ್ತದೆ ಅಂತ ಬಿಜೆಪಿ ಹೈಕಮಾಂಡ್ ಏನು ನಿರೀಕ್ಷೆ ಮಾಡಿತ್ತೋ? ಅದು ಅವಧಿಗಿಂತ ಮುಂಚಿತವಾಗಿ ಬಂದಂತಿದೆ. ಕಾರಣ? ಕುಮಾರಸ್ವಾಮಿ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾದರೂ ಅದು ಮುಂದುವರಿಯಬೇಕು ಎಂಬ ಭಾವನೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅಂಡ್ ಪಟಾಲಂಗೆ ಇಷ್ಟವಿಲ್ಲ.
ಆದರೆ ಸರ್ಕಾರ ಉರುಳಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬೇರೆ ಮಾತು. ಹಾಗಾಗದೆ ಮಧ್ಯಂತರ ಚುನಾವಣೆ ಎದುರಾದರೆ ಮರಳಿ ಮತದಾರರ ಎದುರು ಹೋಗುವುದು ಹೇಗೆ? ಅನ್ನುವ ಆತಂಕ ಕಾಂಗ್ರೆಸ್ ಪಕ್ಷದವರಿಗೆ ಮಾತ್ರವಲ್ಲ, ಎಲ್ಲ ಪಕ್ಷಗಳ ಶಾಸಕರಿಗೂ ಇದೆ.

ರಾಷ್ಟ್ರಪತಿ ಆಳ್ವಿಕೆ ಹೇರಲು ಕೇಂದ್ರ ಸಜ್ಜು
ಯಾಕೆಂದರೆ ಜಾಗತೀಕರಣದ ಈ ಕಾಲಘಟ್ಟದಲ್ಲಿ ಒಂದು ವಿಧಾನಸಭಾ ಚುನಾವಣೆಗೆ ಕೋಟಿಗಟ್ಟಲೆ ಹಣ ವೆಚ್ಚ ಮಾಡಬೇಕಾಗುತ್ತದೆ. ಚುನಾವಣೆ ಮುಗಿದ ನಂತರ ರಾಷ್ಟ್ರೀಯ ಸಂಸ್ಥೆಯೊಂದು ನಡೆಸಿದ ಸರ್ವೇಯ ಪ್ರಕಾರ, ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಹೂಡಿಕೆಯಾದ ಒಟ್ಟು ಬಂಡವಾಳದ ಪ್ರಮಾಣ ಸುಮಾರು ಹತ್ತೂವರೆ ಸಾವಿರ ಕೋಟಿ ರೂಪಾಯಿ.
ಹೀಗಿರುವಾದ ಈಗ ಮತ್ತೊಮ್ಮೆ ಮಧ್ಯಂತರ ಚುನಾವಣೆ ಎದುರಾದರೆ ಅದನ್ನು ಎದುರಿಸುವುದು ಹೇಗೆ? ಅನ್ನುವ ಆತಂಕ ಮೂರೂ ರಾಜಕೀಯ ಪಕ್ಷಗಳ ಶಾಸಕರಲ್ಲಿದೆ. ಇದು ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಗೂ ಗೊತ್ತು. ಹೀಗಾಗಿ ಅವರು ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಉರುಳಿದರೆ ಕರ್ನಾಟಕದ ಮೇಲೆ ರಾಷ್ಟ್ರಪತಿ ಆಳ್ವಿಕೆ ಹೇರಲು ಸಜ್ಜಾಗಿದ್ದಾರೆ.
ಈಗ ಅವರ ಲೆಕ್ಕಾಚಾರಕ್ಕೆ ಪೂರಕವಾದ ಬೆಳವಣಿಗೆಗಳು ಹೇಗೆ ನಡೆಯುತ್ತಿವೆ? ಅನ್ನುವುದನ್ನೇ ನೋಡೋಣ. ಅಂದ ಹಾಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಸಾರಾಸಗಟಾಗಿ ಆಂತರಿಕ ಕಚ್ಚಾಟ ನಡೆಯುತ್ತಿದೆ ಎನ್ನಲು ಸಾಧ್ಯವಿಲ್ಲವಾದರೂ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ನಡುವೆ ಮಾತ್ರ ನಿರಂತರವಾಗಿ ಕಚ್ಚಾಟ ನಡೆಯುತ್ತಲೇ ಬಂದಿದೆ.

ಮೈತ್ರಿಗೆ ಉಲ್ಟಾ ಹೊಡೆದಿರುವ ಸಿದ್ದರಾಮಯ್ಯ
ಈ ಸರ್ಕಾರ ಐದು ವರ್ಷ ಉಳಿಯುತ್ತದೆ ಎಂದು ಸಿದ್ದರಾಮಯ್ಯ ಅವರೇ ಹೇಳಿದರೂ ಆಳದಲ್ಲಿ ಅವರ ಮನಸ್ಸು ಹೇಗಿದೆ? ಅನ್ನುವುದು ರಾಜಕೀಯ ವಲಯಗಳಿಗೆ ಗೊತ್ತು. ತಮ್ಮನ್ನು ರಾಜಕೀಯವಾಗಿ ಬಡಿದು ಹಾಕಲು ಜೆಡಿಎಸ್ ಯತ್ನಿಸುತ್ತಿರುವಾಗ ತಾವು ಸುಮ್ಮನಿರುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ಉಲ್ಟಾ ಹೊಡೆದಿದ್ದಾರೆ.
ಹೀಗಾಗಿ ಮೇಲ್ನೋಟಕ್ಕೆ ಅವರು ಪಕ್ಷದಲ್ಲಿನ ಭಿನ್ನಮತೀಯರನ್ನು ಸಮಾಧಾನಿಸುತ್ತಿರುವಂತೆ ಕಂಡರೂ ಆಳದಲ್ಲಿ ಈ ಸರ್ಕಾರ ಉರುಳಿ, ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನದಲ್ಲಿ ಕೂರುವುದು ಬೆಟರ್ರು ಅನ್ನುವುದು ಅವರ ಯೋಚನೆ.
ಹಾಗೇನಾದರೂ ಆದರೆ ಕನಿಷ್ಠ ಪಕ್ಷ ಅವರು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗುತ್ತಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡಾ ಅವರ ಆತ್ಮೀಯರೇ ಆದುದರಿಂದ ರಾಜ್ಯ ಕಾಂಗ್ರೆಸ್ ಮೇಲೆ ಸಿದ್ದರಾಮಯ್ಯ ಅವರಿಗೆ ಪರಿಪೂರ್ಣವಾದ ಗ್ರಿಪ್ ಸಿಗುತ್ತದೆ.

ಯಡಿಯೂರಪ್ಪ ಆಸೆ ಮತ್ತೆ ಗರಿಗೆದರಿದೆ
ಸದ್ಯದ ಸ್ಥಿತಿಯಲ್ಲಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡಿರುವುದರಿಂದ ಸರ್ಕಾರದ ಮಟ್ಟದಲ್ಲಿ ತಮ್ಮ ಖದರ್ರು ಏನೂ ಇಲ್ಲ ಅನ್ನುವುದು ಸಿದ್ದರಾಮಯ್ಯ ಅವರಿಗೆ ಗೊತ್ತು.
ಹೀಗಾಗಿ ಅವರು ತಮ್ಮದೇ ಲೆಕ್ಕಾಚಾರಗಳ ಮೂಲಕ ಮುನ್ನಡೆಯುತ್ತಿದ್ದಾರೆ. ಈ ದಾರಿಯಲ್ಲಿ ಬಿಜೆಪಿಯ ಯಡಿಯೂರಪ್ಪ ಅಲ್ಪಮತದ ಸರ್ಕಾರ ರಚಿಸಿದರೂ ಅಡ್ಡಿಯಿಲ್ಲ. ಅಥವಾ ಕುಮಾರಸ್ವಾಮಿ ಕೆಳಗಿಳಿದು ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾದರೂ ಪರವಾಗಿಲ್ಲ ಎಂಬ ತೀರ್ಮಾನಕ್ಕೆ ಅವರು ಬಂದಿದ್ದಾರೆ.
ಇವತ್ತು ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಇದಕ್ಕೆ ಸಾಕ್ಷಿ ನುಡಿಯುತ್ತಿವೆ. ಹೀಗೆ ಸಿದ್ದರಾಮಯ್ಯ ಅವರು ಸರ್ಕಾರದ ವಿರುದ್ಧ ತಿರುಗಿ ಬಿದ್ದಿರುವುದರಿಂದ ಸರಕಾರ ಮತ್ತೆ ರಚಿಸಲು ಚಟಪಡಿಸುತ್ತಿರುವ ಬಿಜೆಪಿಯ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಆಸೆ ಗರಿಗೆದರಿದೆ.

ರಾಷ್ಟ್ರಪತಿ ಆಳ್ವಿಕೆ ಹೇರಿದರೆ ಸಿಗುವ ಲಾಭ
ಸಮ್ಮಿಶ್ರ ಸರ್ಕಾರದಲ್ಲಿರುವ ಹದಿನೇಳು ಮಂದಿ ಶಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದರೆ ಫೈನ್. ಇಲ್ಲದೇ ಹೋದರೆ ಸರ್ಕಾರ ಉರುಳಿದರೆ ಅಲ್ಪ ಮತದ ಸರ್ಕಾರ ರಚಿಸಿ ದಕ್ಕಿಸಿಕೊಳ್ಳಬಹುದು ಎಂಬ ಲೆಕ್ಕಾಚಾರ ಅವರಲ್ಲೂ ಬಂದಿದೆ.
ಹೀಗೆ ಅವರು ಅಲ್ಪಮತದ ಸರ್ಕಾರ ರಚಿಸಲು ಬಿಜೆಪಿ ಹೈಕಮಾಂಡ್ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸುತ್ತಿಲ್ಲ. ಆದರೆ ಆಳದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ರಚನೆಯಾಗುವುದು ಬಿಜೆಪಿಯ ಹಿರಿಯ ನಾಯಕರಿಗೆ ಇಷ್ಟವಿಲ್ಲ. ಅದರ ಬದಲು ಸರ್ಕಾರ ಉರುಳಿದರೆ ರಾಷ್ಟ್ರಪತಿ ಆಡಳಿತ ಹೇರಿಕೆ ಮಾಡಿದರೆ ಹಲವು ಅನುಕೂಲಗಳಿವೆ.
ಒಂದು, ಸರ್ಕಾರ ತಾನಾಗಿಯೇ ಉರುಳಿ ಬಿದ್ದಿದ್ದರಿಂದ ರಾಷ್ಟ್ರಪತಿ ಆಳ್ವಿಕೆ ಹೇರುವುದು ಅನಿವಾರ್ಯವಾಯಿತು ಅಂತ ಹೇಳುವುದು ಸುಲಭ. ಅದೇ ರೀತಿ ರಾಷ್ಟ್ರಪತಿ ಆಳ್ವಿಕೆ ಹೇರಿದ ನಂತರ ಕೆಲ ತಿಂಗಳ ಕಾಲ ಮೌನವಾಗಿರುವುದು. ಆನಂತರ ಪಾರ್ಲಿಮೆಂಟ್ ಚುನಾವಣೆಯ ಜತೆಗೇ ಕರ್ನಾಟಕದ ವಿಧಾನಸಭೆ ಚುನಾವಣೆಯನ್ನೂ ನಡೆಸುವುದು.
ಹೀಗಾಗುವ ಕಾಲಕ್ಕೆ ರಾಜಕೀಯ ಧ್ರುವೀಕರಣ ನಡೆದು ಬಿಜೆಪಿಯ ಶಕ್ತಿ ಸಹಜವಾಗಿಯೇ ಹೆಚ್ಚಾಗುತ್ತದೆ. ಸಮ್ಮಿಶ್ರ ಸರ್ಕಾರ ರಚನೆಯಾದರೆ ಏಳುವ ಗೊಂದಲಗಳನ್ನು ಗಮನಿಸಿದ ಜನ ಬಿಜೆಪಿ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರುವಂತೆ ಮಾಡುತ್ತಾರೆ. ಪಾರ್ಲಿಮೆಂಟ್ ಚುನಾವಣೆಯಲ್ಲೂ ಕಮಲ ಪಾಳೆಯಕ್ಕೆ ಬಂಪರ್ ಲಾಭ ದಕ್ಕುತ್ತದೆ ಎಂಬುದು ಮೋದಿ ಅವರ ಲೆಕ್ಕಾಚಾರ.

ಕುಮಾರಸ್ವಾಮಿಯ ಹತಾಶೆಯ ಸಂಕೇತ
ಕರ್ನಾಟಕದ ಬೆಳವಣಿಗೆಗಳು ಈ ಲೆಕ್ಕಾಚಾರಕ್ಕೆ ಪೂರಕವಾಗಿಯೇ ನಡೆಯುತ್ತಿವೆ. ಉದಾಹರಣೆಗೇ ನೋಡಿ. ಅಲ್ಪಮತದ ಸರ್ಕಾರ ರಚಿಸುವ ಕನಸಿನಲ್ಲಿ ಯಡಿಯೂರಪ್ಪ ದಿನನಿತ್ಯ ಕುಮಾರಸ್ವಾಮಿ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸುತ್ತಲೇ ಇದ್ದಾರೆ. ಅವರ ವಾಗ್ಧಾಳಿಯ ವಿರುದ್ಧ ಕೆಂಡಾಮಂಡಲವಾಗಿರುವ ಕುಮಾರಸ್ವಾಮಿ ಅವರು, ಇದು ಮುಂದುವರಿದರೆ ರಾಜ್ಯದ ಜನ ದಂಗೆ ಏಳಲು ನಾನೇ ಕರೆ ಕೊಡುತ್ತೇನೆ ಅನ್ನುವ ಮಟ್ಟಕ್ಕೆ ಹೋಗಿದ್ದಾರೆ.
ಅವರು ಕರೆ ನೀಡಿದ ಬೆನ್ನಲ್ಲೇ ಯಡಿಯೂರಪ್ಪ ನಿವಾಸದ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ದಾಂಧಲೆ ನಡೆಸಿದ್ದೂ ಆಗಿದೆ. ಕುತೂಹಲದ ಸಂಗತಿ ಎಂದರೆ ರಾಜ್ಯದ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಆಡಿರುವ ಮಾತು. ಜನ ದಂಗೆ ಏಳಲು ನಾನೇ ಕರೆ ಕೊಡುತ್ತೇನೆ ಎಂದು ಅವರು ಹೇಳುವುದು ಹತಾಶೆಯ ಸಂಕೇತವೇ ಹೊರತು, ಮುತ್ಸದ್ದಿತನದ ಲಕ್ಷಣವಲ್ಲ.
ಹೀಗೆ ನೋಡುತ್ತಾ ಹೋದರೆ ಸಿದ್ದರಾಮಯ್ಯ, ಕುಮಾರಸ್ವಾಮಿ, ಯಡಿಯೂರಪ್ಪ ಹೀಗೆ ಮೂರೂ ಪಕ್ಷಗಳ ಪ್ರಮುಖರು ದಿನನಿತ್ಯ ಗೊಂದಲ ಹೆಚ್ಚಾಗುವಂತೆ ಮಾಡುತ್ತಿರುವುದು ಸಹಜವಾಗಿಯೇ ಬಿಜೆಪಿ ಹೈಕಮಾಂಡ್ ಲೆಕ್ಕಾಚಾರಕ್ಕೆ ಪೂರಕವಾಗಿದೆ. ಹಾಗೆಯೇ ಅದರ ರೊಟ್ಟಿ ಜಾರಿ ತುಪ್ಪದಲ್ಲಿ ಬೀಳುವ ಲಕ್ಷಣಗಳು ಕಾಣುತ್ತಿವೆ.'












Click it and Unblock the Notifications