ದೀಪಾವಳಿ ಹಬ್ಬ 2022; ಕರ್ನಾಟಕದ ನಗರಗಳಲ್ಲಿ ಇಂದಿನ ಹೂ, ಹಣ್ಣಿನ ದರ ತಿಳಿಯಿರಿ
ಬೆಂಗಳೂರು, ಅಕ್ಟೋಬರ್, 24; ರಾಜ್ಯದಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಕಳೆಗಟ್ಟಿದ್ದು, ಮಾರುಕಟ್ಟೆಗಳಲ್ಲಿ ಜನರು ಭರ್ಜರಿ ಖರೀದಿ ಭರಾಟೆಯಲ್ಲಿ ತೊಡಗಿಕೊಂಡಿದ್ದಾರೆ. ಎರಡು ವರ್ಷದಿಂದ ಮಹಾಮಾರಿ ಕೊರೊನಾ ಹಿನ್ನೆಲೆ ದೀಪಾವಳಿ ಸಂಭ್ರಮ ಕಳೆಗುಂದಿತ್ತು. ಮಾರುಕಟ್ಟೆಗಳಲ್ಲಿಯೂ ವ್ಯಾಪಾರಿಗಳು ವ್ಯಾಪಾರವಿಲ್ಲದೇ ಕಂಗಾಲಾಗಿದ್ದರು. ಇದೀಗ ಮಹಾಮಾರಿ ಕೊರೊನಾ ಆರ್ಭಟ ತಗ್ಗಿದ್ದು, ಜನರು ಅದ್ಧೂರಿಯಾಗಿ ಹಬ್ಬವನ್ನು ಆಚರಿಸಲು ಮುಂದಾಗಿದ್ದಾರೆ.
ರಾಜ್ಯಾದ್ಯಂತ ಈ ವರ್ಷದ ದೀಪಾವಳಿಯನ್ನು ಅದ್ಧೂರಿಯಾಗಿ ಆಚರಿಸಲು ಜನರು ಸಜ್ಜಾಗಿ ನಿಂತಿದ್ದಾರೆ. ಹಬ್ಬದ ಒಂದು ದಿನ ಮುಂಚಿತವಾಗಿ ಮಾರುಕಟ್ಟೆಗಳಲ್ಲಿ ಜನರು ಖರೀದಿ ಭರಾಟೆಯಲ್ಲಿ ಕಾರ್ಯನಿರತರಾಗಿದ್ದಾರೆ. ದೀಪಾವಳಿ ಪ್ರಯುಕ್ತ ಮಾರುಕಟ್ಟೆಯಲ್ಲಿ ಹೂ, ಹಣ್ಣುಗಳ ಬೆಳೆ ಗಗನಕ್ಕೇರಿದೆ. ಆದರೂ ಕೂಡ ಜನರು ಹೂ, ಹಣ್ಣುಗಳ ಖರೀದಿಯಲ್ಲಿ ತೊಡಗಿದ್ದಾರೆ. ಮಾರುಕಟ್ಟೆಗಳತ್ತ ಜನರು ಮುಖ ಮಾರುತ್ತಿರುವುದು ಎಲ್ಲೋ ಒಂದು ಕಡೆ ವ್ಯಾಪಾರಿಗಳ ಮುಖದಲ್ಲಿ ಮಂದಹಾಸ ತರಿಸಿದೆ. ಗ್ರಾಹಕರು ಮಾರಕಟ್ಟೆಗೆ ಕಿಕ್ಕಿರಿದು ಬರುತ್ತಿರುವುದರಿಂದ ವ್ಯಾಪಾರವು ಭರದಿಂದ ಸಾಗಿದೆ. ಇದರಿಂದ ಮಾರುಕಟ್ಟೆಗಳಲ್ಲೂ ಹಬ್ಬದ ವಾತವರಣ ನಿರ್ಮಾಣವಾಗಿದೆ. ಹಾಗೆಯೇ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಮಾರುಕಟ್ಟೆಗಳು ಜನರಿಂದ ತುಂಬಿ ತುಳುಕುತ್ತಿವೆ. ಜಿಲ್ಲಾವಾರು ಮಾರುಟ್ಟೆಗಳಲ್ಲಿ ವಿವಿಧ ರೀತಿಯಾಗಿ ಹೂವು, ಹಣ್ಣು ಸೇರಿದಂತೆ ಪೂಜಾ ಸಾಮಗ್ರಿಗಳು ಏರಿಕೆ ಆಗಿರುವುದನ್ನು ಇಲ್ಲಿ ನೋಡಬಹುದಾಗಿದೆ.
ಸೂರ್ಯಗ್ರಹಣ; ಅಕ್ಟೋಬರ್ 25ರಂದು ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶ ನಿರ್ಬಂಧ
ಖರೀದಿ ಭರಾಟೆಯಲ್ಲಿ ಜನರು
ದೀಪಾವಳಿ ಹಬ್ಬದ ಅಂಗವಾಗಿ ಶಿವಮೊಗ್ಗದಲ್ಲಿ ಹಬ್ಬದ ಖರೀದಿ ಬಿರುಸಾಗಿದೆ. ಹೂವು, ಹಣ್ಣು, ತರಕಾರಿ, ಪೂಜಾ ಸಾಮಗ್ರಿಗಳ ಖರೀದಿಗೆ ಜನರು ಕಿಕ್ಕಿರಿದು ಮಾರುಕಟ್ಟೆಗೆ ಆಗಮಿಸಿದ್ದಾರೆ. ಗಾಂಧಿ ಬಜಾರ್, ಶಿವಪ್ಪನಾಯಕ ಹೂವಿನ ಮಾರುಕಟ್ಟೆ, ವಿನೋಬನಗರ ಎಪಿಎಂಸಿ ಮತ್ತು ನಗರದ ವಿವಿಧೆಡೆ ಹೂವು, ಹಣ್ಣು ಮಾರಾಟ ಮಾಡಲಾಗುತ್ತಿದೆ. ಹೂವು, ಹಣ್ಣು, ಬಾಳೆ ಕಂದು, ಕುಂಬಳಕಾಯಿ ಮಾರಾಟ ಜೋರಾಗಿದೆ. ಇನ್ನು ದೀಪಾವಳಿ ಅಂಗವಾಗಿ ಹಣತೆ, ವಿಭಿನ್ನ ಬಗೆಯ ಲೈಟಿಂಗ್ ಸೇರಿದಂತೆ ಹಲವು ಅಲಂಕಾರಿಕ ವಸ್ತುಗಳು ಗಮನ ಸೆಳೆದಿವೆ.
ದುಬಾರಿ ದೀಪಾವಳಿ: ಶಿವಮೊಗ್ಗದಲ್ಲಿ ಗ್ರಾಹಕರ ಜೇಬು ಸುಡುತ್ತಿದೆ ಹೂವು, ಹಣ್ಣು, ಪಟಾಕಿ
ಶಿವಮೊಗ್ಗದಲ್ಲಿ ಹೂ, ಹಣ್ಣಿನ ದರ
ಹಬ್ಬದ ಖರೀದಿಗೆ ಬಂದ ಗ್ರಾಹಕರ ಜೇಬಿಗೆ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ. ಕೆ.ಜಿ. ಚೆಂಡು ಹೂವು 100 ರೂಪಾಯಿ, ಮಾರು ಸೇವಂತಿಗೆ 80-100 ರೂಪಾಯಿ, ಕೆ.ಜಿ. ಸೇವಂತಿಗೆ 200 ರೂಪಾಯಿ, ಕೆ.ಜಿ. ಗುಲಾಬಿಗೆ 400 ರೂಪಾಯಿ ಇದೆ. ಇನ್ನು ಕೆ.ಜಿ ಸೇಬು, ಕಿತ್ತಳೆ, ಸಪೋಟ 100 ರೂಪಾಯಿನಿಂದ ಆರಂಭವಾಗಲಿದೆ. ಕೆ.ಜಿ. ದಾಳಿಂಬೆ 150 ರೂಪಾಯಿ, ಕೆ.ಜಿ. ದ್ರಾಕ್ಷಿ ಮತ್ತು ಪೇರಲೆ 120 ರೂಪಾಯಿ ಇದೆ.
ವ್ಯಾಪಾರವಿಲ್ಲದೇ ವ್ಯಾಪರಸ್ಥರು ಕಂಗಾಲು
ಹೂವಿನ ಬೆಲೆ ದುಬಾರಿಯಾಗಿದ್ದು ಗ್ರಾಹಕರು ಬರುತ್ತಿಲ್ಲ ಎಂದು ವ್ಯಾಪಾರಿಗಳು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ. ದೀಪಾವಳಿ ನಮ್ಮನ್ನು ದೀವಾಳಿ ಮಾಡುತ್ತಿದೆ. ಹೂವುಗಳ ಬೆಲೆ ಏರಿಕೆ ಆಗಿದ್ದು, ಇದೆ ಕಾರಣಕ್ಕೆ ಗ್ರಾಹಕರು ಬರುತ್ತಿಲ್ಲ. ಸಂಜೆ ವೇಳೆಗೆ ವ್ಯಾಪಾರವಾದರೆ ನಾವು ನೆಮ್ಮದಿಯಿಂದ ಹೊರಡಬಹುದು ಎಂದು ಹೂ ಮಾರಾಟಗಾರರು ಅಳಲು ತೋಡಿಕೊಂಡಿದ್ದಾರೆ. ಇತ್ತ ಗ್ರಾಹಕರು ಕೂಡ ಹೂವು, ಹಣ್ಣು ದುಬಾರಿ ಆಗಿದೆ ಎಂದು ಅಳಲು ತೊಡಿಕೊಳ್ಳುತ್ತಿದ್ದಾರೆ. ಪೂಜೆ ಮಾಡಲು ಹೂವು, ಹಣ್ಣು ಬೇಕು. ಆದರೆ ಎಲ್ಲದರ ದರ ದುಪ್ಪಟ್ಟಾಗಿದೆ. ಕೈಲಾದಷ್ಟು ಹೂ, ಹಣ್ಣು ಖರೀದಿಸಿ ಪೂಜೆ ಮಾಡುತ್ತೇವೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
15 ಮಳಿಗೆಗಳಲ್ಲಿ ಪಟಾಕಿ ಮಾರಾಟ
ಇನ್ನು
ದೀಪಾವಳಿ
ಪ್ರಯುಕ್ತ
ಶಿವಮೊಗ್ಗ
ನಗರದಲ್ಲಿ
ಪಟಾಕಿ
ಖರೀದಿ
ಬಿರುಸುಗೊಂಡಿದೆ.
ವಿವಿಧ
ಮಳಿಗೆಗಳಲ್ಲಿ
ಪಟಾಕಿ
ಮಾರಾಟವಾಗುತ್ತಿದೆ.
ನೆಹರೂ
ಕ್ರೀಡಾಂಗಣದಲ್ಲಿ
ಸುಮಾರು
ಸುಮಾರು
15
ಮಳಿಗೆಗಳಲ್ಲಿ
ಪಟಾಕಿ
ಮಾರಾಟ
ಮಾಡಲಾಗುತ್ತಿದೆ.
ವಿವಿಧ
ಬಗೆಯ
ಪಟಾಕಿಗಳು
ಇಲ್ಲಿ
ಮಾರಾಟಕ್ಕಿವೆ.
ನೂರರಿಂದ
ಸಾವಿರಾರು
ರುಪಾಯಿಯವರೆಗೆ
ವಿವಿಧ
ಬಗೆಯ
ಪಟಾಕಿಗಳನ್ನು
ಕಾಣಬಹುದಾಗಿದೆ.
ಸೇವಂತಿಗೆ ಹೂವಿಗೆ ಹೆಚ್ಚಿದ ಬೇಡಿಕೆ
ಇನ್ನು ಬೆಣ್ಣೆನಗರಿ ದಾವಣಗೆರೆ ಜಿಲ್ಲೆಯಲ್ಲಿ ಚೆಂಡು ಹೂ, ಗುಲಾಬಿ, ಸೇವಂತಿಗೆ, ಮಲ್ಲಿಗೆ ಸೇರಿದಂತೆ ಎಲ್ಲಾ ಹೂವುಗಳ ಬೆಲೆಯಲ್ಲಿ ಹೆಚ್ಚಳವಾಗಿದೆ. ದೀಪಾವಳಿಯ ಪ್ರಮುಖ ಆಕರ್ಷಣೆ ಆಗಿರುವ ಸೇವಂತಿಗೆ ಕೆ.ಜಿಗೆ 250ರಿಂದ 300 ರೂಪಾಯಿ ಇದೆ. ಒಂದು ಹೂವಿನ ಹಾರ ಈಗಲೇ 50 ರಿಂದ 150ರೂಪಾಯಿವರೆಗೆ ಮಾರಾಟ ಮಾಡಲಾಗುತ್ತಿದೆ. ಇದು ಇನ್ನು ಹೆಚ್ಚಳವಾಗಲಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.
ಜಿಲ್ಲೆಯಲ್ಲಿ ಭಾರಿ ಮಳೆ ಸುರಿದಿದ್ದು, ಸೇವಂತಿಗೆ ಸೇರಿದಂತೆ ಬೇರೆ ಬೇರೆ ಹೂವುಗಳು ನೀರಿನಲ್ಲಿ ಜಲಾವೃತವಾಗಿವೆ. ಬೆಳೆಯೂ ಕಡಿಮೆ ಬಂದಿದ್ದು, ಜೊತೆಗೆ ಬೇಡಿಕೆಗೆ ತಕ್ಕಂತೆ ಹೂಗಳ ಪೂರೈಕೆ ಇಲ್ಲ. ಮಾರುಕಟ್ಟೆಗೆ ಹೂವು ಕಡಿಮೆ ಬರುತ್ತಿರುವ ಕಾರಣ ದರ ಹೆಚ್ಚಳವಾಗಿದೆ. ಜನರು ಚೌಕಾಸಿ ವ್ಯಾಪಾರ ಮಾಡುತ್ತಾರೆ. ಕೆಲವರು ದರ ಕೇಳಿ ಇನ್ನು ಕಡಿಮೆ ಆಗಿಲ್ವಾ? ಹೂ ಬೇಡ ಎಂದು ಮುಂದಕ್ಕೆ ಹೋಗುತ್ತಾರೆ. ಮತ್ತೆ ಎರಡು ಮಾರು ಹೂವು ಖರೀದಿ ಮಾಡುವವರು ಇದೀಗ ಕೇವಲ ಅರ್ಧ ಮಾರು ಮಾತ್ರ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ.
ಹಣ್ಣುಗಳ ದರದ ಸಂಪೂರ್ಣ ವಿವರ
ಇನ್ನು ಸೇಬು ಹಣ್ಣು ಸೇರಿದಂತೆ ಕಿತ್ತಳೆ, ಮೋಸಂಬಿ, ದ್ರಾಕ್ಷಿ, ಸೀಬೆಹಣ್ಣು, ಬಾಳೆ ಹಣ್ಣಿನ ದರ ಸ್ವಲ್ಪಮಟ್ಟಿಗೆ ಜನರ ಕೈಗೆಟುಕುವಂತೆ ಸಿಗುತ್ತಿದೆ. ದಸರಾ ಹಬ್ಬದ ವೇಳೆ ಕೆ.ಜಿ.ಸೇಬಿಗೆ 250 ರೂಪಾಯಿ ಇತ್ತು. ಇದೀಗ ಕೆ.ಜಿ. ಸೇಬು 140 ರೂಪಾಯಿ ಇಳಿಕೆ ಆಗಿದೆ. ಎಲ್ಲೆಡೆಯಿಂದ ಯಥೇಚ್ಛವಾಗಿ ಹಣ್ಣು ಬಂದಿರುವ ಕಾರಣ ಬೆಲೆ ಜಾಸ್ತಿ ಆಗಿಲ್ಲ. ಇನ್ನು ದೀಪಾವಳಿ ಹಬ್ಬ ಆಚರಣೆಯನ್ನು ಗ್ರಾಮೀಣ ಭಾಗದಲ್ಲಿ ವೈಭವ, ಸಡಗರ, ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ. ಜನರು ಬೆಳೆ ನಷ್ಟ, ಮಳೆ ಅವಾಂತರದಿಂದ ಆಗಿರುವ ಸಮಸ್ಯೆಗಳ ಸುಳಿಯಿಂದ ಹೊರಬಂದಿಲ್ಲ. ನೀರಿನಲ್ಲಿ ಬೆಳೆ ಕೊಚ್ಚಿ ಹೋದ ಕಾರಣ ಬಹುತೇಕ ರೈತರು ನಷ್ಟದ ಸುಳಿಯಲ್ಲಿ ಸಿಲುಕಿದ್ದಾರೆ. ಹಾಗಾಗಿ ಸರಳವಾಗಿ ದೀಪಾವಳಿ ಆಚರಿಸಲು ಮುಂದಾಗಿದ್ದಾರೆ.
ಮಾರುಕಟ್ಟೆಯಲ್ಲಿ ಜನವೋ ಜನ
ಕಾರವಾರ ಜಿಲ್ಲೆಯ ಮಾರುಕಟ್ಟೆಗಳಲ್ಲಿ ಹೂ, ಹಣ್ಣು ಹಂಪಲು, ಕಬ್ಬು, ಬಾಳೆ ದಂಟು, ಸಿಹಿ ತಿಂಡಿಗಳ ಹಾಗೂ ದೀಪ ಹಚ್ಚುವುದಕ್ಕಾಗಿ ಕೆಂಪು ಮಣ್ಣಿನಿಂದ ತಯಾರಿಸಿದ ವಿವಿಧ ವಿನ್ಯಾಸ, ಆಕಾರಗಳ ಹಣತೆಗಳ ಖರೀದಿಯಲ್ಲಿ ಜನರು ನಿರತರಾಗಿದ್ದಾರೆ. ನಗರದ ಸವಿತಾ ಸರ್ಕಲ್, ಗ್ರೀನ್ ಸ್ಟ್ರೀಟ್ ರಸ್ತೆ, ಶಿವಾಜಿ ರಸ್ತೆ, ಗಾಂಧಿ ಮಾರುಕಟ್ಟೆಗಳಲ್ಲಿ ಖರೀದಿ ಜೋರಾಗಿದೆ. ಕಳೆದ ವಾರ ಮಾರು ಸೇವಂತಿಗೆ 80 ರಿಂದ 100 ರೂಪಾಯಿಗೆ ಸಿಗುತ್ತಿತ್ತು. ಇದೀಗ 120 ರೂಪಾಯಿಗೆ ಏರಿಕೆಯಾಗಿದೆ. 10 ರೂಪಾಯಿ ಇದ್ದ ಗುಲಾಬಿ ಬೆಲೆ ಇದೀಗ 15-20 ರೂ.ಗೆ ಏರಿಕೆ ಕಂಡಿದೆ. ಮಾರು ಮಲ್ಲಿಗೆ 100 ರೂಪಾಯಿ, ಮಾರು ಕಾಕಡ 120 ರೂಪಾಯಿ, ಮಾರು ಗೊಂಡೆ ಹೂ 80 ರಿಂದ 100 ರೂಪಾಯಿಗೆ ಮಾರಾಟವಾಗುತ್ತಿದೆ.
ಇನ್ನು ಹಣ್ಣು ಹಾಗೂ ತರಕಾರಿ ಬೆಲೆಯಲ್ಲಿಯೂ ಏರಿಕೆ ಕಂಡಿದ್ದು, ಕೆ.ಜಿ. ಸೇಬು 100 ರಿಂದ 180 ರೂಪಾಯಿ, ಕೆ.ಜಿ.ದಾಳಿಂಬೆ 140-200 ರೂಪಾಯಿ, ಕೆ.ಜಿ. ಸಂತ್ರ 80 ರೂಪಾಯಿ, ಕೆ.ಜಿ. ಮೂಸಂಬಿ 80-110 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ತರಕಾರಿಗಳ ಪೈಕಿ ಕೆ.ಜಿ.ಟೊಮ್ಯಾಟೋ 40 ರಿಂದ 60 ರೂಪಾಯಿಗೆ ಏರಿಕೆ ಆಗಿದೆ. ಕೆ.ಜಿ. ಈರುಳ್ಳಿ 30 ರೂಪಾಯಿ, ಕೆ.ಜಿ. ಬಟಾಟೆ 40 ರೂಪಾಯಿ, ಕೆ.ಜಿ ಬೀನ್ಸ್ 120 ರೂಪಾಯಿವರೆಗೆ ಮಾರಾಟವಾಗಿದೆ. ಬಹುತೇಕ ಹಣ್ಣು ತರಕಾರಿಗಳ ಬೆಲೆಯಲ್ಲಿ 10-20 ರೂ ಏರಿಕೆ ಮಾಡಲಾಗಿದೆ.
ವಿವಿಧ ಹಣತೆಗಳ ದರದ ಮಾಹಿತಿ
ದೀಪಗಳ ಹಬ್ಬ ದೀಪಾವಳಿಗೆ ಬಗೆ ಬಗೆಯ ಹಣೆತೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅದರಲ್ಲಿ ಮಣ್ಣಿನ ಹಾಗೂ ಪ್ಲಾಸ್ಟಿಕ್ ಹಣತೆಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಆದರೆ ವ್ಯಾಪಾರಸ್ತರು ನೀಡಿದ ಮಾಹಿತಿ ಪ್ರಕಾರ ಹೆಚ್ಚಿನ ಜನರು ಮಣ್ಣಿನ ದೀಪಗಳನ್ನು ಕೊಳ್ಳುವಲ್ಲಿ ಮುಂದಾಗಿದ್ದಾರೆ. ದೀಪದ ಮಾದರಿಯ ಡಜನ್ ಹಣತೆಗೆ 350 ರೂಪಾಯಿ, ಚಿಕ್ಕ ಹಣತೆ ಡಜನ್ಗೆ 80 ರೂಪಾಯಿ, ಲಾಟಿನ್ ಮಾದರಿಯ ಹಣತೆ ಡಜನ್ಗೆ 200 ರೂಪಾಯಿ, ದೊಡ್ಡ ದೀಪ ಒಂದಕ್ಕೆ 50 ರಾಪಾಯಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಸ್ಟಾರ್ ಮಾದರಿಯ ಚಿಕ್ಕ ಆಕಾಶ ಬುಟ್ಟಿ 90 ರಿಂದ 120 ರೂಪಾಯಿ, ದೊಡ್ಡ ಆಕಾಶ ಬುಟ್ಟಿ 250 ರೂಪಾಯಿ, ಬೇರೆ ಬೇರೆ ಗಾತ್ರದ ಆಕಾಶ ಬುಟ್ಟಿಗೆ 350 ರಿಂದ 400 ರೂಪಾಯಿ, ಬಟ್ಟೆಯದ್ದಕ್ಕೆ 250 ರೂಪಾಯಿ, ಕಟ್ಟಿಗೆಯದ್ದಕ್ಕೆ 200, 220, 450, 500 ರೂಪಾಯಿ ದರವನ್ನು ನಿಗದಿಪಡಿಸಲಾಗಿದೆ.
ಇನ್ನು ಚಿತ್ರದುರ್ಗದಲ್ಲಿ ಮಾರು ಸೇವಂತಿಗೆ ಹೂ 80-100 ರೂಪಾಯಿ, ಮಾರು ಮಲ್ಲಿಗೆ 100 ರೂಪಾಯಿ, ಮಾರು ಕನಕಾಂಬರ 100 ರೂಪಾಯಿ, ಮಾರು ಚೆಂಡು ಹೂ 40-60 ರೂಪಾಯಿ, ಸುಗಂಧರಾಜ ಹೂವಿನ ಹಾರ 100-500 ರೂಪಾಯಿ ಇದ್ದರೆ, ಇನ್ನು ಒಂದು ಗುಲಾಬಿ ಹೂವಿಗೆ 20 ರೂಪಾಯಿ ಇದೆ.