"ಊರಿಗೆ ಹೋದ್ರೆ ಕೊರೊನಾ ಕೊಲ್ಲಬಹುದು, ಇಲ್ಲೇ ಇದ್ರೆ ಹಸಿವಿನಿಂದ ಸಾಯ್ತೀವಿ"

"ದಯವಿಟ್ಟು ನಮಗೆ ಊರಿಗೆ ಹೋಗೋಕೆ ಬಿಡಿ. ಇದೇ ಸ್ಥಿತಿಯಲ್ಲಿ ನಾವು ಊರಿನ ತನಕ ಹೋದರೆ ಕಾಯಿಲೆ ಬಂದು ಸಾಯಬಹುದು. ಆದರೆ ನಮ್ಮ ಊರಿನಲ್ಲೇ ಸಾಯ್ತೀವಿ. ಬೆಂಗಳೂರಿನಲ್ಲೇ ಉಳಿದುಬಿಟ್ಟರೆ ಹಸಿವಿನಿಂದಲೇ ಸತ್ತು ಹೋಗ್ತೀವಿ" - ಆ ಮಹಿಳೆ ತಾನು ಕೂತುಕೊಂಡಿದ್ದ ಟ್ರ್ಯಾಕ್ಟರ್ ನಿಂದ ಇಳಿದು ಬಂದು ಒಂದೇ ಉಸಿರಿಗೆ ಜೋರು ಧ್ವನಿಯಲ್ಲಿ ಹೇಳುತ್ತಲೇ ಇದ್ದಳು.

ಸೀರೆಯ ಸೆರಗನ್ನು ಮತ್ತೆ ಬಾಯಿಗೆ ಅಡ್ಡ ಇಟ್ಟುಕೊಂಡು, ಕಂಕುಳಲ್ಲಿ ಇದ್ದ ಮಗುವನ್ನು ಅಳದಂತೆ ಸಮಾಧಾನ ಮಾಡುತ್ತಾ ಮತ್ತೆ ಗಿಜಿಗುಡುತ್ತಿದ್ದ ಟ್ರ್ಯಾಕ್ಟರ್ ನಲ್ಲಿ ಇಡೀ ದೇಹವನ್ನು ಮುದುರಿಕೊಂಡು ಮತ್ತೆ ಹೋಗಿ ಕೂತಳು. ಅದು ತುಮಕೂರು ರಸ್ತೆ. ನೆಲಮಂಗಲದ ಟೋಲ್ ನಲ್ಲಿ ಒಂದು ಕಿ.ಮೀ. ಉದ್ದಕ್ಕೂ ಸರತಿ.

ತೂಫಾನ್ ಜೀಪ್, ಟ್ರ್ಯಾಕ್ಟರ್ ಗಳಲ್ಲಿ ಜನವೋ ಜನ. ಮಕ್ಕಳು- ಮಹಿಳೆಯರೇ ಹೆಚ್ಚು. ಕೊರೊನಾದ ಸಾಮಾಜಿಕ ಅಂತರಕ್ಕೆ ಅಲ್ಲಿ ಒಂದು ಅಂಗುಲದಷ್ಟು ಜಾಗ ಇರಲಿಲ್ಲ. ಹೇಗೋ ಪೊಲೀಸರು ತಮ್ಮನ್ನು ಹೋಗಲು ಬಿಟ್ಟರೆ ಊರು ಸೇರಿಕೊಂಡು ಬಿಡ್ತೀವಿ ಅನ್ನೋದೇ ಎಲ್ಲರ ತಹತಹಿಕೆ ಆಗಿತ್ತು. ಆದರೆ ಸರ್ಕಾರಿ ಮಟ್ಟದಿಂದ ಸ್ಪಷ್ಟ ಆದೇಶವಿತ್ತು: ಯಾರೂ ಬೆಂಗಳೂರು ಬಿಡಬಾರದು.

Coronavirus Lock Down: Home-bound Migrant Workers in pain

ಇಪ್ಪತ್ತೊಂದು ದಿನಗಳ ಲಾಕ್ ಡೌನ್ ಘೋಷಣೆ ಆಗುತ್ತಿದ್ದಂತೆ ದಿನಗೂಲಿ ಕಾರ್ಮಿಕರು ತತ್ತರಿಸಿಹೋದರು. ಸರ್ಕಾರಕ್ಕೂ ಬೇರೆ ದಾರಿ ಇರಲಿಲ್ಲ. ಆದರೆ ಅದರ ವಾರಕ್ಕೂ ಮುಂಚಿನಿಂದಲೇ ಕೆಲಸ- ಕಾರ್ಯ ನಡೆಯದೆ, ಆದಾಯಕ್ಕೆ ದಾರಿ ಕಾಣದೆ ಕಂಗಾಲಾಗಿದ್ದ ಕಾರ್ಮಿಕ ಕುಟುಂಬಗಳು ದಿಕ್ಕೇ ತೋಚದಂತಾದವು.

ದೊಡ್ಡ ನಗರ, ಪಟ್ಟಣಗಳಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಿದ್ದ ಜಾಗದಲ್ಲಿ ಇರುವುದಕ್ಕೆ ವ್ಯವಸ್ಥೆಯಿದ್ದವರಿಗೂ ಹಣ, ಊಟಕ್ಕೆ ಏನು ಮಾಡಬೇಕು ಎಂಬ ಪ್ರಶ್ನೆ ಕಾಡತೊಡಗಿತು. ಇನ್ನೂರು, ಮುನ್ನೂರು ಕಿ.ಮೀ. ದೂರದ ಊರುಗಳಿಗೆ ಪೆಟ್ಟಿಗೆ, ಹಾಸಿಗೆ ಜೊತೆಗೆ ಕಂಕುಳಲ್ಲಿ, ತಲೆ ಮೇಲೆ ಮಕ್ಕಳನ್ನು ಹೊತ್ತುಕೊಂಡು ನಡೆದವರು ಅದೆಷ್ಟೋ ಮಂದಿ.

ದೆಹಲಿಯಲ್ಲಿ ಹೀಗೆ ಇನ್ನೂರು ಕಿ.ಮೀ. ದೂರಕ್ಕೆ ನಡೆದು ಹೋಗುವಾಗಲೆ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ. ಇನ್ನೂರು, ಮುನ್ನೂರು, ನಾನೂರು ಕಿ.ಮೀ.ಗೂ ನಡೆಯುತ್ತಾ ಸಾಗಿದವರ ಕಥನಗಳು ನಿಲ್ಲುವುದೇ ಇಲ್ಲ. ಇನ್ನು ವಾಹನಗಳಲ್ಲಿ ಒಬ್ಬರಿಗೊಬ್ಬರು ಮೆತ್ತಿಕೊಂಡಂತೆ ಕೂತು ನೂರಾರು ಕಿ.ಮೀ. ಪ್ರಯಾಣಿಸಿದವರೂ ಇದ್ದಾರೆ.

"ಒಟ್ಟಿಗೆ ಪ್ರಯಾಣ ಮಾಡಿರುವುದು ಹಾಗೂ ಮಾಡುವುದು ಬಹಳ ಅಪಾಯಕಾರಿ. ಈಗಿನ ಸನ್ನಿವೇಶದಿಂದ ಗಾಬರಿಯಾದ ಜನರಿಗೆ ಮಾತನ್ನು ಕೇಳಿಸಿಕೊಳ್ಳುವ ತಾಳ್ಮೆಯೂ ಕಡಿಮೆ ಇರುತ್ತದೆ. ಆದರೆ ಅದು ಅವರ ಜೀವದ ಪ್ರಶ್ನೆ. ಇಡೀ ಸಮಾಜದ ಸ್ವಾಸ್ಥ್ಯದ ಪ್ರಶ್ನೆ" ಎನ್ನುತ್ತಾರೆ ವೈದ್ಯರು.

ಭಾರತ- ಪಾಕಿಸ್ತಾನ ವಿಭಜನೆ ಸಂದರ್ಭದಲ್ಲಿ ನೂರಾರು ಕಿ.ಮೀ. ಜನರು ನಡೆದು ಹೋಗಿದ್ದ ಸನ್ನಿವೇಶವನ್ನು ಈಗ ಕೆಲವರು ನೆನಪಿಸಿಕೊಳ್ಳುತ್ತಿದ್ದಾರೆ. ಆದರೆ ಆಗಿನ ಸಂದರ್ಭ, ಕಾರಣ ಎರಡೂ ಬೇರೆ. ಹಾಗಂತ ತಮ್ಮ ಊರುಗಳಿಗೆ ಹೊರಟು ನಿಂತವರನ್ನು ಜಬರ್ದಸ್ತ್ ನಿಂದ ತಡೆಯುವುದಕ್ಕೆ ಅಳುಕಾಗುತ್ತದೆ. ಹೌದು, ಅವರೇ ಹೇಳುವಂತೆ ಹಸಿವಿನಿಂದ ಒದ್ದಾಡುವ ಸ್ಥಿತಿ ಬಂದರೆ, ಅದರಲ್ಲೂ ಪುಟ್ಟಪುಟ್ಟ ಮಕ್ಕಳನ್ನು ನೋಡಿದರೆ ಕರುಳು ಚುರ್ ಅನ್ನುತ್ತದೆ.

ಕೊರೊನಾ ಹರಡದಂತೆ ತಡೆಯಲು ಸರ್ಕಾರ ಅವಿರತವಾಗಿ ಶ್ರಮಿಸುತ್ತಿದೆ. ಈ ದೇಶದ ಶ್ರೇಷ್ಠತೆ ಹಾಗೂ ಮಿತಿ ಎರಡನ್ನೂ ಅರಿತುಕೊಳ್ಳಬೇಕು. ಜನರ ಸಲುವಾಗಿ ಎಷ್ಟೆಲ್ಲ ಕೆಲಸ ಮಾಡುತ್ತಿರುವ ಸರ್ಕಾರ, ಏನು ಮಾಡಿದರೂ ಸೌಲಭ್ಯದಿಂದ ದೂರವೇ ಉಳಿದಿರುವ ವಲಸಿಗರು, ಸಾವಿನ ಕೇಕೆ ಹಾಕುತ್ತಾ ಭಯ ಹುಟಿಸುತ್ತಿರುವ ಕೊರೊನಾ... ಜೀವನ ಇಷ್ಟೇನಾ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+