Jana Nayagan: ದಳಪತಿ ವಿಜಯ್ ಅಭಿಮಾನಿಗಳಿಗೆ ಸಿಹಿಸುದ್ದಿ: ಮುಂದಿನ ಎರಡು ವಾರಗಳಲ್ಲಿ 'ಜನ ನಾಯಗನ್' ಸಿನಿಮಾ ಬಿಡುಗಡೆ
ನಟ ದಳಪತಿ ವಿಜಯ್ ಅವರು ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಬೆನ್ನಲ್ಲೇ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. ವಿಜಯ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಜನ ನಾಯಗನ್' (Jana Nayagan) ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಮುಂದಿನ ಎರಡು ವಾರಗಳಲ್ಲಿ ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರಲಿದೆ ಎಂದು ಚಿತ್ರದ ನಿರ್ಮಾಪಕ ಮತ್ತು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ ವೆಂಕಟ್ ಕೆ.ನಾರಾಯಣ ಅವರು ಭಾನುವಾರ ಖಚಿತಪಡಿಸಿದ್ದಾರೆ.
14 ದಿನಗಳಲ್ಲಿ ರಿಲೀಸ್
ಭಾನುವಾರ ನಡೆದ ವಿಜಯ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವೆಂಕಟ್ ಕೆ. ನಾರಾಯಣ ಅವರು, "ಚಿತ್ರದ ಬಿಡುಗಡೆಗೆ ಸಂಬಂಧಿಸಿದ ಅಂತಿಮ ಪ್ರಕ್ರಿಯೆಗಳು ನಡೆಯುತ್ತಿವೆ. ಪ್ರಸ್ತುತ ಸೆನ್ಸಾರ್ ಮಂಡಳಿಯ (CBFC) ಅಂತಿಮ ಪ್ರಮಾಣಪತ್ರಕ್ಕಾಗಿ ಚರ್ಚೆಗಳು ನಡೆಯುತ್ತಿದ್ದು, ಸರಿಸುಮಾರು 14 ದಿನಗಳ ಒಳಗಾಗಿ ಸಿನಿಮಾ ಚಿತ್ರಮಂದಿರಗಳಲ್ಲಿ ಅಬ್ಬರಿಸಲಿದೆ" ಎಂದು ತಿಳಿಸಿದ್ದಾರೆ.

ನಟ ವಿಜಯ್ ಅವರ ಪೂರ್ಣಪ್ರಮಾಣದ ರಾಜಕೀಯ ಪ್ರವೇಶಕ್ಕೂ ಮುನ್ನ ತೆರೆಗೆ ಬರುತ್ತಿರುವ ಕೊನೆಯ ಸಿನಿಮಾ ಇದಾಗಿದೆ. ವಿಜಯ್ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದ ನಿರ್ಮಾಪಕ, "ನನಗೆ ವಿಜಯ್ ವೈಯಕ್ತಿಕವಾಗಿ ತಿಳಿದಿದ್ದಾರೆ. ಅವರು ಅತ್ಯಂತ ಶಿಸ್ತುಬದ್ಧ ಮತ್ತು ಸಮರ್ಪಣಾ ಮನೋಭಾವದ ವ್ಯಕ್ತಿ. ಅವರು ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಗುಣ ಹೊಂದಿದ್ದಾರೆ" ಎಂದು ಹೊಗಳಿದ್ದಾರೆ.
ರಾಜಕೀಯ ಪಯಣಕ್ಕೆ ಪೂರಕ ಟೈಟಲ್
ತಮಿಳುನಾಡಿನಲ್ಲಿ ವಿಜಯ್ ಅವರ ಹೊಸ ನಾಯಕತ್ವದ ಯುಗ ಆರಂಭವಾಗುತ್ತಿದೆ ಎಂದು ಅಭಿಪ್ರಾಯಪಟ್ಟ ನಿರ್ಮಾಪಕರು, 'ಜನ ನಾಯಗನ್' (ಜನರ ನಾಯಕ) ಎಂಬ ಶೀರ್ಷಿಕೆಯು ಅವರಿಗೆ ಸಂಪೂರ್ಣವಾಗಿ ಒಪ್ಪುತ್ತದೆ ಎಂದಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಸಿನಿಮಾ ಬಿಡುಗಡೆ ವಿಳಂಬ ಮತ್ತು ಇತ್ತೀಚೆಗೆ ಆನ್ಲೈನ್ನಲ್ಲಿ ಚಿತ್ರದ ಕೆಲವು ದೃಶ್ಯಗಳು ಸೋರಿಕೆಯಾದಂತಹ ಘಟನೆಗಳಿಂದ ಚಿತ್ರತಂಡ ಸಂಕಷ್ಟಕ್ಕೆ ಸಿಲುಕಿತ್ತು.
ಕಳೆದ ಕೆಲವು ತಿಂಗಳುಗಳಲ್ಲಿ ಚಿತ್ರತಂಡವು ಎದುರಿಸಿದ ತಾಂತ್ರಿಕ ಅಡೆತಡೆಗಳು ಮತ್ತು ದೃಶ್ಯ ಸೋರಿಕೆ ಪ್ರಕರಣಗಳನ್ನು 'ದುರದೃಷ್ಟಕರ' ಎಂದು ಕರೆದ ವೆಂಕಟ್ ಅವರು, ಈಗ ತಂಡವು ಸಂಪೂರ್ಣವಾಗಿ ಚಿತ್ರದ ಬಿಡುಗಡೆಯ ಮೇಲೆ ಗಮನ ಹರಿಸಿದೆ ಎಂದರು. ಸಿನಿಮಾ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಫ್ರೀಲಾನ್ಸ್ ಅಸಿಸ್ಟೆಂಟ್ ಎಡಿಟರ್ ಸೇರಿದಂತೆ ಕೆಲವರನ್ನು ಬಂಧಿಸಲಾಗಿದೆ. ಈ ಎಲ್ಲ ಅಡೆತಡೆಗಳ ನಂತರ ಸಿನಿಮಾ ಅಂತಿಮವಾಗಿ ಬಿಡುಗಡೆಯ ಹಂತಕ್ಕೆ ತಲುಪಿದ್ದು, ಅಭಿಮಾನಿಗಳಲ್ಲಿ ಸಂಭ್ರಮ ಮನೆಮಾಡಿದೆ. ಎಚ್.ವಿನೋತ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರವು ವಿಜಯ್ ಅವರ ಸಿನಿಮಾ ಬದುಕಿನ ಮಹತ್ವದ ತಿರುವು ಎಂದು ಹೇಳಲಾಗುತ್ತಿದೆ. ಸದ್ಯದಲ್ಲೇ ಬಿಡುಗಡೆಯ ಅಧಿಕೃತ ದಿನಾಂಕ ಪ್ರಕಟವಾಗುವ ನಿರೀಕ್ಷೆಯಿದೆ.
ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಹೊಸ ಯುಗ ಆರಂಭವಾಗಿದೆ. 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷದ ಸ್ಥಾಪಕ ಸಿ. ಜೋಸೆಫ್ ವಿಜಯ್ ಅವರು ಭಾನುವಾರ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ವಿಜಯ್ ಅವರ ನೇತೃತ್ವದ ಸರ್ಕಾರಕ್ಕೆ 'ವಿಡುದಲೈ ಚಿರುತ್ತೈಗಲ್ ಕಚ್ಚಿ' (VCK) ಮತ್ತು 'ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್' (IUML) ಪಕ್ಷಗಳು ಬೆಂಬಲ ಸೂಚಿಸಿವೆ. ಈ ಮೈತ್ರಿಯೊಂದಿಗೆ ವಿಜಯ್ ಬಲವು 120 ಶಾಸಕರಿಗೆ ಏರಿಕೆಯಾಗಿದ್ದು, ತಮಿಳುನಾಡು ವಿಧಾನಸಭೆಯ ಬಹುಮತದ ಮ್ಯಾಜಿಕ್ ಸಂಖ್ಯೆ 118ನ್ನು ಮೀರಿ ಅಧಿಕಾರ ಹಿಡಿದಿದ್ದಾರೆ.













Click it and Unblock the Notifications