ಮಲೆನಾಡಿನಿಂದ ವಿದೇಶಕ್ಕೆ ಕಾಫಿ ಕೊಂಡೊಯ್ದ ಸಿದ್ಧಾರ್ಥ ಅವರಿಗೇನಾಯಿತು?
ಮೈಸೂರು, ಜುಲೈ 30: ಕಾಫಿ ಡೇ ಮೂಲಕ ರಾಜ್ಯ, ರಾಷ್ಟ್ರ ಮತ್ತು ವಿದೇಶಗಳಲ್ಲಿಯೂ ತನ್ನ ಛಾಪು ಮೂಡಿಸಿದ್ದ ಉದ್ಯಮಿ ಸಿದ್ಧಾರ್ಥ ನಾಪತ್ತೆ ಪ್ರಕರಣ ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಅವರು ತಮ್ಮ ಸಿಬ್ಬಂದಿಗೆ ಬರೆದ ಪತ್ರಗಳು, ಚಾಲಕ ನೀಡುತ್ತಿರುವ ಹೇಳಿಕೆಗಳು ಮತ್ತು ಅವರ ಇತ್ತೀಚೆಗಿನ ಪರಿಸ್ಥಿತಿಯನ್ನು ಗಮನಿಸಿದರೆ ಅವರು ತಮ್ಮ ಬದುಕಿಗೆ ದುರಂತ ವಿದಾಯ ಹೇಳಿಕೊಂಡರಾ ಎಂಬ ಸಂಶಯಗಳನ್ನು ಹುಟ್ಟು ಹಾಕುತ್ತಿದ್ದು, ಹಾಗಾಗದಿರಲಿ ಎಂದಷ್ಟೆ ಬಯಸಬೇಕಿದೆ.
ಸಾವಿರಾರು ಕೋಟಿ ರೂಪಾಯಿ ವ್ಯವಹಾರ ಮಾಡುವ ವ್ಯಕ್ತಿಯ ಒಳತಲ್ಲಣಗಳು ಮತ್ತು ವ್ಯಾವಹಾರಿಕ ಸಮಸ್ಯೆಗಳು ಸಾಮಾನ್ಯ ಜನಕ್ಕೆ ಅರ್ಥವಾಗುವುದಿಲ್ಲ. ಕೆಲವೊಮ್ಮೆ ಯಶಸ್ಸು ಕೂಡ ಕೈಕೊಡಬಹುದು. ಬಹಳಷ್ಟು ಪ್ರಕರಣಗಳನ್ನು ನೋಡಿದರೆ ಒಂದು ಕಾಲದ ಯಶಸ್ವಿ ಉದ್ಯಮಿಗಳು ಕೂಡ ಕೈಚೆಲ್ಲಿ ಕುಳಿತ ನಿದರ್ಶನಗಳಿವೆ. ಆದರೆ ಕಾಫಿ ಕುಡಿಯದ ಹುಡುಗ ಅಪ್ಪ ಮಾಡಿಟ್ಟ ಕಾಫಿ ತೋಟವನ್ನು ಅಭಿವೃದ್ಧಿಪಡಿಸಿದ್ದಲ್ಲದೆ, ಆ ಕಾಫಿಯನ್ನೇ ವಿಶ್ವಮಟ್ಟಕ್ಕೆ ಪರಿಚಯಿಸಿದ್ದು ನಿಜಕ್ಕೂ ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆ ಪಡಲೇಬೇಕಾದ ಸಂಗತಿಯಾಗಿದೆ.

ತೆರೆಮರೆಯಲ್ಲೇ ಉಳಿದ ಸಿದ್ಧಾರ್ಥ
ಹಾಗೆ ನೋಡಿದರೆ ಸಿದ್ಧಾರ್ಥ ಕಾಫಿ ಡೇಯನ್ನು ಬೆಳೆಸಿದರು. ಆದರೆ ಅವರು ಎಲ್ಲಿಯೂ ಕಾಣಿಸಲಿಲ್ಲ. ತೆರೆಮರೆಯಲ್ಲೇ ಉಳಿದರು. ಮಾವ ಎಸ್.ಎಂ.ಕೃಷ್ಣ ಅವರ ರಾಜಕೀಯ ಪ್ರಭಾವವನ್ನು ಬಳಸಿಕೊಂಡು ರಾಜಕೀಯವಾಗಿ ಬೆಳೆಯುವ ಮತ್ತು ಆ ಮೂಲಕವೂ ತಮ್ಮ ಉದ್ಯಮವನ್ನು ಬೆಳೆಸುವ ಮತ್ತು ಭದ್ರತೆ ಕಲ್ಪಿಸಿಕೊಳ್ಳುವ ಅವಕಾಶಗಳು ಇದ್ದಾಗಿಯೂ ಅವರು ಅದ್ಯಾವುದನ್ನು ಮಾಡಲಿಲ್ಲ ಎಂಬುದು ಅಷ್ಟೇ ಸತ್ಯ.
ಬಹಳಷ್ಟು ಉದ್ಯಮಿಗಳು ತಮ್ಮ ಉದ್ಯಮದೊಂದಿಗೆ ತಾವು ಕೂಡ ಪ್ರಚಾರಕ್ಕೆ ಬರುತ್ತಾರೆ ಎನ್ನುವುದಕ್ಕಿಂತ ಪ್ರಚಾರ ಪಡೆಯಲು ಹಾತೊರೆಯುತ್ತಾರೆ. ಆದರೆ ಸಿದ್ಧಾರ್ಥ ಅವರು ಅದ್ಯಾವುದನ್ನು ಮಾಡಲೇ ಇಲ್ಲ. ತಮ್ಮ ಸಂಸ್ಥೆಯನ್ನು ಬೆಳೆಸುವುದರ ಬಗ್ಗೆ ಹೆಚ್ಚಿನ ಒತ್ತು ನೀಡಿದರು. ಅದಕ್ಕಿಂತ ಹೆಚ್ಚಾಗಿ ಒಬ್ಬ ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿದ್ದು ಕೂಡ ಸಾಹಸವೇ.

ಕೈ ಹಿಡಿದ ಕಾಫಿ ರಫ್ತು ಉದ್ಯಮ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚೇತನಹಳ್ಳಿ ಎಸ್ಟೇಟ್ನ ಮಾಲಿಕ ಗಂಗಯ್ಯ ಹೆಗ್ಡೆ ಪುತ್ರರಾದ ಸಿದ್ದಾಥ್ ಹೆಗ್ಡೆ ಅವರು ಮಂಗಳೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರ ಪದವಿ ಮುಗಿಸಿಕೊಂಡು ಉದ್ಯೋಗ ಅರಸಿ ಮುಂಬೈನತ್ತ 1983ರಲ್ಲಿ ಮುಖ ಮಾಡಿದರು. ಅಲ್ಲಿ ಮೊದಲಿಗೆ ಜೆಎಂ ಫೈನಾನ್ಶಿಯಲ್ ಸರ್ವಿಸಸ್ ಸ್ಟಾಕ್ ಬ್ರೋಕರ್ ಕಚೇರಿಯಲ್ಲಿ ಮ್ಯಾನೇಜ್ಮೆಂಟ್ ಟ್ರೈನಿಯಾಗಿ ಕೆಲಸ ಮಾಡಿದರು. ಒಂದಷ್ಟು ಅನುಭವದೊಂದಿಗೆ ಸ್ವಂತವಾಗಿ ಏನಾದರೂ ಮಾಡಬೇಕೆಂಬ ತುಡಿತದೊಂದಿಗೆ ಊರಿಗೆ ಮರಳಿದ ಅವರು ತಂದೆಯಿಂದ ಒಂದಷ್ಟು ಹಣವನ್ನು ಪಡೆದುಕೊಂಡು ಮತ್ತೆ ಮುಂಬೈಗೆ ತೆರಳಿದರು. ಸಿವಾನ್ ಸೆಕ್ಯುರಿಟೀಸ್ ಎಂಬ ಕಂಪನಿ ತೆರೆದರು. ಆದರೆ ಅದ್ಯಾಕೋ ಫಲಕೊಡಲಿಲ್ಲ.
1990ರ ದಶಕದ ವೇಳೆಗೆ ಏನಾದರೂ ಹೊಸತು ಮಾಡಬೇಕೆಂಬ ಆಲೋಚನೆ ಅವರಲ್ಲಿ ಮೂಡತೊಡಗಿತ್ತು. ಅದೇ ವೇಳೆಗೆ ಅವರ ಮದುವೆ ಎಸ್ಎಂ ಕೃಷ್ಣ ಅವರ ಪುತ್ರಿ ಮಾಳವಿಕಾರೊಂದಿಗೆ ನೆರವೇರಿತು. ಇದಾದ ಬಳಿಕ ಹೊಸದಾದ ಆಲೋಚನೆ ಮಾಡಿದ ಅವರನ್ನು ಕೈ ಹಿಡಿದಿದ್ದು ಕಾಫಿ ರಫ್ತು. ಆ ವೇಳೆಗಾಗಲೇ ಕಾಫಿ ಬೋರ್ಡ್ನ ಕಪಿ ಮುಷ್ಠಿಯಲ್ಲಿದ್ದ ಕಾಫಿ ಮುಕ್ತ ಮಾರುಕಟ್ಟೆಗೆ ಬಂದಿತ್ತು. ಹೀಗಾಗಿ ಕಾಫಿ ರಫ್ತು ಆರಂಭಿಸಿದ ಅವರು ಅದರಲ್ಲಿ ಯಶಸ್ವಿಯಾದರು.

ಹೊಸ ಟ್ರೆಂಡ್ ಆದ ಕಾಫಿ ಡೇ
ಇದಾದ ಬಳಿಕ 1996ರಲ್ಲಿ ಮೊದಲ ಬಾರಿಗೆ ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ಕೆಫೆ ಕಾಫಿ ಡೇ ಮಳಿಗೆಯನ್ನು ತೆರೆದರು. ದುಬಾರಿ ಬೆಲೆಯ ಈ ಕಾಫಿ ಮಳಿಗೆಗೆ ಜನ ಬರ್ತಾರಾ ಎಂದು ಕೆಲವರು ಮಾತನಾಡಿಕೊಂಡರು. ಆದರೆ ಅದು ಹೊಸದೊಂದು ಟ್ರೆಂಡ್ ಹುಟ್ಟು ಹಾಕಿತು. ಸ್ವಲ್ಪವೇ ದಿನದಲ್ಲಿ ಕಾಫಿ ಡೇನಲ್ಲಿ ಕಾಫಿ ಕುಡಿಯುವುದೇ ಒಂದು ಪ್ರೆಸ್ಟೀಜ್ ಆಯಿತು. ಯುವ ಜೋಡಿಗಳು, ಪ್ರೇಮಿಗಳು, ಫ್ಯಾಮಿಲಿ ಹೀಗೆ ಎಲ್ಲರೂ ಬರತೊಡಗಿದರು. ಇನ್ನು ಕೆಲವರು ಹೇಗಿರುತ್ತೆ ನೋಡೋಣ ಎಂಬ ಕುತೂಹಲದಿಂದ ಕಾಫಿ ಡೇಯತ್ತ ಹೆಜ್ಜೆ ಹಾಕಿದರು. ಪರಿಣಾಮ ಉದ್ಯಮ ಬೆಳೆಯಿತು.
ಬೆಂಗಳೂರಿನಿಂದ ಆರಂಭವಾದ ಕೆಫೆ ಕಾಫಿ ಡೇ ರಾಜ್ಯದ ಎಲ್ಲೆಡೆಗೆ ನಿಧಾನವಾಗಿ ಹರಡಿತು. ಹಾಗೆಯೇ ದೇಶ ವಿದೇಶಗಳೆಡೆಗೆ ನುಗ್ಗಿತು. ಕಳೆದ ಆರ್ಥಿಕ ವರ್ಷಾಂತ್ಯಕ್ಕೆ ಅಂದರೆ ಮಾರ್ಚ್ 2019ರ ವರೆಗೆ ನೀಡಿರುವ ವರದಿಯ ಆಧಾರದಲ್ಲಿ ಸುಮಾರು 1,752 ಕೆಫೆಗಳಿವೆ ಎನ್ನಲಾಗಿದೆ. ಇದಲ್ಲದೆ ಇನ್ನು ಕೆಲವು ಪೂರಕ ಉದ್ಯಮಗಳಿವೆ.

ಶೂಲವಾಯಿತೇ ಉದ್ಯಮದ ಸಾಲ
ಒಬ್ಬ ಮಲೆನಾಡಿನ ಕಾಫಿ ಬೆಳೆಗಾರನ ಪುತ್ರ ಇಷ್ಟೊಂದು ಸಾಧನೆ ಮಾಡುವುದು ಎಂದರೆ ಅಷ್ಟು ಸುಲಭವಲ್ಲ. ಆದರೆ ಎಲ್ಲವೂ ಚೆನ್ನಾಗಿ ನಡೆಯುತ್ತಿದೆ ಎನ್ನುವಾಗಲೇ ಕೆಲವು ಸಮಯಗಳ ಹಿಂದೆ ಐಟಿ ದಾಳಿ ನಡೆಸಿತ್ತು. ಅದು ಭಾರೀ ಸುದ್ದಿಯಾಯಿತು. ಅಲ್ಲಿ ತನಕ ಬಹಳಷ್ಟು ಮಂದಿಗೆ ಕಾಫಿ ಡೇ ಮಾಲಿಕ ಸಿದ್ದಾರ್ಥ್ ಹೆಗ್ಡೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯ ಎಂಬುದೇ ಗೊತ್ತಿರಲಿಲ್ಲ. ಆದರೆ ಐಟಿ ದಾಳಿ ಬಳಿಕ ಅವರಿಗೆ ಒಂದಷ್ಟು ಸಂಕಷ್ಟಗಳು ಎದುರಾದವು. ಹೊಸ ಉದ್ಯಮ ಸ್ಥಾಪನೆಗೆ ಮಾಡಿದ ಸಾಲ ಕೂಡ ಶೂಲವಾಗತೊಡಗಿತು. ಇದರೊಂದಿಗೆ ಸಾಮಾಜಿಕ ಕಾರ್ಯಕರ್ತ ಎಸ್. ಆರ್. ಹಿರೇಮಠ ಅವರು ಎಸ್ಐಟಿಗೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕು ವ್ಯಾಪ್ತಿಯಲ್ಲಿ ದುಬಾರಿ ಬೆಲೆಯ 200 ಎಕರೆಗೂ ಅಧಿಕ ಸರಕಾರಿ ಜಮೀನನ್ನು ಸಿದ್ಧಾರ್ಥ ಒತ್ತುವರಿ ಮಾಡಿದ್ದಾರೆ ಎಂಬ ದೂರನ್ನು ಸಲ್ಲಿಸಿದ್ದರು.
ಇದೆಲ್ಲವೂ ಅವರನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡಿತ್ತು. ಈ ನಡುವೆ ಸಾಲವೂ ಹೆಚ್ಚುತ್ತಾ ಹೋಗತೊಡಗಿತು. ತಮ್ಮ ಸಂಸ್ಥೆಯನ್ನು ಮಾರಾಟ ಮಾಡುವ ಹಂತಕ್ಕೂ ಬಂದು ಬಿಟ್ಟಿದ್ದರು! ಸುಮಾರು ಐವತ್ತು ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಿ ಅವರ ಬದುಕಿಗೆ ದಾರಿ ಮಾಡಿಕೊಟ್ಟಿದ್ದ ಸಿದ್ಧಾರ್ಥ ತಮ್ಮ ದಾರಿಯನ್ನು ಸರಾಗ ಮಾಡಿಕೊಳ್ಳುವಲ್ಲಿ ಮುಗ್ಗರಿಸಿಬಿಟ್ಟರಾ ಗೊತ್ತಿಲ್ಲ. ಎಲ್ಲವನ್ನು ಪೊಲೀಸರ ತನಿಖೆ ಹೇಳಬೇಕಿದೆ.
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications