Maha Kumbh Mela 2025: 'ನನ್ನ ಜೀವಿತಾವಧಿಯ ಪುಣ್ಯ': ಮಹಾ ಕುಂಭಮೇಳದಲ್ಲಿ ವಿ.ಸೋಮಣ್ಣ ಭಾಗಿ
ಉತ್ತರ ಪ್ರದೇಶದ ಪ್ರಯಾಗ್ ರಾಜ್ನ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ ಹತ್ತು ದಿನಗಳನ್ನು ಯಶಸ್ವಿಯಾಗಿ ಮುಗಿಸಿ ಹನ್ನೊಂದನೇ ದಿನಕ್ಕೆ ಕಾಲಿಟ್ಟಿದ್ದೆ. ಸಾಧು-ಸಂತರು ನಾಗಸಾಧುಗಳು, ವಿದೇಶಿ ಭಕ್ತರು ಸೇರಿದಂತೆ ಪ್ರತಿ ದಿನ ಅಂದಾಜು ಒಂದು ಕೋಟಿ ಭಕ್ತರು ಗಂಗಾ, ಯಮುನಾ ಮತ್ತು ಸರಸ್ವತಿ ಮಹಾ ನದಿಗಳ ಸಂಗಮವಾದ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುತ್ತಿದ್ದಾರೆ.
ಕರ್ನಾಟಕದಿಂದಲೂ ಸಾವಿರಾರು ಭಕ್ತರು ಮಹಾ ಕುಂಭಮೇಳಕ್ಕೆ ಭೇಟಿ ನೀಡುತ್ತಿದ್ದು, ಇದೀಗ ಕೇಂದ್ರ ಸಚಿವ ವಿ.ಸೋಮಣ್ಣ ಭೇಟಿ ನೀಡಿದ್ದಾರೆ. ಪತ್ನಿ ಶೈಲಜಾ ಸೋಮಣ್ಣ ಅವರೊಂದಿಗೆ ಉತ್ತರ ಪ್ರದೇಶದ ಪ್ರಯಾಗ್ ರಾಜ್ಗೆ ತೆರಳಿರುವ ಸಚಿವ ವಿ.ಸೋಮಣ್ಣ ಗಂಗಾ, ಯಮುನಾ ಮತ್ತು ಸರಸ್ವತಿ ಮಹಾ ನದಿಗಳ ಸಂಗಮವಾದ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಕೈಗೊಂಡಿದ್ದಾರೆ.

ಮಹಾ ಕುಂಭ ಮೇಳದಲ್ಲಿ ಭಾಗಿಯಾದ ಧನ್ಯತೆಯ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸಚಿವ ವಿ.ಸೋಮಣ್ಣ, 'ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ-ಸಾಂಸ್ಕೃತಿಕ ಸಂಗಮವಾದ ಪ್ರಯಾಗ್ ರಾಜ್ ಮಹಾ ಕುಂಭ ಮೇಳದಲ್ಲಿ ಇಂದು ಪಾಲ್ಗೊಂಡು, ಧರ್ಮಪತ್ನಿ ಶೈಲಜಾ ಸೋಮಣ್ಣ ಅವರೊಂದಿಗೆ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲಾಯಿತು. 144 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭ ಮೇಳದಲ್ಲಿ ಭಾಗವಹಿಸುತ್ತಿರುವುದೇ ನಮ್ಮ ಜೀವಿತಾವಧಿಯ ಪುಣ್ಯ ಎನ್ನಲು ಹೆಮ್ಮೆಯೆನಿಸುತ್ತದೆ. ಧಾರ್ಮಿಕ, ಸಾಂಸ್ಕೃತಿಕವಾಗಿ ಜಗದ್ವಿಖ್ಯಾತವಾದ ಈ ಆಚರಣೆಯ ಪುಣ್ಯದಿಂದ ಲೋಕ ಕಲ್ಯಾಣವಾಗಲಿ ಎಂದು ಪ್ರಾರ್ಥಿಸುತ್ತೇನೆ' ಎಂದಿದ್ದಾರೆ.
ಇನ್ನು ಸಚಿವ ಸೋಮಣ್ಣ ದಂಪತಿ ಪ್ರಯಾಗ್ ರಾಜ್ನಲ್ಲಿರುವ ಋಷಿಕೇಶದ ಪರಮಾರ್ಥ್ ನಿಕೇತನ ಆಶ್ರಮ ಮುಖ್ಯಸ್ಥರು ಶ್ರೀ ಶ್ರೀ ಚಿದಾನಂದ ಸರಸ್ವತಿ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು. ಅಲ್ಲದೇ ಜಂಗಮವಾಡಿ ಕಾಶಿ ಮಠದ ಶ್ರೀ ಶ್ರೀ ಶ್ರೀ 1008 ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿಗಳನ್ನು ದಂಪತಿ ಸಮೇತರಾಗಿ ಭೇಟಿಯಾಗಿ ಆಶೀರ್ವಾದ ಪಡೆದುಕೊಂಡರು.

ಪ್ರಯಾಗ್ ರಾಜ್ ಜಂಕ್ಷನ್ ರೈಲ್ವೆ ನಿಲ್ದಾಣಕ್ಕೆ ವಿ.ಸೋಮಣ್ಣ ಭೇಟಿ
ಉತ್ತರ ಪ್ರದೇಶದ ಪ್ರಯಾಗ್ ರಾಜ್ಗೆ ಭೇಟಿ ನೀಡಿರುವ ಕೇಂದ್ರ ಸಚಿವ ವಿ.ಸೋಮಣ್ಣ ಜಂಕ್ಷನ್ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ, ಹಿಂದೂ ಮಹಾಸಂಗಮ ಮಹಾಕುಂಭ-2025ರ ಯಶಸ್ವಿಗಾಗಿ ನಡೆಸಿದ ಸಿದ್ಧತೆಯನ್ನು ಪರಿಶೀಲಿಸಿದರು. ಅಲ್ಲದೇ ಪ್ರಯಾಗ್ ರಾಜ್ ರೈಲ್ವೆ ಜಂಕ್ಷನ್ನಲ್ಲಿರುವ ವೈದ್ಯಕೀಯ ಸೇವಾ ವಿಭಾಗ, ಯಾತ್ರಿ ಆಶ್ರಯ್, ಮೇಳ ಟವರ್ ಹಾಗೂ ಭದ್ರತೆಯ ಬಗ್ಗೆ ಪರಿಶೀಲನೆ ನಡೆಸಿ, ಕ್ಷಿಪ್ರ ಕಾರ್ಯ ತಂಡ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು. ಹಾಗೂ ರೈಲ್ವೆ ಟಿಕೆಟ್ ಕೌಂಟರ್ಗೆ ಭೇಟಿ ನೀಡಿ, ಟಿಕೆಟ್ ವಿತರಣೆಯ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದರು.












Click it and Unblock the Notifications