ಮೋದಿ ನಾಗಾಲೋಟಕ್ಕೆ ಬ್ರೇಕ್ ಹಾಕುತ್ತಾ ಮಹಾಘಟಬಂಧನ್?
Recommended Video
ಮೈಸೂರು, ಫೆಬ್ರವರಿ 18: ಮುಂಬರುವ ಲೋಕಸಭಾ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿದ್ದಂತೆಯೇ ರಾಜಕೀಯ ಪಕ್ಷಗಳಲ್ಲಿ ಸ್ಪರ್ಧಾ ಆಕಾಂಕ್ಷಿಗಳು ತಮ್ಮ ಗಾಡ್ಫಾದರ್ಗಳ ಮೂಲಕ ಟಿಕೆಟ್ ಪಡೆಯಲು ಹವಣಿಸುತ್ತಿರುವುದು ಕಂಡು ಬರುತ್ತಿದೆ. ಕೆಲವರು ತಮ್ಮ ಹಿಂಬಾಲಕರ ಮೂಲಕ ಸುದ್ದಿಗೋಷ್ಠಿ, ಪತ್ರಿಕಾ ಹೇಳಿಕೆ, ಬಹಿರಂಗ ಹೇಳಿಕೆಗಳನ್ನು ನೀಡುವಂತೆ ಮಾಡುವುದರೊಂದಿಗೆ ತಮ್ಮ ಹೆಸರುಗಳನ್ನು ರಾಜ್ಯ ಮತ್ತು ಕೇಂದ್ರ ನಾಯಕರ ಗಮನಕ್ಕೆ ತರುವ ಪ್ರಯತ್ನವನ್ನು ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
ಇಷ್ಟರಲ್ಲೇ ಎಲ್ಲ ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಚಟುವಟಿಕೆಗಳನ್ನು ಆರಂಭಿಸಬೇಕಿತ್ತು. ಆದರೆ ಬಜೆಟ್ ಮತ್ತು ಅದರ ಮೇಲಿನ ಚರ್ಚೆಯ ಅಧಿವೇಶನ ನಡೆಯುತ್ತಿದ್ದರಿಂದ ಅಲ್ಲದೆ ಇದಾದ ಬಳಿಕ ನಡೆದ ಉಗ್ರರ ಅಟ್ಟಹಾಸದಿಂದಾಗಿ ರಾಜಕೀಯ ನಾಯಕರು ಸ್ವಲ್ಪ ಮಟ್ಟಿಗೆ ತಮ್ಮ ಚಟುವಟಿಕೆಗೆ ಬಿಡುವು ನೀಡಿದಂತೆ ಕಂಡು ಬರುತ್ತಿದೆ.
ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ರಾಜಕೀಯ ಚಟುವಟಿಕೆಯನ್ನು ಆರಂಭಿಸಿದೆ. ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ಶಾ ಅವರು ಹಲವು ರಾಜ್ಯಗಳಿಗೆ ಭೇಟಿ ನೀಡಿ ರಾಜಕೀಯ ಭಾಷಣ ಆರಂಭಿಸಿದ್ದಾರೆ. ಈಗಾಗಲೇ ಕರ್ನಾಟಕಕ್ಕೆ ಪ್ರಧಾನಿ ಮೋದಿ ಮತ್ತು ಅಮಿತ್ಶಾ ಬಂದು ಹೋಗಿದ್ದಾರೆ. ಮುಂದಿನ ದಿನಗಳಲ್ಲಿಯೂ ಬರಲಿದ್ದಾರೆ.
ಮಹಾಘಟಬಂಧನ್ ನ ಪ್ರಧಾನಿ ಅಭ್ಯರ್ಥಿ ಯಾರು ಎಂದು ಬಿಜೆಪಿ ಹುಳ ಬಿಡುತ್ತಿರುವುದು ಏಕೆ?
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 104 ಸ್ಥಾನಗಳನ್ನು ಬಿಜೆಪಿ ಪಡೆದಿರುವ ಕಾರಣ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಇಲ್ಲಿಂದ ಅತ್ಯಧಿಕ ಸ್ಥಾನವನ್ನು ಪಡೆಯಬಹುದು ಎಂಬ ನಿರೀಕ್ಷೆಯೂ ಕೇಂದ್ರ ನಾಯಕರಲ್ಲಿದೆ. ಜತೆಗೆ ದಕ್ಷಿಣ ಭಾರತದ ಪೈಕಿ ಲೋಕಸಭೆಗೆ ಅತ್ಯಧಿಕ ಸ್ಥಾನವನ್ನು ಪಡೆಯಬಹುದು ಎಂದು ಬಿಜೆಪಿ ನಾಯಕರು ನಿರೀಕ್ಷೆ ಮಾಡಿದರೆ ಅದನ್ನು ತಂದು ಕೊಡಬಹುದಾದ ರಾಜ್ಯವಾಗಿದ್ದರೆ ಅದು ಕರ್ನಾಟಕ ಮಾತ್ರ. ಇಲ್ಲಿ ಬಿಜೆಪಿಯ ಹವಾವಿದೆ. ಹೀಗಾಗಿಯೇ ಪ್ರಧಾನಿಯಾದಿಯಾಗಿ ಬಿಜೆಪಿ ನಾಯಕರು ಕರ್ನಾಟಕದತ್ತ ಚಿತ್ತ ನೆಟ್ಟಿದ್ದಾರೆ.
ಎಚ್ಚರಿಕೆಯಿಂದ ಮಾತನಾಡಬೇಕಾಗಿದೆ
ಫೆಬ್ರವರಿ 14 ರಂದು ಪುಲ್ವಾಮಾದಲ್ಲಿ ನಡೆದ ಉಗ್ರರ ಹೀನ ಕೃತ್ಯ ಇಡೀ ದೇಶವನ್ನೇ ಆತಂಕಕ್ಕೀಡು ಮಾಡಿದೆ. ಘಟನೆಯಲ್ಲಿ ತಮ್ಮವರನ್ನು ಕಳೆದುಕೊಂಡ ಯೋಧರ ಕುಟುಂಬ ದುಃಖದಲ್ಲಿ ಕಣ್ಣೀರಾಗಿದೆ. ಭಾರತೀಯರಲ್ಲಿ ದ್ವೇಷ, ರೋಷ ಉಕ್ಕುತ್ತಿದೆ. ಪ್ರತಿಕಾರ ತೀರಿಸಿ ಎಂದು ಕೇಂದ್ರದ ಮೇಲೆ ಒತ್ತಾಯಗಳು ಬರುತ್ತಿವೆ. ಇದೀಗ ಮೋದಿ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರಗಳನ್ನು ಇಡೀ ದೇಶದ ಜನ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದಾರೆ. ಅದು ಮುಂದಿನ ಚುನಾವಣೆಗೆ ಅವರಿಗೆ ಫ್ಲಸ್ ಪಾಯಿಂಟ್ ಆದರೂ ಅಚ್ಚರಿ ಪಡಬೇಕಾಗಿಲ್ಲ. ಈ ನಡುವೆ ಪುಲ್ವಾಮಾ ಘಟನೆ ವಿಪಕ್ಷಗಳ ನಾಯಕರ ಬಾಯಿ ಮುಚ್ಚಿಸುವಂತೆ ಮಾಡಿದೆ. ಈ ಸಮಯದಲ್ಲಿ ರಾಜಕೀಯವಾಗಿ ಏನೇ ಮಾತನಾಡಬೇಕಾದರೂ ಎಚ್ಚರಿಕೆಯಿಂದ ಮಾತನಾಡಬೇಕಾಗಿದೆ. ಸ್ವಲ್ಪ ಎಡವಿದರೂ ಅದು ಜನತೆಯ ವಿರೋಧಕ್ಕೆ ಕಾರಣವಾಗಬಹುದು ಎಂಬ ಭಯವೂ ಕೆಲವರನ್ನು ಕಾಡತೊಡಗಿದೆ. ಹೀಗಾಗಿ ಪ್ರಧಾನಿಯ ಬಗ್ಗೆ ಯಾವ ವಿಚಾರದ ಬಗ್ಗೆಯೂ ವಿರೋಧಿ ನಾಯಕರು ಮಾತನಾಡುತ್ತಿಲ್ಲ.
'ನಿತೀಶ್ ಮಹಾಘಟಬಂಧನ್ ಸೇರಿದರೆ ತೇಜಸ್ವಿ ಯಾದವ್ ಸಿಎಂ ಅಭ್ಯರ್ಥಿ'
ಆ ಒಗ್ಗಟ್ಟು ಹೆಚ್ಚು ದಿನ ಮುಂದುವರೆಯಲಿಲ್ಲ
ಇನ್ನು ಲೋಕಸಭಾ ಚುನಾವಣೆ ವೇಳೆಗೆ ಇಡೀ ರಾಷ್ಟ್ರದಲ್ಲಿರುವ ಪ್ರಾದೇಶಿಕ ಪಕ್ಷಗಳು ಮತ್ತು ಕಾಂಗ್ರೆಸ್ ಸೇರಿ ಮಹಾಘಟಬಂಧನ್ ಮೂಲಕ ಬಿಜೆಪಿಯನ್ನು ಸೋಲಿಸಲು ತೀರ್ಮಾನ ಮಾಡಿದ್ದವು. ಇದಕ್ಕೆ ಕರ್ನಾಟಕದಿಂದಲೇ ಚಾಲನೆ ನೀಡಲಾಗಿತ್ತು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಕಾಂಗ್ರೆಸ್ನ ವರಿಷ್ಠರಾದ ಸೋನಿಯಾಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ, ಬಿಎಸ್ಪಿಯ ಮಾಯಾವತಿ, ಎಸ್ಪಿಯ ಅಖಿಲೇಶ್ ಯಾದವ್, ತೃಣಮೂಲ ಕಾಂಗ್ರೆಸ್ನ ಮಮತಾ ಬ್ಯಾನರ್ಜಿ, ತೆಲುಗು ದೇಶಂನ ಚಂದ್ರಬಾಬುನಾಯ್ಡು ಹೀಗೆ ಹಲವಾರು ನಾಯಕರು ಆಗಮಿಸಿದ್ದರು. ಅಲ್ಲದೆ ಎಲ್ಲರೂ ಕೈ ಎತ್ತಿ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿದರಲ್ಲದೆ, ಎಲ್ಲರೂ ಸೇರಿ ಒಟ್ಟಾಗಿ ಪ್ರಧಾನಿ ಮೋದಿಯನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸೋಲಿಸುವ ಮಾತನಾಡಿ ರಣಕಹಳೆ ಮೊಳಗಿಸಿದ್ದರು. ದೇಶದಲ್ಲಿ ಆದ ಈ ಹೊಸಬೆಳವಣಿಗೆ ಹಲವು ನಿರೀಕ್ಷೆಗಳನ್ನು ಹುಟ್ಟುಹಾಕಿತ್ತು. ಇದು ಸ್ವತಃ ಬಿಜೆಪಿ ನಾಯಕರನ್ನು ಆತಂಕಕ್ಕೀಡು ಮಾಡಿತ್ತು. ಆದರೆ ಮಹಾಘಟಬಂಧನ್ ನ ಆ ಒಗ್ಗಟ್ಟು ಹೆಚ್ಚು ದಿನ ಮುಂದುವರೆಯಲಿಲ್ಲ.
ಮಹಾಘಟಬಂಧನ್ ರಾಜಕೀಯವಲ್ಲ, ಜನಮನದ ಭಾವನೆ: ರಾಹುಲ್
ಮೋದಿಯೇ ಮತ್ತೆ ಪ್ರಧಾನಿಯಾಗಲಿ
ದೇವೇಗೌಡರು ಎಲ್ಲ ರಾಜಕೀಯ ಪಕ್ಷಗಳ ನಾಯಕರನ್ನು ಒಟ್ಟುಗೂಡಿಸುವ ಪ್ರಕ್ರಿಯೆಯಲ್ಲಿ ನಿರತರಾದರೂ ಅದು ಫಲ ಕೊಡಲಿಲ್ಲ. ಮೊದಲಿಗೆ ಬಿಎಸ್ಪಿಯ ಮಾಯಾವತಿ ಅವರು ಕಾಂಗ್ರೆಸ್ ಸಖ್ಯ ತೊರೆದರು. ಆ ನಂತರ ಉತ್ತರಪ್ರದೇಶದಲ್ಲಿ ಎಸ್ಪಿ ಮತ್ತು ಬಿಎಸ್ಪಿ ಒಂದಾಗುವ ಮೂಲಕ ಕಾಂಗ್ರೆಸ್ಗೆ ಟಾಂಗ್ ಕೊಟ್ಟರು. ಈ ನಡುವೆ ಲೋಕಸಭಾ ಪ್ರತಿಪಕ್ಷದ ಹಿರಿಯ ನಾಯಕ, ಮಹಾಘಟಬಂಧನ್ ನ ನಾಯಕರಲ್ಲಿ ಒಬ್ಬರಾಗಿರುವ ಮುಲಾಯಂಸಿಂಗ್ ಯಾದವ್ ಅವರು ಸಂಸತ್ನ ಬಜೆಟ್ ಅಧಿವೇಶನದಲ್ಲಿ ಮೋದಿಯೇ ಮತ್ತೆ ಪ್ರಧಾನಿಯಾಗಲಿ ಎಂಬ ಮಾತು ಹೇಳುವ ಮೂಲಕ ಪ್ರತಿಪಕ್ಷದ ನಾಯಕರು ಬೆಚ್ಚಿ ಬೀಳುವಂತೆ ಮಾಡಿದ್ದಾರೆ. ಈ ಎಲ್ಲ ಬೆಳವಣಿಗೆಗಳನ್ನು ನೋಡಿದರೆ ಪ್ರತಿಪಕ್ಷಗಳು ಒಂದಾಗಿ ಮಹಾಘಟಬಂಧನ್ ಮೂಲಕ ಮೋದಿಯನ್ನು ಹಣಿಯುವುದು ಸಾಧ್ಯವಾಗದು ಎಂಬುದನ್ನು ಸುಲಭವಾಗಿಯೇ ಹೇಳಿ ಬಿಡಬಹುದು.
ಎಲ್ಲವನ್ನು ಕಾದು ನೋಡೋಣ...
ಲೋಕಸಭಾ ಚುನಾವಣೆಗೆ ಇನ್ನೂ ದಿನಗಳಿವೆ. ಚುನಾವಣೆಯ ದಿನಾಂಕ ಘೋಷಣೆಯಾದ ಬಳಿಕ ಚುನಾವಣೆ ಕುರಿತಂತೆ ರಾಜಕೀಯ ಪಕ್ಷಗಳಲ್ಲಿ ಹಲವು ಬೆಳವಣಿಗೆಯಾಗಿ ರಾಜಕೀಯ ಚಿತ್ರಣವೇ ಬದಲಾಗಬಹುದೇನೋ? ಏನೇ ಆದರೂ ಈ ಬಾರಿಯ ಲೋಕಸಭಾ ಚುನಾವಣೆ ಹಿಂದಿನ ಎಲ್ಲ ಲೋಕಸಭಾ ಚುನಾವಣೆಗಿಂತ ವಿಭಿನ್ನವಾಗಿರಲಿದೆ ಎಂಬುದಂತು ಸತ್ಯ. ಎಲ್ಲವನ್ನು ಕಾದು ನೋಡೋಣ...