ಪಂಚರಾಜ್ಯದಲ್ಲಿನ ಸೋಲು ಯಡಿಯೂರಪ್ಪಗೆ ವರವೋ? ಶಾಪವೋ?
Recommended Video
ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಬಿಜೆಪಿಗೆ ವ್ಯತಿರಿಕ್ತವಾದರೂ ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಪವರ್ ಫುಲ್ಲಾಗಿದ್ದಾರೆ. ಆದರೆ ಅದೇ ಕಾಲಕ್ಕೆ ತಮಗೆ ದಕ್ಕಿದ ಶಕ್ತಿಯನ್ನು ಎದುರಾಳಿಗಳ ಮೇಲೆ ಪ್ರಯೋಗಿಸಲಾಗದ ಅಸಹಾಯಕ ಸ್ಥಿತಿಗೆ ತಲುಪಿದ್ದಾರೆ.
ಕೆಲವೇ ದಿನಗಳ ಹಿಂದೆ ಅವರಿಗೆ ಶಕ್ತಿ ಕಡಿಮೆ ಇದ್ದರೂ, ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಅಗತ್ಯವಾದ ವಾತಾವರಣವಂತೂ ಇತ್ತು. ಹೀಗಾಗಿ ಯಾರೇನೇ ಹೇಳಿದರೂ ಸರ್ಕಾರವನ್ನು ಬೀಳಿಸಲು ಅವರು ಯತ್ನಿಸುತ್ತಲೇ ಇದ್ದರು.
ಲೋಕಸಭೆ ಚುನಾವಣೆ 2019 : ಬಿಜೆಪಿ ಕಾರ್ಯತಂತ್ರ ದಿಢೀರ್ ಬದಲು!
ಆದರೆ ಬಿಜೆಪಿ ಹೈಕಮಾಂಡ್ ಮಾತ್ರ, ಯಾವ ಕಾರಣಕ್ಕೂ ಆಪರೇಷನ್ ಕಮಲ ಕಾರ್ಯಾಚರಣೆ ಮಾಡಬೇಡಿ. ಹಾಗೇನಾದರೂ ಮಾಡಿದರೆ ಮುಂಬರುವ ಪಾರ್ಲಿಮೆಂಟ್ ಚುನಾವಣೆಯಲ್ಲಿ ಪಕ್ಷಕ್ಕೆ ಹಾನಿಯಾಗುತ್ತದೆ ಎಂದು ಹೇಳುತ್ತಲೇ ಬಂತು.
ಲೋಕಸಭೆ ಚುನಾವಣೆ : ಕರ್ನಾಟಕ ಬಿಜೆಪಿಯಿಂದ ಪ್ರಭಾರಿಗಳ ನೇಮಕ
ಹೀಗೆ ಹೈಕಮಾಂಡ್ ಹೇಳಿದ ಮಾತನ್ನು ಮೀರುವ ಸ್ಥಿತಿಯಲ್ಲೂ ಯಡಿಯೂರಪ್ಪ ಇರಲಿಲ್ಲ. ಹಾಗೆಯೇ ಪಾರ್ಲಿಮೆಂಟ್ ಚುನಾವಣೆಯ ಒಳಗಾಗಿ ತಾವು ಸಿಎಂ ಆಗದಿದ್ದರೆ ಇನ್ನೆಂದೂ ಸಿಎಂ ಆಗುವುದಿಲ್ಲ ಎಂಬ ಲೆಕ್ಕಾಚಾರದಿಂದ ಹಿಂದೆ ಸರಿಯಲು ಅವರ ಮನಸ್ಸು ಒಪ್ಪಲಿಲ್ಲ.
ಆಪರೇಷನ್ ಕಮಲ ಮಾಡಲ್ಲ, ಬಂದ್ರೆ ಬಿಡಲ್ಲ
ಹಾಗಂತಲೇ, ನಾವೇನೂ ಆಪರೇಷನ್ ಕಮಲ ಕಾರ್ಯಾಚರಣೆ ಮಾಡುವುದಿಲ್ಲ. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಶಾಸಕರು ತಾವಾಗಿಯೇ ತಮ್ಮ ತಮ್ಮ ಶಿಬಿರಗಳನ್ನು ತೊರೆದು ಬಂದರೆ ಪಕ್ಷಕ್ಕೆ ಸೇರಿಸಿಕೊಳ್ಳದೆ ನಮಗೂ ಬೇರೆ ದಾರಿ ಇಲ್ಲ ಎಂದು ವರಸೆ ಬದಲಿಸಿದರು.
ಆಪರೇಷನ್ ಕಮಲ ಕಾರ್ಯಾಚರಣೆ ಮಾಡುವುದಿಲ್ಲ. ಆದರೆ ಬೇರೆ ಪಕ್ಷಗಳ ಶಾಸಕರು ತಾವಾಗಿಯೇ ಪಕ್ಷಕ್ಕೆ ಬಂದರೆ ಸುಮ್ಮನಿರಲು ಸಾಧ್ಯವಿಲ್ಲ ಎಂಬ ಯಡಿಯೂರಪ್ಪ ಅವರ ಮಾತನ್ನು ಒಪ್ಪದೆ ಪಕ್ಷದ ಹೈಕಮಾಂಡ್ ಗೂ ವಿಧಿಯಿರಲಿಲ್ಲ. ಹೀಗಾಗಿ ಕೊಡಬೇಕಾದ ಎಚ್ಚರಿಕೆ ನೀಡಿ ಅದು ಮೌನವಾಯಿತು.
ಅಂದು ಸುಮ್ಮನಾದ ನಂತರ ಯಡಿಯೂರಪ್ಪ ಗ್ಯಾಂಗು ನಿರಂತರವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಸೆಳೆಯಲು ಯತ್ನಿಸುತ್ತಲೇ ಬಂತು. ಆದರೆ ಅವರು ಇಂತಹ ಪ್ರಯತ್ನ ಮಾಡಿದಾಗಲೆಲ್ಲ, ಸಮ್ಮಿಶ್ರ ಸರ್ಕಾರದ ಮುಖಂಡರು, ಓ, ಇವರು ಆಪರೇಷನ್ ಕಮಲ ಕಾರ್ಯಾಚರಣೆಗಿಳಿದಿದ್ದಾರೆ ಎಂದು ಹುಯಿಲೆಬ್ಬಿಸುತ್ತಲೇ ಬಂದರು.
ಆಡಿಯೋ ಬಿಡುಗಡೆ ಗೊಂದಲ ಸೃಷ್ಟಿಸಿದ್ಯಾರು?
ಬಿಜೆಪಿ ನಾಯಕ ಶ್ರೀರಾಮುಲು ಅವರ ಆಪ್ತ ಸಹಾಯಕನೊಂದಿಗೆ, ದುಬೈ ಮೂಲದ ಉದ್ಯಮಿಯೊಬ್ಬರು ಮಾತನಾಡಿದರು ಎಂಬ ಆಡಿಯೋ ಬಿಡುಗಡೆಯಾಗಿದ್ದು ಕೂಡಾ ಕುಮಾರಸ್ವಾಮಿ ಸರ್ಕಾರದ ಮೂಲದಿಂದಲೇ. ಯಾಕೆಂದರೆ, ಈ ಮಾತುಕತೆಯ ದ್ವನಿಸುರುಳಿಯನ್ನು ಗುಪ್ತಚರ ಇಲಾಖೆ ಸಿಎಂ ಗಮನಕ್ಕೆ ತಂದಿದೆ ಎಂಬ ಮಾತುಗಳು ಹೊರಬಿದ್ದಿದ್ದವಲ್ಲ? ಹೀಗಾಗಿ ಈ ಆಡಿಯೋ ಕ್ಯಾಸೆಟ್ ನ ಮೂಲ ಹುಡುಕಲು ಹೋದರೆ ಅದನ್ನು ಬಹಿರಂಗಪಡಿಸಿದ್ದು ಕುಮಾರಸ್ವಾಮಿ ಸರ್ಕಾರವೇ ಎಂಬ ಅಂಶ ಮೇಲ್ನೋಟಕ್ಕೇ ಎದ್ದು ಕಾಣುತ್ತದೆ.
ಅದೇನೇ ಇರಲಿ, ಹೀಗೆ ಸಮ್ಮಿಶ್ರ ಸರ್ಕಾರದ ನಾಯಕರು ಹುಯಿಲೆಬ್ಬಿಸುತ್ತಾ ಬಂದರೂ ಯಡಿಯೂರಪ್ಪ ಮಾತ್ರ ಒಳಗಿಂದೊಳಗೆ ಆಪರೇಷನ್ ಕಮಲ ಕಾರ್ಯಾಚರಣೆಯ ಟೆಕ್ನಿಕ್ಕನ್ನು ಮುಂದುವರಿಸಿಕೊಂಡೇ ಬಂದರು.
ದೇವರಾಣೆ ನಾವು ಆಪರೇಷನ್ ಕಮಲ ಮಾಡುತ್ತಿಲ್ಲ: ಶ್ರೀರಾಮುಲು
ಮುಂದೂಡತ್ತಲೇ ಹೋದ ಸಂಪುಟ ವಿಸ್ತರಣೆ
ಕುಮಾರಸ್ವಾಮಿ ನೇತೃತ್ವದ ಸರ್ಕಾರ ಸಚಿವ ಸಂಪುಟ ವಿಸ್ತರಿಸಿದ ಕೂಡಲೇ ಆಪರೇಷನ್ ಕಮಲ ಕಾರ್ಯಾಚರಣೆ ಸಕ್ಸಸ್ ಆಗುತ್ತದೆ ಎಂಬ ನಂಬಿಕೆಯೂ ಇದ್ದುದರಿಂದ ಅದು ಮುಗಿಯುವುದನ್ನೇ ಯಡಿಯೂರಪ್ಪ ಕಾಯತೊಡಗಿದರು.
ಎಷ್ಟೇ ಆದರೂ ಕಾಂಗ್ರೆಸ್ ಪಕ್ಷ ತನ್ನ ಕೋಟಾದಲ್ಲಿ ಆರು ಮಂದಿಯನ್ನು ಸಚಿವರನ್ನಾಗಿ ಮಾಡಬಹುದು. ಆದರೆ ಮಂತ್ರಿಗಳಾಗಲು ಇಪ್ಪತ್ತಕ್ಕೂ ಹೆಚ್ಚು ಮಂದಿ ಇದ್ದಾರೆ. ಪರಿಣಾಮವಾಗಿ ಅವಕಾಶ ಸಿಗದವರು ಸೇರಿದಂತೆ ಹದಿನೈದರಿಂದ ಹದಿನೆಂಟು ಮಂದಿ ಬಿಜೆಪಿ ಕಡೆ ಸೇರುತ್ತಾರೆ ಎಂಬುದೂ ಅವರ ನಂಬಿಕೆಯಾಗಿತ್ತು.
ಯಡಿಯೂರಪ್ಪ ಅವರಿಗೆ ನಂಬಿಕೆ ಇದ್ದುದೇನೋ ನಿಜ. ಆದರೆ ಅವರಿಗಿದ್ದ ನಂಬಿಕೆಯ ವಿವರ ಸಮ್ಮಿಶ್ರ ಸರ್ಕಾರದ ಮುಖಂಡರಿಗೂ ಇತ್ತಲ್ಲ? ಹಾಗಂತಲೇ ಅವರು ಒಂದಲ್ಲ ಒಂದು ಕಾರಣ ನೀಡಿ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆಯನ್ನು ಮುಂದೂಡುತ್ತಲೇ ಬಂದರು.
ಫೈನಲಿ, ಇತ್ತೀಚೆಗೆ ಒಂದು ಡೆಡ್ ಲೈನ್ ಕೂಡಾ ನಿಗದಿ ಪಡಿಸಿದರು. ವಿಧಾನಮಂಡಲ ಅಧಿವೇಶನ ಮುಗಿದ ನಂತರ ಡಿಸೆಂಬರ್ 22ರಂದು ಸಚಿವ ಸಂಪುಟ ವಿಸ್ತರಣೆ ಮಾಡುತ್ತೇವೆ ಎಂಬುದು ಈ ಡೆಡ್ ಲೈನ್. ಆದರೆ ಈ ಡೆಡ್ ಲೈನ್ ಕೂಡಾ ಒಂದು ನೆಪವೇ ಹೊರತು ಮತ್ತೇನಲ್ಲ ಎಂಬುದು ಕಾಂಗ್ರೆಸ್ ನಾಯಕರಿಗೆ ಗೊತ್ತಿತ್ತು.
ಡಿಸೆಂಬರ್ 22ಕ್ಕೆ ಸಂಪುಟ ವಿಸ್ತರಣೆ: ಸಮನ್ವಯ ಸಮಿತಿ ನಿರ್ಣಯ
ರಾಜ್ಯದ ಮೇಲೆ ಪರಿಣಾಮ ಬೀರಿದ ಪಂಚರಾಜ್ಯಗಳ ಸೋಲು
ಆದರೆ ಪಂಚರಾಜ್ಯಗಳ ಚುನಾವಣೆಯ ನಂತರ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಗೆ ಸಿಕ್ಕ ಜಯ ಕರ್ನಾಟಕದ ಮೇಲೆ ಎರಡು ಪರಿಣಾಮಗಳನ್ನು ಬೀರಿದೆ. ಮೊದಲನೆಯದಾಗಿ, ಕುಮಾರಸ್ವಾಮಿ ಅವರ ಸರ್ಕಾರ ಮತ್ತಷ್ಟು ಭದ್ರವಾಗಿದೆ.
ಅದೇ ಕಾಲಕ್ಕೆ ಯಡಿಯೂರಪ್ಪ ಅವರ ಶಕ್ತಿಯೂ ಹೆಚ್ಚಾಗಿದೆ. ಹೇಗೆಂದರೆ, ಇದುವರೆಗೆ ಅವರು ಏನನ್ನೇ ಮಾಡಬೇಕೆಂದಿದ್ದರೂ ವರಿಷ್ಠರ ಅಪ್ಪಣೆಗಾಗಿ ಕಾದು ಕೂರಬೇಕಿತ್ತು. ಆದರೆ ಈಗ ಹಾಗಲ್ಲ, ಮೋದಿ ಗ್ಯಾಂಗು ದೇಶದ ಹೃದಯ ಭಾಗದಲ್ಲೇ ಸೋತು ಹೋಗಿರುವುದರಿಂದ ರಾಜ್ಯ ಮಟ್ಟಗಳಲ್ಲಿ ಬಿಜೆಪಿ ನಾಯಕರು ಪವರ್ ಫುಲ್ಲಾಗತೊಡಗಿದ್ದಾರೆ.
ಯಡಿಯೂರಪ್ಪ ಕೂಡಾ ಅವರಲ್ಲಿ ಒಬ್ಬರು. ಒಂದು ಕಾಲದಲ್ಲಿ ಯಡಿಯೂರಪ್ಪ ಅವರನ್ನು ಕಂಡರೆ ನರೇಂದ್ರ ಮೋದಿ ಅವರಿಗೆ ಅಪಾರ ಗೌರವ ಇತ್ತು. ಬದಲಾದ ಸನ್ನಿವೇಶದಲ್ಲಿ ಅವರ ಶಕ್ತಿಯ ಬಗ್ಗೆ ಸ್ವಲ್ಪ ನಂಬಿಕೆ ಇದೆಯೇ ಹೊರತು ಮುಂಚಿನ ಆತ್ಮೀಯತೆ ಉಳಿದಿಲ್ಲ.
ಪಂಚ ರಾಜ್ಯಗಳ ಫಲಿತಾಂಶ : ಕರ್ನಾಟಕದ ಸಮ್ಮಿಶ್ರ ಸರ್ಕಾರ ನಿರಾಳ!
ಯಡಿಯೂರಪ್ಪ ಅವರ ಬಗ್ಗೆ ಏಕೆ ವಿಶೇಷ ಕಾಳಜಿ?
ವಸ್ತುಸ್ಥಿತಿ ಎಂದರೆ ಪಾರ್ಲಿಮೆಂಟ್ ಚುನಾವಣೆಯ ತನಕ ಯಡಿಯೂರಪ್ಪ ಅವರ ಶಕ್ತಿಯನ್ನು ಬಳಸಿಕೊಂಡು ಆನಂತರ ಮೂಲೆಗುಂಪು ಮಾಡಬಹುದು ಎಂದೇ ಬಿಜೆಪಿಯ ಹಿರಿಯ ತಲೆಗಳ ಒಂದು ಪಡೆ ಲೆಕ್ಕ ಹಾಕಿತ್ತು. ದೇಶದುದ್ದಗಲ ಎಪ್ಪತ್ತೈದು ವರ್ಷ ಮೀರಿದ ನಾಯಕರನ್ನು ಮೂಲೆಗುಂಪು ಮಾಡುತ್ತಿರುವಾಗ ಯಡಿಯೂರಪ್ಪ ಅವರ ಬಗ್ಗೆ ಏಕೆ ವಿಶೇಷ ಕಾಳಜಿ?
ಆದರೆ ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಯಡಿಯೂರಪ್ಪ ಅವರೇ ಪಕ್ಷದ ಪವರ್ ಫುಲ್ ಲೀಡರು ಎಂಬುದು ಗೊತ್ತಿದ್ದುದರಿಂದ ಬಿಜೆಪಿಯ ಹಿರಿಯ ನಾಯಕರ ಪಡೆ ಕೂಡಾ ನೆಪಕ್ಕೆ ಯಡಿಯೂರಪ್ಪ ಜತಗಿನ ವಿಶ್ವಾಸವನ್ನು ಒಂದು ಮಟ್ಟದಲ್ಲಿ ಉಳಿಸಿಕೊಂಡು ಬಂದಿದೆ. ಅಲ್ಲದೆ, ಕರ್ನಾಟಕದಲ್ಲಿ ಯಡಿಯೂರಪ್ಪನವರನ್ನು ಬಿಟ್ಟರೆ ಬೇರೆ ಅಷ್ಟು ಪ್ರಭಾವಶಾಲಿಯಾಗಿರುವ ಒಬ್ಬ ನಾಯಕರು ಕೂಡ ಕಣ್ಣಿಗೆ ಬೀಳದಿರುವುದರಿಂದ ಯಡಿಯೂರಪ್ಪನವರನ್ನೇ ನಂಬದೆ ಗತ್ಯಂತರವೇ ಇಲ್ಲದಂತಾಗಿದೆ.
ಬಿಜೆಪಿಗೆ ಹೊಡೆತ ನೀಡಿದ ಫಲಿತಾಂಶ
ಒಂದು ವೇಳೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ಕಮಲ ಪಾಳೆಯದ ಪರವಾಗಿದ್ದಿದ್ದರೆ, ಮುಂದಿನ ಪಾರ್ಲಿಮೆಂಟ್ ಚುನಾವಣೆಯಲ್ಲೂ ಗೆದ್ದು ದಿಲ್ಲಿ ಗದ್ದುಗೆಯನ್ನು ಹಿಡಿಯುವ ವಿಶ್ವಾಸ ಮೂಡುತ್ತಿತ್ತು. ಹಾಗೇನಾದರೂ ಆಗಿದ್ದರೆ ಯಡಿಯೂರಪ್ಪ ನಿಶ್ಚಿತವಾಗಿ ಪಾರ್ಲಿಮೆಂಟ್ ಚುನಾವಣೆಯ ನಂತರ ಸೈಡ್ ಲೈನ್ ಆಗುತ್ತಿದ್ದರು.
ಆದರೆ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಬಿಜೆಪಿಗೆ ಹೊಡೆತ ನೀಡಿದ್ದರೆ, ಇತ್ತ ಯಡಿಯೂರಪ್ಪ ಅವರ ಶಕ್ತಿಯನ್ನು ಹೆಚ್ಚಿಸಿದೆ. ಆದರೆ ಹೀಗೆ ಅವರ ಶಕ್ತಿ ಹೆಚ್ಚಿದರೂ, ಅದನ್ನು ಸದ್ಬಳಕೆ ಮಾಡಿಕೊಳ್ಳುವುದು ಅವರಿಗೆ ಹಿಂದಿಗಿಂತ ಕಷ್ಟ.
ಪಂಚರಾಜ್ಯ ಫಲಿತಾಂಶ: ಬಿಜೆಪಿ ಧೂಳಿಪಟವಾಗೋಕೆ 5 ಕಾರಣ
ಕಮರಿಹೋದ ಭಿನ್ನಮತೀಯರ ವಿಶ್ವಾಸ
ಯಾಕೆಂದರೆ ಹಿಂದೆ ಅಧಿಕಾರದ ಆಸೆ ಇರುವ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು, ಕಮಲ ಪಾಳೆಯಕ್ಕೆ ಒಂದು ಭವಿಷ್ಯವಿದೆ ಎಂಬ ನಂಬಿಕೆಯನ್ನಾದರೂ ಇಟ್ಟುಕೊಂಡಿದ್ದರು. ಆದರೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ಅಂತಹ ನಂಬಿಕೆ ಸುಳ್ಳಾಗುವಂತೆ ಮಾಡಿದೆ.
ಹೀಗಾಗಿ ಅದನ್ನು ನೆಚ್ಚಿಕೊಂಡು ಬಿಜೆಪಿ ಕಡೆ ಹೋದರೆ ನಿಶ್ಚಿತವಾಗಿ ಸಂಕಷ್ಟಕ್ಕೆ ಸಿಲುಕುತ್ತೇವೆ ಎಂಬ ಹೆದರಿಕೆ ಕಾಂಗ್ರೆಸ್ ಮತ್ತು ಜೆಡಿಎಸ್ ನ ಭಿನ್ನರಲ್ಲಿ ಮೂಡಿದೆ. ಒಂದು ವೇಳೆ ಬಿಜೆಪಿ ಕಡೆ ಹೋದರೂ ಉಪಚುನಾವಣೆಯಲ್ಲಿ ಗೆಲ್ಲುವುದು ಕಷ್ಟ ಮತ್ತು ಮುಂದಿನ ಪಾರ್ಲಿಮೆಂಟ್ ಚುನಾವಣೆಯ ನಂತರವಾದರೂ ತಮಗೆ ಒಂದಷ್ಟು ಶಕ್ತಿ ಬರುತ್ತದೆ ಎಂಬ ನಂಬಿಕೆ ಅವರಲ್ಲಿ ಬರುತ್ತಿಲ್ಲ. ಆಪರೇಷನ್ ಕಮಲಕ್ಕೆ ಬಲಿಯಾಗಿ ಬಿಜೆಪಿ ಸೇರಿಕೊಂಡರೆ ಕಾಲಿನ ಮೇಲೆ ಚಪ್ಪಡಿ ಕಲ್ಲು ಎಳೆದುಕೊಂಡಂತೆ ಎಂದು ಕೆಲವರು ಅಂದುಕೊಂಡಿದ್ದರೂ ಅಚ್ಚರಿಯಿಲ್ಲ.
ಬಿಜೆಪಿಯಿಂದ ದೂರ ಉಳಿದ ಭಿನ್ನಮತೀಯರು
ಹೀಗಾಗಿ ಈ ಬೆಳವಣಿಗೆಯ ಬೆನ್ನಲ್ಲೇ ಭಿನ್ನಮತೀಯ ಶಾಸಕರನೇಕರು ಬಿಜೆಪಿ ಸಂಪರ್ಕದಿಂದ ದೂರ ಉಳಿಯತೊಡಗಿದ್ದಾರೆ. ಬದಲಾದ ಈ ವಿದ್ಯಮಾನ ಸಹಜವಾಗಿಯೇ ಯಡಿಯೂರಪ್ಪ ಅವರಲ್ಲಿ ಆತಂಕ ಮೂಡಿಸಿದೆ.
ಹಿಂದೆ ಏನೇ ಮಾಡಲು ಹೋದರೂ ಹೈಕಮಾಂಡ್ ಗೆ ಹೆದರಬೇಕಿತ್ತು. ಆದರೆ ಈಗ ಪರಿಸ್ಥಿತಿಯೇ ತಮಗೆ ಪಾಳೇಗಾರನ ಪೊಸೀಷನ್ನು ನೀಡಿದೆ. ಆದರೆ ಈ ಪೋಸೀಷನ್ನಿನಿಂದ ಎದುರಾಳಿಗಳ ಕೋಟೆಗೆ ಲಗ್ಗೆ ಹಾಕುವುದು ಕಷ್ಟ ಎಂಬುದು ಯಡಿಯೂರಪ್ಪ ಅವರ ಸದ್ಯದ ತಲೆನೋವು.
ಹಾವು ಸಾಯುವ ಹಾಗಿಲ್ಲ ಕೋಲೂ ಮುರಿಯುವ ಹಾಗಿಲ್ಲ ಎಂಬಂತಾಗಿದೆ ಯಡಿಯೂರಪ್ಪನವರ ಪರಿಸ್ಥಿತಿ. ಆಪರೇಷನ್ ಕಮಲ ಮಾಡಿದರೂ ಕಷ್ಟ ಮಾಡದಿದ್ದರೂ ಕಷ್ಟ. ಲೋಕಸಭೆ ಚುನಾವಣೆ ಮುಗಿಯುವವರೆಗೆ ಕಾಯುವ ಹಾಗೂ ಇಲ್ಲ.
ಸಚಿವ ಸ್ಥಾನ ಸಿಗದಿದ್ದರೂ ಬಿಜೆಪಿಗೆ ಬರುವುದು ಅನುಮಾನ
ಒಂದು ವೇಳೆ ಡಿಸೆಂಬರ್ 22ರಂದು ಕುಮಾರಸ್ವಾಮಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾದರೂ ತಾವು ಬಯಸಿದಂತೆ ಕಾಂಗ್ರೆಸ್-ಜೆಡಿಎಸ್ ಪಾಳೆಯದ ಭಿನ್ನರು ಓಡಿ ಬರುವ ಪರಿಸ್ಥಿತಿಯಿಲ್ಲ ಅನ್ನುವುದು ಯಡಿಯೂರಪ್ಪ ಅವರ ಚಿಂತೆ.
ತಮ್ಮ ಈ ಚಿಂತೆಗೆ ಪರಿಹಾರದ ಮಾರ್ಗಗಳು ಯಾವುವು? ಅಂತ ಅವರೀಗ ಯೋಚಿಸುತ್ತಿದ್ದಾರೆ. ಆದರೆ ಏನೇ ಲೆಕ್ಕಾಚಾರ ಹಾಕಿದರೂ, ಹೆಚ್ಚಿರುವ ತಮ್ಮ ಶಕ್ತಿ ತಮಗೆ ಲಾಭ ತಂದುಕೊಡುವುದಿಲ್ಲ ಎಂಬುದು ಅವರ ಅರಿವಿಗೆ ಬರಲಾರಂಭಿಸಿದೆ.
ರಾಜಕೀಯದ ಲೆಕ್ಕಾಚಾರಗಳೇ ಹಾಗೆ. ಬಲ ಇಲ್ಲದಿದ್ದರೂ ಒಬ್ಬರಿಗೆ ಸನ್ನಿವೇಶ ವರವಾಗಬಹುದು. ಹಾಗೆಯೇ ಬಲವಿದ್ದರೂ ಸನ್ನಿವೇಶ ಶಾಪವಾಗಬಹುದು. ಹೀಗಾಗಿ ಈಗ ಶಕ್ತಿ ಹೆಚ್ಚಿದರೂ ಯಡಿಯೂರಪ್ಪ ಮಾತ್ರ ಶಾಪಗ್ರಸ್ತ ನಾಯಕ ಅನ್ನುವುದು ನಿಸ್ಸಂಶಯ.