ಬಿಹಾರ ಚುನಾವಣೆ: ಮಾಯವಾದರೇ ಚುನಾವಣಾ ಚಾಣಾಕ್ಷ ಪ್ರಶಾಂತ್ ಕಿಶೋರ್?
ಪಟ್ನಾ, ಅಕ್ಟೋಬರ್ 20: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಅಬ್ಬರದ ಪ್ರಚಾರ ಭರಾಟೆ ಮಧ್ಯೆ ಜೋರಾಗಿ ಸದ್ದು ಮಾಡಬೇಕಿದ್ದ ಧ್ವನಿಯೊಂದು ಮೌನವಾಗಿದೆ. ಇದು ರಾಜಕೀಯ ವಲಯದಲ್ಲಿ ಅಚ್ಚರಿಯನ್ನೂ ಮೂಡಿಸಿದೆ. ರಾಜ್ಯಗಳ ಹಾಗೂ ಸಂಸತ್ ಚುನಾವಣೆಯಲ್ಲಿ ತಂತ್ರಗಳನ್ನು ಹೆಣಿಯುವ ಮೂಲಕ ಸುದ್ದಿಯಾಗುತ್ತಿದ್ದ ಚುನಾವಣಾ ಚಾಣಕ್ಯ ಖ್ಯಾತಿಯ ಪ್ರಶಾಂತ್ ಕಿಶೋರ್ ಬಿಹಾರ ಚುನಾವಣೆಯಲ್ಲಿ ಮುಂಚೂಣಿಯಲ್ಲಿ ಇರಬೇಕಾಗಿತ್ತು. ಆದರೆ ಇದುವರೆಗೂ ಅವರ ಧ್ವನಿ ಕೇಳಿಸಿಲ್ಲ.
ಕೇಂದ್ರ ಹಾಗೂ ವಿವಿಧ ರಾಜ್ಯಗಳ ಚುನಾವಣೆಯಲ್ಲಿ ಪಕ್ಷಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪ್ರಶಾಂತ್ ಕಿಶೋರ್ ಅವರನ್ನು 2015ರ ಚುನಾವಣೆ ಬಳಿಕ ಜೆಡಿಯು ಉಪಾಧ್ಯಕ್ಷರಾಗಿ ನಿತೀಶ್ ಕುಮಾರ್ ನೇಮಿಸಿದ್ದರು. ಚುನಾವಣಾ ತಜ್ಞ ರಾಜಕೀಯದಲ್ಲಿ ಛಾಪು ಮೂಡಿಸುವ ಭರವಸೆ ವ್ಯಕ್ತಪಡಿಸಿದ್ದರು. ಒಂದೂವರೆ ವರ್ಷದ ಬಳಿಕ ನಿತೀಶ್ ಕುಮಾರ್ ಜತೆ ಮುನಿಸಿನಿಂದಾಗಿ ಅವರು ಜೆಡಿಯುದಿಂದ ದೂರಾದರು. ತಳಮಟ್ಟದಿಂದ ನಾಯಕತ್ವವನ್ನು ಅಭಿವೃದ್ಧಿಪಡಿಸುವ ಭರವಸೆಯೊಂದಿಗೆ 'ಬಾತ್ ಬಿಹಾರ್ ಕಿ' ಎಂಬ ರಾಜಕೀಯೇತರ ವೇದಿಕೆಯನ್ನು ಪ್ರಶಾಂತ್ ಕಿಶೋರ್ ಸ್ಥಾಪಿಸಿದ್ದರು.
ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳು ಹಾಗೂ ವಿವಿಧ ಚಟುವಟಿಕೆಗಳ ಮೂಲಕ ಪಕ್ಷಗಳ ಗೆಲುವಿಗೆ ನೆರವಾಗುವ ಮೂಲಕ ಖ್ಯಾತಿ ಗಳಿಸಿದ್ದ ಪ್ರಶಾಂತ್ ಕಿಶೋರ್, ಬಿಹಾರ ಚುನಾವಣೆ ಬಗ್ಗೆ ಇದುವರೆಗೂ ಒಂದೂ ಟ್ವೀಟ್ ಮಾಡಿಲ್ಲ. ಕೋವಿಡ್ ಕುರಿತು ಜುಲೈನಲ್ಲಿ ಮಾಡಿದ್ದ ಟ್ವೀಟ್ ಕೊನೆ. ಮತ್ತೆಲ್ಲೂ ಅವರು ರಾಜಕೀಯ ವಲಯದಲ್ಲಿ ಕಾಣಿಸಿಕೊಂಡಿಲ್ಲ. ಮುಂದೆ ಓದಿ.

ಚಿಕ್ಕಪಕ್ಷಗಳ ಜತೆ ಪ್ರಶಾಂತ್ ಸಭೆ
ಪ್ರಶಾಂತ್ ಕಿಶೋರ್ ಸ್ವಯಂ ಮೂಲೆಗುಂಪಾದರೇ ಅಥವಾ ರಾಜಕೀಯ ಪಕ್ಷಗಳಿಗೆ ಅವರು ಬೇಡವಾದರೇ ಎಂಬ ಪ್ರಶ್ನೆಗಳು ಮೂಡುತ್ತಿವೆ. ಆದರೆ ಮಹಾಘಟಬಂಧನದಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಿ ಬಿಟ್ಟ ಪ್ರಶಾಂತ್ ಕಿಶೋರ್, ಆರ್ಎಲ್ಎಸ್ಪಿಯಂತಹ ಚಿಕ್ಕಪಕ್ಷಗಳ ನಾಯಕರೊಂದಿಗೆ ಸಭೆ ನಡೆಸುವ ಮೂಲಕ ರಾಜಕೀಯ ನಡೆ ಶುರುಮಾಡಿದ್ದಾರೆ ಎನ್ನಲಾಗಿದೆ. ಎನ್ಡಿಎದಿಂದ ಎಲ್ಜೆಪಿ ನಾಯಕ ಚಿರಾಗ್ ಪಾಸ್ವಾನ್ ದೂರಾಗುವುದರ ಹಿಂದೆ ಪ್ರಶಾಂತ್ ಕಿಶೋರ್ ಕೈವಾಡ ಇದೆ ಎಂದು ಎಲ್ಜೆಪಿ ಆರೋಪಿಸಿದೆ..

ಚಿರಾಗ್ ಪಾಸ್ವಾನ್ ಮೇಲೆ ಪ್ರಭಾವ
ಸಮಾಜವಾದಿಗಳ ಹಳೆಯ ತಲೆಮಾರಿಗೆ ಇದು ಕೊನೆಯ ಚುನಾವಣೆಯಾಗಲಿದೆ. ಹೀಗಾಗಿ ಎಲ್ಜೆಪಿ ಮುಂದೆ ಪ್ರಾಬಲ್ಯ ಸಾಧಿಸಬಹುದು ಎಂದು ಚಿರಾಗ್ ಪಾಸ್ವಾನ್ ಮೇಲೆ ಪ್ರಶಾಂತ್ ಕಿಶೋರ್ ಪ್ರಭಾವ ಬೀರಿದ್ದಾರೆ ಎಂದು ಜೆಡಿಯುದ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. ಇದು ಊಹಾಪೋಹವಷ್ಟೇ ಎಂದು ಎಲ್ಜೆಪಿ ವಕ್ತಾರ ಅಶ್ರಫ್ ಅನ್ಸಾರಿ ಹೇಳಿದ್ದಾರೆ.

ತಲೆ ಎತ್ತಲಿದ್ದಾರೆ ಪ್ರಶಾಂತ್
ಪ್ರಶಾಂತ್ ಕಿಶೋರ್ ಯಾವಾಗಲೂ ಗೆಲ್ಲುವ ಪಕ್ಷದ ಬೆನ್ನತ್ತಿ ಯಶಸ್ಸು ಕಾಣುತ್ತಾರೆ ಎಂದೂ ಅನೇಕರು ಆರೋಪಿಸಿದ್ದಾರೆ. ಆದರೆ 2017ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ಪರವಾಗಿ ಪ್ರಶಾಂತ್ ಕಿಶೋರ್ ಕೆಲಸ ಮಾಡಿದ್ದರು. ಅಲ್ಲಿ ಈ ಎರಡೂ ಪಕ್ಷಗಳು ನೆಲಕಚ್ಚಿದ್ದವು. ಹಾಗೆಂದು ಪ್ರಶಾಂತ್ ಅವರ ಚಾಣಾಕ್ಷತೆ ಮುಗಿದುಹೋಗಿಲ್ಲ. 2025ರವರೆಗೂ ಕಾದುನೋಡಿ, ನಿತೀಶ್ ಕುಮಾರ್ ನಂತರದ ಬಿಹಾರ ರಾಜಕೀಯದಲ್ಲಿ ಅವರು ಅತ್ಯಂತ ನಿರ್ಣಾಯಕವಾಗಲಿದ್ದಾರೆ ಎನ್ನಲಾಗುತ್ತಿದೆ.
Recommended Video

ಬಾತ್ ಬಿಹಾರ್ ಕಿ ಆಂದೋಲನ
ಪ್ರಶಾಂತ್ ಕಿಶೋರ್ ಬಿಹಾರ ಚುನಾವಣಾ ರಾಜಕಾರಣದಿಂದ ತೆರೆಮರೆಗೆ ಸರಿದಿಲ್ಲ. ಕೋವಿಡ್ ಕಾರಣದಿಂದಾಗಿ ಅವರು ಅಖಾಡಕ್ಕೆ ಇಳಿದು ಕಾಣಿಸಿಕೊಂಡಿಲ್ಲವಷ್ಟೇ. ಆದರೆ ಅವರ ಬಾತ್ ಬಿಹಾರ್ ಕಿ ಡಿಜಿಟಲ್ ವೇದಿಕೆಯಲ್ಲಿ ಬಹುದೊಡ್ಡ ರಾಜಕೀಯ ವೇದಿಕೆಯಾಗಿ ಗುರುತಿಸಿಕೊಂಡಿದ್ದು, 20 ಲಕ್ಷಕ್ಕೂ ಅಧಿಕ ಫಾಲೋವರ್ಗಳನ್ನು ಪಡೆದುಕೊಂಡಿದೆ. ಹೀಗಾಗಿ ಪ್ರಶಾಂತ್ ಪ್ರಭಾವಳಿ ತಗ್ಗಿಲ್ಲ ಎಂದೂ ವಿಶ್ಲೇಷಿಸಲಾಗಿದೆ.












Click it and Unblock the Notifications