ಚುನಾವಣಾ ವಿಶೇಷ: ದಳಪತಿಗಳಿಗೆ ಕಠಿಣವಾಗಲಿದೆಯಾ ಚುನಾವಣಾ ಹಾದಿ?
ಮುಂದಿನ ಚುನಾವಣೆಯಲ್ಲಿ 150 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ ಎಂದು ಹೇಳುತ್ತಾ ಬಂದಿದ್ದ ಜೆಡಿಎಸ್ ನಾಯಕರು ಕಳೆದ ಕೆಲವು ತಿಂಗಳ ಹಿಂದೆ ಅಬ್ಬರಿಸಿದ್ದರು. ಸಮಾವೇಶ, ಜಲಯಾತ್ರೆಗಳ ಮೂಲಕ ರಾಷ್ಟ್ರೀಯ ಪಕ್ಷಗಳ ನಾಯಕರ ಎದೆಯಲ್ಲಿ ಅವಲಕ್ಕಿ ಕುಟ್ಟಿದಂತೆ ಮಾಡಿದ್ದರು. ಆದರೆ ಚುನಾವಣೆಗೆ ಕಾಲ ಸನ್ನಿಹಿತವಾಗುತ್ತಿದ್ದಂತೆಯೇ ಮೌನಕ್ಕೆ ಶರಣಾದಂತೆ ಗೋಚರಿಸುತ್ತಿದೆ.
ಇದೀಗ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ಮುಖಂಡರು ಈಗಿನಿಂದಲೇ ಚುನಾವಣಾ ಅಖಾಡಕ್ಕಿಳಿದು ಬೊಬ್ಬಿರಿಯುತ್ತಿದ್ದಾರೆ. ಆದರೆ ಇವೆರಡು ಪಕ್ಷಗಳ ನಡುವೆ ಜೆಡಿಎಸ್ ಸ್ವಲ್ಪ ಮಟ್ಟಿಗೆ ಮಂಕಾದಂತೆ ಕಾಣುತ್ತಿದೆ. ಸದ್ಯಕ್ಕೆ ಜೆಡಿಎಸ್ ನಾಯಕರ ನಿಲುವು ಏನು ಎಂಬುದೇ ಅರ್ಥವಾದಂತೆ ಕಾಣುತ್ತಿಲ್ಲ. ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಅನುಪಸ್ಥಿತಿಯಲ್ಲಿ ಪಕ್ಷದ ಸಂಘಟನೆಗೆ ಪೂರಕವಾಗುವ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕೆಲಸವನ್ನು ಇತರೆ ನಾಯಕರು ಮಾಡುತ್ತಿಲ್ಲ.
ಕೆಲವು ನಾಯಕರಿಗೆ ಅದರಲ್ಲೂ ಈಗಾಗಲೇ ಶಾಸಕರಾಗಿರುವ ಕೆಲವರಿಗೆ ತಮ್ಮ ಕ್ಷೇತ್ರಗಳನ್ನು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಅಬ್ಬರದ ನಡುವೆ ಉಳಿಸಿಕೊಳ್ಳುವುದು ಹೇಗೆ ಎಂಬ ಚಿಂತೆಯೂ ಕಾಡಲಾರಂಭಿಸಿದೆ. ಮಂಡ್ಯ ಜಿಲ್ಲೆ ಜೆಡಿಎಸ್ನ ಭದ್ರಕೋಟೆ ಎಂದು ಹೇಳಲಾಗುತ್ತಿತ್ತಾದರೂ ಈ ಬಾರಿ ಆ ಭದ್ರಕೋಟೆಗೆ ಲಗ್ಗೆಯಿಡಲು ಕಾಂಗ್ರೆಸ್ ಮತ್ತು ಬಿಜೆಪಿ ತಯಾರಿ ನಡೆಸುತ್ತಿದೆ. ಬಿಜೆಪಿ ಕೆ.ಆರ್.ಪೇಟೆಯಲ್ಲಿ ಆಪರೇಷನ್ ಕಮಲದ ಮೂಲಕ ನಾರಾಯಣಗೌಡರನ್ನು ಸೆಳೆದುಕೊಂಡು ಅವರನ್ನು ಗೆಲ್ಲಿಸುವ ಮೂಲಕ ಖಾತೆ ತೆರೆದಿದೆ.

ಕೆಂಪೇಗೌಡರ ಪ್ರತಿಮೆ ಮೂಲಕ ಒಕ್ಕಲಿಗರ ಓಲೈಕೆ
ಜೆಡಿಎಸ್ ನಾಯಕರು ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟ ಮಾಡುತ್ತೇವೆ ಎನ್ನುವ ಮೂಲಕ ಎಲ್ಲ ಜಾತಿ ಸಮುದಾಯವನ್ನು ತನ್ನೊಡಲಲ್ಲಿ ಹಾಕಿಕೊಂಡು ಮುಂದಡಿಯಿಡುತ್ತೇವೆ ಎನ್ನುತ್ತಿದ್ದರೂ ಎಲ್ಲೋ ಒಂದು ಕಡೆ ಅದಕ್ಕೆ ಅದೆಲ್ಲವನ್ನು ಮೀರಿ ಒಕ್ಕಲಿಗರೇ ಅದರ ಅಡಿಪಾಯ ಎಂಬುದನ್ನು ತಳ್ಳಿಹಾಕುವಂತಿಲ್ಲ. ಆದರೆ ಜೆಡಿಎಸ್ ಕಡೆಗಿರುವ ಒಕ್ಕಲಿಗರನ್ನು ಸೆಳೆಯುವ ಕೆಲಸಕ್ಕೆ ಬಿಜೆಪಿ ಕೈ ಹಾಕಿದೆ. ಇದೀಗ ಕೆಂಪೇಗೌಡರ ಬೃಹತ್ ಪ್ರತಿಮೆಯನ್ನು ನಿರ್ಮಾಣ ಮಾಡಿ ಅದನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೂಲಕ ಉದ್ಘಾಟನೆ ಮಾಡಿಸುತ್ತಿದೆ.

ಒಕ್ಕಲಿಗ ಸಮುದಾಯ ಬಿಜೆಪಿಯನ್ನು ಬೆಂಬಲಿಸುವುದಿಲ್ಲ
ಇದು ನಾಡುಕಟ್ಟಿದ ಕೆಂಪೇಗೌಡರಿಗೆ ಬೃಹತ್ ಪ್ರತಿಮೆ ನಿರ್ಮಾಣ ಮಾಡುವ ಮೂಲಕ ಗೌರವ ಸಲ್ಲಿಸಿರುವುದು ಮಾತ್ರವಲ್ಲದೆ ಮೃತ್ತಿಕೆ ಸಂಗ್ರಹ ರಥಯಾತ್ರೆ ನಡೆಸುವ ಮೂಲಕ ಇಡೀ ರಾಜ್ಯದ ಮೂಲೆ ಮೂಲೆಗೆ ತಲುಪಿದೆ. ಇದೇ ವಿಚಾರ ಮುಂದಿನ ದಿನಗಳಲ್ಲಿ ರಾಜಕೀಯಕ್ಕೆ ಬಳಕೆಯಾದರೂ ಅಚ್ಚರಿಪಡಬೇಕಾಗಿಲ್ಲ. ಈಗಾಗಲೇ ಈ ವಿಚಾರಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಅವರು ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡಿದ ಕಾರಣಕ್ಕೆ ಒಕ್ಕಲಿಗ ಸಮುದಾಯ ಬಿಜೆಪಿಯನ್ನು ಬೆಂಬಲಿಸುವುದಿಲ್ಲ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಇಷ್ಟಕ್ಕೂ ರಾಜಕೀಯವಾಗಿ ಯಾರು ಏನೇ ಹೇಳಿದರೂ ಕೆಂಪೇಗೌಡರು ರಾಜ್ಯ ಮಾತ್ರವಲ್ಲ, ದೇಶವೇ ಹೆಮ್ಮೆಪಡುವ ನಾಯಕ.

ಜೆಡಿಎಸ್ ಮೇಲೆ ಕುಟುಂಬ ರಾಜಕಾರಣದ ಆರೋಪವಿದೆ
ಜನತಾ ದಳ ಇಬ್ಭಾಗವಾದ ಬಳಿಕ ಜೆಡಿಎಸ್ ಹಳೇ ಮೈಸೂರು ಭಾಗದ ಕೆಲವು ಕ್ಷೇತ್ರಗಳನ್ನು ಹೊರತು ಪಡಿಸಿದಂತೆ ಅದರಲ್ಲೂ ಹಾಸನ, ಮೈಸೂರು, ಮಂಡ್ಯ, ರಾಮನಗರ ವ್ಯಾಪ್ತಿಯ ಕೆಲವು ಕ್ಷೇತ್ರಗಳಲ್ಲಿ ಪ್ರಾಬಲ್ಯ ಸಾಧಿಸಿದರೂ ಕೂಡ ಮಲೆನಾಡು, ಕರಾವಳಿ, ಉತ್ತರ ಕರ್ನಾಟಕದ ವ್ಯಾಪ್ತಿಯಲ್ಲಿ ಪ್ರಬಲವಾಗಲೇ ಇಲ್ಲ. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದ ಅಗತ್ಯತೆ ಬಗ್ಗೆ ಮಾತನಾಡುವ ಜನ ಜೆಡಿಎಸ್ ಪಕ್ಷಕ್ಕೆ ಮಣೆ ಹಾಕಲೇ ಇಲ್ಲ. ಇವತ್ತಿಗೂ ಜೆಡಿಎಸ್ ಮೇಲೆ ಕುಟುಂಬ ರಾಜಕಾರಣದ ಆರೋಪವಿದೆ. ಅದರಿಂದ ಮುಕ್ತವಾಗಿ ಹೊರಬರುವುದು ಜೆಡಿಎಸ್ಗೆ ಸಾಧ್ಯವಾಗದ ಮಾತಾಗಿದೆ.

ಜೆಡಿಎಸ್ಗೆ 2 ರಾಷ್ಟ್ರೀಯ ಪಕ್ಷವನ್ನು ಎದುರಿಸುವ ಸವಾಲು
ಈ ನಡುವೆ ಕಾಂಗ್ರೆಸ್ ಮತ್ತು ಬಿಜೆಪಿಗೆ ಜೆಡಿಎಸ್ ನುಂಗಲಾರದ ತುತ್ತಾಗಿರುವುದರಿಂದ ಎರಡು ರಾಷ್ಟ್ರೀಯ ಪಕ್ಷಗಳು ಜೆಡಿಎಸ್ನ್ನೇ ಟಾರ್ಗೆಟ್ ಮಾಡುತ್ತಿವೆ. ಜೆಡಿಎಸ್ ಹೆಚ್ಚು ಸ್ಥಾನ ಪಡೆದಷ್ಟು ಅದರ ಪರಿಣಾಮ ನೇರವಾಗಿ ಎರಡು ಪಕ್ಷಗಳ ಮೇಲೆ ಬೀರುವುದರಿಂದ ಜೆಡಿಎಸ್ ಅನ್ನು ಸೋಲಿಸಲು ತಂತ್ರ ಮಾಡುತ್ತವೆ. ಎರಡು ರಾಷ್ಟ್ರೀಯ ಪಕ್ಷಗಳನ್ನು ಎದುರಿಸಿ ಜೆಡಿಎಸ್ ಹೇಗೆ ಚುನಾವಣೆಗೆ ಹೋಗುತ್ತದೆ ಎಂಬುದೇ ಕುತೂಹಲಕಾರಿಯಾಗಿದೆ.
-
Baglkot By Poll:9 ವರ್ಷ ಅಧಿಕಾರದಲ್ಲಿದ್ದ ಬಿಜೆಪಿ ಸಾಧನೆ ಶೂನ್ಯ: ಗ್ಯಾರಂಟಿ ಯೋಜನೆಗಳ ಲೆಕ್ಕ ಕೊಟ್ಟ ಸಿದ್ದರಾಮಯ್ಯ -
'By Election: ಕಾಂಗ್ರೆಸ್ನಿಂದ ವೀರಶೈವ ಲಿಂಗಾಯತರನ್ನು ಒಡೆಯುವ ಪ್ರಯತ್ನ'' -
ದಾವಣಗೆರೆ ಉಪಚುನಾವಣೆ: ಅಲ್ಪಸಂಖ್ಯಾತರ ಬೆಂಬಲ ಕಾಂಗ್ರೆಸ್ ಕಡೆ – ಸಲೀಂ ಅಹಮದ್ -
ಏರ್ ಕೂಲರ್ vs ಏರ್ ಕಂಡಿಷನರ್: ಬೇಸಿಗೆಯಲ್ಲಿ ನಿಮ್ಮ ಸರಿಯಾದ ಆಯ್ಕೆ ಯಾವುದು? -
Bagalkote: ಕೃಷ್ಣ ಮೇಲ್ದಂಡೆ ಯೋಜನೆ ವಿಳಂಬಕ್ಕೆ ಕಾಂಗ್ರೆಸ್ಸೇ ಕಾರಣ: ವಿವರ ಬಿಚ್ಚಿಟ್ಟ ಬಸವರಾಜ ಬೊಮ್ಮಾಯಿ -
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
Annamalai: ಅಣ್ಣಾಮಲೈ ಮತ್ತು ರಾಜಕೀಯ ಉನ್ಮಾದ: ಶಿವಕುಮಾರ್ ಮೆಣಸಿನಕಾಯಿ ಬರಹ -
ಇಂಧನ ಪೂರೈಕೆ ಕೊರತೆ ಭೀತಿ: 2026ರಲ್ಲಿ ನೀವು ಖರೀದಿಸಬಹುದಾದ ಟಾಪ್ ಎಲೆಕ್ಟ್ರಿಕ್ ಸ್ಕೂಟರ್ ಗಳು ಇಲ್ಲಿವೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ










Click it and Unblock the Notifications