ಬೆಳಗಾವಿಯಲ್ಲಿ ಇಬ್ಬಾಗದತ್ತ ಕಮಲ: ತಾರಕಕ್ಕೇರಿದ ಬಿಜೆಪಿ Vs ಬಿಜೆಪಿ
ರಾಜ್ಯ ರಾಜಕಾರಣದಲ್ಲಿ ಮಹತ್ವದ ಭಾಷ್ಯ ಬರೆಯುವ ಬೆಳಗಾವಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಬಿಜೆಪಿಯದ್ದೇ ಪಾರುಪತ್ಯ. ಕಾಂಗ್ರೆಸ್ ನಾಯಕರು ಕಮಲದ ಭದ್ರಕೋಟೆಯನ್ನು ಅದೆಷ್ಟೋ ಬಾರಿ ಭೇದಿಸಲು ಹೊರಟರೂ ಅದು ಸಾಧ್ಯವಾಗಿರಲಿಲ್ಲ.
ಯಡಿಯೂರಪ್ಪನವರ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ನಂತರ, ರಾಜ್ಯ ರಾಜಕೀಯದಲ್ಲಿ ತನ್ನದೇ ಛಾಪನ್ನು ಒತ್ತುತ್ತಿರುವ ರಮೇಶ್ ಜಾರಕಿಹೊಳಿಗೆ ಅಶ್ಲೀಲ ಸಿಡಿ ಪ್ರಕರಣ ಹಿನ್ನಡೆಯನ್ನು ತಂದೊಡ್ಡಿತ್ತು. ಈಗ, ಅದನ್ನೆಲ್ಲಾ ಪಕ್ಕಕ್ಕೆ ಸರಿಸಿ ಮತ್ತೆ ರಮೇಶ್ ರಾಜಕೀಯದ ಆಟ ಆರಂಭಿಸಿದ್ದಾರೆ.
ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಸೋಲಿನಿಂದಾಗಿ, ಪಕ್ಷದ ವರಿಷ್ಠರಿಗೆ ರಾಜ್ಯದ ಹಲವು ನಾಯಕರು ಉತ್ತರ ಕೊಡಬೇಕಾದ ಪರಿಸ್ಥಿತಿ ಎದುರಾಗಿತ್ತು. ಈಗ ಜಿಲ್ಲೆಯ ಬಿಜೆಪಿ ಇಬ್ಬಾಗದತ್ತ ಸಾಗುತ್ತಿದ್ದು, ರಮೇಶ್ ಜಾರಕಿಹೊಳಿ ವಿರುದ್ದ ಸ್ವಪಕ್ಷೀಯರು ದೆಹಲಿ ಮಟ್ಟಕ್ಕೆ ದೂರು ಕೊಡಲು ಸಜ್ಜಾಗುತ್ತಿದ್ದಾರೆ.
ಬೆಳಗಾವಿಯಲ್ಲಿ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಗೆಲುವಿಗೆ ನೇರವಾಗಿ ರಮೇಶ್ ಮತ್ತು ಬಾಲಚಂದ್ರ ಜಾರಕಿಹೊಳಿಯೇ ಕಾರಣ ಎಂದು ಸಚಿವರೂ ಆಗಿರುವ ಬಿಜೆಪಿಯ ಹಿರಿಯ ನಾಯಕರು ಆರೋಪಿಸುತ್ತಿದ್ದಾರೆ. ಆದರೆ, ಇವರ ಯಾವ ಆಕ್ರೋಶಕ್ಕೂ ಜಗ್ಗದ ಜಾರಕಿಹೊಳಿ ಬ್ರದರ್ಸ್ ಇವರಿಗೆಲ್ಲಾ ಸಡ್ಡು ಹೊಡೆಯುತ್ತಲೇ ಬರುತ್ತಿದ್ದಾರೆ.

ಜಾರಕಿಹೊಳಿ ಬ್ರದರ್ಸ್ ಅನ್ನು ಹೊರಗಿಟ್ಟಿ ಈ ಭಾಗದ ಬಿಜೆಪಿ ನಾಯಕರ ಸಭೆ
ಬಸವರಾಜ ಬೊಮ್ಮಾಯಿ ಸರಕಾರದಲ್ಲಿ ಬೆಳಗಾವಿ ಜಿಲ್ಲೆಯ ಇಬ್ಬರು ಸಚಿವರು (ಉಮೇಶ್ ಕತ್ತಿ, ಶಶಿಕಲಾ ಜೊಲ್ಲೆ), ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸೇರಿ ಹದಿಮೂರು ಬಿಜೆಪಿ ಶಾಸಕರಿದ್ದಾರೆ. ಆದರೂ, ಬಿಜೆಪಿ ಅಭ್ಯರ್ಥಿ ವಿಧಾನ ಪರಿಷತ್ ಚುನಾವಣೆಯಲ್ಲಿ ಸೋಲುಂಡಿದ್ದರು. ಬಿಜೆಪಿ ಸೋಲಿಗೆ ಜಾರಕಿಹೊಳಿ ಬ್ರದರ್ಸ್ ಕಾರಣ ಎಂದು ಸಚಿವ ಉಮೇಶ್ ಕತ್ತಿ, ಶಶಿಕಲಾ ಜೊಲ್ಲೆ ಆರೋಪಿಸಿದ್ದಾರೆ. ಕೆಲವು ದಿನಗಳ ಹಿಂದೆ, ಜಾರಕಿಹೊಳಿ ಬ್ರದರ್ಸ್ ಅನ್ನು ಹೊರಗಿಟ್ಟು ಈ ಭಾಗದ ಬಿಜೆಪಿ ನಾಯಕರು ಸಭೆಯನ್ನೂ ನಡೆಸಿದ್ದರು.

ನಿಯೋಗದೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಕತ್ತಿ ಮತ್ತು ಇತರರು ಭೇಟಿ
ಶನಿವಾರ (ಜ 29) ನಿಯೋಗದೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಕತ್ತಿ ಮತ್ತು ಇತರರು ಭೇಟಿಯಾಗಿದ್ದಾರೆ. ಈ ನಿಯೋಗದಲ್ಲಿ ಶಶಿಕಲಾ ಜೊಲ್ಲೆ, ಲಕ್ಷ್ಮಣ ಸವದಿ, ಮಹಾಂತೇಶ್ ಕವಟಗಿಮಠ, ಅಭಯ್ ಪಾಟೀಲ್, ಅನಿಲ್ ಬೆನಕೆ ಮುಂತಾದವರು ಇದ್ದರು. ಬೆಳಗಾವಿ ಜಿಲ್ಲೆಗೆ ಬಜೆಟಿನಲ್ಲಿ ಹೆಚ್ಚಿನ ಅನುದಾನ ನೀಡಬೇಕು ಎನ್ನುವ ವಿಚಾರ ಕೇವಲ ಮೇಲ್ನೋಟಕ್ಕಾಗಿದ್ದು, ಅಸಲಿ ವಿಚಾರ ಜಾರಕಿಹೊಳಿ ಬ್ರದರ್ಸ್ ವಿರುದ್ದ ದೂರು ನೀಡಲು ಎನ್ನುವುದು ಗೌಪ್ಯವಾಗಿಯೇನೂ ಉಳಿದಿಲ್ಲ.

ರಮೇಶ್ ಜಾರಕಿಹೊಳಿ ವಿಶೇಷ ಪರಿಶ್ರಮದಿಂದ ಬಿಜೆಪಿ ಸರಕಾರ ಅಧಿಕಾರಕ್ಕೆ
ಬೆಳಗಾವಿಯಲ್ಲಿ ಈಗ ಉಮೇಶ್ ಕತ್ತಿ ಮತ್ತು ರಮೇಶ್ ಜಾರಕಿಹೊಳಿ ಬಣ ಎಂದು ಇಬ್ಬಾಗವಾಗಿದ್ದು, ತಮ್ಮನ್ನು ಬಿಟ್ಟು ಸಭೆ ನಡೆಸಿದ ಕತ್ತಿಯವರನ್ನು ಬಾಲಚಂದ್ರ ಜಾರಕಿಹೊಳಿ ಲೇವಡಿ ಮಾಡಿದ್ದಾರೆ. "ನನ್ನ ಅಣ್ಣನ (ರಮೇಶ್ ಜಾರಕಿಹೊಳಿ) ವಿಶೇಷ ಪರಿಶ್ರಮದಿಂದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿದ್ದು, ಇವರೆಲ್ಲಾ ಸಚಿವ ಸ್ಥಾನವನ್ನು ಅನುಭವಿಸುತ್ತಿರುವುದು ಎನ್ನುವ ಅರಿವಿರಲಿ" ಎಂದು ಬಾಲಚಂದ್ರ ಜಾರಕಿಹೊಳಿ ಹೇಳುವ ಮೂಲಕ, ಜಾರಕಿಹೊಳಿ ಕ್ಯಾಂಪಿನಿಂದ ಸಂದೇಶ ರವಾನಿಸಿದ್ದಾರೆ.

ಬೆಳಗಾವಿ ಬಿಜೆಪಿಯಲ್ಲಿ ಬಣ ರಾಜಕೀಯ
"ಪಕ್ಷದ ವರಿಷ್ಠರು ಒಪ್ಪಿದರೆ ಇನ್ನಂದಷ್ಟು ಶಾಸಕರನ್ನು ಬಿಜೆಪಿಗೆ ಕರೆತರುತ್ತೇನೆ, ಆ ಶಕ್ತಿ ನನ್ನಲ್ಲಿದೆ. ಬೆಳಗಾವಿ ಬಿಜೆಪಿಯಲ್ಲಿ ಏನೂ ಭಿನ್ನಾಭಿಪ್ರಾಯವಿಲ್ಲ, ಆ ರೀತಿ ಏನಾದರೂ ಇದ್ದರೆ ಹೈಕಮಾಂಡಿನವರು ಸರಿ ಮಾಡುತ್ತಾರೆ"ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ. "ಬೇರೆ ಪಕ್ಷದವರನ್ನು ಬಿಜೆಪಿಗೆ ಕರೆತರುವ ವಿಚಾರವನ್ನು ರಮೇಶ್ ಜಾರಕಿಹೊಳಿಯವರಲ್ಲೇ ಕೇಳಬೇಕು. ಆ ರೀತಿಯ ಚರ್ಚೆಯೂ ನಡೆಯುತ್ತಿಲ್ಲ. ನಾನು ರಮೇಶ್ ರೀತಿ ಬೇಜವಾಬ್ದಾರಿಯಿಂದ ಹೇಳಿಕೆ ನೀಡಲು ಬರುವುದಿಲ್ಲ"ಎಂದು ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿದ್ದರು. ಒಟ್ಟಿನಲ್ಲಿ, ಬೆಳಗಾವಿ ಬಿಜೆಪಿಯಲ್ಲಿ ಅಪಸ್ವರ ಜೋರಾಗಿದ್ದು, ರಮೇಶ್ ಮತ್ತು ಬಾಲಚಂದ್ರ ಜಾರಕಿಹೊಳಿ ಕಾಂಗ್ರೆಸ್ಸಿಗೆ ಸೇರುವ ಚಿಂತನೆ ನಡೆಸುತ್ತಿದ್ದಾರೆ ಎನ್ನುವ ಮಾತೂ ಕೇಳಿ ಬರುತ್ತಿದೆ.












Click it and Unblock the Notifications