ಕಾಲ್ನಡಿಗೆಯಲ್ಲೇ ಕಾಶ್ಮೀರಕ್ಕೆ ಹೊರಟ ಬಂಟ್ವಾಳದ ಹುಡುಗರು!
ಜೀವನದಲ್ಲಿ ಒಮ್ಮೆಯಾದರೂ ದೇಶ ಸುತ್ತಬೇಕು ಅನ್ನೋದು ಬಹುಪಾಲು ಯುವ ಜನರ ಬಯಕೆ. ಬೈಕರ್ಗಳಿಗೆ ಲಡಾಕ್ ಕನಸಿನ ತಾಣವಾದರೆ ಚಾರಣಿಗರಿಗೆ ಹಿಮಾಲಯ ಸಾಧನೆಯ ಗುರಿ. ಆದರೆ ಕಡಿಮೆ ಖರ್ಚಿನಲ್ಲಿ ಇದೆನ್ನೆಲ್ಲಾ ಮಾಡೋಕೆ ಸಾಧ್ಯ ಇಲ್ಲ ಅಂತ ಹಲವರು ತಮ್ಮ ಕನಸನ್ನೇ ಕೈ ಬಿಡುತ್ತಾರೆ.
ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ಸಾಹಸಿಗರು ಮಾತ್ರ ಕಾಲ್ನಡಿಗೆಯಲ್ಲೇ ಕಾಶ್ಮೀರ ತಲುಪುವ ಸಾಹಸಕ್ಕೆ ಮುಂದಾಗಿದ್ದಾರೆ. ಸುಮಾರು 2800 ಕಿ.ಮೀ ದೂರವನ್ನು ಕಾಲ್ನಡಿಗೆಯಲ್ಲೇ ಸಾಗಿ, ದಾರಿಯಲ್ಲಿ ಸಿಗುವ ಐತಿಹಾಸಿಕ ಸ್ಥಳಗಳ ಅದ್ಯಯನ ಮಾಡಲು ಮುಂದಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಜೀರು ಗ್ರಾಮದ ಮೆಹತಾಬ್ (21) ಮತ್ತು ಬಿಲಾಲ್ (18) ಎಂಬುವವರೇ ಕಾಶ್ಮೀರಕ್ಕೆ ಕಾಲ್ನಡಿಗೆಯಲ್ಲಿ ಹೊರಟವರು. ಆಗಸ್ಟ್ 16ರಂದು ಪಜೀರು ಗ್ರಾಮದ ತಮ್ಮ ಮನೆಯಿಂದ ಪಾದಯಾತ್ರೆಯನ್ನು ಈ ಯುವಕರು ಆರಂಭಿಸಿದ್ದಾರೆ.

ಮೆಹತಾಬ್ ಮತ್ತು ಬಿಲಾಲ್ ಸಹೋದರ ಸಂಬಂಧಿಯಾಗಿದ್ದು, ಜಂಟಿಯಾಗಿ ಈ ಸಾಧನೆ ಮಾಡಲು ಮುಂದಾಗಿದ್ದಾರೆ. ಮೆಹತಾಬ್ ಪ್ರಥಮ ಪಿಯುಸಿವರೆಗೆ ವ್ಯಾಸಂಗ ಮಾಡಿದ್ದು, ಬಂಟ್ವಾಳದ ಸೂಪರ್ ಮಾರ್ಕೆಟ್ ನಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಜೊತೆಗೆ ಉನ್ನತ ಶಿಕ್ಷಣ ಮಾಡುವ ಗುರಿಯನ್ನೂ ಮೆಹತಾಬ್ ಹೊಂದಿದ್ದಾರೆ.
ಕಡಿಮೆ ಖರ್ಚಿನಲ್ಲಿ ದೊಡ್ಡ ಹಾದಿ ತುಳಿದ ಯುವಕರು
ಲಾಕ್ ಡೌನ್ ವೇಳೆ ಮನೆಯಲ್ಲೇ ಇದ್ದ ಮೆಹತಾಬ್ ಈ ಬಗ್ಗೆ ಯೋಚನೆ ಮಾಡಿದ್ದರು. ದೊಡ್ಡ ಖರ್ಚು ಭರಿಸಿ ಸಾಧನೆ ಮಾಡುವಷ್ಟು ಆರ್ಥಿಕವಾಗಿ ಸಶಕ್ತರಾಗದ ಕಾರಣ, ಕಡಿಮೆ ಖರ್ಚಿನಲ್ಲಿ ಮಹತ್ತರ ಸಾಧನೆ ಮಾಡುವ ನಿರ್ಧಾರ ಕೈಗೊಂಡರು.
ಅದಕ್ಕಾಗಿ ಮೆಹತಾಬ್ ಕೈಗೊಂಡ ಉಪಾಯ ಕಾಲ್ನಡಿಗೆ. ಕಾಲ್ನಡಿಗೆಯಲ್ಲಿ ಕಾಶ್ಮೀರಕ್ಕೆ ಹೋಗಬೇಕೆಂದು ಗುರಿ ಕೈಗೊಂಡ ಮೆಹತಾಬ್ಗೆ ಸಹೋದರ ಸಂಬಂಧಿ ಬಿಲಾಲ್ ಕೂಡ ಸಾಥ್ ನೀಡಿದ್ದಾರೆ. ಇಬ್ಬರು ಜಂಟಿಯಾಗಿ ಸುಮಾರು ನಾಲ್ಕು ತಿಂಗಳುಗಳ ಕಾಲ ಯೋಜನೆ ಹಾಕಿದ್ದಾರೆ. ಕಾಲ್ನಡಿಗೆಯಲ್ಲಿ ಕಾಶ್ನೀರಕ್ಕೆ ಹೋಗಲು ದಿನ, ಸಮಯ, ಖರ್ಚು, ವಿಶ್ರಾಂತಿ ಎದುರಾಗುವ ಸವಾಲುಗಳ ಬಗ್ಗೆ ಪೂರ್ವ ನಿಯೋಜನೆ ಮಾಡಿದ್ದಾರೆ.
2800 ಕಿಲೋ ಮೀಟರ್ಗಳ ಕಾಲ್ನಡಿಗೆ
ಬಿಲಾಲ್ ಮತ್ತು ಮೆಹತಾಬ್ ಯೋಜನೆ ಹಾಕಿಕೊಂಡಂತೆ, ಬಂಟ್ವಾಳದ ಪಜೀರು ಗ್ರಾಮದಿಂದ ಕಾಶ್ಮೀರಕ್ಕೆ ಸುಮಾರು 2800 ಕಿಲೋ ಮೀಟರ್ಗಳ ಕಾಲ್ನಡಿಗೆ ಯಾತ್ರೆ ಆರಂಭಿಸಿದ್ದಾರೆ. ಇದಕ್ಕಾಗಿ ಸುಮಾರು 90 ದಿನಗಳು ಬೇಕಾಗಿದ್ದು, ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ಪ್ರತಿದಿನ 50 ರಿಂದ70 ಕಿ.ಮೀ. ಕ್ರಮಿಸುವ ನಿರ್ಧಾರವನ್ನು ಈ ಸಹೋದದರು ಕೈಗೊಂಡಿದ್ದಾರೆ. ಪಾದಯತ್ರೆ ವೇಳೆ
ದಾರಿಯಲ್ಲಿ ಸಿಗುವ ಐತಿಹಾಸಿಕ ಸ್ಥಳಗಳಿಗೆ ತೆರಳಿ ಅಧ್ಯಯನ ಮಾಡುವ ಯೋಚನೆ ಕೂಡ ಮೆಹತಾಬ್ ಮತ್ತು ಬಿಲಾಲ್ಗೆ ಇದೆ. ದಾರಿಯಲ್ಲಿ ಸಿಗುವ ಮಂದಿರ, ಮಸೀದಿ ಮತ್ತು ಚರ್ಚ್ ಗಳಿಗೆ ಭೇಟಿ ನೀಡಿ ಅಲ್ಲಿನ ವಿಶೇಷತೆಗಳ ಬಗ್ಗೆ ತಮ್ಮದೇ ಯೂಟ್ಯೂಬ್ ಚಾನೆಲ್ ನಲ್ಲಿ ಹಾಕಲಿದ್ದಾರೆ.
ಪಾದಯತ್ರೆ ವೇಳೆ ರಾತ್ರಿ ತಂಗಲು ಟೆಂಟ್ ವ್ಯವಸ್ಥೆಯನ್ನೂ ಮೆಹತಾಬ್ ಮತ್ತು ಬಿಲಾಲ್ ಮಾಡಿದ್ದಾರೆ. ಟೆಂಟ್ ವ್ಯವಸ್ಥೆ ಮಾಡಲಾಗದ ಸಂದರ್ಭದಲ್ಲಿ ಪೆಟ್ರೋಲ್ ಪಂಪ್ ಗಳಲ್ಲಿ ವಾಸ್ತವ್ಯ ಮಾಡಿ, ವಿಶ್ರಾಂತಿ ಪಡೆದು ಮುಂಜಾನೆ ಮತ್ತೆ ಪಾದಯತ್ರೆ ಮುಂದುವರಿಸಲಿದ್ದಾರೆ.
35000 ರೂಪಾಯಿ ವೆಚ್ಚದಲ್ಲಿ ಪಾದಯತ್ರೆ
ಒಬ್ಬರಿಗೆ ದಿನಕ್ಕೆ 350 ರೂಪಾಯಿಯಂತೆ 90 ದಿನಗಳಿಗೆ ಒಟ್ಟು 35000 ರೂಪಾಯಿ ವೆಚ್ಚದಲ್ಲಿ ತಮ್ಮ ಪಾದಯತ್ರೆ ಯೋಜನೆ ಮೆಹತಾಬ್ ಮತ್ತು ಬಿಲಾಲ್ ಅವರಲ್ಲಿದೆ. ಇದಕ್ಕಾಗಿ ಇಬ್ಬರೂ ದುಡಿದು ಕೂಡಿಟ್ಟ ಹಣ ಮತ್ತು ಗೆಳೆಯರು ನೀಡಿದ ಧನಸಹಾಯವನ್ನು ಒಟ್ಟುಗೂಡಿಸಿದ್ದಾರೆ.
ಮೆಹತಾಬ್ ಮತ್ತು ಬಿಲಾಲ್ ಸಾಧನೆಗೆ ಮನೆಯವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಇಬ್ಬರ ಕನಸಿಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. 90 ದಿನಗಳ ಕಾಲ ಪಾದಯಾತ್ರೆ ಮಾಡಿ ಕಾಶ್ಮೀರ ತಲುಪುವ ವಿಶ್ವಾಸ ಈ ಯುವಕರಲ್ಲಿದೆ. ಮರಳಿ ಬರುವಾಗ ಮೆಹತಾಬ್ ಮತ್ತು ಬಿಲಾಲ್ ರೈಲು ಮಾರ್ಗವಾಗಿ ಊರು ಸೇರಲಿದ್ದಾರೆ.












Click it and Unblock the Notifications