ಯಾಕೋ ಸಿಎಂ ಬೊಮ್ಮಾಯಿ ಗ್ರಹಗತಿ ಸರಿಯಿಲ್ಲ: ಸತತ 3ನೇ ಚುನಾವಣಾ ಮುಖಭಂಗ
ಅನಿರೀಕ್ಷಿತವಾಗಿ ದಕ್ಕಿದ ಮುಖ್ಯಮಂತ್ರಿ ಹುದ್ದೆಯನ್ನು ಸಂಭಾಳಿಸಿಕೊಂಡು ಹೋಗುವಲ್ಲಿ ಬಸವರಾಜ ಬೊಮ್ಮಾಯಿಗೆ ನೂರೆಂಟು ವಿಘ್ನಗಳು. ಬಿಟ್ ಕಾಯಿನ್, ಗುತ್ತಿಗೆದಾರರ ಕಮಿಷನ್ ಆರೋಪ ಸೇರಿದಂತೆ ಒಂದರ ಮೇಲೊಂದು ತೊಂದರೆಯನ್ನು ಅನುಭವಿಸುತ್ತಲೇ ಇದ್ದಾರೆ.
ಇದೆಲ್ಲಾ ಒಂದು ಕಡೆಯಾದರೆ ಮಂಡಿನೋವು, ಮುಖ್ಯಮಂತ್ರಿ ಬದಲಾವಣೆ ಎನ್ನುವ ಸುದ್ದಿ, ಜೊತೆಗೆ, ಸಚಿವ ಸಂಪುಟದಲ್ಲಿ ಇರುವವರಿಂದಲೇ ಮಾಹಿತಿ ಕೇಂದ್ರದ ವರಿಷ್ಠರಿಗೆ ಸೋರಿಕೆಯಾಗುತ್ತಿರುವುದು ಇನ್ನೊಂದು ಕಡೆ.
ಗುಜರಾತ್, ಮಧ್ಯಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರದಲ್ಲಿದೆ. ಇದುವರೆಗಿನ ಸಮೀಕ್ಷಾ ವರದಿಗಳನ್ನು ನೋಡಿದಾಗ, ಉತ್ತರ ಪ್ರದೇಶದಲ್ಲೂ ಪಕ್ಷ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ. ಆದರೆ, ಇದೇ ಖಚಿತ ವಿಶ್ವಾಸದ ಮಾತನ್ನು ಬೊಮ್ಮಾಯಿಯವರಾಗಲಿ, ವರಿಷ್ಠರು ಹೇಳುವಂತಹ ಪರಿಸ್ಥಿತಿ ಕರ್ನಾಟಕದಲ್ಲಿಲ್ಲ.
ಇನ್ನೂ ಕಾಲಾವಕಾಶವಿದೆ, ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿ, ಜನರ ವಿಶ್ವಾಸವನ್ನು ಗಳಿಸೋಣ ಎಂದರೆ, ಮುಖ್ಯಮಂತ್ರಿ ಬೊಮ್ಮಾಯಿಯವರಿಗೆ ಎದುರಾಗಿರುವ ಸಾಲುಸಾಲು ಚುನಾವಣಾ ಸೋಲುಗಳು. ಇದು ಪಕ್ಷದ ವರ್ಚಸ್ಸಿಗೂ ಹಾನಿಯಾಗುತ್ತಿರುವುದು ಸ್ಪಷ್ಟ, ಜೊತೆಗೆ, ಬೊಮ್ಮಾಯಿಯವರ ಸ್ಥಾನಮಾನಕ್ಕೂ ಕಂಟಕ ತರುವ ಸಾಧ್ಯತೆಯೂ ಇಲ್ಲದಿಲ್ಲ.

ಹಾನಗಲ್ ಮತ್ತು ಸಿಂಧಗಿ ಕ್ಷೇತ್ರದ ಉಪ ಚುನಾವಣೆ
ಹಾನಗಲ್ ಮತ್ತು ಸಿಂಧಗಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಒಂದರಲ್ಲಿ ಗೆದ್ದು, ಇನ್ನೊಂದರಲ್ಲಿ ಸೋತಿತ್ತು. ಹಾನಗಲ್ ಕ್ಷೇತ್ರ ಮುಖ್ಯಮಂತ್ರಿ ಬೊಮ್ಮಾಯಿ ಪ್ರತಿನಿಧಿಸುವ ಹಾವೇರಿ ಜಿಲ್ಲಾ ವ್ಯಾಪ್ತಿಗೆ ಬರುವಂತದ್ದು. ಸಿಂಧಗಿ ಸೋತು, ಹಾನಗಲ್ ಉಳಿಸಿಕೊಂಡಿದ್ದರೂ ಬೊಮ್ಮಾಯಿ ವರ್ಚಸ್ಸಿಗೆ ಅಷ್ಟೇನೂ ಧಕ್ಕೆ ಬರುತ್ತಿರಲಿಲ್ಲ. ಆದರೆ, ಸ್ವಕ್ಷೇತ್ರದ ಮತ್ತು ಮುಖ್ಯಮಂತ್ರಿಯಾಗಿದ್ದರೂ ಹಾನಗಲ್ ಉಳಿಸಿಕೊಳ್ಳಲಾಗದೇ ಇದ್ದದ್ದು ಬೊಮ್ಮಾಯಿಯವರಿಗೆ ಆದ ಮೊದಲ ಹಿನ್ನಡೆ.

25 ಕ್ಷೇತ್ರಗಳಿಗೆ ನಡೆದ ವಿಧಾನ ಪರಿಷತ್ ಚುನಾವಣೆ
ಇನ್ನೊಂದು, 25 ಕ್ಷೇತ್ರಗಳಿಗೆ ನಡೆದ ವಿಧಾನ ಪರಿಷತ್ ಚುನಾವಣೆ. ಆಡಳಿತ ಯಂತ್ರ ಕೈಯಲ್ಲಿದ್ದರೂ ಬಿಜೆಪಿಗೆ ನಿರೀಕ್ಷಿತ ಸ್ಥಾನ ದಕ್ಕಲಿಲ್ಲ. ಅದರಲ್ಲೂ, ಬೆಳಗಾವಿ ದ್ವಿಸದಸ್ಯತ್ವದ ಕ್ಷೇತ್ರವಾಗಿದ್ದರೂ, ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲಾಗಲಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಪ್ರಾಬಲ್ಯವಿದ್ದರೂ, ಮೂವರು ಸಚಿವರಿದ್ದರೂ ಪಕ್ಷದ ಅಭ್ಯರ್ಥಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು. ಪಕ್ಷದಲ್ಲೇ ಇದ್ದು, ಪಕ್ಷ ವಿರೋಧಿ ಕೆಲಸವನ್ನು ಮಾಡಿ, ಸಹೋದರ ಲಖನ್ ಜಾರಕಿಹೊಳಿಯನ್ನು ಗೆಲ್ಲಿಸುವಲ್ಲಿ ರಮೇಶ್ ಜಾರಕಿಹೊಳಿ ಯಶಸ್ವಿಯಾದರು. ಇದು, ಸಿಎಂ ಬೊಮ್ಮಾಯಿಗೆ ಆದ ಇನ್ನೊಂದು ಚುನಾವಣಾ ಮುಖಭಂಗ.

ಕಾಂಗ್ರೆಸ್ ಪರವಾಗಿದೆ ಎಂಬುದಕ್ಕೆ ಇದು ನಿದರ್ಶನ, ಡಿ.ಕೆ. ಶಿವಕುಮಾರ್
ಈಗ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಬೊಮ್ಮಾಯಿವರಿಗೆ ಹಿನ್ನಡೆಯಾಗುವ ಫಲಿತಾಂಶಗಳು ಹೊರಬೀಳುತ್ತಿವೆ. ಸಿಎಂ ತವರು ಜಿಲ್ಲೆಯಲ್ಲೇ ಬಿಜೆಪಿ ಹೀನಾಯ ಪ್ರದರ್ಶನವನ್ನು ನೀಡಿದೆ. ಹಾವೇರಿಯ ಗುತ್ತಲ ಪಟ್ಟಣ ಪಂಚಾಯತಿ ಕಾಂಗ್ರೆಸ್ ಪಕ್ಷದ ಪಾಲಾಗಿದೆ. ಬಂಕಾಪುರದಲ್ಲೂ ಪಕ್ಷಕ್ಕೆ ವ್ಯತಿರಿಕ್ತವಾದ ಫಲಿತಾಂಶ ಹೊರಬಿದ್ದಿದ್ದು, ಅದು ಕೂಡಾ ಕಾಂಗ್ರೆಸ್ ಪಾಲಾಗಿದೆ. ಗುತ್ತಲದಲ್ಲಿ ಕಾಂಗ್ರೆಸ್ ಹನ್ನೊಂದು, ಬಿಜೆಪಿ ಆರು ವಾರ್ಡಿನಲ್ಲಿ ಮಾತ್ರ ಗೆಲ್ಲಲು ಸಾಧ್ಯವಾಗಿದೆ. "ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಇದರ ಮಧ್ಯೆಯೂ ಜನ ಕಾಂಗ್ರೆಸ್ ಪರವಾಗಿ ಹೆಚ್ಚಿನ ಸ್ಥಾನಗಳನ್ನು ನೀಡಿದ್ದಾರೆ ಎಂದರೆ ರಾಜ್ಯದ ಜನರ ಭಾವನೆ ಕಾಂಗ್ರೆಸ್ ಪರವಾಗಿದೆ ಎಂಬುದಕ್ಕೆ ಇದು ನಿದರ್ಶನವಾಗಿದೆ" ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಸತತವಾಗಿ ಬೊಮ್ಮಾಯಿ ಚುನಾವಣಾ ಮುಖಭಂಗ ಎದುರಿಸುವಂತಾಗಿದೆ
ಬೊಮ್ಮಾಯಿ ಪ್ರತಿನಿಧಿಸುವ ಶಿಗ್ಗಾಂವ್ ತಾಲೂಕು ವ್ಯಾಪ್ತಿಗೆ ಬರುವ ಬಂಕಾಪುರ ಪುರಸಭೆಯಲ್ಲಿ ಕಾಂಗ್ರೆಸ್ ಹದಿನಾಲ್ಕು ಮತ್ತು ಬಿಜೆಪಿ ಏಳರಲ್ಲಿ ಗೆದ್ದಿದೆ. ನಮ್ಮ ಜಿಲ್ಲೆಯ ಮುಖ್ಯಮಂತ್ರಿ ಎನ್ನುವುದಕ್ಕೂ ಅಲ್ಲಿನ ಜನರು ಬೆಲೆಕೊಟ್ಟಿಲ್ಲ ಎನ್ನುವುದು ಸಾಬೀತಾಗಿದೆ. ಈ ಫಲಿತಾಂಶ ಮೇಕೆದಾಟು ಪಾದಯಾತ್ರೆಗೆ ಹೊರಡಲು ಸಿದ್ದರಾಗಿರುವ ಕಾಂಗ್ರೆಸ್ಸಿಗೆ ಇನ್ನಷ್ಟು ಬಲ ನೀಡಿದೆ. ಸಾಮಾನ್ಯವಾಗಿ ಅಧಿಕಾರದಲ್ಲಿರುವ ಪಕ್ಷಗಳು ಸೋಲು ಅನುಭವಿಸುವುದು ಕಮ್ಮಿ, ಆದರೆ ಮುಖ್ಯಮಂತ್ರಿ ಬೊಮ್ಮಾಯಿಯವರ ವಿಚಾರದಲ್ಲಿ ಇದು ಸುಳ್ಳಾಗಿದೆ. ಹಾಗಾಗಿ, ಸತತವಾಗಿ ಬೊಮ್ಮಾಯಿ ಚುನಾವಣಾ ಮುಖಭಂಗ ಎದುರಿಸುವಂತಾಗಿದೆ.












Click it and Unblock the Notifications