ವಿಧಾನಸಭೆ ಕಲಾಪ; ಶೂನ್ಯ ವೇಳೆ, ನಿಲುವಳಿ ಸೂಚನೆ ಎಂದರೇನು?
ಕರ್ನಾಟಕದ ವಿಧಾನಸಭೆಯ ಬಜೆಟ್ ಅಧಿವೇಶನ ಆರಂಭವಾಗಿದೆ. ರಾಜ್ಯಪಾಲರು ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಜುಲೈ 3 ರಿಂದ 14ರ ತನಕ ವಿಧಾನಸಭೆ ಮತ್ತು ವಿಧಾನ ಪರಿಷತ್ ಕಲಾಪ ನಡೆಯಲಿದೆ. ವಿಧಾನಸಭೆ ಕಲಾಪವನ್ನು ಸ್ಪೀಕರ್ ಯು. ಟಿ. ಖಾದರ್ ನಡೆಸಿ ಕೊಡಲಿದ್ದಾರೆ.
ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಜುಲೈ 7ರಂದು ಬಜೆಟ್ ಮಂಡನೆ ಮಾಡಲಿದ್ದಾರೆ. ವಿಧಾನಸಭೆ ಕಲಾಪದಲ್ಲಿ ಶೂನ್ಯ ವೇಳೆ, ನಿಲುವಳಿ ಸೂಚನೆ, ನಿಯಮ 59, ಗಮನ ಸೆಳೆಯುವ ಸೂಚನೆ ಮುಂತಾದ ಪದಗಳನ್ನು ಬಳಕೆ ಮಾಡಲಾಗುತ್ತದೆ.

ಪ್ರತಿ ಬಾರಿಯ ಕಲಾಪದಲ್ಲಿಯೂ ಜನರು ಆಯ್ಕೆ ಮಾಡಿ ಕಳಿಸಿರುವ ತಮ್ಮ ಪ್ರತಿನಿಧಿಗಳು ಕಲಾಪದಲ್ಲಿ ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ವಿವಿಧ ನಿಯಮಗಳಡಿ ಪ್ರಶ್ನೆಯನ್ನು ಕೇಳಬೇಕು. ಸರ್ಕಾರದ ಪ್ರತಿನಿಧಿಗಳು ಉತ್ತರ ಕೊಟ್ಟಾಗ ನಡೆಯುವ ಚರ್ಚೆಯಲ್ಲಿ ಪಾಲ್ಗೊಳ್ಳಬೇಕಿದೆ.
ವಿಧಾನಸಭೆ ಮತ್ತು ವಿಧಾನ ಪರಿಷತ್ ಕಲಾಪದಲ್ಲಿ ಬಳಕೆ ಮಾಡುವ ಶೂನ್ಯ ವೇಳೆ, ನಿಲುವಳಿ ಸೂಚನೆ, ನಿಯಮ 59, ಗಮನ ಸೆಳೆಯುವ ಸೂಚನೆ ಮುಂತಾದ ನಿಯಮಗಳೇನು?, ಹೇಗೆ ಚರ್ಚಿಸಬೇಕು? ಎಂಬ ವಿವರಣೆ ಇಲ್ಲಿದೆ ನೋಡಿ.
* ನಿಯಮ 59; ನಿಯಮ 59 ಎಂದರೆ ಶಾಸಕರ ಪ್ರಶ್ನೆಗಳಿಗೆ ಸದನದಲ್ಲಿ ಉತ್ತರಿಸಿದ ಅಥವಾ ಮಂಡನೆ ಮಾಡಿದ ಉತ್ತರಗಳಿಂದ ಉದ್ಭವಿಸಿದ ವಿಷಯಗಳನ್ನು ಚರ್ಚಿಸುವ ಸಲುವಾಗಿ ಅಥವಾ ಉತ್ತರಗಳ ಸಂಬಂಧ ಮತ್ತಷ್ಟು ವಿವರಣೆಯನ್ನು ಸರ್ಕಾರದಿಂದ ಅಪೇಕ್ಷೆಪಡುವ ಸಲುವಾಗಿ, ಮಾನ್ಯ ಶಾಸಕರು ಅರ್ಧ ಗಂಟೆ ಕಾಲಾವಧಿ ಚರ್ಚೆಯ ಸೂಚನೆಗಳನ್ನು ನೀಡಲು ಅವಕಾಶವಿರುತ್ತದೆ.
ಈ ಸೂಚನೆಗಳ ಮೇಲೆ, ವಾರದಲ್ಲಿ ಎರಡು ದಿನ (ಮಂಗಳವಾರ ಮತ್ತು ಗುರುವಾರ) ಚರ್ಚೆ ನಡೆಸಲು ಅನುಮತಿಸಲಾಗುತ್ತದೆ. ಅರ್ಧ ಗಂಟೆ ಕಾಲಾವಧಿಯ ಸೂಚನಾ ಪತ್ರವನ್ನು ಮೂರು ದಿನ ಮುಂಚಿತವಾಗಿಯೇ ವಿಧಾನಸಭೆಯ ಕಾರ್ಯದರ್ಶಿಯವರಿಗೆ ಈ ಕುರಿತು ನೀಡತಕ್ಕದ್ದು.
* ಶೂನ್ಯ ವೇಳೆ (ನಿಯಮ 59ಎ, ಬಿ, ಸಿ ಮತ್ತು ಡಿ). ಅಧಿವೇಶನದ ಅವಧಿಯಲ್ಲಿ ನಿಗದಿಪಡಿಸಿದ ಪ್ರತಿ ದಿನಗಳಲ್ಲಿ, ಕಲಾಪ ಮುಕ್ತಾಯಗೊಂಡ ಅವಧಿಯಿಂದ, ಮರುದಿನದ ಕಲಾಪ ಪ್ರಾರಂಭಗೊಳ್ಳುವ ನಡುವಿನ ಅವಧಿಯಲ್ಲಿ ಸಂಭವಿಸಿದ ಸಾರ್ವಜನಿಕ ಮಹತ್ವವುಳ್ಳ ಯಾವುದೇ ಘಟನಾವಳಿಯನ್ನು ಸರ್ಕಾರದ ಗಮನಕ್ಕೆ ತರುವ ಸಲುವಾಗಿ, ಶೂನ್ಯ ವೇಳೆಯ ಸೂಚನೆಗಳನ್ನು ನೀಡಲು ಶಾಸಕರಿಗೆ ಅವಕಾಶವಿರುತ್ತದೆ. ಒಂದು ದಿನಕ್ಕೆ ಒಂದು ಶೂನ್ಯ ವೇಳೆಯ ಸೂಚನೆಯನ್ನು ಮಾತ್ರ ನೀಡಲು ಅವಕಾಶವಿದೆ.
* ನಿಲುವಳಿ ಸೂಚನೆ (ನಿಯಮ 60). ಭಾರತ ಸಂವಿಧಾನದ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಸರ್ಕಾರ ವಿಫಲವಾದ ನಿರ್ದಿಷ್ಟ ವಿಷಯ, ಸಾರ್ವಜನಿಕವಾಗಿ ಅತ್ಯಂತ ಮಹತ್ವವಾದ ಮತ್ತು ಜರೂರಾದ ವಿಷಯಗಳನ್ನು ನಿಲುವಳಿ ಸೂಚನೆಯ ರೂಪದಲ್ಲಿ (ಪ್ರಶೋತ್ತರ, ಶೂನ್ಯ ವೇಳೆ ಮತ್ತು ಕಾಗದ ಪತ್ರಗಳ ಮಂಡನೆಯ ತರುವಾಯ) ಪ್ರಸ್ತಾಪ ಮಾಡಲು ಮಾನ್ಯ ಶಾಸಕರಿಗೆ ಅವಕಾಶವಿರುತ್ತದೆ.
* ನಿಯಮ 69ರ ಸೂಚನೆಗಳು. ಇತ್ತೀಚೆಗೆ ಜರುಗಿದ ಸಾರ್ವಜನಿಕ ಮಹತ್ವವುಳ್ಳ ವಿಷಯಗಳನ್ನು ಸದನದಲ್ಲಿ ಪ್ರಸ್ತಾಪಿಸುವ ಸಲುವಾಗಿ ಈ ನಿಯಮದಡಿ ಮಾನ್ಯ ಶಾಸಕರು ಸೂಚನೆಗಳನ್ನು ನೀಡಬಹುದಾಗಿರುತ್ತದೆ.
* ಗಮನ ಸೆಳೆಯುವ ಸೂಚನೆಗಳು (ನಿಯಮ 73). ಯಾವುದೇ ಸಾರ್ವಜನಿಕ ಹಿತದೃಷ್ಟಿಯ ಮಹತ್ವದ ವಿಷಯಗಳನ್ನು ಮಾನ್ಯ ಸಚಿವರ ಗಮನಕ್ಕೆ ತರಲಿಚ್ಛಿಸುವ ಸಲುವಾಗಿ ಮಾನ್ಯ ಶಾಸಕರು ಸೂಚನೆಗಳನ್ನು ನೀಡಲು ಅವಕಾಶವಿರುತ್ತದೆ.
* ಖಾಸಗಿ ಸದಸ್ಯರ ಕಾರ್ಯಕಲಾಪಗಳು. ಖಾಸಗಿ ಸದಸ್ಯರ ವಿಧೇಯಕಗಳನ್ನು ನಿಯಮ 75(1) ಮತ್ತು (2)ರಡಿ ಮಾನ್ಯ ಸದಸ್ಯರು ಸದನದಲ್ಲಿ ಮಂಡಿಸಲು ಅವಕಾಶವಿರುತ್ತದೆ. ನಿಯಮ 32ರಡಿ ಸಾರ್ವಜನಿಕ ಹಿತದೃಷ್ಟಿಯ ಖಾಸಗಿ ಸದಸ್ಯರ ನಿರ್ಣಯವನ್ನು ಸದನದಲ್ಲಿ ಮಂಡಿಸಲು ಅವಕಾಶವಿರುತ್ತದೆ.












Click it and Unblock the Notifications