ಸಿದ್ದು, ಡಿಕೆಶಿಯನ್ನು ಕಾಂಗ್ರೆಸ್ ನಿಂದ ಹೊರತರಲು ಬಿಜೆಪಿ ಸ್ಕೆಚ್?
Recommended Video
ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಜುಟ್ಟು ಹಿಡಿದು ಅಲ್ಲಾಡಿಸುತ್ತಿರುವ ಸಿಬಿಐನ ಪರಿ ಗಮನಿಸಿದರೆ ಭಾರತವು ಕಾಂಗ್ರೆಸ್ ಮುಕ್ತ ಅಲ್ಲ, ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ನಾಯಕರಿಂದ ಮುಕ್ತವಾಗಿ ಬಿಡುತ್ತದಾ ಎಂಬ ಅನುಮಾನ ಮೂಡುವಂತಿದೆ. ಒಂದು ಕಡೆ ಸಿದ್ದರಾಮಯ್ಯ ಅವರ ಮೇಲೆ ಸಾಫ್ಟ್ ಕಾರ್ನರ್, ಇನ್ನೊಂದು ಕಡೆ ದೇವೇಗೌಡರು- ಕುಮಾರಸ್ವಾಮಿ ಮೇಲೆ ವಾಗ್ದಾಳಿ ನಡೆಸುತ್ತಿದೆ ಬಿಜೆಪಿ.
ಕಾಂಗ್ರೆಸ್ ಪಾಲಿಗೆ ಮಾಸ್ ಲೀಡರ್ ಎಂದು ಕರ್ನಾಟಕದಲ್ಲಿ ಇದ್ದರೆ ಸದ್ಯದ ಮಟ್ಟಿಗೆ ಬೆರಳೆಣಿಕೆಯಷ್ಟು ಮಾತ್ರ. ಅದರಲ್ಲೂ ಸಿದ್ದರಾಮಯ್ಯ ಮಾತ್ರ ಇಡೀ ರಾಜ್ಯದಲ್ಲಿ ಸಲ್ಲುವಂಥ ನಾಯಕ. ಅವರನ್ನು ಪಕ್ಷದಿಂದ ಹೊರಬರುವಂತೆ ನೋಡಿಕೊಂಡರೆ ಕಾಂಗ್ರೆಸ್ ಕುತ್ತಿಗೆ ಮೇಲೆ ಕೈ ಹಾಕಿದಂತೆಯೇ. ಇನ್ನು ಪಕ್ಷದ ಮುಂಚೂಣಿ ಸೇನಾಧಿಪತಿ ಡಿ.ಕೆ.ಶಿವಕುಮಾರ್ ಬಲ ಕುಂದುವಂತೆ ಮಾಡಿದರೆ ಅಲ್ಲಿಗೆ ಕೈ ಪಕ್ಷ ನೆಲ ಕಚ್ಚುತ್ತದೆ.
ಡಿ.ಕೆ ಶಿವಕುಮಾರ್ಗೆ ಆಮಿಷವೊಡ್ಡಿದ್ದ ಅಮಿತ್ ಶಾ: ಸ್ಫೋಟಕ ಮಾಹಿತಿ
ಆ ನಂತರ ಜೆಡಿಎಸ್ ನ ಮುಗಿಸಿ ಹಾಕುವುದು ದೊಡ್ಡ ವಿಚಾರ ಏನಲ್ಲ ಎಂಬ ರಣತಂತ್ರ ಹಾಕಿಕೊಂಡಂತಿದೆ ಬಿಜೆಪಿ. ಆದರೆ ಮೊದಲಿಗೆ ಜೆಡಿಎಸ್ ಪಕ್ಷವನ್ನೇ ಮುಗಿಸಿ ಹಾಕಲು ನಿರ್ಧರಿಸಿದಂತಿದೆ ಬಿಜೆಪಿ. ಏಕೆಂದರೆ ವಿಧಾನಸೌಧದಲ್ಲಿ ಸ್ವತಃ ಯಡಿಯೂರಪ್ಪ ಇದನ್ನು ಹೇಳಿಕೊಂಡರು: ನಮ್ಮ ಗುರಿ ಕಾಂಗ್ರೆಸ್ ಅಲ್ಲ, ಜೆಡಿಎಸ್ ಹಾಗೂ ಅಪ್ಪ- ಮಕ್ಕಳು (ದೇವೇಗೌಡರು ಹಾಗೂ ಕುಮಾರಸ್ವಾಮಿ).
ಮೈತ್ರಿ ಸರಕಾರ ಬೀಳುವುದನ್ನೇ ಕಾಯುತ್ತಿದೆ ಬಿಜೆಪಿ
ಕರ್ನಾಟಕ ವಿಧಾನಸಭೆಯಲ್ಲಿ ನೂರಾನಾಲ್ಕು ಸದಸ್ಯ ಬಲ ಹೊಂದಿರುವ ಬಿಜೆಪಿಯು ಇನ್ನು ಆರು ತಿಂಗಳಿಂದ ಒಂದು ವರ್ಷದಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರಕಾರ ಬಿದ್ದು ಹೋಗಬಹುದು ಎಂಬ ನಿರೀಕ್ಷೆಯಲ್ಲಿದೆ. ಮತ್ತು ಕನಿಷ್ಠ ಇನ್ನೊಂದು ಕ್ಷೇತ್ರದಲ್ಲಾದರೂ ಬಿಜೆಪಿ ಗೆಲುವು ಸಾಧಿಸಬಹುದು ಎಂಬ ಲೆಕ್ಕಾಚಾರದಲ್ಲಿದೆ. ಆ ನಂತರ ಮೈತ್ರಿ ಸರಕಾರ ಬಿದ್ದು ಹೋಗುವ ಸ್ಥಿತಿ ಬಂದಾಗ ಇತರ ಪಕ್ಷದ ಶಾಸಕರನ್ನು ಸೆಳೆದು, ಸರಕಾರ ಮಾಡುವ ಉದ್ದೇಶ ಇಟ್ಟುಕೊಂಡು ಕಾಯುತ್ತಿದೆ ಬಿಜೆಪಿ.
ಡಿಕೆ ಶಿವಕುಮಾರ್ ಗೆ ಕರೆ ಮಾಡಿದ್ದರಂತೆ ಅಮಿತ್ ಶಾ
ಇನ್ನು ಕಾಂಗ್ರೆಸ್ ನ ವಿಧಾನಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಗುರುವಾರ ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಈಗಲ್ಟನ್ ರೆಸಾರ್ಟ್ ನಲ್ಲಿ ಡಿ.ಕೆ.ಶಿವಕುಮಾರ್ ಇದ್ದಾಗ ಅವರಿಗೆ ಕರೆ ಮಾಡಿದ್ದರು. ನಿಮಗೆ ಅನುಕೂಲ ಮಾಡಿಕೊಡುತ್ತೇನೆ ಎಂದು ಆಮಿಷ ಒಡ್ಡಿದ್ದರು ಎಂದು ಹೇಳಿದ್ದಾರೆ. ಅವರು ಹೇಳುತ್ತಿರುವುದು ಗುಜರಾತ್ ನಲ್ಲಿ ರಾಜ್ಯಸಭಾ ಚುನಾವಣೆ ನಡೆದ ಸಂದರ್ಭವನ್ನು. ಅಂದರೆ ಅಹ್ಮದ್ ಪಟೇಲ್ ರಾಜ್ಯ ಸಭೆಗೆ ಆಯ್ಕೆ ಆಗಲು ಸಂಕಷ್ಟ ಎದುರಿಸುತ್ತಿದ್ದ ಸನ್ನಿವೇಶದಲ್ಲಿ ಅಲ್ಲಿನ ಕಾಂಗ್ರೆಸ್ ಶಾಸಕರನ್ನು ಕರೆತಂದು, ಇಲ್ಲಿನ ಈಗಲ್ಟನ್ ರೆಸಾರ್ಟ್ ನಲ್ಲಿ ಕಾಪಾಡಿಕೊಳ್ಳುವ ಜವಾಬ್ದಾರಿ ವಹಿಸಿಕೊಂಡಿದ್ದು ಇದೇ ಡಿ.ಕೆ.ಶಿವಕುಮಾರ್.
ಆಗಿನ ಸಿಟ್ಟು ಇನ್ನೂ ಕರಗಿಲ್ಲವೆ?
ಆ ನಂತರ ಗುಜರಾತ್ ನಿಂದ ಅಹ್ಮದ್ ಪಟೇಲ್ ಆಯ್ಕೆಯಾದರು. ಆದರೆ ಆಗ ಶಿವಕುಮಾರ್ ಮೇಲೆ ಮೂಡಿದ ಸಿಟ್ಟು ಅಮಿತ್ ಶಾಗೆ ಇನ್ನೂ ಕರಗಿಲ್ಲವೆ ಎಂಬ ಅನುಮಾನ ಮೂಡುತ್ತದೆ. ಇನ್ನು ಡಿ.ಕೆ.ಶಿವಕುಮಾರ್ ಮೇಲೆ ನಡೆದ ಆದಾಯ ತೆರಿಗೆ ದಾಳಿಯನ್ನು ಒಕ್ಕಲಿಗರ ಮೇಲೆ ನಡೆಸಿದ ಪ್ರಹಾರ ಎಂಬಂತೆ ಬಿಂಬಿಸಲಾಯಿತು. ಆ ನಂತರ ಅಮಿತ್ ಶಾ ಅವರು ನಿರ್ಮಲಾನಂದ ನಾಥ ಸ್ವಾಮೀಜಿಯನ್ನು ಭೇಟಿ ಮಾಡಿ, ಬಿಜೆಪಿಯು ಒಕ್ಕಲಿಗ ವಿರೋಧಿ ಅಲ್ಲ ಎಂದು ಸ್ಪಷ್ಟನೆ ನೀಡಲು ಯತ್ನಿಸಿದರು. ಯೋಗಿ ಆದಿತ್ಯನಾಥ್ ಕೂಡ ಆದಿಚುಂಚನಗಿರಿಯ ಸ್ವಾಮೀಜಿಯನ್ನು ಭೇಟಿ ಮಾಡಿ, ಒಕ್ಕಲಿಗ ಸಮುದಾಯದ ಸಿಟ್ಟು ತಮಣಿ ಮಾಡಲು ಯತ್ನಿಸಿದರು. ಇದೀಗ ಡಿಕೆ ಶಿವಕುಮಾರ್ ವಿರುದ್ಧದ ಪ್ರಕರಣವು ಮತ್ತೆ ತಲೆ ಎತ್ತಿದೆ.
ಸಿದ್ದರಾಮಯ್ಯರನ್ನು ಕಾಂಗ್ರೆಸ್ ನಿಂದ ಹೊರಗೆ ತರಲು ಸ್ಕೆಚ್
ಸರಿ, ತಪ್ಪು, ಕಾನೂನು ಮತ್ತೊಂದು ಏನೇ ಇದ್ದರೂ ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಬಂದ ನಂತರ ಮೈತ್ರಿ ಸರಕಾರ ರಚನೆಯಲ್ಲಿ ಡಿ.ಕೆ.ಶಿವಕುಮಾರ್ ವಹಿಸಿದ ಪಾತ್ರ ಬಿಜೆಪಿಯ ಕೇಂದ್ರ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆಯಾ? ಇಂಥದ್ದೊಂದು ಅನುಮಾನ ದಟ್ಟ ಹಾಗೂ ಸ್ಪಷ್ಟವಾಗುತ್ತದೆ. ಏಕೆಂದರೆ ಶಿವಕುಮಾರ್ ಆಪ್ತರ ವಿರುದ್ಧ ಸಿಬಿಐ ಸರ್ಚ್ ವಾರೆಂಟ್ ಪಡೆದಿದೆ. ಇಂಥದ್ದಕ್ಕೆ ನಾನು ಹೆದರಲ್ಲ ಅಂದಿದ್ದಾರೆ ಡಿಕೆಶಿ. ಕಾಂಗ್ರೆಸ್ ಕಷ್ಟದಲ್ಲಿದ್ದಾಗ ಶಿವಕುಮಾರ್ ಜತೆಗಿದ್ದರು. ಈಗ ಪಕ್ಷ ಅವರ ಜತೆ ಇರುತ್ತದೆ ಎಂದು ಸಂಸದ ಎಸ್.ಪಿ.ಮುದ್ದಹನುಮೇಗೌಡರು ಹೇಳಿದ್ದಾರೆ. ಇದರರ್ಥ ಶಿವಕುಮಾರ್ ಕಷ್ಟದಲ್ಲಿದ್ದಾರೆ ಅಂತಲೇ? ಆರು ತಿಂಗಳಿಂದ ಒಂದು ವರ್ಷದಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದಾ? ಇನ್ನು ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ನಿಂದ ಹೊರಗೆ ಎಳೆದು ತರಲು ಸ್ಕೆಚ್ ಸಿದ್ಧವಾಗಿದೆಯಾ? ಬಿಜೆಪಿಯ ದಾಳಗಳಿಗೆ ಉರುಳುತ್ತಿರುವ ಕಾಯಿಗಳನ್ನು ನೋಡಿದರೆ ಇಂಥ ಅನುಮಾನ ಮೂಡುತ್ತದೆ.