ತಾತನ ತೆಲುಗು ದೇಶಂ ಪಾರ್ಟಿ ಕಟ್ಟಲು ಜೆ. ಎನ್ಟಿಆರ್ ರಾಜಕೀಯಕ್ಕೆ ಇಳಿತಾರಾ?
ಹೈದರಾಬಾದ್, ಆ. 22: ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ನಟ ಜ್ಯೂ. ಎನ್ಟಿಆರ್ ಅವರ ಭೇಟಿ ಅಂಧ್ರ ಮತ್ತು ತೆಲಂಗಾಣ ರಾಜಕೀಯ ರಂಗದಲ್ಲಿ ಭಾರೀ ಸಂಚಲನ ಮೂಡಿಸಿದೆ. ತೆಲಂಗಾಣದಲ್ಲಿ ಬೃಹತ್ ರ್ಯಾಲಿ ಅಂಗವಾಗಿ ಆಗಮಿಸಿದ್ದ ಅಮಿತ್ ಶಾ ಜ್ಯೂ. ಎನ್ಟಿಅರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ರಾಜಕೀಯ ರಂಗದಲ್ಲಿ ಹೊಸ ಮನ್ವಂತರ ಸೃಷ್ಟಿಗೆ ನಾಂದಿ ಹಾಡುವ ಮುನ್ಸೂಚನೆ ನೀಡಿದೆ.
ತೆಲಂಗಾಣದಲ್ಲಿ ನೆಲೆ ಕಂಡುಕೊಳ್ಳಲು ಬಿಜೆಪಿ ಸಕಲ ಪ್ರಯತ್ನ ಮಾಡುತ್ತಿದೆ. ಅಲ್ಲಿ ಕೆಸಿಆರ್ ಸರ್ಕಾರ ಅವಕಾಶ ಮಾಡಿಕೊಟ್ಟಿಲ್ಲ. ಇದರ ನಡುವೆ ತೃತೀಯ ರಂಗ ಕಟ್ಟಲು ಕೆಸಿಆರ್ ಹಲವು ನಾಯಕರನ್ನು ಒಟ್ಟು ಹಾಕುವ ಪ್ರಯತ್ನಕ್ಕೆ ಕೈ ಹಾಕಿದ್ದರು. ಇದರ ಬೆನ್ನಲ್ಲೇ ಇದೀಗ ಬಿಜೆಪಿ ವರಿಷ್ಠ ನಾಯಕ ಅಮಿತ್ ಶಾ ಎನ್ಟಿಆರ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇದಕ್ಕೂ ಮೊದಲು ಖ್ಯಾತ ನಿರ್ದೇಶಕ ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಬಿಜೆಪಿ ಸರ್ಕಾರ ಆಯ್ಕೆ ಮಾಡಿತ್ತು.
ತೆಲಂಗಾಣ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ ಅಮಿತ್ ಶಾ-ಜೂನಿಯರ್ ಎನ್ಟಿಆರ್ ಭೇಟಿ
ಮಾತುಕತೆ ವಿಷ್ಯ ಬಹಿರಂಗವಾಗಿಲ್ಲ: ನಟ ಜ್ಯೂ. ಎನ್ಟಿಆರ್ ಅವರ ಭೇಟಿ ಬಗ್ಗೆ ಅಮಿತ್ ಶಾ ಪೋಟೋಗಳನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪ್ರತಿಭಾನ್ವಿತ ನಟ ಜ್ಯೂ.ಎನ್.ಟಿಅರ್ ಅವರ ಜತೆ ಉತ್ತಮ ಮಾತುಕತೆ ನಡೆಯಿತು ಎಂದಷ್ಟೇ ಹೇಳಿ ಪೋಟೋಗಳನ್ನು ಹಂಚಿಕೊಂಡಿದ್ದಾರೆ.
ಜೂ. ಎನ್ಟಿಆರ್ ಪಾಲಿಟಿಕ್ಸ್ ಎಂಟ್ರಿ?
ತೆಲಗು ದೇಶಂ ಪಾರ್ಟಿ ಕಟ್ಟಿದ್ದು ಎನ್ಟಿಅರ್. ಕಾಂಗ್ರೆಸ್ಗೆ ಪರ್ಯಾಯವಾಗಿ ಕಟ್ಟಿದ ತೆಲಗು ದೇಶಂ ಪಾರ್ಟಿ ಅಧಿಕಾರ ಹಿಡಿದಿತ್ತು. ಸದ್ಯ ಆಂಧ್ರ ಪ್ರದೇಶದ ರಾಜಕೀಯ ಬೆಳವಣಿಗೆಯಲ್ಲಿ ಚಂದ್ರಬಾಬು ನಾಯ್ಡು ಅಧಿಕಾರ ಹಿಡಿಯುವುದು ಕಷ್ಟ ಸಾಧ್ಯ. ತಾತನ ಉತ್ತರಾಧಿಕಾರಯಾಗಿ ಜ್ಯೂ. ಎನ್ಟಿಅರ್ ರಾಜಕೀಯ ರಂಗಕ್ಕೆ ಎಂಟ್ರಿ ಕೊಟ್ಟರೆ ಮತ್ತೆ ತೆಲುಗು ದೇಶಂ ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ. ಇದನ್ನು ಅರಿತ ಬಿಜೆಪಿ ಎನ್ಟಿಆರ್ ಅವರನ್ನು ರಾಜಕೀಯಕ್ಕೆ ಎಳೆಯುವ ಮೂಲಕ ಬಿಜೆಪಿ ಬೆಂಬಲಿತ ತೆಲಗು ದೇಶಂ ಗೆ ಅಧಿಕಾರ ಕೊಡುವುದು ಜತೆಗೆ, ನೆರೆ ತೆಲಂಗಾಣದಲ್ಲಿ ಬಿಜೆಪಿ ಕಣಕ್ಕೆ ಇಳಿಸಯುವ ಪ್ಲಾನ್ ಬಿಜೆಪಿಯದ್ದು. ಇದರ ಭಾಗವಾಗಿಯೇ ಎನ್ಟಿಅರ್ ಅವರ ಜತೆ ಅಮಿತ್ ಶಾ ಮಾತುಕತೆ ನಡೆಸಿದ್ದಾರೆ ಎಂದು ಆಂಧ್ರ ಪ್ರದೇಶ ಮಾಧ್ಯಮಗಳು ವರದಿ ಮಾಡಿವೆ.
ಆರ್ಆರ್ಆರ್ ಸಿನಿಮಾ ಅಭಿಯನಕ್ಕೆ ಸಂತಸ
ಜ್ಯೂ. ಎನ್ಟಿಆರ್ ಆರ್ಆರ್ಆರ್ ಸಿನಿಮಾದ ನಟನೆ ಅಮಿತ್ ಶಾ ಮೆಚ್ಚಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಭೇಟಿ ಎಂದು ಹೇಳಿಕೊಂಡಿದ್ದಾರೆ. ಇದು ಸಿನಿಮಾ ಭೇಟಿಯಲ್ಲ. ರಾಜಕೀಯ ಭೇಟಿ ಎಂದು ಕೆಲವು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಜ್ಯೂ. ಎನ್ಟಿಆರ್ ಅವರನ್ನು ರಾಜಕೀಯಕ್ಕೆ ಸೆಳೆಯಲು ಈ ಭೇಟಿ ಎಂದು ತೆಲಂಗಾಣ ಬಿಜೆಪಿ ನಾಯಕರೇ ಸ್ಪಷ್ಟನೆ ನೀಡಿದ್ದಾರೆ.
ಜ್ಯೂ ಎನ್ಟಿಅರ್ ಸ್ಪಷ್ಟನೆ
ನನಗೆ ರಾಜಕೀಯದಲ್ಲಿ ಆಸಕ್ತಿ ಹೊಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಆದ್ರೆ ತೆಲಗು ದೇಶಂ ಪಾರ್ಟಿ ಕಟ್ಟಿದ್ದು ಎನ್ಟಿಅರ್ ಅವರ ತಾತ. ಎನ್ಟಿಆರ್ ಮಕ್ಕಳಾದ ಹರಿಕೃಷ್ಣ, ಬಾಲಕೃಷ್ಣ ಅವರು ರಾಜಕೀಯಕ್ಕೆ ಎಂಟ್ರಿ ಕೊಡುವ ಮೊದಲೇ ಅಳಿಯ ಚಂದ್ರಬಾಬು ನಾಯ್ಡು ಚುಕ್ಕಾಣಿ ಹಿಡಿದುಬಿಟ್ಟಿದ್ದರು. ಆ ಬಳಿಕ ಎನ್ಟಿಆರ್ ಮಕ್ಕಳು ರಾಜಕೀಯ ರಂಗಕ್ಕೆ ಎಂಟ್ರಿ ಕೊಟ್ಟು ಪಕ್ಷ ಮುನ್ನೆಡೆಸುವ ಅವಕಾಶವನ್ನು ಚಂದ್ರಬಾಬು ನಾಯ್ಡು ಕೊಟ್ಟಿರಲಿಲ್ಲ. ಇದೀಗ ಎನ್ಟಿಆರ್ ಪ್ರತಿಬಿಂಬದಂತೆ ಜನ ಮನ್ನಣೆ ಗಳಿಸಿರುವ ಜ್ಯೂ. ಎನ್ ಟಿಆರ್ ಮೂಲಕ ತೆಲುಗು ದೇಶಂ ಕಟ್ಟುವ ಆಲೋಚನೆ ಮಾಡಿದ್ದಾರೆ.
ನಾನಾ ಅಯಾಮಗಳಲ್ಲಿ ಚರ್ಚೆ
ಜ್ಯೂ. ಎನ್ಟಿಆರ್ ಅವರನ್ನು ತೆಲಗು ದೇಶಂ ಉತ್ತರಾಧಿಕಾರಿ ಮಾಡಬೇಕೆಂಬ ಒಂದು ಬಣ ಮೊದಲಿನಿಂದಲೂ ಒತ್ತಾಯಿಸುತ್ತಲೇ ಬಂದಿವೆ. ಆದ್ರೆ ಚಂದ್ರಬಾಬು ನಾಯ್ಡು ತಮ್ಮ ಮಗ ನಾರಾ ಲೋಕೇಶ್ ಅವರನ್ನು ಉತ್ತರಾಧಿಕಾರಿ ಮಾಡಲು ಯತ್ನಿಸುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಜ್ಯೂ. ಎನ್ಟಿಆರ್ ಅವರ ಅಮಿತ್ ಶಾ ಭೇಟಿ ನಾನಾ ಅಯಾಮಗಳಲ್ಲಿ ಚರ್ಚೆ ಹುಟ್ಟು ಹಾಕಿದೆ.
ಜ್ಯೂ. ಎನ್ ಟಿಆರ್ ತೆಲಗು ದೇಶಂಗೆ ಸೇರಿದರೆ, ಬಿಜೆಪಿ ಬೆಂಬಲ ನೀಡಲಿದೆ. ಇದರಿಂದ ತೆಲಗು ದೇಶಂ ಆಂಧ್ರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದರೆ, ತೆಲಂಗಾಣದಲ್ಲಿ ಬಿಜೆಪಿಗೆ ತೆಲುಗು ದೇಶಂ ಬೆಂಬಲ ನೀಡಬಹುದು.ಇದರಿಂದ ತೆಲಂಗಾಣದಲ್ಲಿ ಬಿಜೆಪಿಗೆ ಆನೆ ಬಲ ಬಂದಂತಾಗಲಿದೆ. ಹೀಗಾಗಿ ಅಮಿತ್ ಶಾ- ಎನ್ಟಿಅರ್ ಭೇಟಿ ಅಂಧ್ರ ಮತ್ತು ತೆಲಂಗಾಣ ರಾಜಕಾರಣದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದೆ. ಈ ಎಲ್ಲಾ ಊಹಾ ಪೋಹಗಳಿಗೆ ಅತಿ ಶೀಘ್ರದಲ್ಲಿಯೇ ಉತ್ತರ ಸಿಗಲಿದೆ.