ಇಲ್ಲಿ ಕೃಷ್ಣನ ಸೇವೆ, ಅಯೋಧ್ಯೆಯಲ್ಲಿ ರಾಮನ ಸೇವೆ: ಪೇಜಾವರ ಮಠದ ಉತ್ತರಾಧಿಕಾರಿ ಕಿರಿಯ ಶ್ರೀಗಳ ಸಂದರ್ಶನ
Recommended Video
ಮಾಧ್ವ ಪರಂಪರೆಯ ಹಿರಿಯ ಯತಿ, ಶತಮಾನದ ಸಂತ ಎಂದೇ ಕರೆಯಲ್ಪಡುತ್ತಿದ್ದ ಉಡುಪಿ ಪೇಜಾವರ ಅಧೋಕ್ಷಜ ಮಠದ ವಿಶ್ವೇಶತೀರ್ಥ ಶ್ರೀಗಳು, ಇದೇ ಭಾನುವಾರ (ಡಿ 29) ಕೃಷ್ಣೈಕ್ಯರಾದರು.
ಧಾರ್ಮಿಕ ಚಟುವಟಿಕೆಯ ಜೊತೆಗೆ, ಶೈಕ್ಷಣಿಕ, ಸಾಮಾಜಿಕ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದ ಪೇಜಾವರ ಹಿರಿಯ ಶ್ರೀಗಳು, ಪೀಠದ ಉತ್ತರಾಧಿಕಾರಿಗೆ ಬಿಟ್ಟ ಹೋದ ಜವಾಬ್ದಾರಿ ಬಹುದೊಡ್ಡದು.
ಹಿರಿಯ ಶ್ರೀಗಳ ಹನ್ನೊಂದು ದಿನದ ಕಾರ್ಯಕ್ರಮ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ಪೇಜಾವರ ಮಠದ ಉತ್ತರಾಧಿಕಾರಿ, ಶ್ರೀವಿಶ್ವಪ್ರಸನ್ನ ತೀರ್ಥರ ಜೊತೆ 'ಒನ್ ಇಂಡಿಯಾ ಕನ್ನಡ' ಸಂದರ್ಶನ ನಡೆಸಿದೆ.
ಹಿರಿಯ ಶ್ರೀಗಳ ಅಂತಿಮ ವಿಧಿವಿಧಾನ, ಸರಕಾರದ ಸಹಕಾರ, ರಾಮಮಂದಿರ ನಿರ್ಮಾಣ, ನೀಲಾವರ ಗೋಶಾಲೆಯದ ವಿಚಾರದಲ್ಲಿ ವಿಶ್ವಪ್ರಸನ್ನ ತೀರ್ಥರು, ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಸಂದರ್ಶನದ ಆಯ್ದಭಾಗ ಇಂತಿದೆ:

ಸೂರ್ಯಾಸ್ತದೊಳಗೆ ಅಂತಿಮ ಕ್ರಿಯೆಗಳನ್ನು ನಡೆಸಬೇಕಾಗಿತ್ತು
ಪ್ರ: ಹಿರಿಯ ಶ್ರೀಗಳಿಗೆ ಅಂತಿಮ ನಮನ ಸಲ್ಲಿಸಲು ಪ್ರವಾಹೋಪಾದಿಯಲ್ಲಿ ಭಕ್ತರು ಹರಿದು ಬಂದರು. ಇದನ್ನು ತಾವು ನಿರೀಕ್ಷೆ ಮಾಡಿದ್ರಾ?
ಶ್ರೀಗಳು: ನಮ್ಮ ಹಿರಿಯ ಶ್ರೀಗಳು ಯಾವುದೇ ಒಂದು ಜಾತಿ, ಧರ್ಮಕ್ಕೆ ಸೀಮಿತರಾಗಿದ್ದವರಲ್ಲ. ವಸುದೇವ ಕುಟುಂಬಕಂ ಎನ್ನುವ ಹಾಗೇ ಶ್ರೀಗಳು ಇದ್ದಂತವರು. ಹಾಗಾಗಿ, ಅಂತಿಮ ನಮನ ಸಲ್ಲಿಸಲು ಭಕ್ತರು ಆಗಮಿಸಿದ್ದರು. ನಮಗೆ ಸಮಯ ಅವಕಾಶ ಕಮ್ಮಿ ಇತ್ತು. ಉಡುಪಿಯಿಂದ, ನ್ಯಾಷನಲ್ ಕಾಲೇಜಿಗೆ ಕರೆದುಕೊಂಡು ಬಂದು, ಸೂರ್ಯಾಸ್ತದೊಳಗೆ ಅಂತಿಮ ಕ್ರಿಯೆಗಳನ್ನು ನಡೆಸಬೇಕಾಗಿತ್ತು.
ಆದರೆ, ಬಂದ ಭಕ್ತರಿಗೆ ಅಂತಿಮ ನಮನ ಸಲ್ಲಿಸಲು ಅವಕಾಶ ನೀಡದೇ ಇರುವುದು ಸರಿಯಲ್ಲ ಎಂದು ಅಲ್ಲೇ ಇನ್ನೂ ಹೆಚ್ಚುಹೊತ್ತು ಭಕ್ತರಿಗೆ ನಮನ ಸಲ್ಲಿಸಲು ಅವಕಾಶ ಕಲ್ಪಿಸಲಾಯಿತು. ನಿರೀಕ್ಷೆಗೂ ಮೀರಿ ಭಕ್ತರು ಹರಿದುಬಂದಿದ್ದರಿಂದ, ಅಂತಿಮ ಕಾರ್ಯ ವಿಳಂಬಗೊಂಡಿತು.

ಸರಕಾರ, ಪೊಲೀಸರು ನೀಡಿದ ಸಹಕಾರವನ್ನು ನಾವು ಸದಾ ನೆನೆಪಿಸಿಕೊಳ್ಳುತ್ತೇವೆ
ಪ್ರ: ಅಂತಿಮ ವಿಧಿವಿಧಾನದ ವೇಳೆ ಯಡಿಯೂರಪ್ಪ ನೇತೃತ್ವದ ಸರಕಾರ, ಉಡುಪಿ ಮತ್ತು ಬೆಂಗಳೂರು ಜಿಲ್ಲಾಡಳಿತ ಕೊಟ್ಟ ಸಹಕಾರದ ಬಗ್ಗೆ?
ಶ್ರೀಗಳು:ಪೂರ್ವತಯಾರಿ ಇಲ್ಲದಿದ್ದರೆ ಕೆಲವೊಂದು ತೊಂದರೆಯಾಗುವುದು ಸಹಜ. ಆದರೆ, ಇದಕ್ಕೆ ಕಿಂಚಿತ್ತೂ ತೊಂದರೆ ಬರದ ರೀತಿಯಲ್ಲಿ ಸರಕಾರ ಮತ್ತು ಅಧಿಕಾರಿಗಳ ವರ್ಗ ಏರ್ಪಾಡು ಮಾಡಿತ್ತು. ಏನೂ ಗೊಂದಲವಿಲ್ಲದೇ, ಎಲ್ಲವೂ ಸುಗಮವಾಗಿ ನಡೆಯಿತು. ಮುಖ್ಯಮಂತ್ರಿಗಳು ಆಗಾಗ್ಗೆ ಬಂದು ಗುರುಗಳನ್ನು ವಿಚಾರಿಸಿಕೊಂಡು ಹೋಗಿದ್ದಾರೆ.
ಕೇಂದ್ರದಿಂದಲೂ ಸಹಕಾರ ಸಿಕ್ಕಿದೆ. ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇವೆ. ಸರಕಾರ, ಪೊಲೀಸರು ನೀಡಿದ ಸಹಕಾರವನ್ನು ನಾವು ಸದಾ ನೆನೆಪಿಸಿಕೊಳ್ಳುತ್ತೇವೆ.

ಇಲ್ಲಿ ಕೃಷ್ಣನ ಸೇವೆ, ಅಲ್ಲಿ ರಾಮನ ಸೇವೆ
ಪ್ರ: ರಾಮ ಮಂದಿರ ನಿರ್ಮಾಣದ ವಿಚಾರದಲ್ಲಿ ಕೇಂದ್ರ ಸರಕಾರ ರಚಿಸುವ ಟ್ರಸ್ಟ್ ನಲ್ಲಿ ಸೇರಿಕೊಳ್ಳಲು ಮನವಿ ಬಂದರೆ, ತಮ್ಮ ನಿಲುವೇನು ಇರುತ್ತದೆ?
ಶ್ರೀಗಳು: ಅವಶ್ಯಕವಾಗಿ ನಾವು ಸಿದ್ದರಿದ್ದೇವೆ. ಅಂತಹ ಬೇಡಿಕೆ ಬಂದರೆ ನಾವು ಅದಕ್ಕೆ ಒಪ್ಪಿಕೊಳ್ಳಲು ಸಿದ್ದರಿದ್ದೇವೆ. ಅದು ನಮ್ಮ ಬದುಕಿನ ದೊಡ್ಡ ಸೌಭಾಗ್ಯ. ಇಲ್ಲಿ ಕೃಷ್ಣನ ಸೇವೆ, ಅಲ್ಲಿ ರಾಮನ ಸೇವೆ ಸಲ್ಲಿಸಲು ನಮಗೆ ಅವಕಾಶ ಸಿಕ್ಕಂತಾಗುತ್ತದೆ.

ನಾವು ಇಂದು ಅವರಿಗೆ ಮೊದಲ ಹಸ್ತೋದಕವನ್ನು ನೀಡುತ್ತಿದ್ದೇವೆ
ಪ್ರ: ವಿಶ್ವೇಶತೀರ್ಥ ಶ್ರೀಗಳಿಗೆ ಮೊದಲ ಹಸ್ತೋದಕ ಕೊಟ್ಟಾಗ ನಿಮ್ಮಲ್ಲಿದ್ದ ಭಾವನೆ ಏನು?
ಶ್ರೀಗಳು: ಗುರುಗಳನ್ನು ನಂಬಿಕೊಂಡು, ಅವರ ಅನುಗ್ರಹದಿಂದ ಬದುಕುತ್ತಿರುವವರು ಒಬ್ಬರಲ್ಲ.. ಇಬ್ಬರಲ್ಲಾ..ನಾವು ಇಂದು ಅವರಿಗೆ ಮೊದಲ ಹಸ್ತೋದಕವನ್ನು ನೀಡುತ್ತಿದ್ದೇವೆ, ಇದು ಅವರದೇ ಕೊಡುಗೆ. ಅವರೇ ಕಟ್ಟಿ ಬೆಳೆಸಿದಂತಹ ಸಂಸ್ಥೆಯಿದು. ನಿತ್ಯ ನಾವು ಊಟ ಮಾಡುವಾಗ ಪ್ರಾರ್ಥನೆಯನ್ನು ಮಾಡಬೇಕೆಂದು ದಾಸರು ಹೇಳುತ್ತಾರೆ.
ಭಗವಂತಹ ನೀಡಿರುವಂತಹ ಭಿಕ್ಷೆಯಿದು. ನಾವೇನು ದುಡಿದು ತಂದು ಹಸ್ತೋದಕವನ್ನು ನೀಡುತ್ತಿಲ್ಲ. ಅವರು ನಮಗೆ ಬಿಟ್ಟು ಹೋದಂತಹ ಸೌಲಭ್ಯದಲ್ಲಿ ಅವರಿಗೆ ಮೊದಲ ಹಸ್ತೋದಕವನ್ನು ನಾವು ನೀಡಿದ್ದೇವೆ.

ಅಲ್ಲಿಗೆ ಬಂದು ಸೇರುತ್ತಿರುವ ಗೋವುಗಳೇ ನಮ್ಮ ಯೋಜನೆಯನ್ನು ವಿಸ್ತರಿಸುತ್ತಿವೆ
ಪ್ರ: ನೀಲಾವರ ಗೋಶಾಲೆಯ ವಿಸ್ತರಣೆಯ ಯೋಜನೆ ಇದೆಯಾ?
ಶ್ರೀಗಳು: ಅಲ್ಲಿಗೆ ಬಂದು ಸೇರುತ್ತಿರುವ ಗೋವುಗಳೇ ನಮ್ಮ ಯೋಜನೆಯನ್ನು ವಿಸ್ತರಿಸುತ್ತಿವೆ. ನಿರಂತರವಾಗಿ ಬರುತ್ತಿರುವ ಗೋವುಗಳಿಗೆ ಆಸರೆಯನ್ನು ಕಲ್ಪಿಸಿಕೊಡುವುದು ನಮ್ಮ ಭಾಗ್ಯ ಎಂದು ಭಾವಿಸಿದ್ದೇವೆ. ಇಷ್ಟು ದೊಡ್ಡ ಕೆಲಸವನ್ನು ನಮ್ಮ ಮಠದ ಸಂಸ್ಥೆಯಿಂದ ಮಾತ್ರ ನಿಭಾಯಿಸಲು ಕಷ್ಟವಾಗುತ್ತದೆ.
ಇಷ್ಟು ದೊಡ್ಡ ಸಮಾಜ ನಮ್ಮ ಬೆಂಬಲಕ್ಕೆ ನಿಂತಿದ್ದರಿಂದ, ಇದು ದೊಡ್ಡದಾಗಿ ಬೆಳೆಯುತ್ತಿದೆ. ನಮ್ಮಲ್ಲಿ ಗೋಗ್ರಾಸ ನೀಡುವ ಪದ್ದತಿಯಿದೆ. ಫೆಬ್ರವರಿ ಮೊದಲ ತಾರೀಕಿನಂದು ಉಡುಪಿ ಜಿಲ್ಲೆ, ಕಬ್ಬಿನಾಲೆಯಲ್ಲಿ ಗೋಶಾಲೆ ಆರಂಭವಾಗುತ್ತಿದೆ. ಒಬ್ಬಬ್ಬೊರು ಒಂದೊಂದು ಗೋವಿನ ಜವಾಬ್ದಾರಿ ತೆಗೆದುಕೊಂಡರೆ ಒಳ್ಳೆಯದು.

ಗುರುಗಳಿಗೆ ಇರುವ ದೊಡ್ಡ ವರ್ಗ ಎಲ್ಲರಿಗೂ ಗೊತ್ತಿರುವಂತಹ ವಿಚಾರ
ಪ್ರ: ಭಕ್ತರಿಗೆ ನಿಮ್ಮ ಅನುಗ್ರಹ ಸಂದೇಶ?
ಶ್ರೀಗಳು: ದೊಡ್ಡ ಗುರುಗಳ ಭಕ್ತರಲ್ಲಿ ನಾವು ಕೊಡಾ ಒಬ್ಬರು. ಅವರ ಅನುಭವದ ಹಿನ್ನಲೆಯನ್ನೆಲ್ಲಾ ಅವರು ಹೊತ್ತುಕೊಂಡು ಸಾಗಿದ್ದರು. ಗುರುಗಳಿಗೆ ಇರುವ ದೊಡ್ಡ ವರ್ಗ ಎಲ್ಲರಿಗೂ ಗೊತ್ತಿರುವಂತಹ ವಿಚಾರ. ಈಗ ನಡೆಯುತ್ತಿರುವುದೆಲ್ಲಾ ಗುರುಗಳ ಕಾರ್ಯ, ಸಮಾಜದ ಕಾರ್ಯ. ಗುರುಗಳಿಗೆ ನೀಡಿದ ಸಹಕಾರವನ್ನು ನಾವೂ ನಿರೀಕ್ಷಿಸುತ್ತಿದ್ದೇವೆ. ಗುರುಗಳ ಆಶೀರ್ವಾದದಿಂದ ಎಲ್ಲವೂ ಸಾಂಗವಾಗಿ ನಡೆಯುತ್ತದೆ.












Click it and Unblock the Notifications