ಅಕ್ಷಯ ತೃತೀಯ: ಶ್ರೇಯಸ್ಸು, ಸಮೃದ್ಧಿ, ಆರೋಗ್ಯ ಪ್ರಾಪ್ತಿರಸ್ತು
ವೈಶಾಖ ಮಾಸ ಶುಕ್ಲಪಕ್ಷ ತೃತೀಯ ದಿನ ರೋಹಿಣಿ ನಕ್ಷತ್ರವು ಇದ್ದರೆ ಅಂದು ಮೂರುವರೆ ಗಳಿಗೆ ಮುಹೂರ್ತದಲ್ಲಿ ಬರುವ ತಿಥಿಗೆ ಅಕ್ಷಯ ತೃತೀಯ ಎಂದು ಕರೆಯುವರು. ಈ ದಿನವು ಬಹು ಶ್ರೇಷ್ಠ ದಿನವಾಗಿದ್ದು ಇಂದು ಮಾಡುವ ಪ್ರತಿ ಕಾರ್ಯದಲ್ಲೂ ಮಂಗಳ, ಶ್ರೇಯಸ್ಸು, ಸಮೃದ್ಧಿ ಪ್ರಾಪ್ತಿಯಾಗುತ್ತದೆ ಎಂದು ಪುರಾಣ ಕಾಲದಿಂದಲೂ ನಂಬಿಕೊಂಡು ಬಂದಂತಹ ಪದ್ಧತಿ. ಹಿಂದೂಗಳು ಹಾಗೂ ಜೈನರು ಈ ಅಕ್ಷಯ ತೃತೀಯವನ್ನು ಆಚರಿಸುತ್ತಾರೆ.
ಅಸ್ಯಾಂ ತಿಥೌ ಕ್ಷಯ ಮುರ್ಪತಿ ಹುತಂ ನ ದತ್ತಂ |
ತೇನಾಕ್ಷಯೇತಿ ಕಥಿತಾ ಮುನಿಭಿಸ್ತ ತೀಯಾ |
ಉದ್ದಿಶ್ಯ ದೈವತಪಿತೃನ್ಕ್ರಿಯತೇ ಮನುಷ್ಯೆ|
ತತ್ ಚ ಅಕ್ಷಯಂ ಭವತಿ ಭಾರತ ಸರ್ವಮೇವ ||-
- ಮದನರತ್ನ
ಅರ್ಥ (ಶ್ರೀ ಕೃಷ್ಣನ ಹೇಳಿಕೆ ):-ಎಲೈ ಯುಧಿಷ್ಟರನೇ, ಈ ತಿಥಿಗೆ ಮಾಡಿದ ದಾನ ಮತ್ತು ಹವನ ಕ್ಷಯವಾಗುವುದಿಲ್ಲ ;ಆದುದರಿಂದ ಋಷಿಗಳು ಇದನ್ನು 'ಅಕ್ಷಯ ತೃತೀಯ' ಎಂದಿದ್ದಾರೆ. ಈ ತಿಥಿಯಂದು ದೇವರು ಮತ್ತು ಪಿತೃಗಳನ್ನುದ್ದೇಶಿಸಿ ಮಾಡಿದ ಕೃತಿಯು ಅಕ್ಷಯ (ಅವಿನಾಶಿ)ವಾಗುತ್ತದೆ.

ಕ್ಷಯ ಎಂದರೆ ನಶಿಸುವುದು ಆದರೆ ಅಕ್ಷಯ ಎಂದರೆ ಎಂದಿಗೂ ನಶಿಸಲಾಗದ್ದು ಮತ್ತು ಸಮೃದ್ಧಿಯಾಗುವಂತದ್ದು. ಇಂದು ಮಾಡಿದ ಪ್ರತಿ ಕೆಲಸವೂ ದಿನನಿತ್ಯಕ್ಕಿಂತ 100ಪಟ್ಟು ಹೆಚ್ಚಾಗಿ ಫಲವನ್ನು ಕೊಡುತ್ತವೆ.
ಈ ದಿನದ ವಿಶೇಷತೆಗಳು:-
->ಕೃತಯುಗವು ಆರಂಭವಾದದ್ದು ಈ ದಿನ,
->ವಿಷ್ಣುದೇವನು 6ನೇ ಅವತಾರವೆತ್ತಿ ಪರಶುರಾಮನಾಗಿ ಜನ್ಮ ತಾಳಿದ ದಿನ,
->ಸೂರ್ಯದೇವನು ಯುದಿಷ್ಠಿರನಿಗೆ ಅಕ್ಷಯ ಪಾತ್ರೆ ನೀಡಿದ ದಿನ,
->ಭಗೀರಥನ ಪ್ರಯತ್ನದಿಂದ 'ಗಂಗಾವತಾರ ' ವಾದ ದಿನ,
->ವೇದವ್ಯಾಸರು ಮಹಾಗಣಪತಿಯಿಂದ ಮಹಾಭಾರತ ಗ್ರಂಥವನ್ನು ರಚನೆ ಮಾಡಲು ಶುರು ಮಾಡಿದ ದಿನ,
->ಕುಚೇಲ ತಂದ ಅವಲಕ್ಕಿಯನ್ನು ಶ್ರೀ ಕೃಷ್ಣ ಸಂತೃಪ್ತಿಯಿಂದ ಸ್ವೀಕರಿಸಿ ಅನುಗ್ರಹಿಸಿದ ದಿನ,
->ಭುರಿಶ್ರವಸ್ಸು ರಾಜನಿಗೆ ಶ್ರೀ ಮಹಾವಿಷ್ಣುವಿನ ದರ್ಶನವಾಗಿದ್ದ ದಿನ,
->ಲಕ್ಷ್ಮೀ ಅನುಗ್ರಹದಿಂದ ಕುಭೇರನು ಅಷ್ಟ ಐಶ್ವರ್ಯ ಪಡೆದ ದಿನ,
ಅಕ್ಷಯ ತೃತೀಯ ದಿನದಂದು ಧರ್ಮಕಾರ್ಯ ವಿಧಿವಿಧಾನಗಳಿಗೆ ಹೆಚ್ಚಿನ ಮಹತ್ವ ಕೊಡಲಾಗುತ್ತದೆ ಈ ದಿನದಲ್ಲಿ ಪವಿತ್ರ ನೀರಿನಲ್ಲಿ ಸ್ನಾನಗೈದು ಶ್ರೀ ವಿಷ್ಣುವಿನ ಹಾಗೂ ಲಕ್ಷ್ಮೀದೇವಿಯನ್ನು ಪೂಜೆ ಮಾಡುವರು, ಮತ್ತು ಪಿತೃತರ್ಪಣ ಕಾರ್ಯವನ್ನು ಶ್ರದ್ಧೆ ಮತ್ತು ಭಕ್ತಿಯಿಂದ ಮಾಡಿ ಸಂತರಿಗೆ ಅಥವಾ ಧರ್ಮ ಸಂಸ್ಥಾನಗಳಿಗೆ ದಾನ ಮಾಡುವುದರಿಂದ ಕರ್ಮವು ಅಕರ್ಮಕರ್ಮವಾಗುತ್ತದೆ ಎಂದು ಹೇಳುತ್ತಾರೆ. ಅಕರ್ಮಕರ್ಮವೆಂದರೆ ಪಾಪ ಪುಣ್ಯಗಳ ಲೆಕ್ಕಾಚಾರವು ತಗಲದಿರುವುದು ಇದರಿಂದ ದಾನವನ್ನು ನೀಡುವವನು ಯಾವುದೇ ಬಂಧನದಲ್ಲಿ ಸಿಲುಕದೇ ಅವರ ಆದ್ಯಾತ್ಮಿಕ ಉನ್ನತಿಗೊಳ್ಳುತ್ತಾರೆ.
ಶುಕ್ರವಾರದ ಅಕ್ಷಯ ತೃತೀಯು ಲಕ್ಷ್ಮೀದೇವಿಯ ಕೃಪೆಗೆ ಪ್ರಮುಖವಾಗಿರುವುದರಿಂದ ಇಂದು ಲಕ್ಷ್ಮೀ ಪೂಜೆಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಈಶಾನ್ಯ ದಿಕ್ಕಿನಲ್ಲಿ ಲಕ್ಷ್ಮಿಯ ಚರಣ ಪಾದುಕೆ, ಹಳದಿ ಕವಡೆ, ಏಕಾಕ್ಷಿ ತೆಂಗಿನಕಾಯಿ, ಲೋಹದ ಆಮೆ, ದಕ್ಷಿಣಾವರ್ತಿ ಶಂಖ, ಬಾನ್ಸುರಿ ಮತ್ತು ಮಣ್ಣಿನ ಕಲಶ ಇವುಗಳಲ್ಲಿ ಯಾವುದಾದರು ಒಂದನ್ನು ಅಥವಾ ಎಲ್ಲವನ್ನು ಇಟ್ಟು ಪೂಜೆ ಮಾಡಿದರೆ ಲಕ್ಷ್ಮೀದೇವಿಯು ಪ್ರಸನ್ನಳಾಗಿ ಶುಭ, ಸುಖ ಮತ್ತು ಸಮೃದ್ಧಿ ಪಡಿಸುತ್ತಾಳೆ ಎನ್ನುವ ನಂಬಿಕೆ. ಹಾಗೂ ಚಿನ್ನ, ಬೆಳ್ಳಿ, ಭೂಮಿ ಖರೀದಿಸುವುದರಿಂದ ಮನೆಯ ಸಂಪತ್ತು ಸಮೃದ್ಧಿಯಾಗುತ್ತದೆ.
ಈ ರೀತಿ ಅಕ್ಷಯ ತೃತೀಯ ದಿನ ಜನರು ಒಂದಲ್ಲ ಒಂದು ವಸ್ತು ಖರೀದಿಗೆ ಅಂಗಡಿ ಗಳಲ್ಲಿ ಸಾಲುಗಟ್ಟಿ ನಿಲ್ಲುತ್ತಿದ್ದರು ಆದರೆ ಕೊರೋನಾ ಹಾವಳಿ ಯಿಂದ ಮನೆಯಲ್ಲಿಯೇ ಪೂಜೆ ಮಾಡಿ ದಾನ ಧರ್ಮಗಳನ್ನು ಮಾಡಿ ಆಯಸ್ಸು, ಶ್ರೇಯಸ್ಸು ವೃದ್ಧಿಸಿಕೊಳ್ಳಲೆಂದು ಹಾರೈಸುತ್ತೇನೆ.












Click it and Unblock the Notifications