ಅಬ್ಬಿ ಸಂರಕ್ಷಣೆಗೆ ಐಯ್ಯಣ್ಣ ಎಂಬ ಪರಿಸರ ಪ್ರೇಮಿಯ ಕಾವಲು
ಮಡಿಕೇರಿ, ನವೆಂಬರ್ 06: ಕೊಡಗಿನಲ್ಲಿ ಲಾಕ್ ಡೌನ್ ನಂತರ ಪ್ರವಾಸೋದ್ಯಮ ಆರಂಭವಾಗಿದೆ. ಜೊತೆಗೆ ರಸ್ತೆಬದಿಯಲ್ಲಿ ಎಲ್ಲಿ ನೋಡಿದರೂ ಪ್ಲಾಸ್ಟಿಕ್ ಬಾಟಲಿ ಮತ್ತು ಕವರ್, ಹೆಂಡದ ಬಾಟಲಿಗಳು ಕಾಣಸಿಗುತ್ತಿವೆ.
ಹೋಂ ಸ್ಟೇ ಮಾಲೀಕರು ತಮ್ಮ ಹೋಂ ಸ್ಟೇಗಳಲ್ಲಿ ಸಂಗ್ರಹವಾದ ತ್ಯಾಜ್ಯಗಳನ್ನು ಮೂಟೆ ಕಟ್ಟಿ ತಮ್ಮ ವಾಹನದಲ್ಲಿ ತಂದು ಅತ್ತಿತ್ತ ನೋಡಿ ರಸ್ತೆ ಬದಿಯಲ್ಲಿ ಎಸೆದು ಹೋಗುತ್ತಿದ್ದಾರೆ. ಒಟ್ಟಿನಲ್ಲಿ ಜನರ ಈ ಬೇಜವಾಬ್ದಾರಿ ನಡೆಯಿಂದ ಕೊಡಗು ಗಬ್ಬೆದ್ದು ನಾರುವ ಪರಿಸ್ಥಿತಿ ಉಂಟಾಗಿದೆ.
ಆದರೆ ಇದೆಲ್ಲದಕ್ಕೂ ಅಪವಾದವೆಂಬಂತೆ ಕೊಡಗು ಜಿಲ್ಲೆಯ ಮಕ್ಕಂದೂರು ಪಂಚಾಯಿತಿಗೆ ಒಳಪಟ್ಟ ಕೋಟೆ ಅಬ್ಬಿ ಎಂಬ ಜಲಪಾತ ಇದೆ. ದಿನಕ್ಕೆ ನೂರಾರು ಪ್ರವಾಸಿಗರು ಬಂದು ಜಲಕ್ರೀಡೆ ಆಡಿ ತಾವು ತಂದ ಪಾರ್ಸೆಲ್ ತಿಂಡಿ ತಿಂದು ಬಾಟಲಿ ಪೇಯ ಕುಡಿದು ಹೋಗುತ್ತಾರೆ. ಆದರೆ ಇಲ್ಲಿ ಎತ್ತ ಕಣ್ಣಾಡಿಸಿದರೂ ಒಂದು ಮಿಠಾಯಿಯ ಪ್ಲಾಸ್ಟಿಕ್ ಸಹ ಕಾಣಸಿಗುವುದಿಲ್ಲ. ಏಕೆಂದರೆ ಮಕ್ಕಂದೂರು ಪಂಚಾಯಿತಿಯವರು ಕಳೆದ 3 ವರ್ಷದಿಂದ ಇಲ್ಲಿಗೆ ಜವಾಬ್ದಾರಿಯುತ, ಸಾಮಾಜಿಕ ಕಾಳಜಿಯಿರುವ ಒಬ್ಬ ವ್ಯಕ್ತಿಯನ್ನು ನೇಮಿಸಿದ್ದಾರೆ.

ಅಲ್ಲಿಗೆ ಬರುವ ಪ್ರವಾಸಿಗರಿಗೆ ಸಣ್ಣ ಶುಲ್ಕ ವಿಧಿಸಿ, ಜಲಪಾತದ ಮೇಲುಸ್ತುವಾರಿಗೆ ಪರಿಸರ ಪ್ರೇಮಿ ರಕ್ಷಕನನ್ನು ನಿಯೋಜಿಸಿದ್ದಾರೆ. ಅವರೇ ಓಡಿಯಂಡ ಐಯ್ಯಣ್ಣ. ಅಲ್ಲಿಗೆ ಬರುವ ಪ್ರವಾಸಿಗರ ಮೇಲೆ ಇವರು ಸದಾ ನಿಗಾ ಇಟ್ಟಿರುತ್ತಾರೆ.
ಇವರು ಅಲ್ಲಿಗೆ ಬರುವ ಪ್ರವಾಸಿಗರಿಗೆ ಮೊದಲು ಪರಿಚಯಿಸುವುದೇ ಅಲ್ಲಿನ ಕಸದ ತೊಟ್ಟಿಯನ್ನು. ಒಂದೇ ಒಂದು ಕಾಗದದ ಚೂರಾಗಲಿ ಸಿಗರೇಟಿನ ತುಂಡಾಗಲಿ ನೆಲಕ್ಕೆ ಬೀಳಕೂಡದು. ಹಾಗೇನಾದರೂ ಆದರೆ ಐಯ್ಯಣ್ಣ ಆ ಕೂಡಲೇ ಅವರಿಂದಲೇ ಅದನ್ನು ಎತ್ತಿಸಿ ಕಸದ ತೊಟ್ಟಿಗೆ ಹಾಕಿಸುತ್ತಾರೆ.
ಕೊಡಗಿನ ಎಲ್ಲಾ ಪ್ರವಾಸಿ ತಾಣಗಳಲ್ಲಿ ಐಯ್ಯಣ್ಣನಂತಹ ಸಾಮಾಜಿಕ ಜವಾಬ್ದಾರಿ ಇರುವ ವ್ಯಕ್ತಿಗಳನ್ನು ಆಯಾಯ ಗ್ರಾಮ ಪಂಚಾಯಿತಿ ಅಥವಾ ಅದಕ್ಕೆ ಸಂಬಂಧ ಪಟ್ಟ ಆಡಳಿತ ಯಂತ್ರದ ಅಧಿಕಾರಿಗಳು ನೇಮಿಸಿದ್ದೆ ಆದಲ್ಲಿ ಕೊಡಗು ಮುಂದೊಂದು ದಿನ ಭಾರತದ ಜನರು ಹೇಳುವಂತೆ, ಎರಡನೇ ಸ್ಕಾಟ್ಲೆಂಡ್ ಆಗುವುದರಲ್ಲಿ ಸಂಶಯವಿಲ್ಲ.












Click it and Unblock the Notifications