ಮಂಗಳೂರು: ನದಿ ತಟದಲ್ಲಿ, ಪ್ರಕೃತಿಯ ಮಡಿಲಲ್ಲಿ ಮದುವೆಯಾದ ಜೋಡಿ
ಮಂಗಳೂರು, ಡಿಸೆಂಬರ್ 15: ಮದುವೆ ಅನ್ನೋದು ಸ್ವರ್ಗದಲ್ಲಿಯೇ ನಿಶ್ಚಯವಾಗಿರುತ್ತದೆ ಅಂತ ಹಿರಿಯರ ಮಾತಿದೆ. ಜೀವನದ ಬಹುಮುಖ್ಯ ಭಾಗವಾದ ಮದುವೆ ಹೀಗೆಯೇ ಆಗಬೇಕು ಎಂದು ಎಲ್ಲಾ ನವ ಜೋಡಿಗಳ ಆಸೆ, ಕನಸು ಕಂಡಿರುತ್ತಾರೆ. ಕೆಲವರು ಅತೀ ಸರಳವಾಗಿ ಮದುವೆಯಾದರೆ, ಇನ್ನು ಕೆಲವರು ಕೋಟ್ಯಂತರ ರೂಪಾಯಿ ಖರ್ಚು ಮಾಡಿ, ಅದ್ಧೂರಿಯಾಗಿ ಮಾಡುತ್ತಾರೆ. ಅವರವರ ಸ್ಥಿತಿಗೆ ತಕ್ಕಂತೆ ಮದುವೆಗಳು ನೆರವೇರುತ್ತದೆ.
ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪರಿಸರ ಪ್ರೇಮಿ ಜೋಡಿಯೊಂದು ನದಿ ತಟದಲ್ಲಿ, ಪ್ರಕೃತಿ ಮಡಿಲಲ್ಲಿ ಸಪ್ತಪದಿ ತುಳಿದು ಮಾದರಿಯಾಗಿದ್ದಾರೆ.
ಒಂದೆಡೆ ಶಾಂತವಾಗಿ ಹರಿಯುವ ಕಪಿಲಾ ನದಿ, ಪಕ್ಕದಲ್ಲೇ ಇರುವ ಪಶ್ಚಿಮ ಘಟ್ಟದ ಶಿಬಾಜೆ ಅರಣ್ಯ ವಲಯ, ನದಿ ತಟದಲ್ಲೇ ವಿಶಾಲವಾಗಿ ಹರಡಿರುವ ಬರ್ಗುಲ ಎಂಬ ಪ್ರದೇಶ. ಇಂತಹ ಸುಂದರ ಪ್ರಕೃತಿಯ ಮಡಿಲಲ್ಲಿ ಜೋಡಿ ನವಜೀವನಕ್ಕೆ ಕಾಲಿಟ್ಟಿದೆ. ಹಸಿರ ಮಡಿಲಲ್ಲಿ ಸಪ್ತಪದಿ ತುಳಿದ ಜೋಡಿ ತಮ್ಮ ಆಸೆ, ಕನಸನ್ನು ಈಡೇರಿಸಿಕೊಂಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ನಿವಾಸಿ ಗೋಪಿಕಾ ಹಾಗೂ ಕುಂದಾಪರದ ದಿನೇಶ್ ಪ್ರಕೃತಿಯ ಮಡಿಲಲ್ಲಿ ಸಪ್ತಪದಿ ತುಳಿದು, ನವಜೀವನಕ್ಕೆ ಕಾಲಿರಿಸಿದ ಜೋಡಿ. ಈ ಅಪರೂಪದ ಸನ್ನಿವೇಶಕ್ಕೆ ಬೆಳ್ತಂಗಡಿಯ ಶಿಶಿಲ ಎಂಬ ಪುಟ್ಟ ಊರು ಸಾಕ್ಷಿಯಾಗಿದೆ.
ಶಿಶಿಲ ಸಮೀಪದ ಬರ್ಗುಲದಲ್ಲಿ ನಡೆದ ಈ ಮದುವೆ ಕಾರ್ಯಕ್ರಮದಲ್ಲಿ ಚಪ್ಪರವಿರಲಿಲ್ಲ. ಆಡಂಬರದ ವ್ಯವಸ್ಥೆಗಳಿರಲಿಲ್ಲ. ಕೇವಲ ಪ್ರಕೃತಿಯ ಸೌಂದರ್ಯದಲ್ಲಿ ವಿಶಾಲವಾದ ಹುಲ್ಲು ಹಾಸಿನ, ನದಿ ಕಿನಾರೆಯಲ್ಲಿ ತೆಂಗಿನ ಗರಿ, ಬಾಳೆ, ತೆಂಗು ಮೊದಲಾದವುಗಳಿಂದ ಕಲಾವಿದರು ನಿರ್ಮಿಸಿದ ಪ್ರಾಂಗಣದಲ್ಲೇ ಈ ಶುಭವಿವಾಹ ನೆರವೇರಿದೆ.
ಡಿ.12ರ ಭಾನುವಾರ ಈ ಮದುವೆ ನಡೆದಿದ್ದು, ನೂರಾರು ಮಂದಿ ಪರಿಸರಾಸಕ್ತರು ಭಾಗವಹಿಸಿದ್ದಾರೆ. ವಧು ಗೋಪಿಕಾ ಖಾಸಗಿ ಕಾಲೇಜಿನ ಉಪನ್ಯಾಸಕಿಯಾಗಿದ್ದಾರೆ. ವರ ದಿನೇಶ್ ಮಂಗಳೂರಿನ ಸರ್ಕಾರಿ ಇಲಾಖೆಯೊಂದರ ಉದ್ಯೋಗಿಯಾಗಿದ್ದಾರೆ.
ಇವರಿಬ್ಬರು ತಮ್ಮ ಬಂಧುಗಳೊಂದಿಗೆ ಮಧುವಣಗಿತ್ತಿಯಂತೆ ಶೃಂಗಾರಗೊಂಡ ಬರ್ಗುಳ ಅರಣ್ಯ ಪ್ರದೇಶದ ಕಪಿಲಾನದಿ ತಟದಲ್ಲಿರುವ ರಾಷ್ಟ್ರಪ್ರಶಸ್ತಿ ಪುರಸ್ಕೃತ ಕಲಾವಿದ ಶಿವರಾಮ ಶಿಶಿಲ ಎಂಬುವರ ತೋಟದಲ್ಲಿ ವಿವಾಹವಾಗಿದ್ದಾರೆ.
ತೆಂಗಿನ ಮರದ ವಿವಿಧ ವಸ್ತುಗಳಿಂದಲೇ ಮದುವೆ ನಡೆಯುವ ಪರಿಸರವನ್ನು ಅಲಂಕಾರಗೊಳಿಸಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಖ್ಯಾತ ಕಲಾವಿದ ಹಾಗೂ ಪರಿಸರ ಹೋರಾಟಗಾರ ದಿನೇಶ್ ಹೊಳ್ಳ, ಸಚಿನ್ ಬಿಢೆ, ಶಶಿಧರ್ ಶೆಟ್ಟಿ ನೇತೃತ್ವದ ತಂಡ ಮದುವೆ ನಡೆಯುವ ಸ್ಥಳವನ್ನು ಸಜ್ಜುಗೊಳಿಸಿದ್ದರು. ತೆಂಗಿನ ಗರಿಗಳ ಕಮಾನು, ತುಳುನಾಡ ಜಾನಪದ ಕಲಾಪ್ರಕಾರಗಳು, ಆಟಿ ಕಳೆಂಜನ ಕೊಡೆ, ತಂಗಿನ ಗರಿಗಳಿಂದ ಮಾಡಿರುವ ವಿವಿಧ ಕಲಾಕೃತಿಗಳನ್ನು ಸಿದ್ಧಪಡಿಸಲಾಗಿತ್ತು.
ಈ ಶುಭಕಾರ್ಯ ಚಪ್ಪರ, ಗೋಡೆ ರಹಿತ ಕಾರ್ಯಕ್ರಮವಾಗಿದ್ದು, ಪಶ್ಚಿಮ ಘಟ್ಟದ ತಪ್ಪಲಿನ ವನಸಿರಿಯೇ ಚಪ್ಪರವಾಗಿ ರೂಪುಗೊಂಡಿತ್ತು. ಸಂಪತ್ತು, ಪರಿಸರ, ಆಹಾರ ಪೋಲು ಮಾಡುವ ಬದಲು ಪ್ರಕೃತಿಯ ಮಧ್ಯೆ ಪಾರಂಪರಿಕವಾಗಿ ಶುಭಕಾರ್ಯ ನಡೆಸಲಾಯಿತು.
Recommended Video