ರಾಜಕೀಯವಿಲ್ಲದ ಕೃಷಿ ಕಾಯ್ದೆ ವಿರೋಧಿ ಹೋರಾಟದಲ್ಲಿ ರಾಜಕಾರಣಿಗಳ ಪಾತ್ರವೇನು?
ನವದೆಹಲಿ, ನವೆಂಬರ್ 20: ಕೇಂದ್ರ ಸರ್ಕಾರದ ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸುತ್ತಿದ್ದಾರೆ. ಈ ಹಂತದಲ್ಲಿ ಪ್ರತಿಭಟನಾ ನಿರತ ರೈತರಿಗೆ ಇದರ ಸಂಪೂರ್ಣ ಕೀರ್ತಿ ಸಲ್ಲುತ್ತದೆ ಎಂದು ಶುಕ್ರವಾರ ಪ್ರತಿಪಕ್ಷಗಳು ಹೇಳಿವೆ. ಆದರೆ ವರ್ಷವಿಡೀ ಹೋರಾಟವು ಏಕೀಕೃತ ವಿರೋಧವನ್ನು ಹೊಂದಿತ್ತು. ರೈತರ ಹೋರಾಟದ ವೇದಿಕೆಯಿಂದ ದೂರವಿದ್ದರೂ, ಮನೆಗಳಿಂದ ಬೀದಿಗೆ ಸಂದೇಶವನ್ನು ಹರಡಿಸುವಲ್ಲಿ ವಿರೋಧ ಪಕ್ಷಗಳು ಮತ್ತು ನಾಯಕರ ನಿರಂತರ ಪ್ರಚಾರ ಹೇಗಿತ್ತು ಎಂಬುದು ಕುತೂಹಲಕಾರಿ ಅಂಶವಾಗಿದೆ.
ಕೃಷಿ ಕಾನೂನುಗಳನ್ನು ಹಿಂಪಡೆಯಲು ಕಲಾಪಗಳಲ್ಲಿ ನಿರ್ಣಯಗಳನ್ನು ಅಂಗೀಕರಿಸುವುದರಿಂದ ಹಿಡಿದು ಸಂಸತ್ತಿನಲ್ಲಿ ಈ ವಿಷಯವನ್ನು ನಿರಂತರವಾಗಿ ಪ್ರಸ್ತಾಪಿಸಲಾಗಿತ್ತು. 2021ರ ಆರಂಭದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಅಧಿವೇಶನದವರೆಗೆ ರಾಷ್ಟ್ರಪತಿಗಳ ಸಾಂಪ್ರದಾಯಿಕ ಭಾಷಣವನ್ನು ಬಹಿಷ್ಕರಿಸಲಾಗಿತ್ತು. ಕಳೆದ ಏಳು ವರ್ಷಗಳಲ್ಲಿ ಮೊದಲ ಬಾರಿಗೆ ಪ್ರತಿಪಕ್ಷಗಳು ಒಂದು ವಿಷಯದಲ್ಲಿ ಏಕತೆ ಪ್ರದರ್ಶಿಸಿದ್ದು, ಕಾನೂನು ಹೋರಾಟದಲ್ಲೂ ರೈತರಿಗೆ ವ್ಯಾಪಕ ಬೆಂಬಲವನ್ನು ವ್ಯಕ್ತಪಡಿಸಿದವು.
ಕಳೆದ 2020ರ ನವೆಂಬರ್.26ರಿಂದ ನವದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪಂಜಾಬ್, ಹರಿಯಾಣ, ಮತ್ತು ಉತ್ತರ ಪ್ರದೇಶದ ಸಾವಿರಾರು ರೈತರು ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸಿದ್ದರು. ಉತ್ತರ ಭಾರತದಲ್ಲಿ ಪರಿಣಾಮಕಾರಿಯಾಗಿದ್ದ ಪ್ರತಿಭಟನೆಯು ಇಡೀ ದೇಶಕ್ಕೆ ವ್ಯಾಪಿಸಿದ್ದು ಹೇಗೆ ಎಂಬುದರ ಕುರಿತು ಒಂದು ವಿಶೇಷ ವರದಿಗಾಗಿ ಮುಂದೆ ಓದಿ.
ರೈತ ಹೋರಾಟಕ್ಕೆ ಬೆಂಬಲವಾಗಿ ನಿಂತ ರಾಜಕೀಯ ಪಕ್ಷಗಳು
ಕಳೆದ ವರ್ಷ ಪಂಜಾಬ್ನಲ್ಲಿ ಮೂರು ದಿನಗಳ ಟ್ರ್ಯಾಕ್ಟರ್ ಮೆರವಣಿಗೆಯಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಭಾಗವಹಿಸಿದ್ದರು. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಉತ್ತರ ಪ್ರದೇಶದಲ್ಲಿ ನಡೆದ ಕಿಸಾನ್ ಮಹಾಪಂಚಾಯತ್ಗಳನ್ನು ಉದ್ದೇಶಿಸಿ ಮಾತನಾಡಿದರು. ದೆಹಲಿ ಸೇರಿದಂತೆ ಉತ್ತರದ ರಾಜ್ಯಗಳಲ್ಲಿ ಪರಿಣಾಮಕಾರಿಯಾಗಿದ್ದ ಕೃಷಿ ಕಾಯ್ದೆ ಹೋರಾಟವನ್ನು ಇತರೆ ರಾಜ್ಯಗಳಿಗೆ ವ್ಯಾಪಿಸುವಲ್ಲಿ ಇತರೆ ರಾಜಕೀಯ ಪಕ್ಷಗಳು ಪ್ರಮುಖ ಪಾತ್ರ ವಹಿಸಿದವು. ತಮಿಳುನಾಡಿನಲ್ಲಿ ಡಿಎಂಕೆ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಕೇರಳದಲ್ಲಿ ಎಡಪಕ್ಷಗಳು, ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ಬಿಹಾರದಲ್ಲಿ ಆರ್ಜೆಡಿ ಪಕ್ಷಗಳು ರೈತರಿಗೆ ಬೆಂಬಲವಾಗಿ ನಿಂತವು.
ಕೃಷಿ ಕಾಯ್ದೆ ವಾಪಸ್ ಬಗ್ಗೆ ರಾಹುಲ್ ಗಾಂಧಿ ಭವಿಷ್ಯ
ವಿವಾದಿತ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ವಾಪಸ್ ಪಡೆದುಕೊಳ್ಳುತ್ತದೆ ಎಂಬುದಾಗಿ ರಾಹುಲ್ ಗಾಂಧಿ ಭವಿಷ್ಯ ನುಡಿದಿದ್ದ ವಿಡಿಯೋ ಶುಕ್ರವಾರ ವೈರಲ್ ಆಯಿತು. ತಮಿಳುನಾಡಿನ ಮಧುರೈನಲ್ಲಿ ರಾಹುಲ್ ಗಾಂಧಿ ಈ ಬಗ್ಗೆ ಹೇಳಿಕೆ ನೀಡಿದ್ದರು. ಪ್ರಧಾನಿ ಮೋದಿ ಅಧಿಕೃತವಾಗಿ ಕೃಷಿ ಕಾಯ್ದೆ ರದ್ದುಗೊಳಿಸುವ ಬಗ್ಗೆ ಘೋಷಿಸುತ್ತಿದ್ದಂತೆ ಈ ವಿಡಿಯೋ ವೈರಲ್ ಆಯಿತು. ರಾಹುಲ್ ಗಾಂಧಿ ಅವರ ವಿಡಿಯೋ ತುಣುಕಿನಲ್ಲಿ, "ರೈತರು ಮಾಡುತ್ತಿರುವ ಕೆಲಸದ ಬಗ್ಗೆ ನನಗೆ ತುಂಬಾ ಹೆಮ್ಮೆಯಿದೆ. ನಾನು ರೈತರನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ, ಹಾಗೂ ಅವರೊಂದಿಗೆ ನಿಲ್ಲುತ್ತೇನೆ. ನನ್ನ ಮಾತುಗಳನ್ನು ಬರೆದಿಟ್ಟುಕೊಳ್ಳಿ, ಕೇಂದ್ರ ಸರ್ಕಾರವು ಕೃಷಿ ಕಾನೂನುಗಳನ್ನು ಹಿಂಪಡೆಯುತ್ತದೆ. ಈಗ, ನಾನು ಹೇಳಿದ್ದನ್ನು ನೆನಪಿಡಿ," ಎಂದು ರಾಹುಲ್ ಗಾಂಧಿ ಹೇಳಿದ್ದರು.
ತಮಿಳುನಾಡಿನಲ್ಲಿ ಕೃಷಿ ಕಾಯ್ದೆ ವಿರುದ್ಧ ಡಿಎಂಕೆ ಪ್ರಚಾರ
ತಮಿಳುನಾಡಿನಲ್ಲಿ ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟ ಅಷ್ಟೊಂದು ಪರಿಣಾಮಕಾರಿ ಎನ್ನಿಸಲಿಲ್ಲ. ಆದರೆ ಕಳೆದ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದರೆ, ರಾಜ್ಯ ಸದನದಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ನಿರ್ಣಯ ಅಂಗೀಕರಿಸುವುದಾಗಿ ಭರವಸೆ ನೀಡಿತ್ತು. ಚುನಾವಣೆ ನಂತರದಲ್ಲಿ ಗದ್ದುಗೆ ಏರಿದ ಡಿಎಂಕೆ ಸರ್ಕಾರವು ಆಗಸ್ಟ್ ತಿಂಗಳಿನಲ್ಲಿ ನಿರ್ಣಯವನ್ನು ಅಂಗೀಕರಿಸಿತ್ತು. ಪಶ್ಚಿಮ ಬಂಗಾಳ, ಪಂಜಾಬ್, ಛತ್ತೀಸ್ಗಢ, ದೆಹಲಿ, ರಾಜಸ್ಥಾನ ಮತ್ತು ಕೇರಳ ವಿಧಾನಸಭೆಯಲ್ಲಿ ಜನವರಿಯಲ್ಲಿ ಕೃಷಿ ಕಾನೂನುಗಳ ವಿರುದ್ಧ ನಿರ್ಣಯವನ್ನು ಅಂಗೀಕರಿಸಿಲಾಯಿತು.
ಬಂಗಾಳದಲ್ಲಿ ಕೃಷಿ ಕಾಯ್ದೆಯೇ ಚುನಾವಣಾ ಪ್ರಮುಖ ವಿಷಯ
ಪಶ್ಚಿಮ ಬಂಗಾಳದಲ್ಲಿ ಯಾವುದೇ ರೀತಿ ಮಂಡಿ ವ್ಯವಸ್ಥೆಯನ್ನು ಹೊಂದಿಲ್ಲ. ಅಲ್ಲದೇ ಕೃಷಿ ಕಾಯ್ದೆಗಳ ವಿರುದ್ಧ ಅಷ್ಟೊಂದು ಪ್ರಭಾವಶಾಲಿಯಾದ ಪ್ರತಿಭಟನೆಗೂ ರಾಜ್ಯದಲ್ಲಿ ನಡೆದಿರಲಿಲ್ಲ. ಅದಾಗ್ಯೂ, ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಇದೇ ಕೃಷಿ ಕಾಯ್ದೆಗಳನ್ನು ಅಸ್ತ್ರವಾಗಿ ಬಳಸಿಕೊಂಡರು. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಬಹುಮತ ಪಡೆದ ನಂತರದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು, ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ಟಿಕಾಯತ್ ರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
ಕೃಷಿ ಕಾಯ್ದೆ ವಾಪಸ್ ಪಡೆಯಲು ಚುನಾವಣೆ ಭೀತಿ ಕಾರಣ
ಶುಕ್ರವಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತೆಗೆದುಕೊಂಡ ನಿರ್ಧಾರವು ಮುಂದಿನ ವರ್ಷದ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಂದಿದೆ ಎಂದು ಅನೇಕ ವಿರೋಧ ಪಕ್ಷದ ನಾಯಕರು ದೂಷಿಸುತ್ತಿದ್ದಾರೆ. ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡ ರಾಜಕೀಯ ವಿರೋಧಿಗಳ ನೇತೃತ್ವ ಇಲ್ಲದಿದ್ದರೂ ನಿರಂತರ ಆಂದೋಲನಗಳಿಂದ ಸರ್ಕಾರವನ್ನು ಹಿಮ್ಮೆಟ್ಟಸಲು ಸಾಧ್ಯ ಎಂಬುದನ್ನು ಮನಸ್ಸಿಗೆ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.
"ಪ್ರಜಾಸತ್ತಾತ್ಮಕ ಪ್ರತಿಭಟನೆಗಳಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲವೋ ಅದನ್ನು ಮುಂಬರುವ ಚುನಾವಣೆಗಳ ಭಯದಿಂದ ಸಾಧಿಸಬಹುದು! ಮೂರು ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವ ಕುರಿತು ಪ್ರಧಾನ ಮಂತ್ರಿಯವರ ಘೋಷಣೆಯು ನೀತಿಯ ಬದಲಾವಣೆ ಅಥವಾ ಮನಸಿನಿಂದ ಪ್ರೇರಿತವಾಗಿಲ್ಲ. ಇದು ಚುನಾವಣೆ ಭಯದಿಂದ ಪ್ರೇರೇಪಿಸಲ್ಪಟ್ಟಿದೆ," ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಟ್ವೀಟ್ ಮಾಡಿದ್ದಾರೆ.
ಬಿಜೆಪಿಗೆ ಅಶುಭ ಸಂಕೇತಗಳನ್ನು ರವಾನಿಸಿದ ಕಾರ್ಯಕರ್ತರು
ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಮಾತನಾಡಿ, "ಹಿಂದಿ ಹೃದಯಭಾಗದಲ್ಲಿರುವ ರಾಜ್ಯಗಳಲ್ಲಿ ತನ್ನ ತಳಮಟ್ಟದ ಕಾರ್ಯಕರ್ತರಿಂದ ಬಿಜೆಪಿಗೆ "ಅಶುಭ ಸಂಕೇತಗಳು" ಬರುತ್ತಿವೆ. ಇದರಿಂದಾಗಿ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದೆ. ಹೀಗೆ ಮುಂದುವರಿದರೆ ಅವರಿಗೆ ಉಳಿಗಾಲವಿಲ್ಲ ಎಂಬುದನ್ನು ಅರಿತುಕೊಂಡಿದ್ದಾರೆ." ಈ ನಿರ್ಧಾರ ಮೋದಿಯ ನೈತಿಕ ಸೋಲು ಎಂದು ಚೌಧರಿ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಕಾಂಗ್ರೆಸ್ ಉಪ ನಾಯಕ ಆನಂದ್ ಶರ್ಮಾ ಅವರು ಮಾತನಾಡಿ, "ಕಾನೂನು ರಚಿಸುವಾಗ ಸಂಸತ್ತಿನ ಪರಿಶೀಲನೆಯನ್ನು ಹಾಗೂ ಚರ್ಚೆಯನ್ನು ಮಾಡುವುದರ ಪರಿಣಾಮಗಳನ್ನು ಸರ್ಕಾರ ಈಗ ಅರಿತುಕೊಂಡಿರಬೇಕು," ಎಂದರು. "ಕಾನೂನುಗಳನ್ನು ಜಾರಿಗೊಳಿಸುವಾಗ ಶಾಸಕಾಂಗ ಪರಿಶೀಲನೆಯನ್ನು ಬೈಪಾಸ್ ಮಾಡುವುದು ಯಾವಾಗಲೂ ಉದ್ವಿಗ್ನತೆ ಮತ್ತು ಸಂಘರ್ಷವನ್ನು ಉಂಟುಮಾಡುತ್ತದೆ ಎಂದು ಈಗ ಅರಿವಾಗುತ್ತದೆ" ಎಂದು ತಿಳಿಸಿದ್ದಾರೆ.
ಮೋದಿ ಸರ್ಕಾರ ವಾಪಸ್ ಪಡೆದ ಕೃಷಿ ಕಾಯ್ದೆಗಳು ಯಾವುವು?
ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳು ರೈತರ ವಿರೋಧಕ್ಕೆ ಕಾರಣವಾಗಿದ್ದವು. ಇದೇ ಕಾಯ್ದೆಗಳನ್ನು ವಾಪಸ್ ಪಡೆದುಕೊಳ್ಳುವುದಕ್ಕೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದೆ.
Recommended Video