Hanumantha: ತುಕಾಲಿ ಸಂತೋಷ್ ಮೇಲೆ ಹಲ್ಲೆ ಮಾಡಿದ್ರಾ ಬಿಗ್ ಬಾಸ್ ಹನುಮಂತನ ಫ್ಯಾನ್ಸ್? ಆಗಿದ್ದೇನು?
ಬಿಗ್ ಬಾಸ್ ಕನ್ನಡ ಸೀಜನ್ 11ರ ಗ್ರ್ಯಾಂಡ್ ಫಿನಾಲೆಯ ಕಾರ್ಯಕ್ರಮ ಮುಗಿದು ಸಂಪೂರ್ಣವಾಗಿ ಎರಡು ವಾರಗಳು ಕಳೆದಿದೆ. ಆದರೆ ಆ ದಿನ ನಡೆದ ಒಂದು ಘಟನೆಯ ಬಗ್ಗೆ ಬಹುತೇಕರಿಗೆ ಇನ್ನೂ ಸ್ಪಷ್ಟನೆ ಸಿಕ್ಕಂತೆ ಕಾಣುತ್ತಿಲ್ಲ. ಹೌದು ಬಿಗ್ ಬಾಸ್ ಕನ್ನಡ ಗ್ರ್ಯಾಂಡ್ ಫಿನಾಲೆಯ ದಿನ ಮಾಜಿ ಬಿಗ್ ಬಾಸ್ ಸ್ಪರ್ಧಿ ತುಕಾಲಿ ಸಂತೋಷ್ ಹಾಗೂ ಅವರ ಪತ್ನಿ ಮಾನಸ ಅವರ ಕಾರಿನ ಸುತ್ತ ಒಂದಿಷ್ಟು ಜನ ಸುತ್ತುವರಿದಿದ್ದ ವಿಡಿಯೋ ಒಂದು ವೈರಲ್ ಆಗಿತ್ತು. ಈ ವಿಡಿಯೋಗೆ ಹತ್ತಾರು ಶೀರ್ಷಿಕೆ ಕೊಡಲಾಗಿತ್ತು.
ತುಕಾಲಿ ಸಂತೋಷ್ ಮೇಲೆ ಹನುಮಂತನ ಅಭಿಮಾನಿಗಳಿಂದ ಹಲ್ಲೆ, ಅಪಘಾತ ಮಾಡಿ ಎಸ್ಕೇಪ್ ಆಗಲು ಯತ್ನಿಸಿದ ತುಕಾಲಿ ಸಂತೋಷ್, ಫ್ಯಾನ್ಸ್ಗೆ ಫೋಟೋ ಕೊಡದ ತುಕಾಲಿ ಸಂತೋಷ್ ಅಂತೆಲ್ಲಾ ವಿಡಿಯೋಗಳು ವೈರಲ್ ಆಗಿದ್ದವು. ಆ ದೃಶ್ಯಗಳನ್ನು ಕಂಡವರು ನಿಜ ಇರಬಹುದು ಎಂದುಕೊಂಡಿರಬಹುದು ಆದರೆ ಅಲ್ಲಿ ನಡೆದಿರುವ ಅಸಲಿ ವಿಚಾರವೇ ಬೇರೆ ಇದೆ. ಆ ದಿನ ಅಲ್ಲಿ ನಡೆದಿದ್ದೇನು ಎನ್ನುವುದರ ಬಗ್ಗೆ ಸ್ವತಃ ತುಕಾಲಿ ಸಂತೋಷ್ ಸ್ಪಷ್ಟನೆ ನೀಡಿದ್ದಾರೆ.

ನ್ಯಾಷನಲ್ ಟಿವಿ ಜೊತೆ ಮಾತನಾಡಿದ ಅವರು, 'ಆ ದಿನ ಬಿಗ್ ಬಾಸ್ ಮುಗಿಸಿ ಹೊರಗಡೆ ಬರುವಾಗ ಸ್ಪರ್ಧಿಗಳ ಜೊತೆ ಫೋಟೋ ತೆಗೆದುಕೊಳ್ಳಲು ತುಂಬಾ ಜನ ಅಭಿಮಾನಿಗಳು ಕಾಯುತ್ತಿದ್ದರು. ಅದೇ ಸಮಯಕ್ಕೆ ಮಾನಸ ಹಾಗೂ ನಾವು ಬಂದೆವು. ಆಗ ಕಾರಿನಿಂದ ಇಳಿಯಿರಿ ಎಂದು ಸಿಕ್ಕಾಪಟ್ಟೆ ಒತ್ತಾಯ ಮಾಡಿದರು. ಆದರೆ ನಮಗೆ ಕಾರಿನಿಂದ ಇಳಿಯಲು ಆಗಲಿಲ್ಲ. ಕಾರಿನ ಸುತ್ತಲೂ ತುಂಬಾ ಜನ ನಿಂತಿದ್ದರು. ಕಾರಿನ ಚಕ್ರ ಒಂದು ಸುತ್ತು ಉರುಳಿದರೂ ಯಾರಾದರೂ ಕಾಲಿನ ಮೇಲೆ ಹತ್ತುತ್ತಿತ್ತು. ಇದು ನನಗೆ ಭಯವಾಗಿ ಕಾರಿನೊಳಗೆ ಇದ್ದೆ'.
'ಕ್ಯಾಮರಾ ಲೈಟ್ಗಳು ಕಣ್ಣಿಗೆ ಹೊಡೆಯುತ್ತಿದ್ದು ಹೊರಗಡೆಯದು ಏನೂ ಕಾಣುತ್ತಿಲ್ಲ. ಇದರಿಂದ ನಿಜವಾಗಿಯೂ ಗಾಬರಿಯಾಗಿದ್ದೆ. ಅದಾದ ಮೇಲೆ ಪಕ್ಕಕ್ಕೆ ಹೋಗಿ ಕಾರು ನಿಲ್ಲಿಸಿ ಫೋಟೋ ಕೊಟ್ಟಿದ್ದೇನೆ. ಅದನ್ನು ಯಾರೂ ಎಲ್ಲಿಯೂ ಹಾಕಿಲ್ಲ. ಆದರೆ ಒಂದು ವಿಡಿಯೋಗೆ ನೂರಾರು ಬಣ್ಣ ಹಾಕಿ ಅದನ್ನು ವೈಭವೀಕರಣ ಮಾಡಿ ವೈರಲ್ ಮಾಡಿದರು. ಅದಕ್ಕೂ ನಾನೇನು ಬೇಜಾರು ಮಾಡಿಕೊಳ್ಳುವುದಿಲ್ಲ'.

'ಆದರೆ ತ್ರಿವಿಕ್ರಮ್ ಗೆಲ್ಲಲಿ ಎಂದಿರುವುದಕ್ಕೆ ಹನುಮಂತನ ಅಭಿಮಾನಿಗಳಿಂದ ಹಲ್ಲೆ ಅಂತಾ ಹಾಕಿ ವೈರಲ್ ಮಾಡಿದರು. ಇದು ನನಗೆ ತುಂಬಾ ನೋವಾಯಿತು. ಹನುಮಂತ ನನಗೂ ಆತ್ಮೀಯ. ಅವನು ಗೆದ್ದರೆ ನಮಗೇನು ಹೊಟ್ಟೆಯುರಿನಾ? ಇಲ್ಲಾ ಯಾರಾದರೂ ಗೆದ್ದರೆ ನನಗೆ ದುಡ್ಡು ಕೊಡುತ್ತಾರಾ? ಯಾರು ಗೆದ್ದರೆ ನನಗೇನು ಉಪಯೋಗ ಇದೆ? ಆದರೆ ಆ ಘಟನೆ ವೈರಲ್ ಮಾಡಿದ ರೀತಿ ತುಂಬಾ ಬೇಜಾರಾಯಿತು. ನಾವು ಕಲಾವಿದರು ಯಾರೇ ಏನೂ ಅಂದರೂ ಅನಿಸಿಕೊಳ್ಳುವಂತಹ ಮನಸ್ಥಿತಿ ನಮಗೆ ಇದು' ಎಂದು ತುಕಾಲಿ ಸಂತೋಷ್ ಬಹಳ ಬೇಸರ ವ್ಯಕ್ತಪಡಿಸಿದರು.












Click it and Unblock the Notifications