CCL 2025: ಕರ್ನಾಟಕ ಬುಲ್ಡೋಜರ್ಸ್ ಸೇರಿದ ತ್ರಿವಿಕ್ರಮ್; ಬರಮಾಡಿಕೊಂಡ ಕಿಚ್ಚ ಸುದೀಪ್
ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) 2025 ಪಂದ್ಯಾವಳಿ ಆರಂಭಕ್ಕೆ ಇನ್ನು 4 ದಿನಗಳು ಬಾಕಿ ಇದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಸಿಎಲ್ ಪಂದ್ಯಾವಳಿಗೆ ಅದ್ದೂರಿ ಚಾಲನೆ ಸಿಗಲಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ರಿನ್ಹೋಸ್ ತಂಡವು ಬೆಂಗಾಲ್ ಟೈಗರ್ಸ ತಂಡದ ವಿರುದ್ಧ ಸೆಣೆಸಲಿದೆ, ಅದೇ ದಿನ ನಡೆಯಲಿರುವ ಎರಡನೇ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡವು ತೆಲುಗು ವಾರಿಯರ್ಸ್ ವಿರುದ್ಧ ಸೆಣೆಸಲಿದೆ.
ಕರ್ನಾಟಕ ಬುಲ್ಡೋಜರ್ಸ್ ಈಗಾಗಲೇ ಸಿಸಿಎಲ್ 2025ರ ಪಂದ್ಯಾವಳಿಗಾಗಿ ತಂಡವನ್ನು ಪ್ರಕಟಿಸಿದೆ. ಇದೀಗ ತಂಡಕ್ಕೆ ಮತ್ತೊಬ್ಬ ಆಟಗಾರನ ಸೇರ್ಪಡೆಯಾಗಿದೆ. ಬಿಗ್ಬಾಸ್ 11ನೇ ಆವೃತ್ತಿಯ ರನ್ನರ್ ಅಪ್ ಆಗಿರುವ ತ್ರಿವಿಕ್ರಮ್ ಇದೀಗ ಅಧಿಕೃತವಾಗಿ ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ಸೇರಿಕೊಂಡಿದ್ದಾರೆ.

ತಂಡದ ನಾಯಕ ಕಿಚ್ಚ ಸುದೀಪ್ ಕರ್ನಾಟಕ ಬುಲ್ಡೋಜರ್ಸ್ ತಂಡದ ಕ್ಯಾಪ್ ನೀಡುವ ಮೂಲಕ ತ್ರಿವಿಕ್ರಮ್ ಅವರನ್ನು ತಂಡಕ್ಕೆ ಸ್ವಾಗತಿಸಿದ್ದಾರೆ. ತ್ರಿವಿಕ್ರಂರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿರುವ ವಿಚಾರವನ್ನು ಕರ್ನಾಟಕ ಬುಲ್ಡೋಜರ್ಸ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
ತ್ರಿವಿಕ್ರಮ್ ಈಗಾಗಲೇ ಸಿಸಿಎಲ್ ಪಂದ್ಯಾವಳಿಗೆ ಅಭ್ಯಾಸವನ್ನು ಕೂಡ ಆರಂಭಿಸಿದ್ದಾರೆ. ಅಭ್ಯಾಸ ಮಾಡುತ್ತಿರುವ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಎರಡು ಬಾರಿ ಪ್ರಶಸ್ತಿ ಗೆದ್ದಿರುವ ಕರ್ನಾಟಕ ಬುಲ್ಡೋಜರ್ಸ್ ಮೂರನೇ ಬಾರಿ ಕಪ್ ಗೆಲ್ಲುವ ವಿಶ್ವಾಸದಲ್ಲಿದೆ.
ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಈ ಬಾರಿಯೂ ಕಿಚ್ಚ ಸುದೀಪ್ ಅವರೇ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಸುದೀಪ್ ವಿಕೆಟ್ ಕೀಪರ್ ಕೂಡ ಆಗಿದ್ದು, ತಂಡವನ್ನು ಮುನ್ನಡೆಸಲಿದ್ದಾರೆ. ಅವರ ನಾಯಕತ್ವದಲ್ಲಿ ತಂಡ ಎರಡು ಬಾರಿ ಪ್ರಶಸ್ತಿ ಕೂಡ ಗೆದ್ದುಕೊಂಡಿದೆ.
2024ರ ಸಿಸಿಎಲ್ ಪಂದ್ಯಾವಳಿಯಲ್ಲಿ ಫೈನಲ್ ಪ್ರವೇಶಿಸಿದ್ದ ಕರ್ನಾಟಕ ಬುಲ್ಡೋಜರ್ಸ್ ಫೈನಲ್ನಲ್ಲಿ ಬೆಂಗಾಲ್ ಟೈಗರ್ಸ್ ವಿರುದ್ಧ ಸೋಲುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ಸಮಾಧಾನ ಪಟ್ಟುಕೊಂಡಿದೆ. ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ಕರ್ನಾಟಕ ಬುಲ್ಡೋಜರ್ಸ್ ಈ ಬಾರಿ ಕೂಡ ಉತ್ತಮ ಪ್ರದರ್ಶನ ಮುಂದುವರೆಸುವ ವಿಶ್ವಾಸದಲ್ಲಿದೆ. ಫೆಬ್ರವರಿ 8 ರಂದು ಬೆಂಗಳೂರಿನಲ್ಲೇ ಬುಲ್ಡೋಜರ್ಸ್ ಮೊದಲ ಪಂದ್ಯ ಆಡಲಿದ್ದು ತವರಿನ ಅಭಿಮಾನಿಗಳ ಹೆಚ್ಚಿನ ಬಲ ಕೂಡ ಸಿಗಲಿದೆ.
ಕರ್ನಾಟಕ ಬುಲ್ಡೋಜರ್ಸ್ ತಂಡ
ಕಿಚ್ಚ ಸುದೀಪ್ (ನಾಯಕ), ಗೋಲ್ಡನ್ ಸ್ಟಾರ್ ಗಣೇಶ್, ಕಾರ್ತಿಕ್ ಜಯರಾಮ್, ಡಾರ್ಲಿಂಗ್ ಕೃಷ್ಣ, ರಾಜೀವ್ ಹನು, ಚಂದನ್ ಕುಮಾರ್, ಪ್ರತಾಪ್ ನಾರಾಯಣ್, ನಿರೂಪ್ ಭಂಡಾರಿ, ಅನೂಪ್ ಭಂಡಾರಿ, ಕರಣ್ ಆರ್ಯನ್, ಮಂಜುನಾಥ್ ಗೌಡ, ಸಾಗರ್ ಗೌಡ, ಅಲಕನಂದ, ತ್ರಿವಿಕ್ರಮ್.












Click it and Unblock the Notifications