ಕನ್ನಡ ಚಿತ್ರರಂಗಕ್ಕೆ ಆಶ್ರಮದಲ್ಲಿರುವ ಶೈಲಶ್ರೀ ಸುದರ್ಶನ್ ಅವರ ಮನವಿ ಏನು?
ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಆರ್.ಎನ್. ನಾಗೇಂದ್ರರಾಯರ ಸೊಸೆ, ಹಿರಿಯ ನಟ ಸುದರ್ಶನ್ ಅವರ ಪತ್ನಿ ಶೈಲಶ್ರೀ ಸುದರ್ಶನ್ ಅವರು ಸದ್ಯ ವೃದ್ಧಾಶ್ರಮ ಸೇರಿದ್ದಾರೆ. ಚಿತ್ರರಂಗದಲ್ಲಿ ನಾಯಕಿಯಾಗಿ, ಪೋಷಕ ನಟಿಯಾಗಿ ಗುರುತಿಸಿಕೊಂಡಿದ್ದ ಶೈಲಶ್ರೀ ಅವರು ಸಂಗೀತ ಕ್ಷೇತ್ರದಲ್ಲಿಯೂ ಸಾಧನೆ ಮಾಡಿದ್ದಾರೆ. ಸದ್ಯ ಆಶ್ರಮದಲ್ಲಿ ಆಶ್ರಯ ಪಡೆಯುತ್ತಿರುವ ಅವರು ಅಲ್ಲಿಯೂ ಸಂಗೀತ ಸೇವೆಯನ್ನು ಮುಂದುವರಿಸಿದ್ದಾರೆ.
ಹಿರಿಯ ನಟ ಸುದರ್ಶನ್ ನಿಧನದ ಬಳಿಕ ಒಂಟಿಯಾಗಿದ್ದ ಶೈಲಶ್ರೀ ಅವರಿಗೆ ಒಂದಾದ ಮೇಲೊಂದು ಸವಾಲುಗಳು ಎದುರಾಗಲು ಶುರುವಾಗಿದ್ದು, ಈ ವೇಳೆ ಹಿರಿಯ ನಟಿ ಗಿರಿಜಾ ಲೋಕೇಶ್ ಅವರು ಅವರ ಸಹಾಯಕ್ಕೆ ನಿಂತಿದ್ದರು. ಈ ಬಗ್ಗೆ ಸ್ವತಃ ಶೈಲಶ್ರೀ ಸುದರ್ಶನ್ ಅವರು ಹೇಳಿಕೊಂಡಿದ್ದು, ಗಿರಿಜಾ ಲೋಕೇಶ್ ಸಹಾಯ ನೆನೆದು ಭಾವುಕರಾಗಿದ್ದಾರೆ.

ಟಿವಿ 9 ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, 'ಈ ರೀತಿ ಎಲ್ಲರಿಂದ ಸಹಾಯ ತೆಗೆದುಕೊಂಡು ನಾನು ಬಾಳಬೇಕು ಎನ್ನುವುದು ನನ್ನ ಮನಸ್ಸಿನಲ್ಲಿ ಯಾವತ್ತೂ ಇರಲೇ ಇಲ್ಲ. ಆದರೆ ನನ್ನ ಈಗಿನ ಪರಿಸ್ಥಿತಿಗೆ ಯಾರ್ಯಾರೋ ದೇವರಂತೆ ಬಂದು ಸಹಾಯ ಮಾಡುತ್ತಿದ್ದಾರೆ. ನನ್ನ ಸಹೋದರಿ ಗಿರಿಜಾ ಲೋಕೇಶ್ ನನಗೆ ತುಂಬಾ ಸಹಾಯ ಮಾಡಿದರು. ನನಗೆ ಕ್ಯಾನ್ಸರ್ ಬಂದಿದೆ ಅಂತಾ ಯಾರೋ ಹೇಳಿದಾಗ ಅವರೇ ನನ್ನನ್ನು ಕರೆದುಕೊಂಡು ಹೋಗಿ ತಪಾಸಣೆ ಮಾಡಿಸಿದರು. ನನ್ನ ಜೊತೆಗೆ ನಿಂತುಕೊಂಡಿದ್ದರು. ಅವರು ಇವತ್ತಿಗೂ ನನ್ನ ಜೊತೆ ನಿಂತುಕೊಂಡಿದ್ದಾರೆ' ಎಂದರು.
'ನನ್ನ ಪತಿ ಸುದರ್ಶನ್ ಅವರು ಆಸ್ಪತ್ರೆ ಸೇರಿದ್ದಾಗ ಮೊದಲು ಬಂದವರು ಗಿರಿಜಾ ಲೋಕೇಶ್. ಅಂತಹ ಸಮಯದಲ್ಲಿ ನನ್ನ ಕೈಯಲ್ಲಿ ಹಣಕೊಟ್ಟು ನೀವು ಹೋಗಿ ಕುಳಿತುಕೊಳ್ಳಿ ಅಂತಾ ಹೇಳಿ ಮುಂದಿನದ್ದು ಅವರೇ ನೋಡಿಕೊಂಡರು. ಈಗಲೂ ನನಗೆ ಅವರೇ ಗಾಡ್ ಮದರ್ ಅಂತಾ ಹೇಳಬಹುದು. ಪಾಪ ಅವರು ನನ್ನ ಬಗ್ಗೆ ತುಂಬಾ ಕಾಳಜಿ ತೆಗೆದುಕೊಂಡಿದ್ದಾರೆ' ಎಂದು ಹೇಳಿದರು

ಇನ್ನು ತಾವು ಮಡಿಲು ಆಶ್ರಮದಲ್ಲಿ ಈಗ ಹೇಗಿದ್ದಾರೆ ಎನ್ನುವುದರ ಬಗ್ಗೆ ಮಾತನಾಡಿದ ಅವರು, 'ನಾನು ಇಲ್ಲಿಗೆ ಬಂದು ಒಂದು ತಿಂಗಳ ಮೇಲಾಯ್ತು. ತುಂಬಾ ಖುಷಿಯಾಗುತ್ತದೆ. ಇಲ್ಲಿನ ವಾತಾವರಣ ತುಂಬಾ ಹಿಡಿಸಿತು. ಮೊದಲು ಎರಡೇ ವೀಣೆ ತೆಗೆದುಕೊಂಡು ಬರಬೇಕು ಅಂದಿದ್ದರು. ನಾನು ನಾಲ್ಕು ವೀಣೆ ಕೇಳಿದ್ದೆ ಅವರು ಕೊನೆಗೆ ಅದಕ್ಕೂ ಒಪ್ಪಿಕೊಂಡರು. ಹೀಗೆ ಬಹಳ ಆತ್ಮೀಯರಾಗಿದ್ದಾರೆ' ಎಂದು ಹೇಳಿದರು.
ಇನ್ನು ಕನ್ನಡ ಚಿತ್ರರಂಗದಿಂದ ಏನು ಸಹಾಯ ಬೇಕು ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, 'ನನಗೆ ಕಲೆಗಳೆಲ್ಲಾ ಬರುವುದರಿಂದ ಜೀವನ ಕಷ್ಟ ಇಲ್ಲ. ನನ್ನಲ್ಲಿರುವ ಕಲೆಗಳನ್ನು ನಾನು ಬಳಸಿಕೊಳ್ಳಲು ಸಹಾಯ ಬೇಕು. ಅದು ಯಾವ ರೀತಿ ಬರುತ್ತದೆ ಅಂತಾ ಗೊತ್ತಿಲ್ಲ. ನಾನು ಕೂಡ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಬೇಕು. ನಾನು ಸಂಗೀತ ಪರಂಪರೆಯ ಹಿನ್ನೆಲೆಯಿಂದ ಬಂದಿರುವುದರಿಂದ ಸಂಗೀತವನ್ನು ಹೆಚ್ಚೆಚ್ಚು ಕಲಿಸಬೇಕು ಎನ್ನುವ ಆಸೆ ಇದೆ. ಈಗಲೂ ಮಕ್ಕಳಿಗೆ ಸಂಗೀತ ಹೇಳಿಕೊಡುತ್ತೇನೆ. ಆಶ್ರಮದ ಕೆಳಗೆ ದೇವಸ್ಥಾನದ ರೀತಿ ಇದೆ. ಅಲ್ಲಿ ನಾನು ತರಗತಿಗಳನ್ನು ಮಾಡುತ್ತೇನೆ' ಎಂದು ಹೇಳಿದರು.












Click it and Unblock the Notifications