ಡೈಲಾಗ್ ಹೊಡೆದು ಯಡವಟ್ಟು: ಕೊನೆಗೂ ಕ್ಷಮೆಯಾಚಿಸಿದ ರಕ್ಷಕ್ ಬುಲೆಟ್
ರಿಯಾಲಿಟಿ ಶೋವೊಂದರಲ್ಲಿ ಪಕ್ಕದಲ್ಲಿದ್ದ ಹುಡುಗಿಯನ್ನು ಹೊಗಳುವ ಭರದಲ್ಲಿ ನಾಡ ದೇವತೆ ಚಾಮುಂಡೇಶ್ವರಿಗೆ ಅಪಮಾನ ಮಾಡಿದ್ದಾರೆ ಎನ್ನುವ ಆರೋಪ ಎದುರಿಸುತ್ತಿರುವ ಬಿಗ್ ಬಾಸ್ ಮಾಜಿ ಸ್ಪರ್ಧಿ ರಕ್ಷಕ್ ಬುಲೆಟ್ ಕ್ಷಮೆಯಾಚಿಸಿದ್ದಾರೆ. ರಕ್ಷಕ್ ಬುಲೆಟ್ ಹೇಳಿರುವ ಡೈಲಾಗ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಹಿಂದೂ ಸಂಘಟನೆಗಳ ಒತ್ತಾಯಕ್ಕೆ ಮಣಿದು ಕೊನೆಗೂ ರಕ್ಷಕ್ ಬುಲೆಟ್ ಕ್ಷಮೆ ಕೇಳಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿಯಾಗಿದ್ದ ರಕ್ಷಕ್ ಬುಲೆಟ್ ಸದ್ಯ ಭರ್ಜರಿ ಬ್ಯಾಚುಲರ್ಸ್ ಕಾರ್ಯಕ್ರಮದ ಸ್ಪರ್ಧಿಯಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಾತಿನ ಭರಾಟೆಯಲ್ಲಿ ನಾಡ ದೇವತೆ ಚಾಮುಂಡೇಶ್ವರಿ ತಾಯಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಹಿಂದೂ ಕಾರ್ಯಕರ್ತರು ನೇರವಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರಿಗೆ ದೂರು ಸಲ್ಲಿಸಲು ಮುಂದಾಗಿದ್ದರು. ಸದ್ಯ ಈ ವಿವಾದ ಸುಖಾಂತ್ಯಗೊಂಡಿದ್ದು, ರಕ್ಷಕ್ ತಮ್ಮಿಂದ ಆದ ತಪ್ಪಿಗೆ ಕ್ಷಮೆ ಕೇಳಿದ್ದಾರೆ.

ರಕ್ಷಕ್ ಬುಲೆಟ್ ಹೇಳಿದ್ದೇನು?
ಭರ್ಜರಿ ಬ್ಯಾಚುಲರ್ಸ್ ಕಾರ್ಯಕ್ರಮದ ಭಾಗವಾಗಿ ದರ್ಶನ್ ಹಾಗೂ ರಚಿತಾ ರಾಮ್ ಅಭಿನಯದ ಬುಲ್ ಬುಲ್ ಸಿನಿಮಾದ ದೃಶ್ಯವನ್ನು ಮರುಸೃಷ್ಟಿ ಮಾಡಿದ್ದಾರೆ. ಈ ವೇಳೆ ವೇದಿಕೆ ಮೇಲೆ 'ನಾವು ನಿಮ್ಮವರೇ ಮಂಡ್ಯದವರು. ನಿಮ್ಮನ್ನು ನೋಡುತ್ತಿದ್ದ ಹಾಗೆ ಅಂದುಕೊಂಡೆ, ತಾಯಿ ಚಾಮುಂಡೇಶ್ವರಿನೇ ಬೆಟ್ಟದಿಂದ ಇಳಿದು ಬಂದು ಸೀರೆ-ಒಡವೆಯನೆಲ್ಲಾ ಬಿಚ್ಚಿಟ್ಟು ಪ್ಯಾಂಟು ಶರ್ಟ್ ಹಾಕಿಕೊಂಡು ಸ್ವಿಟ್ಜರ್ಲೆಂಡ್ನಲ್ಲಿ ಒಳ್ಳೆ ಟ್ರಿಪ್ ಹೊಡೆಯುತ್ತಿದ್ದಾರೆ ಅಂತಾ' ಎಂದು ರಕ್ಷಕ್ ಬುಲೆಟ್ ಡೈಲಾಗ್ ಹೊಡೆದಿದ್ದರು.
ಕ್ಷಮೆ ಕೇಳಿದ ರಕ್ಷಕ್ ಬುಲೆಟ್
ರಕ್ಷಕ್ ಈ ಡೈಲಾಗ್ ವೈರಲ್ ಆಗುತ್ತಿದ್ದಂತೆ ಹಿಂದೂ ಕಾರ್ಯಕರ್ತರು ದೂರು ನೀಡಲು ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ರಕ್ಷಕ್ ಕ್ಷಮೆಯಾಚಿಸಿದ್ದಾರೆ. 'ಎಲ್ಲರಿಗೂ ನಮಸ್ಕಾರ, ನಾನು ನಿಮ್ಮ ರಕ್ಷಕ್ ಬುಲೆಟ್, ಇತ್ತೀಚಿಗೆ ಒಂದು ರಿಯಾಲಿಟಿ ಶೋನಲ್ಲಿ ನಾನು ಒಂದು ಹೆಸರಾಂತ ಚಿತ್ರದ ಡೈಲಾಗನ್ನು ಒಂದು ಸ್ಕಿಟ್ ನಲ್ಲಿ ಹೇಳಿದ್ದೆ. ಅದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ನನ್ನ ತಂದೆಯವರಾದ ದಿವಂಗತ ಬುಲೆಟ್ ಪ್ರಕಾಶ್ ಅವರು, ನನ್ನ ತಾಯಿಯವರು ಹಾಗೂ ಎಲ್ಲಾ ನಮ್ಮ ಕುಟುಂಬದವರು ಪರಮ ದೈವ ಭಕ್ತರು, ನಮ್ಮ ತಂದೆಯವರಿದ್ದಾಗನಿಂದಲೂ ನಾವು ತಾಯಿ ಚಾಮುಂಡೇಶ್ವರಿಗೆ ಪೂಜೆ ಮಾಡುತ್ತಾ ನಡೆದುಕೊಂಡು ಬಂದಿದ್ದೇವೆ. ನಾನು ಉದ್ದೇಶಪೂರ್ವಕವಾಗಿ ತಾಯಿ ಚಾಮುಂಡೇಶ್ವರಿಯ ಕುರಿತು ಹೇಳುವಷ್ಟು ದೊಡ್ಡವನಲ್ಲ. ಆ ತಾಯಿಯ ಆಶೀರ್ವಾದದಿಂದ ನಾನು ಬೆಳೆಯುತ್ತಿದ್ದೇನೆ.
ನಾನು ಯಾವುದೇ ಕಾರ್ಯ ಪ್ರಾರಂಭಿಸಬೇಕಾದರೆ ಮೊದಲು ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ನಂತರ ಕೆಲಸವನ್ನು ಪ್ರಾರಂಭ ಮಾಡುತ್ತೇನೆ. ನಾನು ಭಕ್ತಾದಿಗಳ ಭಾವನೆಗಳಿಗಾಗಲಿ ಮನಸ್ಸಿಗಾಗಲಿ ನೋವನ್ನು ಉಂಟು ಮಾಡುವ ಕೆಲಸ ಮಾಡುವುದಿಲ್ಲ. ಯಾರಿಗಾದರೂ ಬೇಸರವಾಗಿದ್ದಲ್ಲಿ ನಾನು ಕ್ಷಮೆಯಾಚಿಸುತ್ತೇನೆ. ಮುಂದೆ ಇಂತಹ ಅಚಾತುರ್ಯ ನಡೆಯುವುದಿಲ್ಲ' ಎಂದು ಹೇಳಿದ್ದಾರೆ.












Click it and Unblock the Notifications