ಒಂದೇ ತಿಂಗಳಲ್ಲಿ ಹೀಗೂ ಆಗಬಹುದಾ? ಪಾರು ನಟನನ್ನು ಕಾಡುತ್ತಿರುವ ಸಮಸ್ಯೆ ಏನು?
ಆರೋಗ್ಯವೇ ಭಾಗ್ಯ ಎನ್ನುವ ಗಾದೆಯನ್ನು ಹಿರಿಯವರು ಸುಮ್ಮನೆ ಮಾಡಿಲ್ಲ. ಮನುಷ್ಯ ಯಾರೇ ಇರಲಿ, ಯಾವುದೇ ರಂಗದಲ್ಲಿ ಮಿಂಚುತ್ತಿರಲಿ, ಎಷ್ಟೇ ಐಶ್ವರ್ಯವಂತನಾಗಿರಲಿ, ಅವನಿಗೆ ಆರೋಗ್ಯ ಸರಿ ಇಲ್ಲ ಎಂದ ಮೇಲೆ ಅವನ ಜೊತೆಗಿರುವ ಎಲ್ಲಾ ವಿಚಾರಗಳು ಶೂನ್ಯದಂತೆ. ಹೀಗಾಗಿ ಒಬ್ಬ ಮನುಷ್ಯನಿಗೆ ಆರೋಗ್ಯ ಮುಖ್ಯ.
ಒಂದು ವೇಳೆ ಅನಾರೋಗ್ಯ ಕಾಡಿತು ಅಂದರೆ ಕೊನೆ ಪಕ್ಷ ಅದರ ವಿರುದ್ಧ ಹೋರಾಡಲು ಆರ್ಥಿಕವಾಗಿ ಹಾಗೂ ದೈಹಿಕವಾಗಿ ಸಮರ್ಥರಾಗಿರಬೇಕು. ಆದರೆ ಪಾರು ಧಾರಾವಾಹಿ ಖ್ಯಾತಿಯ ನಟ ಶ್ರೀಧರ್ ಎನ್ ಅವರು ಪ್ರಸ್ತುತ ಆರ್ಥಿಕ ಹಾಗೂ ದೈಹಿಕ ಶಕ್ತಿಯನ್ನು ಕಳೆದುಕೊಳ್ಳುವುದ ಜೊತೆಗೆ ತಮ್ಮ ಅಂದದ ರೂಪನ್ನೂ ಕೂಡ ಕಳೆದಕೊಂಡಿದ್ದಾರೆ. ಮೊದಲೇ ಶ್ರೀಧರ್ ಅವರನ್ನು ಸಮೀಪದಿಂದ ಕಂಡವರು ಅಥವಾ ತೆರೆ ಮೇಲೆ ಕಂಡ ಪ್ರೇಕ್ಷಕರು ಈಗ ಅವರನ್ನು ಕಂಡರೆ ಮನಕಲುಕುವುದಂತೂ ನಿಜ. ಅಷ್ಟರ ಮಟ್ಟಿಗೆ ಶ್ರೀಧರ್ ಅವರ ರೂಪ ಬದಲಾಗಿದೆ.

ಅಷ್ಟಕ್ಕೂ ಸಾಲು ಸಾಲು ಸಿನಿಮಾಗಳು ಹಾಗೂ ಧಾರಾವಾಹಿ ನಟನೆಯಲ್ಲಿ ಪೋಷಕ ಪಾತ್ರದಲ್ಲಿ ಅವಕಾಶ ಪಡೆದುಕೊಂಡು ಸದಾ ಬ್ಯೂಸಿಯಾಗಿರುತ್ತಿದ್ದ ಶ್ರೀಧರ್ ಅವರಿಗೆ ಏನಾಯ್ತು ಎನ್ನುವುದರ ಬಗ್ಗೆ ಕೆಲವು ಮಾಹಿತಿ ಇಲ್ಲಿದೆ. ಕಳೆದ ಕೆಲವು ದಿನಗಳಿಂದ ನಟ ಶ್ರೀಧರ್ ಅನಾರೋಗ್ಯದಿಂದ ಬಳಲುತ್ತಿರುವ ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿದೆ. ಆದರೆ ಅವರಿಗೆ ಏನಾಯ್ತು? ಏನಾಗಿತ್ತು? ಎನ್ನುವುದರ ಬಗ್ಗೆ ಅಧೀಕೃತ ಮಾಹಿತಿ ಯಾರಿಗೂ ಇಲ್ಲ.
ನಟ ಶ್ರೀಧರ್ ಅವರು ಒಂದು ರೀತಿಯಾದ ಇನ್ಫೆಕ್ಷನ್ನಿಂದ ಬಳಲುತ್ತಿದ್ದಾರೆ. ಇದರಿಂದ ಆಸ್ಪತ್ರೆಯ ಹಾಸಿಗೆ ಹಿಡಿದಿರುವ ಅವರು ಸಹಾಯಕ್ಕಾಗಿ ಎಲ್ಲರಲ್ಲೂ ಮನವಿ ಮಾಡುತ್ತಿದ್ದಾರೆ. ಹೆಬ್ಬಾಳದಲ್ಲಿರುವ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಒಂದು ದಿನಕ್ಕೆ ಆಸ್ಪತ್ರೆಯ ಖರ್ಚು ಹಾಗೂ ಮಾತ್ರೆಯ ಖರ್ಚು 10ರಿಂದ 15 ಸಾವಿರ ರೂಪಾಯಿ ಆಗುತ್ತಿದೆ. ಉಳಿತಾಯದ ಹಣ, ಸಹಾಯದ ಹಣ ಎಲ್ಲವೂ ಈಗಾಗಲೇ ಮುಗಿದು ಹೋದ ಕಾರಣ ಸ್ವತಃ ಶ್ರೀಧರ್ ಅವರೇ ಸಹಾಯ ಮಾಡಿ ಎಂದು ತಮ್ಮ ಬ್ಯಾಂಕ್ ಖಾತೆ ವಿವರ ನೀಡಿದ್ದಾರೆ.
ಇನ್ನು ಶ್ರೀಧರ್ ಅವರನ್ನು ನೋಡಿಕೊಳ್ಳಲು ಯಾರು ಇಲ್ಲದ ಕಾರಣ ಅವರ ವಯಸ್ಸಾದ ತಾಯಿಯೇ ಅವರನ್ನು ನೋಡಿಕೊಳ್ಳುತ್ತಿದ್ದಾರೆ. ಈ ವಿಚಾರ ತಿಳಿದು ಬರುತ್ತಿದ್ದಂತೆ ಕಿರುತೆರೆಯ ಅನೇಕ ಕಲಾವಿದರು ಅವರ ನೆರವಿಗೆ ನಿಂತಿದ್ದು, ತಾವೇ ಸ್ವತಃ ಹಣ ಸಹಾಯ ಮಾಡಿದ್ದಲ್ಲದೇ, ವಿಡಿಯೋಗಳನ್ನು ಮಾಡುವ ಮೂಲಕ ಶ್ರೀಧರ್ ಅವರಿಗೆ ಆರ್ಥಿಕ ಸಹಾಯ ಮಾಡಿ ಎಂದು ಎಲ್ಲರಲ್ಲೂ ಮನವಿ ಮಾಡುತ್ತಿದ್ದಾರೆ.
ಇನ್ನು ಅನೇಕ ಕಿರುತೆರೆ ಕಲಾವಿದರು ಶ್ರೀಧರ್ ಅವರನ್ನು ದಾಖಲಿಸಿರುವ ಹೆಬ್ಬಾಳದಲ್ಲಿರುವ ಬ್ಯಾಪ್ಟಿಸ್ಟ್ ಆಸ್ಪತ್ರೆ ತೆರಳಿ ಖುದ್ದು ಅವರನ್ನು ಮಾತನಾಡಿಸಿ ಆರೋಗ್ಯದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಆದರೆ ಸದ್ಯ ಅವರ ಪರಿಸ್ಥಿತಿಯನ್ನು ಕಂಡು ಪ್ರತಿಯೊಬ್ಬರು ಕೂಡ ಮರುಗಿದ್ದಾರೆ. ನೋಡಲು ಆಕರ್ಷಕರಾಗಿದ್ದ ನಟ ಶ್ರೀಧರ್ ಅವರು ಸದ್ಯ ಗುರುತು ಸಿಗದಂತೆ ಬದಲಾಗಿ ಹೋಗಿದ್ದಾರೆ. ಹೀಗಾಗಿ ಅವರನ್ನು ಭೇಟಿಯಾದ ಹಾಗೂ ಅವರ ಫೋಟೋ ನೋಡಿದ ಪ್ರತಿಯೊಬ್ಬರು ಕೂಡ ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತಿದ್ದಾರೆ.












Click it and Unblock the Notifications