ಸುದೀಪ್ ಮಾತಲ್ಲಿ ಯಾವುದೇ ತಪ್ಪಿಲ್ಲ, ವಿಜಯಲಕ್ಷ್ಮಿ ನೊಂದು ಮಾತನಾಡಿರಬೇಕು: ರಕ್ಷಿತಾ ಪ್ರೇಮ್
ಸ್ಯಾಂಡಲ್ವುಡ್ನಲ್ಲಿ ಕಿಚ್ಚು ಹೊತ್ತಿಕೊಂಡಿರುವ ದರ್ಶನ್-ಸುದೀಪ್ ಫ್ಯಾನ್ ವಾರ್ ಬಗ್ಗೆ ನಟಿ ರಕ್ಷಿತಾ ಪ್ರೇಮ್ ಮಾತನಾಡಿದ್ದಾರೆ. 'ದರ್ಶನ್ ಹಾಗೂ ಸುದೀಪ್ ಇಬ್ಬರೂ ಇಂದಿಗೂ ಸ್ನೇಹಿತರೇ, ನನಗೂ ಅವರು ಸ್ನೇಹಿತರು. ನನ್ನ ಪ್ರಕಾರ ಸುದೀಪ್ ಆಡಿರುವ ಮಾತುಗಳಲ್ಲಿ ಯಾವುದೇ ತಪ್ಪು ಕಾಣಲಿಲ್ಲ, ಇನ್ನು ವಿಜಯಲಕ್ಷ್ಮಿಗೆ ಯಾವುದೋ ನೋವಿನಿಂದ ಮಾತನಾಡಿರಬೇಕು' ಎಂದಿದ್ದಾರೆ ರಕ್ಷಿತಾ.
ಸ್ಯಾಂಡಲ್ವುಡ್ನಲ್ಲಿ ನಡೆಯುತ್ತಿರುವ ಫ್ಯಾನ್ವಾರ್ ಬಗ್ಗೆ ಮಾತನಾಡಿರುವ ನಟಿ ರಕ್ಷಿತಾ, 'ನಾನು ಸುದೀಪ್ ಅವರ ಇತ್ತೀಚಿನ ಸಂದರ್ಶನಗಳನ್ನು ನೋಡ್ತಿದ್ದೆ, ಅವರು ನಾನು ದರ್ಶನ್ ಯಾವತ್ತಾದ್ರೂ ಮೈಕ್ ಹಿಡಿದುಕೊಂಡು ಜಗಳ ಆಡಿದ್ದೀವಾ? ಅಂತ ಮಾತನಾಡಿದ್ದಾರೆ. ಹೀಗಾಗಿ ಅದು ಅಲ್ಲಿಗೇ ಮುಗಿದ ವಿಚಾರ. ಸುದೀಪ್ ಸರಿಯಾದ ಉತ್ತರ ನೀಡಿದ್ದಾರೆ' ಎಂದಿದ್ದಾರೆ.

'ತಪ್ಪು ತಿಳುವಳಿಕೆ ಬಿಟ್ಟು ಮಾತನಾಡಲಿ'
ಆದರೆ ನಾವು ಇಲ್ಲಿ ಒಬ್ಬರ ಜೊತೆ ಮತ್ತೊಬ್ಬರು ಜಗಳ ಆಡುತ್ತಿಲ್ಲ, ನಾವೆಲ್ಲ ಸಿನಿಮಾಗಳ ಪೈರಸಿ ವಿರುದ್ಧ ಫೈಟ್ ಮಾಡುತ್ತಿದ್ದೀವಿ. ಸುದೀಪ್ ಅವರು ಕನ್ನಡ ಚಿತ್ರರಂಗದಲ್ಲಿ ನನ್ನ ಮೊದಲ ಸ್ನೇಹಿತ. ಇನ್ನು ದರ್ಶನ್ ಸುದೀಪ್ ಇಂದಿಗೂ ಸ್ನೇಹಿತರು. ಪೈರಸಿ ಈಗ ಚಿತ್ರರಂಗಕ್ಕೆ ದೊಡ್ಡ ಶತ್ರು. ಮತ್ತೊಂದು ದೊಡ್ಡ ಶತ್ರು ಅಂದ್ರೆ ತಪ್ಪು ತಿಳುವಳಿಕೆ. ಹಾಗಾಗಿ ಆ ತಪ್ಪು ತಿಳುವಳಿಕೆಯನ್ನು ಪಕ್ಕಕ್ಕಿಟ್ಟು ಅವರೇ ಪರಸ್ಪರ ಮಾತನಾಡಿಕೊಳ್ಳಬೇಕು' ಎಂದಿದ್ದಾರೆ.
'ಸುದೀಪ್ ಈಗಾಗಲೇ ಕ್ಲಿಯರ್ ಆಗಿ ಇರುವ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. ಅವರು ತಮ್ಮ ಮಾರ್ಕ್ ಸಿನಿಮಾ ಕುರಿತು ಮಾತನಾಡಿದ್ದಾರೆ. ಬೇರೆ ರೀತಿ ಏನಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅವರೇ ಹೇಳಿರುವಾಗ ನಾನು ಮಾತನಾಡುವುದು ತಪ್ಪಾಗುತ್ತೆ' ಎಂದಿದ್ದಾರೆ.
ವಿಜಿ ನಿರ್ದಿಷ್ಟ ವ್ಯಕ್ತಿಗೆ ಹೇಳಿಲ್ಲ
'ಸುದೀಪ್ ಮಾತಿನಲ್ಲಿ ಯಾವುದೇ ತಪ್ಪಿಲ್ಲ, ನಾವೆಲ್ಲ ಸುದೀಪ್ ಜೊತೆ ನಿಂತು ಪೈರಸಿ ವಿರುದ್ಧ ಹೋರಾಡಬೇಕು. ವಿಜಯಲಕ್ಷ್ಮಿ ಅವರಿಗೆ ಬೇರೆ ಯಾವುದೋ ವಿಚಾರಕ್ಕೆ ನೊಂದು ಆ ರೀತಿ ಮಾತನಾಡಿರಬೇಕು. ಅವರ ಮಾತಲ್ಲಿ ನನಗೆ ತಪ್ಪು ಕಾಣಲಿಲ್ಲ. ಅದು ಯಾರೋ ನಿರ್ದಿಷ್ಟ ವ್ಯಕ್ತಿಗೆ ಹೇಳಿದ್ದು ಅನಿಸಿಲ್ಲ. ಸುದೀಪ್, ವಿಜಿ ಮಾತುಗಳು ಒಂದಾದ ಮೇಲೆ ಒಂದು ಬಂದಿರುವುದರಿಂದ ಈ ರೀತಿ ಆಗಿರಬಹುದು' ಎಂದು ಅಭಿಪ್ರಾಯಪಟ್ಟಿದ್ದಾರೆ.
'ನಮಗೆ ಮೂರು ಸ್ಟಾರ್ ಸಿನಿಮಾಗಳು ಡಿಸೆಂಬರ್ ರಿಲೀಸ್ ಆಗುತ್ತಿರುವುದೇ ನಿಜವಾದ ಕ್ರಿಸ್ಮಸ್ ಹಬ್ಬವಾಗಿದೆ. ನಾನು ಸುದೀಪ್ ಅವರ ಮಾರ್ಕ್ ಸಿನಿಮಾ ಹಾಗೂ ಶಿವಣ್ಣ-ಉಪ್ಪಿಯ 45 ಸಿನಿಮಾಗೆ ಆಲ್ ದಿ ಬೆಸ್ಟ್ ಹೇಳ್ತೀನಿ. ಎರಡೂ ಸಿನಿಮಾ ತುಂಬಾ ದೊಡ್ಡ ಯಶಸ್ಸನ್ನು ತಂದು ಕೊಡಲಿ. ಜನ ಎರಡೂ ಸಿನಿಮಾಗಳನ್ನು ಪ್ರೀತಿಯಿಂದ ಒಪ್ಪಿಕೊಳ್ಳಲಿ' ಎಂದು ರಕ್ಷಿತಾ ಶುಭಹಾರೈಸಿದ್ದಾರೆ.
'ಕಲಾವಿದರಲ್ಲಿ ಒಗ್ಗಟ್ಟಿರಲಿ'
ಇದೇ ವಿಚಾರವಾಗಿ ನಟ ವಿನೋದ್ ರಾಜ್ ಕೂಡ ಮಾತನಾಡಿದ್ದಾರೆ. 'ಕಲಾವಿದರು ಒಗ್ಗಟ್ಟಿನಿಂದ ಇರಬೇಕು. ನಾವು ನಾವೇ ಕಿತ್ತಾಡಬಾರದು. ನಮ್ಮ ಮಾತಿನಿಂದ ಯಾರಿಗೆ ನೋವಾಗುತ್ತೆ ಅಂತ ಯೋಚನೆ ಮಾಡಬೇಕು. ಇಲ್ಲದಿದ್ದರೆ ಫ್ಯಾನ್ ವಾರ್ ಶುರುವಾಗುತ್ತೆ. ಕಲಾವಿರದಲ್ಲಿ ಯಾವತ್ತೂ ಒಗ್ಗಟ್ಟು ಇರಬೇಕು. ಅಭಿಮಾನಿಗಳು ತುಂಬಾ ಮುಗ್ಧರು, ನಾವು ಹೇಳುವುದನ್ನೇ ಕೇಳ್ತಾರೆ' ಎಂದಿದ್ದಾರೆ.












Click it and Unblock the Notifications