Bigg Boss: ಬಿಗ್ ಬಾಸ್ ಫಿನಾಲೆ ನಡುವೆಯೇ ಮಾಜಿ ಸ್ಪರ್ಧಿ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್!
ಎಲ್ಲವೂ ಸರಿ ಇದ್ದರೆ ವಕೀಲ ಜಗದೀಶ್ ಶನಿವಾರ ನಡೆದ ಬಿಗ್ ಬಾಸ್ ಫಿನಾಲೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. ಆದರೆ ಬೀದಿಯಲ್ಲಿ ರಂಪಾಟ ಮಾಡಿಕೊಂಡಿರುವ ಅವರು ಬಿಗ್ ಬಾಸ್ ಫೈನಲ್ ನಡೆಯುವ ದಿನವೇ ಪರಪ್ಪನ ಅಗ್ರಹಾರ ಸೇರುವಂತಾಗಿದೆ. ಹೌದು, ಲಾಯರ್ ಜಗದೀಶ್ ಹಾಗೂ ಗನ್ ಮ್ಯಾನ್ ಬೀದಿಯಲ್ಲಿ ರಂಪಾಟ ಮಾಡಿದ ಪ್ರಕರಣದಲ್ಲಿ ಬಂಧಿಸಲಾಗಿದ್ದು ಅವರಿಗೆ ಈಗ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಲಾಯರ್ ಜಗದೀಶ್ ಮನೆ ಬಳಿ ಗಲಾಟೆ ನಡೆಯುವ ಸಂದರ್ಭದಲ್ಲಿ ಅವರ ಗನ್ ಮ್ಯಾನ್ ಸಾರ್ವಜನಿಕರು ನೆರೆದಿದ್ದ ಸ್ಥಳದಲ್ಲಿ ಫೈರಿಂಗ್ ಮಾಡಿದ್ದರು. ಈ ಸಂಬಂಧ ಕೊಡಿಗೇನಹಳ್ಳಿಯಲ್ಲಿ ದೂರು ದಾಖಲಾಗಿತ್ತು, ಕೊಡಿಗೇಹಳ್ಳಿ ಪೊಲೀಸರು ಲಾಯರ್ ಜಗದೀಶ್, ಅವರ ಗನ್ ಮ್ಯಾನ್ ಮತ್ತು ಮಗನನ್ನು ಕೂಡ ಬಂಧಿಸಲಾಗಿತ್ತು.

ಪೊಲೀಸರು ಶನಿವಾರ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಜಗದೀಶ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶ ನೀಡಿದೆ. 14 ದಿನ ಲಾಯರ್ ಜಗದೀಶ್ ಈಗ ಜೈಲು ಹಕ್ಕಿಯಾಗಲಿದ್ದಾರೆ.
ಪರಪ್ಪನ ಅಗ್ರಹಾರಕ್ಕೆ 'ಲಾಯರ್'
ಲಾಯರ್ ಜಗದೀಶ್ ಅವರ ಮನೆಯ ಸಮೀಪದ ರಸ್ತೆಯಲ್ಲಿ ಅಣ್ಣಮ್ಮ ಕೂರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಲಾಯರ್ ಜಗದೀಶ್ ಈ ಬಗ್ಗೆ ಸಂಘಟಕರ ಜೊತೆ ಜಗಳವಾಡಿಕೊಂಡಿದ್ದರು. ಆ ಸಮಯದಲ್ಲೇ ಓರ್ವ ವ್ಯಕ್ತಿಯೊಂದಿಗೆ ತಳ್ಳಾಟ ಕೂಡ ನಡೆಸಿದ್ದರು.
ದರ್ಶನ್ ತೂಗುದೀಪ್ ಅಭಿಮಾನಿಗಳು ಇದನ್ನು ಮಾಡಿದ್ದಾರೆ ಎಂದು ಕೆಲವು ಹೇಳಿದ್ದರು. ಆದರೆ ಮರುದಿನ ಲೈವ್ ಬಂದಿದ್ದ ಲಾಯರ್ ಜಗದೀಶ್ ದರ್ಶನ್ ಅಭಿಮಾನಿಗಳಿಗೆ ಎಚ್ಚರಿಕೆ ಕೊಟ್ಟಿದ್ದರು. ಅದೇ ದಿನ ಸಂಜೆ ಮತ್ತೊಮ್ಮೆ ಲಾಯರ್ ಜಗದೀಶ್ ಅಣ್ಣಮ್ಮನನ್ನು ಕೂರಿಸಿದ್ದ ಹುಡುಗರ ಜೊತೆ ಜಗಳ ಮಾಡಿಕೊಂಡಿದ್ದಾರೆ.
ನೂರಾರ ಸಂಖ್ಯೆಯಲ್ಲಿ ಜಮಾಯಿಸಿದ್ದು ಕೆಲವರು ಜಗದೀಶ್ ಮೇಲೆ ಹಲ್ಲೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಜಗದೀಶ್ ಗನ್ಮ್ಯಾನ್ ಫೈರಿಂಗ್ ಮಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ಮಾತ್ರ ಲೈಸೆನ್ಸ್ ಪಡೆದಿದ್ದ ಗನ್ ಬಳಸಿ ಬೆಂಗಳೂರಿನಲ್ಲಿ ಫೈರಿಂಗ್ ಮಾಡಿದ್ದರಿಂದ ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿ ಬಂಧಿಸಿದ್ದರು.
ಲಾಯರ್ ಜಗದೀಶ್, ಗನ್ಮ್ಯಾನ್, ಜಗದೀಶ್ ಪುತ್ರ ಹಾಗೂ ಚಾಲಕನನ್ನು ಶನಿವಾರ ಬೆಳಗ್ಗೆ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇದೀಗ 14 ದಿನ ಆರೋಪಿಗಳು ಪರಪ್ಪನ ಅಗ್ರಹಾರದಲ್ಲಿ ಇರಬೇಕಾಗುತ್ತದೆ.
ಬಿಗ್ ಬಾಸ್ 11ನೇ ಆವೃತ್ತಿಯ ಸ್ಪರ್ಧಿಯಾಗಿದ್ದ ಜಗದೀಶ್ ಕೆಲವೇ ದಿನ ಮನೆಯಲ್ಲಿದ್ದರೂ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿದ್ದರು. ಬಳಿಕ ತಮ್ಮ ಅತಿರೇಖದ ವರ್ತನೆಯಿಂದಲೇ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಹಾಕಲಾಗಿತ್ತು.












Click it and Unblock the Notifications