ಸಿನಿಮಾ ನಟನ ಗೆಳೆಯನಿಗೆ ಟಿವಿ ಶೋ ಲೈವ್ನಲ್ಲೇ ಚಪ್ಪಲಿಯಲ್ಲಿ ಹೊಡೆದ ಯುವತಿ
ಇತ್ತೀಚಿಗೆ ಸಿನಿಮಾ ನಟರ ಖಾಸಗಿ ಜೀವನದ ರಂಪಾಟ ಬೀದಿಗೆ ಬರುವುದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಇಲ್ಲೊಬ್ಬ ನಟನ ಖಾಸಗಿ ಜೀವನದ ಜಗಳ ಜಗತ್ಜಾಹಿರವಾಗಿದ್ದಲ್ಲದೇ..ಆತನನ್ನು ವಹಿಸಿಕೊಂಡು ಪರ ಮಾತನಾಡಲು ಬಂದ ಸ್ನೇಹಿತ ಟಿವಿ ಶೋ ಲೈವ್ನಲ್ಲೇ ಚಪ್ಪಲಿ ಏಟು ತಿನ್ನುವಂತಾಗಿದೆ. ಈ ದೃಶ್ಯ ನೋಡಿದ ಪ್ರೇಕ್ಷಕರು ಹಾಗೂ ನಟನ ಅಭಿಮಾನಿಗಳು ಶಾಕ್ ಆಗಿದ್ದಾರೆ.
ತೆಲುಗು ಚಿತ್ರರಂಗದ ನಟ ರಾಜ್ ತರುಣ್ ಖಾಸಗಿ ಜೀವನದ ವಿವಾದ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ನಟ ರಾಜ್ ತರುಣ್ ಹಾಗೂ ಲಾವಣ್ಯ ಹಲವು ವರ್ಷಗಳಿಂದ ಜೊತೆಗಿದ್ದರು. ಮದುವೆ ಆಗುವುದಾಗಿ ತಿಳಿಸಿದ್ದ ರಾಜ್ ಬಳಿಕ ದೂರಾಗಿದ್ದು, ಇದೀಗ ಹಿಮಾಚಲ ಪ್ರದೇಶ ಮೂಲದ ನಾಯಕಿ ಜೊತೆ ಸಂಬಂಧದಲ್ಲಿದ್ದಾರೆ ಎಂದು ಲಾವಣ್ಯ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ರಾಜ್ ತರುಣ್ ತನ್ನ ಜೊತೆಯಲ್ಲೇ ಇರಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ ತರುಣ್ ಹಾಗೂ ಲಾವಣ್ಯ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಕೋರ್ಟ್ನಲ್ಲಿ ಈ ಬಗ್ಗೆ ವಿಚಾರಣೆ ನಡೆಯುತ್ತಿದೆ. ಲಾವಣ್ಯ ಅವರ ದೂರಿನ ಆಧಾರದ ಮೇಲೆ ನಿರೀಕ್ಷಣಾ ಜಾಮೀನು ಕೋರಿ ರಾಜ್ ತರುಣ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಎಲ್ಲಾ ತಿಕ್ಕಾಟದ ನಡುವೆ ಲಾವಣ್ಯ ರಾಜ್ ತರುಣ್ ಸ್ನೇಹಿತ ಆರ್.ಜೆ ಶೇಖರ್ ಭಾಷಾಗೆ ಚಪ್ಪಲಿಯಲ್ಲಿ ಹೊಡೆದು ಹೊಸ ವಿವಾದ ಸೃಷ್ಟಿಸಿದ್ದಾರೆ.
ನಟ ರಾಜ್ ತರುಣ್ ಮೇಲೆ ಆರೋಪ ಮಾಡಿ ಇತ್ತೀಚೆಗಷ್ಟೇ ಟಿವಿ ಚರ್ಚೆಯೊಂದರಲ್ಲಿ ಭಾಗವಹಿಸಿದ್ದ ಲಾವಣ್ಯ, ಲೈವ್ನಲ್ಲೇ ಶೇಖರ್ ಭಾಷಾಗೆ ಹೊಡೆದಿದ್ದಾರೆ. ನಾಯಕ ರಾಜ್ ತರುಣ್ ಅವರನ್ನು ಬೆಂಬಲಿಸಿ ಆರ್.ಜೆ ಶೇಖರ್ ಭಾಷಾ ಶೋನಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಆರ್.ಜೆ.ಶೇಖರ್ ಭಾಷಾ ಲಾವಣ್ಯ ಅವರು ಮಕ್ಕಳನ್ನು ಮಾದಕ ವ್ಯಸನಕ್ಕೆ ಒಳಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.

ಇದರಿಂದ ಸಿಟ್ಟಿಗೆದ್ದ ಲಾವಣ್ಯ ಆತನಿಗೆ ಚಪ್ಪಲಿಯಲ್ಲಿ ಹೊಡೆದಿದ್ದಾರೆ. ಇದರಿಂದ ಶೇಖರ್ ಭಾಷಾ ಕೂಡ ಕೋಪಗೊಂಡಿದ್ದು, ಲಾವಣ್ಯ ಜೊತೆಗೆ ಜಗಳಕ್ಕೆ ಮುಂದಾಗಿದ್ದಾರೆ. ಕೂಡಲೇ ಸ್ಥಳದಲ್ಲಿದ್ದವರು ಮಧ್ಯ ಪ್ರವೇಶಿಸಿ ಇಬ್ಬರನ್ನು ಬೇರ್ಪಡಿಸಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.
ಇನ್ನು ಲಾವಣ್ಯ ಆರೋಪಕ್ಕೆ ಈ ಹಿಂದೆಯೇ ಪ್ರತಿಕ್ರಿಯೆ ನೀಡಿದ್ದ ನಟ ರಾಜ್ ತರುಣ್, ಲಾವಣ್ಯ ಜೊತೆ ನನಗೆ ಒಂದು ಕಾಲದಲ್ಲಿ ಸಂಬಂಧವಿದ್ದದ್ದು ನಿಜ. ಆದರೆ 2016-17ರ ನಂತರ ಆಕೆಯೊಂದಿಗೆ ಯಾವುದೇ ದೈಹಿಕ ಸಂಬಂಧ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸದ್ಯ ದೂರು-ಪ್ರತಿದೂರುಗಳು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.












Click it and Unblock the Notifications