'ಲಕ್ಷ್ಮಿ ಬಾರಮ್ಮ ಶೂಟಿಂಗ್ನಲ್ಲೇ ಕಣ್ಣಿನಲ್ಲಿ ರಕ್ತ ಬರಲು ಶುರುವಾಯ್ತು'-ಭೂಮಿಕಾ ರಮೇಶ್
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಲಕ್ಷ್ಮಿ ಬಾರಮ್ಮ ಧಾರಾವಾಹಿಯ ನಾಯಕಿ ಲಕ್ಷ್ಮಿ ಪಾತ್ರಧಾರಿ ಭೂಮಿಕಾ ರಮೇಶ್ ಕೆಲವು ದಿನಗಳು ಧಾರಾವಾಹಿಯಿಂದ ಬ್ರೇಕ್ ತೆಗೆದುಕೊಂಡಿದ್ದರು. ಕೆಲವು ಸಂಚಿಕೆಗಳಲ್ಲಿ ಧಾರಾವಾಹಿಯ ನಾಯಕಿ ಲಕ್ಷ್ಮಿ ಪಾತ್ರವೇ ಇಲ್ಲದಂತಾಗಿತ್ತು. ಈ ವೇಳೆ ಅನೇಕರು ಭೂಮಿಕಾ ತೆಲುಗು ಧಾರಾವಾಹಿ ಮಾಡುತ್ತಿದ್ದಂತೆ ಕನ್ನಡ ಧಾರಾವಾಹಿ ಬಿಟ್ಟಿದ್ದಾರೆ ಎಂದು ಗಾಳಿ ಸುದ್ದಿ ಹಬ್ಬಿಸಿದ್ದರು. ಇದೀಗ ಈ ಬಗ್ಗೆ ಸ್ವತಃ ಭೂಮಿಕಾ ರಮೇಶ್ ಸ್ಪಷ್ಟನೆ ನೀಡಿದ್ದಾರೆ.
ವಿಶ್ವವಾಣಿ ಟಿವಿ ಸ್ಪೆಷಲ್ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿದ ಅವರು, 'ನಾನು ತೆಲುಗು ಧಾರಾವಾಹಿಗಳಿಗೆ ಹೋದಾಗ ಅಲ್ಲಿನವರು ನನ್ನ ತೆಲುಗಿನ ಹುಡುಗಿ ಅಂದುಕೊಂಡಿದ್ದರು. ನನಗೆ ತೆಲುಗು ಬರುತ್ತಿತ್ತು. ಆದರೆ ನಾನು ಅಲ್ಲಿಗೆ ಹೋದಾಗಲು ಹೇಳುತ್ತಿದ್ದೆ ನಾನು ಕನ್ನಡದ ಹುಡುಗಿ ನೀವು ಅಪಪ್ರಚಾರ ಮಾಡಬೇಡಿ ಎಂದು. ನಾವು ಎಲ್ಲಿಗೆ ಹೋದರೂ ನಮ್ಮ ಬೇರು ನಾವು ಬಿಡುವುದಿಲ್ಲ. ನಾವು ತೆಲುಗು ಅಂತಲ್ಲಾ, ನಾವು ತಮಿಳಿಗೆ ಹೋದರು ನಮ್ಮ ಭಾಷೆ ಬಗ್ಗೆ ಪ್ರೀತಿ ಅಭಿಮಾನ ಇದ್ದೇ ಇರುತ್ತದೆ' ಎಂದರು.

'ಯಾರಾದರೂ ದಿಢೀರ್ ನಿಮ್ಮದೇ ಡೈಲಾಗ್ ಹೇಳಿ ಅಂದರೆ ಬೇರೆ ಭಾಷೆ ಆದರೆ ನಾವು ಯೋಚಿಸಬೇಕಾಗುತ್ತದೆ. ಆದರೆ ಕನ್ನಡದಲ್ಲಿ ಫಟಾಫಟ್ ಅಂತಾ ಹೇಳುತ್ತೇವೆ. ಆ ಒಂದು ಸಲುಗೆ ಇರುವುದು ನಮ್ಮ ಭಾಷೆಯಲ್ಲಿ ಮಾತ್ರ. ಬೇರೆ ಭಾಷೆನಲ್ಲಿ ಪ್ರೀತಿ ಇರುತ್ತದೆ ಆದರೆ ಆ ಸಲುಗೆ ಎನ್ನುವುದು ಹುಟ್ಟು ಭಾಷೆನಲ್ಲಿ ಮಾತ್ರ ಬರುತ್ತದೆ. ಹೀಗಾಗಿ ನಾನು ಯಾವತ್ತೂ ಕನ್ನಡ ಭಾಷೆಯನ್ನು ಮರೆಯಲ್ಲ ' ಎಂದು ಹೇಳಿದರು.
'ತುಂಬಾ ಜನ ಲಕ್ಷ್ಮಿ ಬಾರಮ್ಮ ಧಾರಾವಾಹಿ ಬಿಡುತ್ತಿದ್ದೀರಾ ಅಂತಾ ಕಮೆಂಟ್ ಕೂಡ ಹಾಕಿದ್ದರು. ಆ ಸಮಯದಲ್ಲಿ ಧಾರಾವಾಹಿಯಲ್ಲೂ ನಾನು ಸಾಯುವ ರೀತಿ ಕಥೆ ಇತ್ತು. ಅದೇ ಸಮಯದಲ್ಲಿ ತೆಲುಗು ಧಾರಾವಾಹಿ ಕೂಡ ಶುರುವಾಯಿತು. ಆಗ ನಿಜವಾಗಿ ಏನಾಗಿತ್ತು ಅಂದರೆ ನನಗೆ ಕಣ್ಣಿನ ಸಮಸ್ಯೆ ಆಗಿತ್ತು. ಹೀಗಾಗಿ ನಾನು ಯಾವ ಶೂಟಿಂಗ್ಗೂ ಹೋಗುತ್ತಿರಲಿಲ್ಲ. ಬಳಿಕ ನಾನು ಕೂಲಿಂಗ್ ಗ್ಲಾಸ್ ಹಾಕಿಕೊಂಡು ಒಂದಿಷ್ಟು ದಿನ ಶೂಟಿಂಗ್ ಮಾಡಿದ್ದೆ'.

'ನನಗೆ ಕಣ್ಣಿನ ಸಮಸ್ಯೆ ಆಗಿತ್ತು. ನಾನು ಲೈಟ್ಗಳ ಮುಂದೆ ಬರುವ ಹಾಗೇ ಇರಲಿಲ್ಲ. ಲಕ್ಷ್ಮಿ ಬಾರಮ್ಮ ಧಾರಾವಾಹಿ ಚಿತ್ರೀಕರಣದ ವೇಳೆ ಕಣ್ಣು ಉರಿ ಎಂದು ಕಣ್ಣಿಗೆ ಹತ್ತಿ ಹಾಕಿಕೊಂಡು ಮಲಗಿದ್ದೆ. ಎದ್ದು ನೋಡಿದಾಗ ಸಂಪೂರ್ಣ ಹತ್ತಿ ರಕ್ತವಾಗಿದೆ. ಬಳಿಕ ನೀರಿನಲ್ಲಿ ಕಣ್ಣನ್ನು ತೊಳೆದುಕೊಂಡೆ. ಆಗ ಕಣ್ಣಲ್ಲಿ ರಕ್ತ ಬರುತ್ತಿರುವುದು ಖಚಿತವಾಯಿತು. ತಕ್ಷಣ ಲಕ್ಷ್ಮಿ ಬಾರಮ್ಮ ಚಿತ್ರೀಕರಣ ನಿಲ್ಲಿಸಿ ಆಸ್ಪತ್ರೆಗೆ ಕರೆದುಕೊಂಡು ಹೋದರು'.
'ಆಗ ಡಾಕ್ಟರ್ ಕನಿಷ್ಠ ಹತ್ತು ದಿನ ಕಣ್ಣಿಗೆ ವಿಶ್ರಾಂತಿ ಕೊಡಲೇಬೇಕು. ಒಂದು ಚೂರು ಬೆಳಕು ಬಿದ್ದರೂ ಕಣ್ಣಿನಿಂದ ರಕ್ತ ಬರುತ್ತದೆ ಎಂದು ಹೇಳಿದರು. ಆಗ ನಾನು ಲಕ್ಷ್ಮಿ ಬಾರಮ್ಮ ಧಾರಾವಾಹಿಯಿಂದ ಬ್ರೇಕ್ ತೆಗೆದುಕೊಂಡೆ. ಆಗ ಸಮಯದ ಸಂಚಿಕೆಗಳಲ್ಲಿ ನಾನು ಇರಲಿಲ್ಲ. ಆದರೆ ಅದನ್ನು ಎಲ್ಲರೂ ಬೇರೆ ರೀತಿನೇ ಅಂದುಕೊಂಡರು' ಎಂದು ಭೂಮಿಕಾ ರಮೇಶ್ ಧಾರಾವಾಹಿಯಿಂದ ಬ್ರೇಕ್ ತೆಗೆದುಕೊಂಡ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.












Click it and Unblock the Notifications