ನನ್ನ ಎಂಜಲು ತಿಂದರು..ಅಪ್ಪಿಕೊಂಡರು: ವಿನಯ್ ಗುರೂಜಿ ಬಗ್ಗೆ ಮಾಸ್ಟರ್ ಆನಂದ್ ಹೇಳಿದ್ದೇನು?
ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕ ಮಾಸ್ಟರ್ ಆನಂದ್ ಅವರಿಗೆ ಆಧ್ಯಾತ್ಮದ ಬಗ್ಗೆ ಒಲವು ಇರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಮೊದಲಿನಿಂದಲೂ ಆಧ್ಯಾತ್ಮದ ಅಧ್ಯಯನದಲ್ಲಿದ್ದ ಮಾಸ್ಟರ್ ಆನಂದ್ ಅವರು ಅವದೂತ ವಿನಯ್ ಗೂರೂಜಿ ಅವರನ್ನು ಭೇಟಿಯಾದ ಸಂದರ್ಭದ ಬಗ್ಗೆ ವಿವರಿಸಿದ್ದಾರೆ.
Rapid Rashmi ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ಅವರು 'ನಾನು ನಿಗೂಢರಾತ್ರಿ ಎನ್ನುವ ಧಾರಾವಾಹಿ ಮಾಡುತ್ತೇನೆ. ಆ ಧಾರಾವಾಹಿ ವಿನಯ್ ಗುರೂಜಿ ಅವರ ಆಶ್ರಮದ ಹಿಂದೆ ಬೀಳುತ್ತದೆ. ಆ ಸಮಯದಲ್ಲಿ ಅಲ್ಲಿ ಆಶ್ರಮ ಇದೆ ಅಂತಾ ಯಾರಿಗೂ ಗೊತ್ತಿರುವುದಿಲ್ಲ. ನಮಗೆ ಒಂದು ಕಾಡು ತರ ಇರುವ ಒಂಟಿ ಮನೆ ಬೇಕು ಅಂತಾ ಹುಡುಕಾಡುವಾಗ ಆ ಮನೆ ಸಿಗುತ್ತದೆ'.

'ನಾನು ಹೋಗಿ ನೋಡಿದಾಗ ಕಾಡಿನಲ್ಲಿ ಒಂಟಿ ಮನೆ. ಏನಾದರೂ ಬೇಕು ಅಂದರೆ ಗಾಡಿಯಲ್ಲಿ ಐದು ಕಿಲೋ ಮೀಟರ್ ಹೋಗಿ ತರಬೇಕು. ಧಾರಾವಾಹಿ ಮಾಡುವುದಕ್ಕೆ ಈ ಮನೆ ಆಗುವುದಿಲ್ಲ ಬೇಡ ಅಂತಾ ನಾನೇ ಹೇಳಿದ್ದೆ. ಆದರೆ ಚಾನೆಲ್ ಅವರು ಅದೇ ಮನೆಯಲ್ಲಿ ಮಾಡಿ ಅಂದರು. ಕೊನೆಗೆ ಬಲವಂತವಾಗಿ ಒಲ್ಲದ ಮನಸ್ಸಿನಲ್ಲಿ ಶೂಟಿಂಗ್ ಶುರು ಮಾಡಿದೆ' ಎಂದರು.
ಮೂರು ತಿಂಗಳು ವಿನಯ್ ಗುರೂಜಿ ಭೇಟಿ ನಿರಾಕರಿಸಿದ ಮಾಸ್ಟರ್ ಆನಂದ್
'ಅಲ್ಲಿ ಶೂಟಿಂಗ್ಗೆ ಹೋದಾಗ ಹರೀಶ್ ಕುಟ್ಟಿ ಎನ್ನುವ ನನ್ನ ಫ್ರೆಂಡ್ ಒಬ್ಬ ನಿನಗೆ ಯಾರನ್ನೋ ಪರಿಚಯ ಮಾಡಬೇಕು ಅಂತಾ ಪದೇ ಪದೇ ಹೇಳುತ್ತಿದ್ದ. ನಾನು ಯಾರನ್ನು ಎಂದು ಕೇಳಿದಾಗ ಬನ್ನಿ ನೀವು ನೀವು ಅವರ ಮುಂದೆ ನಿಂತರ ಅವರೇ ನಿಮ್ಮ ಬಗ್ಗೆ ಎಲ್ಲಾ ಹೇಳುತ್ತಾರೆ ಅಂತಾ ಹೇಳುತ್ತಿದ್ದ. ಮೂರು ತಿಂಗಳು ಹೀಗೆ ಹೇಳುತ್ತಾನೆ. ನಾನು ಮೂರು ತಿಂಗಳು ಹೋಗುವುದಿಲ್ಲ'.
'ಒಂದು ದಿನ ಗುರುಗಳು ಇಲ್ಲೇ ಹತ್ತಿರದ ಶಾಲೆಯಲ್ಲಿ ಮಕ್ಕಳಿಗೆ ಏನೋ ಹಂಚುತ್ತಿದ್ದಾರೆ ಹೋಗೋಣ ಬಾ ಎನ್ನುತ್ತಾನೆ. ನಾನು ಊಟದ ಸಮಯದಲ್ಲಿ ನನ್ನ ತಮ್ಮನಿಗೆ ಶೂಟಿಂಗ್ ನೋಡಿಕೊಳ್ಳಲು ಹೇಳಿ ಹೋಗುತ್ತೇನೆ. ಅವರನ್ನು ನೋಡುತ್ತಿದ್ದಂತೆ ನನಗಿಂತ ಐದಾರು ವರ್ಷ ಚಿಕ್ಕವನ ರೀತಿ ಕಾಣುತ್ತಾನೆ ಅವನನ್ನು ಹೋಗಿ ಗುರು ಅಂತಾ ಹೇಳುತ್ತೀಯಲ್ಲಾ ಅಂದೆ. ನೀವು ಹೋಗಿ ಮಾತಾಡಿ ಅಂತಾ ಕಳುಹಿಸಿದ'.

'ನಾನು ಹೋಗಿ ಅರ್ಧ ಮನಸ್ಸಿನಲ್ಲೇ ನಮಸ್ಕಾರ ಅಂದೆ. ಇಷ್ಟು ದಿನ ಆಯ್ತಾ ಇಲ್ಲಿಗೆ ಬರಲು ಅಂತಾ ಹೇಳಿ ನನ್ನ ಕೈ ಹಿಡಿದುಕೊಂಡರು. ನಾನು ಅವರ ಆ ಮಾತು ಒಪ್ಪಲಿಲ್ಲ. ನನ್ನನ್ನು ಕರೆದುಕೊಂಡು ಬಂದವನೇ ಮೊದಲು ಹೇಳಿರಬೇಕು ಅಂದೆ. ಬಂದ ತಕ್ಷಣ ಅವರು ನನ್ನನ್ನು ಅಪ್ಪಿಕೊಂಡರು. ನಾನು ಇಷ್ಟು ವರ್ಷ ನೋಡಿದವರಲ್ಲಿ ಈ ರೀತಿ ಅವರು ಯಾರನ್ನಾದರೂ ಅಪ್ಪಿಕೊಳ್ಳುವುದು ತುಂಬಾ ವಿರಳ. ನನ್ನನ್ನು ತಬ್ಬಿಕೊಂಡ ಮೇಲೆ ಯಾವುದೂ ನಿನಗೆ ಸುಲಭವಾಗಿ ಸಿಕ್ಕಿಲ್ಲ ಅಂತಾ ಬೆನ್ನುತಟ್ಟಿದರು'.
ಗುರೂಜಿ ನಾನು ತಿಂದ ಎಂಜಲು ತಿಂದರು
'ಹೀಗೆ ಕುಳಿತುಕೊಂಡು ಮಾತನಾಡುವಾಗ ಅವನಿಗೆ ಪಲಾವ್ ಇಷ್ಟ ತೆಗೆದುಕೊಂಡು ಬನ್ನಿ ಅಂದರು. ನನಗೆ ಪಲಾವ್ ಇಷ್ಟ ಅಂತಾ ಇವರಿಗೆ ಹೇಗೆ ಗೊತ್ತಾಯ್ತು ಅಂದುಕೊಂಡೆ. ನಾನು ತಿಂದ ಮೇಲೆ ನನ್ನ ಎಲೆಯಲ್ಲಿ ಉಳಿದಿದನ್ನು ಅವರು ತಿನ್ನಲು ಶುರು ಮಾಡಿದರು. ನನಗೆ ಒಂಥರಾ ಅಸಹ್ಯ ಅನಿಸಿತು. ಅವನಿಗೆ ಹಾಲು ಕೊಡಿ ಅಂದರು. ನಾನು ಪಲಾವ್ ತಿಂದ ಮೇಲೆ ಹಾಲು ಹೇಗೆ ಹಾಲು ಕುಡಿಯಲಿ ಅಂದೆ ಅವರು ಪರವಾಗಿಲ್ಲ ಎಷ್ಟಾಗುತ್ತೋ ಅಷ್ಟು ಕುಡಿ ಅಂದರು. ಒಂದು ದೊಡ್ಡ ಲೋಟದಲ್ಲಿ ಹಾಲು ತಂದು ಕೊಟ್ಟರು. ನಾನು ಕಷ್ಟಪಟ್ಟು ಅರ್ಧ ಕುಡಿದೆ ಉಳಿದ ಅರ್ಧವನ್ನು ಅವರು ಕುಡಿದರು. ಯಾಕೆ ಹಾಗೆ ಮಾಡಿದರು ಅಂತಾ ಇವತ್ತಿಗೂ ನನಗೆ ಗೊತ್ತಿಲ್ಲ' ಎಂದರು.
ಇದ್ಯಾವ ಮರ್ಯಾದೆ
'ಇಷ್ಟೆಲ್ಲಾ ನಡೆಯುತ್ತಿರುವುದನ್ನು ಅಲ್ಲಿ ಒಬ್ಬ ಫೋಟೋಗ್ರಾಫರ್ ಫೋಟೋ ತೆಗೆಯುಯತ್ತಿದ್ದ. ಅವನ ಕೈಯಲ್ಲಿ ನಾಲ್ಕು ಉಂಗುರಳಿದ್ದವು. ಗುರುಗಳು ಅವನ್ನು ಕರೆದು ನಾನು ಏನು ಕೇಳಿದರೂ ಕೊಡುತ್ತೀಯಾ ಅಂತಾ ಕೇಳಿದರು. ಅವನು ಹೌದು ಗುರೂಜಿ ಅಂದ. ಅವನ ಕೈಯಲ್ಲಿದ್ದ ಉಂಗುರ ತೆಗೆದು ನನಗೆ ಹಾಕಲು ಬಂದರು. ನಾನು ಬೇಡವೇ ಬೇಡ ಅಂದೆ. ನನಗೆ ಅತಿ ಮುಜುಗರವಾಗಿ ಹೋಯ್ತು.

ಎಂಜಲು ತಿಂದು ಉಂಗುರ ಹಾಕುವುದು ಯಾವ ಮರ್ಯಾದೆ ಇದು ಅಂತಾ ಅನಿಸಿತು. ಕೊನೆಗೆ ಅವರ ಒಂದೇ ಒಂದು ಮಾತಿಗೆ ನಾನು ಒಪ್ಪಿಕೊಂಡೆ. ಆ ಉಂಗುರ ಅವನ ಕೈಯಲ್ಲಿತ್ತು ಅದು ಅವನದು, ಈಗ ನನ್ನ ಕೈಯಲ್ಲಿದೆ ನನ್ನದು, ನಿನ್ನ ಕೈಗೆ ಬಂದ ಮೇಲೆ ನಿನ್ನದು. ಮತ್ತೆ ಈ ಸಮಯ ಬರುತ್ತೋ ಇಲ್ಲವೋ ಈಗ ಹಾಕಬೇಕು ಅನಿಸಿದೆ ಹಾಕಿಕೋ ಅಂದರು. ಕೊನೆಗೆ ಉಂಗುರ ಹಾಕಿದರು'.
'ಅವರನ್ನು ಅವತ್ತು ನೋಡಿದ ಮೇಲೆ ಇವರು ಸಾಮಾನ್ಯ ಮನುಷ್ಯರಲ್ಲ. ಅವರ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವ ಕುತೂಹಲ ಜಾಸ್ತಿ ಆಯ್ತು. ಅದಾದ ಮೇಲೆ ಅವರನ್ನು ಮಾತನಾಡಿಸಬೇಕು, ಅವರನ್ನು ಭೇಟಿಯಾಗಬೇಕು ಅಂತಾ ಯಾವಾಗಲೂ ಅನಿಸಲು ಶುರುವಾಯ್ತು. ಅವತ್ತು ನಾನು ಅವರ ಜೊತೆಗೆ ಹೋದೆ ಒಂದು ಶಿವನ ದೇವಸ್ಥಾನಕ್ಕೆ ಕರೆದುಕೊಂಡು ಹೋದರು. ಗಿಡ ನಡೆಸಿದರು ನನ್ನ ಕೈಯಲ್ಲಿ. ಒಂದು ನೆಲವತ್ತು ನಿಮಿಷ ಅವರು ನನ್ನ ಕೈ ಹಿಡಿದುಕೊಂಡೇ ಇದ್ದರು'.
'ಕೊನೆಗೆ ಆಶ್ರಮಕ್ಕೆ ಕರೆದುಕೊಂಡು ಹೋದರು. ಆಶ್ರಮ ನಾನು ಅಂದುಕೊಂಡಂತೆ ಇರಲಿಲ್ಲ. ಶಿವಲಿಂಗ, ಗಣೇಶನ ವಿಗ್ರಹ ನೋಡಿ ತುಂಬಾ ಖುಷಿ ಆಯ್ತು. ಅಲ್ಲಿಂದ ಪ್ರತಿ ದಿನ ಅಲ್ಲಿಗೆ ಹೋಗಲು ಆರಂಭಿಸಿದೆ. ಒಂದು ವರ್ಷ ನಾನು ಅಲ್ಲಿ ಶೂಟಿಂಗ್ ಮಾಡಿದ್ದೆ. ಒಂದು ವರ್ಷ ನಾನು ಅನೇಕ ವಿಚಿತ್ರ ವಿಸ್ಮಯಗಳನ್ನು ನೋಡಿದ್ದೇನೆ' ಎಂದು ಕಿರುತೆರೆಯ ಜನಪ್ರಿಯ ನಿರೂಪಕ ಮಾಸ್ಟರ್ ಆನಂದ್ ವಿಶೇಷ ಸಂದರ್ಶನಲ್ಲಿ ಹೇಳಿದರು.












Click it and Unblock the Notifications