Ganesh: ಮಳೆ ಹುಡುಗ ಗಣೇಶ್ಗೆ ಇಂದು ಮರೆಯಲಾರದ ವಿಶೇಷ ದಿನ, ಯಾಕೆ?
ಕನ್ನಡ ಚಿತ್ರರಂಗದಲ್ಲಿ ಉದಯೋನ್ಮುಖ ನಟನಾಗಿ ಕಾಲಿಟ್ಟಾಗಲೇ ದಾಖಲೆ ನಿರ್ಮಿಸಿದ್ದರು ಗೋಲ್ಡನ್ ಸ್ಟಾರ್ ಗಣೇಶ್. ಇವರು ನಟಿಸಿದ್ದ ಮುಂಗಾರು ಮಳೆ ಸಿನಿಮಾ ಗಲ್ಲಾಪೆಟ್ಟಿಗೆಯನ್ನು ಅಲ್ಲಾಡಿಸಿದ್ದು ಮಾತ್ರವಲ್ಲದೆ ಸ್ಯಾಂಡಲ್ವುಡ್ನ ಪ್ರಮುಖ ನಟರ ಸಾಲಿನಲ್ಲಿ ನಿಲ್ಲಿಸಿದ್ದು ಇಂದಿಗೂ ಮರೆಯುವಂತದ್ದಲ್ಲ. ಇನ್ನು ಗಣೇಶ್ ಅವರು ಇಂದು (ಫೆ.11) ತುಂಬಾ ಸ್ಪೆಷಲ್ ಆದ ದಿನವಾಗಿದೆ. ಅದೇನು ಅನ್ನೋದು ಮುಂದೆ ತಿಳಿಯಿರಿ.
ಸ್ಯಾಂಡಲ್ವುಡ್ನ ಗೋಲ್ಡನ್ ಸ್ಟಾರ್ ಆಗಿ ಮಿಂಚುತ್ತಿರುವ ನಟ ಗಣೇಶ್ ಅವರು ಇಂದು ತುಂಬಾ ಸಂಭ್ರಮದಲ್ಲಿದ್ದಾರೆ. ಇಂದು ಅವರ ಜೀವನದ ಪ್ರಮುಖವಾದ ದಿನ ಎಂದು ಗಣೇಶ್ ಖುಷಿ ಹಂಚಿಕೊಂಡಿದ್ದಾರೆ. ಇಷ್ಟಕ್ಕೂ ಗಣೇಶ್ ಅವರಿಗೆ ಈ ದಿನ ಏಕೆ ವಿಶೇಷ ಗೊತ್ತಾ? ಇಂದು ಗಣೇಶ್ ಅವರ ವಿವಾಹ ವಾರ್ಷಿಕೋತ್ಸವ. ಈ ಹಿನ್ನೆಲೆ ಅವರು ತಮ್ಮ ಪತ್ನಿ ಶಿಲ್ಪಾ ಅವರಿಗೆ ವಿಶ್ ಮಾಡಿ ಸ್ಪೆಷಲ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. "ವಾರ್ಷಿಕೋತ್ಸವದ ಶುಭಾಶಯಗಳು ಹೆಂಡತಿ, ಯಾವಾಗಲೂ ನಾನು ಚಾರ್ಜ್ನಲ್ಲಿದ್ದೇನೆ ಎಂದು ಭಾವಿಸಲು ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು. ನಾವಿಬ್ಬರೂ ಸತ್ಯವನ್ನು ತಿಳಿದಿದ್ದೇವೆ" ಎಂದು ವಿಶ್ ಮಾಡಿದ್ದಾರೆ.

ಗಣೇಶ್ ಹಾಗು ಶಿಲ್ಪಾ ಅವರು 2008ರ ಫೆಬ್ರವರಿ 11ರಂದು ಮದುವೆಯಾದರು. ಇವರಿಗೆ ಚಾರಿತ್ರ್ಯ ಎಂಬ ಮಗಳು ಹಾಗೂ ವಿಹಾನ್ ಎಂಬ ಪುತ್ರ ಇದ್ದಾರೆ. ಕಾಮಿಡಿ ಟೈಮ್ ಕಾರ್ಯಕ್ರಮದ ಮೂಲಕ ಕರುನಾಡಿಗೆ ಚಿರಪರಿಚಿತರಾಗಿದ್ದ ಗಣೇಶ್ ಅವರು ಮುಂಗಾರು ಮಳೆ ಸಿನಿಮಾ ಮೂಲಕ ಹೀರೋ ಆಗಿಯೂ ಮಿಂಚಿದರು. ಆರಂಭಿಕ ಸಿನಿಮಾಗಳಲ್ಲೇ ಗಣೇಶ್ ಸಾಧನೆಯ ಉತ್ತುಂಗಕ್ಕೇರಿದ್ದರು. ಈ ವೇಳೆ ಅವರ ಅಭಿಮಾನಿಗಳ ಸಂಖ್ಯೆ ಕೂಡ ಕಡಿಮೆ ಇರಲಿಲ್ಲ.
ಮುಂಗಾರು ಮಳೆ ಸಿನಿಮಾ ಬಂದ ನಂತರ ಗಣೇಶ್ ಅವರು ಕರುನಾಡಿನ ಹಲವು ಯುವತಿಯರ ಕ್ರಶ್ ಕೂಡ ಆಗಿದ್ದರು. ಮದುವೆಯಾದರೆ ಗಣೇಶ್ ಅವರನ್ನೇ ಮದುವೆಯಾಗೋದು ಎಂದು ಹಠ ಮಾಡುತ್ತಿದ್ದರು. ಹೀಗಿರುವಾಗಲೇ ನಟ ಗಣೇಶ್ ಅವರ ಮದುವೆ ವಿಚಾರ ಹಲವು ಹೃದಯಗಳಿಗೆ ಶಾಕ್ ನೀಡಿತ್ತು. ಗಣೇಶ್ ಆಗಲೇ ಮದುವೆಯಾಗಿಬಿಟ್ರಾ ಅಂತಾ ಕಣ್ಣೀರು ಸುರಿಸಿದ ನಿದರ್ಶನಗಳೂ ಸಾಕಷ್ಟಿವೆ.

ಆದರೆ ಗಣೇಶ್ ಅವರು ಶಿಲ್ಪಾ ಅವರನ್ನು ಮದುವೆಯಾಗ್ತಾರೆ ಅನ್ನೋ ವಿಚಾರ ಸಾಕಷ್ಟು ಮಂದಿಗೆ ಗೊತ್ತೇ ಇರಲಿಲ್ಲ. ಇವರ ಮದುವೆ ವಿಚಾರ ಕರ್ನಾಟಕಕ್ಕೆ ಶಾಕ್ ಕೊಟ್ಟಿದ್ದಂತೂ ನಿಜ. ಇವರ ಲವ್ಸ್ಟೋರಿಯನ್ನು ಗಣೇಶ್ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಮಾತ್ರವೇ ಬಿಚ್ಚಿಟ್ಟಿದ್ದರು.
ನಮಗಿಬ್ಬರಿಗೂ ಒಬ್ಬರು ಕಾಮನ್ ಫ್ರೆಂಡ್ ಇದ್ದರು. ಅವರಿಂದಲೇ ಇಬ್ಬರ ಪರಿಚಯವಾಯಿತು. ಪರಿಚಯ ಆದ್ಮೇಲೆ ಫ್ರೆಂಡ್ಶಿಪ್ ಬೆಳೆಯಿತು. ಮೊದಲು ನಾನೇ ಶಿಲ್ಪಾ ಅವರಿಗೆ "ಹಾಯ್.. ದಿಸ್ ಈಸ್ ಕಾಮಿಡಿ ಟೈಮ್ ಗಣೇಶ್" ಅಂತ ಮೆಸೇಜ್ ಮಾಡಿದ್ದೆ. ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಆಮೇಲೆ ನಮ್ಮ ಸ್ನೇಹ ಲವ್ ಆಗಿ ಬದಲಾಯ್ತು. ಎರಡು ತಿಂಗಳಾದ ಮೇಲೆ ಪ್ರಪೋಸ್ ಮಾಡಿದ್ರು ಎಂದು ಹೇಳಿದ್ದರು.
ಬಳಿಕ ನಾವು ಮದುವೆ ಆಗಬೇಕು ಎಂದು ನಿರ್ಧರಿಸಿದ್ವಿ, ಇದು ಯಾರಿಗೂ ಗೊತ್ತಿರಲಿಲ್ಲ. ಗಾಳಿಪಟ ಸಿನಿಮಾ ಶೂಟಿಂಗ್ ಸಮಯದಲ್ಲಿ ಯಾರೋ ಹುಡುಗಿ ಬಂದು ಗಣೇಶ್ನ ಪಿಕ್ಅಪ್ ಮಾಡಿಕೊಂಡು ಹೋದಳು ಎಂಬ ವಿಚಾರ ಯೋಗರಾಜ್ ಭಟ್ರ ಕಣ್ಣಿಗೆ ಕಾಣಿಸಿ ಸಿಕ್ಕಾಕೊಂಡ್ವಿ. ಮುಂಗಾರು ಮಳೆ ಶುರುವಾಗುವ ಮುನ್ನವೂ ನಾವಿಬ್ಬರು ಸ್ನೇಹಿತರು. "ಮುಂಗಾರು ಮಳೆ" ಸಿನಿಮಾ ಆದ ಮೇಲೆ ಮದುವೆ ಆಗೋಣ ಎಂದು ನಿರ್ಧರಿಸಿದೆವು. ಕೊನೆಗೆ ಮದುವೆ ಆದೆವು ಎಂದು ಗಣೇಶ್ ರಿವೀಲ್ ಮಾಡಿದ್ದರು.












Click it and Unblock the Notifications