Gold Smuggling Case: ರನ್ಯಾ ರಾವ್ ಕೇಸ್: ನಟಿಯ ಜಾಮೀನು ಅರ್ಜಿ ವಜಾ- ಇನ್ನೊಬ್ಬ ಆರೋಪಿ ಅರೆಸ್ಟ್
ಬೆಂಗಳೂರು ಮಾರ್ಚ್ 27: ಸ್ಯಾಂಡಲ್ವುಡ್ ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತನನ್ನು ಬಳ್ಳಾರಿಯ ಚಿನ್ನದ ವ್ಯಾಪಾರಿ ಎಂದು ಹೇಳಲಾಗಿದೆ. ಬಂಧಿತನ ವಿಚಾರಣೆಯಿಂದ ಹಲವಾರು ರಹಸ್ಯಗಳು ಬಯಲಾಗಿವೆ. ಜೊತೆಗೆ ಇಂದು ನಟಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ.
ಹೌದು.. ದುಬೈನಿಂದ ಅಕ್ರಮ ಚಿನ್ನವನ್ನು ತೆಗೆದುಕೊಂಡು ಬೆಂಗಳೂರಿಗೆ ಬಂದ ಸಂದರ್ಭದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾ ರಾವ್ ಲಾಕ್ ಆಗಿದ್ದರು. ನಟಿಯ ಮನೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಕಂತೆ ಕಂತೆ ನೋಟು, ಅಪಾರ ಪ್ರಮಾಣದ ಚಿನ್ನ ಪತ್ತೆಯಾದ ಬೆನ್ನಲ್ಲೆ ರನ್ಯಾ ರಾವ್ ಅವನ್ನು ಬಂಧಿಸಲಾಗಿತ್ತು.

ಬಳಿಕ ರನ್ಯಾ ರಾವ್ ಜಾಮೀನು ಅರ್ಜಿಯನ್ನು ಸಲ್ಲಿಕೆ ಮಾಡಿದ್ದರು. ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಇಂದು ಕೋರ್ಟ್ನಲ್ಲಿ ನಡೆಸಲಾಯಿತು. ಆದರೆ ಜಾಮೀನು ಅರ್ಜಿ ವಜಾಗೊಳಿಸಲಾಗಿದೆ. 64ನೇ ಸೆಷನ್ಸ್ ಕೋರ್ಟ್ನಿಂದ ರನ್ಯಾ ರಾವ್ ಜಾಮೀನು ಅರ್ಜಿ ವಜಾಗೊಳಿಸಲಾಗಿದೆ. ಹೀಗಾಗಿ ನಟಿ ರನ್ಯಾ ರಾವ್ಗೆ ಜೈಲೇ ಗತಿಯಾಗಿದೆ. ಇದರ ನಡುವೆ ಮತ್ತೊಂದು ಬೆಳವಣಿಗೆ ನಡೆದಿದೆ.
ರನ್ಯಾ ರಾವ್ ಪ್ರಕರಣದಲ್ಲಿ ಮೊತ್ತೊಬ್ಬ ಆರೋಪಿಯನ್ನು ಡಿಆರ್ಐ ಅಧಿಕಾರಿಗಳು ಬಂಧಿಸಿದ್ದಾರೆ. ಬಳ್ಳಾರಿ ಮೂಲದ ಚಿನ್ನದ ವ್ಯಾಪಾರಿ ಸಾಹಿಲ್ ಜೈನ್ ಎಂಬಾತನನ್ನು ಅರೆಸ್ಟ್ ಮಾಡಲಾಗಿದೆ. ಪ್ರಸ್ತುತ ಈತನನ್ನು ನಾಲ್ಕು ದಿನದ ಮಟ್ಟಿಗೆ ವಶಕ್ಕೆ ಪಡೆಯಲಾಗಿದೆ. ಈತ ನಟಿ ರನ್ಯಾ ರಾವ್ ತಂದು ಕೊಟ್ಟ ಚಿನ್ನವನ್ನು ಕರಗಿಸುವ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಈತನಿಗೆ ನಟಿ ಹಾಗೂ ನಟಿಯ ಬಾಯ್ಫ್ರೆಂಡ್ ತರುಣ್ ಪರಿಚಯವಿದ್ದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.

ಸಾಹಿಲ್ ಜೈನ್ ಭಾರತದಲ್ಲಿ ಕಳ್ಳಸಾಗಣೆ ಮಾಡಿದ ಚಿನ್ನವನ್ನು ಮಾರಾಟ ಮಾಡುವ ಮತ್ತು ಹವಾಲಾ ವಹಿವಾಟುಗಳಿಗೆ ಅನುಕೂಲ ಮಾಡಿಕೊಡುವ ಕೆಲಸದಲ್ಲಿ ಭಾಗಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ವಿದೇಶದಿಂದ ಕಳ್ಳ ಸಾಗಣೆ ಮೂಲಕ ಚಿನ್ನ ಮಾರಾಟದಲ್ಲಿ ರನ್ಯಾ ರಾವ್ ಅವರಿಗೆ ಈತ ನೆರವು ನೀಡಿದ್ದ ಎಂದು ಹೇಳಲಾಗುತ್ತಿದ್ದು, ಈ ಸಂಬಂಧ ಡಿಜಿಟಲ್ ದಾಖಲೆಗಳು ಕೂಡ ಪೊಲೀಸರಿಗೆ ಲಭ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.
ಅಲ್ಲದೆ ಸಾಹಿಲ್ ರನ್ಯಾ ಕಳ್ಳಸಾಗಣೆ ಮಾಡಿದ ಚಿನ್ನವನ್ನು ಮಾರಾಟ ಮಾಡಲು ಹಲವು ಬಾರಿ ಸಹಾಯ ಮಾಡಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ. ಇನ್ನೂ ಹಲವಾರು ಬಾರಿ ದುಬೈಗೆ ಹೋಗಿದ್ದ ರನ್ಯಾ ರಾವ್ ಹಲವಾರು ಬಾರಿ ಫೋನ್ ಮೂಲಕ ಈತತನ್ನು ಸಂಪರ್ಕಿಸಿದ್ದಾಳೆ. ಈ ಕಾಲ್ ಡಿಟೇಲ್ಸ್ ಅಧಿಕಾರಿಗಳಿಗೆ ಸಿಕ್ಕಿದ್ದು ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ.
ಆರೋಪಿ ಸಾಹಿಲ್ ಅನ್ನು ಕಸ್ಟಮ್ಸ್ ಕಾಯ್ದೆ, 1962 ರ ಸೆಕ್ಷನ್ 108 ರ ಅಡಿಯಲ್ಲಿ ಈತನನ್ನು ಬಂಧಿಸಲಾಗಿದ್ದು, ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿ ನಾಲ್ಕು ದಿನ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ. ಇನ್ನೂ ಈ ಪ್ರಕರಣದಲ್ಲಿ ಜಾಮೀನು ತಿರಸ್ಕೃತಗೊಂಡಿದ್ದು ರನ್ಯಾ ರಾವ್ಗೆ ಮತ್ತಷ್ಟು ಸಂಕಷ್ಟ ಹೆಚ್ಚಾಗುವ ಸಾಧ್ಯತೆ ಇದೆ.
ಅಲ್ಲದೆ ಈಗಾಗಲೇ ಕೋರ್ಟ್ಗೆ ದಾಖಲೆ ಸಲ್ಲಿಸಿರೋ ಡಿಆರ್ಐ ಅಧಿಕಾರಿಗಳು, ಆರೋಪಿ ತರುಣ್ ರಾಜ್ ಬಂಧನಕ್ಕೆ ಕಾರಣ ನೀಡಿದ್ದಾರೆ. ಒಮ್ಮೆ 4ಕೆಜಿ ಚಿನ್ನ, ಮತ್ತೊಮ್ಮೆ 2 ಕೆಜಿ ಚಿನ್ನ ಸಾಗಿಸಿದ್ದಾಗಿ ತರುಣ್ ರಾಜ್ ಒಪ್ಪಿಕೊಂಡಿದ್ದಾನೆ.












Click it and Unblock the Notifications