ದರ್ಶನ್ ಅಭಿಮಾನಿಯಿಂದಲೇ ಅಪ್ಪು-ದಚ್ಚು ಫ್ಯಾನ್ಸ್ ವಾರ್ಗೆ ಬ್ರೇಕ್
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸ್ಯಾಂಡಲ್ವುಡ್ನ ಪ್ರಮುಖ ನಟರು. ಇಬ್ಬರೂ ಅಪಾರ ಅಭಿಮಾನಿಗಳು ಹೊಂದಿದ್ದಾರೆ. ಅಪ್ಪು-ದರ್ಶನ್ ಕೂಡ ಆತ್ಮೀಯವಾಗಿ ಇದ್ದವರು. ಒಟ್ಟಿಗೆ ಸಿನಿಮಾದಲ್ಲಿ ನಟಿಸಿದವರು. ನಟರಾಗಿ ಅವರು ತೆರೆಯ ಹಿಂದೆಯೂ ಸ್ನೇಹಿತರಂತಿದ್ದರೆ, ಕೆಲ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಇಬ್ಬರ ನಡುವೆ ಕಿಚ್ಚನ್ನು ಹೊತ್ತಿಸಿದ್ದರು. ಅಪ್ಪು-ದರ್ಶನ್ ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಕಿತ್ತಾಟ, ಆರೋಪ-ಪ್ರತ್ಯಾರೋಪ ಮಾಡುವುದು ನಡೆಯುತ್ತಲೇ ಇದೆ. ಇನ್ನು ದರ್ಶನ್ ಅಭಿಮಾನಿಯೊಬ್ಬ ಈ ಫ್ಯಾನ್ಸ್ ವಾರ್, ಸ್ಟಾರ್ ವಾರ್ಗೆ ಬ್ರೇಕ್ ಹಾಕಲು ವಿಭಿನ್ನ ಪ್ರಯತ್ನ ಮಾಡಿದ್ದಾನೆ.
ಪುನೀತ್ ರಾಜ್ಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ಇಂದು ಅವರ ಅಭಿನಯದ ಮೊಟ್ಟ ಮೊದಲ ಸಿನಿಮಾ ಅಪ್ಪು ರೀರಿಲೀಸ್ ಆಗಿದೆ. ಇದೇ ಹೊತ್ತಿನಲ್ಲಿ ಅಭಿಮಾನಿಯೊಬ್ಬರ ದರ್ಶನ್ ಹಾಗೂ ಅಪ್ಪು ಅಭಿಮಾನಿಗಳ ನಡುವಿನ ಕಿತ್ತಾಟಕ್ಕೆ ಬ್ರೇಕ್ ಹಾಕುವ ಸಂದೇಶ ರವಾನಿಸಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಅಪ್ಪು ಹಾಗೂ ದರ್ಶನ್ ಅಭಿಮಾನಿಗಳ ನಡುವೆ ವಾಗ್ವಾದ, ಟ್ರೋಲ್ಗಳು, ಅಶ್ಲೀಲ ಪದಗಳ ಬಳಕೆ ಸೇರಿ ಕಿತ್ತಾಟ ತಾರಕಕ್ಕೇರಿದೆ. ನಟರ ಹೆಸರನ್ನು ಮುಂದಿಟ್ಟುಕೊಂಡು ಮನಬಂದಂತೆ ಕಚ್ಚಾಡುವ ಪ್ರವೃತ್ತಿಯನ್ನೇ ಕೆಲವರು ಇಂದಿಗೂ ಮುಂದುವರಿಸಿದ್ದಾರೆ. ಇದಕ್ಕೆಲ್ಲ ಬ್ರೇಕ್ ಹಾಕಬೇಕು ಎಂದು ದರ್ಶನ್ ಅಭಿಮಾನಿಯೊಬ್ಬ ಮಾದರಿ ನಡೆ ಪ್ರದರ್ಶಿಸಿದ್ದಾನೆ.

ಇಂದು ಅಪ್ಪು ಸಿನಿಮಾ ರೀರಿಲೀಸ್ ಬೆನ್ನಲ್ಲೇ ದರ್ಶನ್ ಅಭಿಮಾನಿ ರಕ್ಷಿತ್ ಸ್ಟಾರ್ವಾರ್ಗೆ ಬ್ರೇಕ್ ಹಾಕುವ ಪ್ರಯತ್ನ ಮಾಡಿದ್ದಾನೆ. ದರ್ಶನ್ ಹಾಗೂ ಪುನೀತ್ ರಾಜ್ಕುಮಾರ್ ಅವರ ಕಲಾಕೃತಿ ರಚಿಸಿರುವ ರಕ್ಷಿತ್ ಇಬ್ಬರೂ ಒಗ್ಗಟ್ಟಿನಿಂದ ಇರಬೇಕು ಎಂಬ ಸಂದೇಶ ರವಾನಿಸಿದ್ದಾರೆ. ಪುನೀತ್ ಮತ್ತು ದರ್ಶನ್ ಬಗ್ಗೆ ಮಾತನಾಡಿರುವ ಅಭಿಮಾನಿ, ಸ್ಯಾಂಡಲ್ವುಡ್ನಲ್ಲಿ ಫ್ಯಾನ್ಸ್ ವಾರ್ ಅನ್ನೋದು ಇರಬಾರದು. ಎಲ್ಲರೂ ಕನ್ನಡ ಸಿನಿಮಾವನ್ನು ನೋಡಿ ಸಪೋರ್ಟ್ ಮಾಡಬೇಕು ಎಂದು ಮನವಿ ಮಾಡಿದ್ದಾನೆ.
ಸ್ಟಾರ್ ವಾರ್ ನಿಲ್ಲಿಸಬೇಕು ಎಂಬ ಉದ್ದೇಶದಿಂದಲೇ ಈ ಚಿತ್ರ ಬಿಡಿಸಿದ್ದೇನೆ. ನಮಗೆ ಪುನೀತ್ ರಾಜ್ಕುಮಾರ್ ಬೇರೆ ಅಲ್ಲ, ಡಿಬಾಸ್ ಕೂಡ ಬೇರೆಯಲ್ಲ. ನಮಗೆ ಇಬ್ಬರೂ ಒಂದೇ ಎಲ್ಲಾರೂ ಒಂದೆ. ಅಭಿಮಾನಿ ಆದ ಕಾರಣ ನಾನು ದರ್ಶನ್ ಅವರನ್ನು ಹೆಚ್ಚಾಗಿ ಇಷ್ಟಪಡುತ್ತೇನೆ. ಹಾಗಂದ ಮಾತ್ರಕ್ಕೆ ನಾವು ಕನ್ನಡ ಚಿತ್ರರಂಗದ ಪುನೀತ್ ರಾಜ್ಕುಮಾರ್, ಸುದೀಪ್, ಉಪೇಂದ್ರ ಸೇರಿ ಯಾವ ನಟನನ್ನೂ ಬಿಟ್ಟುಕೊಡಲ್ಲ. ಎಲ್ಲರ ಸಿನಿಮಾಗಳನ್ನೂ ನೋಡುತ್ತೇವೆ. ಡಿಬಾಸ್ ಸಿನಿಮಾಗಳು ಅಂದ್ರೆ ನಮಗೆ ಒಂದು ಕೈ ಮುಂದೆ ಅಷ್ಟೇ ಎಂದೂ ರಕ್ಷಿತ್ ಹೇಳಿದ್ದಾನೆ.

ದರ್ಶನ್ ಹಾಗೂ ಅಪ್ಪು ಅವರ ಅಭಿಮಾನಿಗಳ ನಡುವೆ ಕಿತ್ತಾಟವಿಲ್ಲ. ಬೇರ ವಿಚಾರಗಳನ್ನು ಎಳೆದು ತಂದು ಸುಮ್ಮನೆ ಗಲಾಟೆ ಮಾಡಲು ಹೋಗಬೇಡಿ. ದರ್ಶನ್ ಅವರ ಅಭಿಮಾನಿಗಳು ಯಾವುದೇ ಫ್ಯಾನ್ ವಾರ್ ಮಾಡಲ್ಲ ಎಂಬುದು ಎಲ್ಲರಿಗೂ ತಿಳಿಯಬೇಕು. ಈ ಉದ್ದೇಶದಿಂದಲೇ ನಾನು ಈ ಸಂದೇಶ ನೀಡುತ್ತಿದ್ದೇನೆ. ಎಲ್ಲ ನಟರೂ ಚೆನ್ನಾಗಿಯೇ ಇದ್ದಾರೆ. ಹೀಗಿದ್ದಾಗ ಅಭಿಮಾನಿಗಳು ಏಕೆ ಕಿತ್ತಾಡಬೇಕು? ನಾವು ಕೂಡ ನಟರಂತೆ ಒಟ್ಟಾಗಿ ಇರೋಣ, ಕನ್ನಡ ಸಿನಿಮಾಗಳನ್ನು ಬೆಳೆಸೋಣ ಎಂದು ಎಲ್ಲರಿಗೂ ಕರೆ ನೀಡಿದ್ದಾನೆ.












Click it and Unblock the Notifications