Darshan Thoogudeepa: ಆ ಹಣ ವಾಪಸ್ ಕೊಡಿ- ಕೋರ್ಟ್ಗೆ ದರ್ಶನ್ ಮತ್ತೊಂದು ಅರ್ಜಿ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ತೂಗುದೀಪ ಅವರು ತಮ್ಮ ಮನೆಯಿಂದ ಜಪ್ತಿ ಮಾಡಿದ್ದ ಹಣವನ್ನು ವಾಪಸ್ ನೀಡಲು ಮನವಿ ಮಾಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ವೇಳೆ ಐಟಿ ತಂಡ ದರ್ಶನ್ ಪತ್ನಿ ವಿಜಯಲಕ್ಷ್ಮೀ ಮನೆಯಿಂದ 40.40 ಲಕ್ಷ ಹಣ ಸೀಜ್ ಮಾಡಿತ್ತು. ಪ್ರಸ್ತುತ ಆ ಹಣ ವಾಪಸ್ ನೀಡಲು ದರ್ಶನ್ ಮನವಿ ಮಾಡಿದ್ದಾರೆ.
ಇಂದು ದರ್ಶನ್ ತಮ್ಮ ಪರ ವಕೀಲರ ಮೂಲಕ ಕೋರ್ಟ್ಗೆ ಮನವಿ ಸಲ್ಲಿಸಿದ್ದಾರೆ. ವಿಚಾರಣೆ ವೇಳೆ ನನ್ನ ಮನೆಯಿಂದ 40.40 ಲಕ್ಷ ಹಣ ಜಪ್ತಿ ಮಾಡಿಲಾಗಿತ್ತು. ಆ ಹಣದ ಅವಶ್ಯತೆ ನನಗೆ ಇದೆ. ಹೀಗಾಗಿ ಅದನ್ನು ವಾಪಸ್ ಕೊಡಿ ಎಂದು ದರ್ಶನ್ ಕೋರ್ಟ್ಗೆ ಮನವಿ ಮಾಡಿದ್ದಾರೆ.

ಕೊಲೆ ಪ್ರಕರಣದಲ್ಲಿ ದರ್ಶನ್ ಪೊಲೀಸ್ ವಶವಾದ ಬಳಿಕ ಅವರ ಮನೆಯಲ್ಲಿ ತಪಾಸಣೆ ನಡೆಸಲಾಗಿತ್ತು. ಈ ವೇಳೆ ದರ್ಶನ್ ಮನೆಯಲ್ಲಿ 40.40 ಲಕ್ಷ ಹಣ ಜಪ್ತಿ ಮಾಡಲಾಗಿತ್ತು. ಇಷ್ಟೊಂದು ಹಣ ಮನೆಯಲ್ಲಿ ಯಾಕೆ ಇಟ್ಟಿದ್ದೀರಿ ಎಂದು ಐಟಿ ದರ್ಶನ್ಗೆ ಪ್ರಶ್ನೆ ಮಾಡಿತ್ತು. ಇದಕ್ಕೆ ಸರಿಯಾದ ಉತ್ತರ ಹಾಗೂ ದಾಖಲೆಗಳು ಸಿಕ್ಕಿರಲಿಲ್ಲ. ಅನುಮಾನ ಬಂದು ಈ ಹಣವನ್ನು ಜಪ್ತಿ ಮಾಡಲಾಗಿತ್ತು.
ಕೊಲೆ ಪ್ರಕರಣದ ಬಳಿಕ ದರ್ಶನ್ ಮನೆಯಲ್ಲಿ ಇಷ್ಟೊಂದು ಹಣ ಸಿಕ್ಕಿತ್ತು. ಈ ಹಣವನ್ನು ದರ್ಶನ್ ಪ್ರಕರಣವನ್ನು ಮುಚ್ಚಿಹಾಕಲು ಬಳಸಲು ತಂದಿರಬೇಕು ಎನ್ನುವ ಅನುಮಾನ ವ್ಯಕ್ತವಾಗಿತ್ತು. ಜೊತೆಗೆ ಈ ಘಟನೆ ನಡೆದ ಆರಂಭಿಕ ದಿನಗಳಲ್ಲಿ ಕೊಲೆ ನಾವೇ ಮಾಡಿದ್ದೇವೆ ಎಂದು ಒಪ್ಪಿಕೊಂಡು ಕೆಲ ಆರೋಪಿಗಳು ಪೊಲೀಸ್ ಠಾಣೆಗೆ ಹೋಗಿದ್ದರು. ಈ ಆರೋಪಿಗಳ ಮೇಲೆ ಶಂಕೆ ವ್ಯಕ್ತವಾಗಿ ಪೊಲೀಸರು ಬಾಯಿ ಬಿಡಿಸಿದಾಗ ಆರೋಪಿಗಳು ದರ್ಶನ್ನತ್ತ ಬೆಟ್ಟು ಮಾಡಿದ್ದರು. ಜೊತೆಗೆ ಈ ಆರೋಪವನ್ನು ತಮ್ಮ ಮೇಲೆ ಹಾಕಿಕೊಂಡರೆ ದರ್ಶನ್ ಹಣ ನೀಡುವುದಾಗಿ ಹೇಳಿದ್ದರು ಎನ್ನುವ ಹೇಳಿಕೆಯನ್ನು ನೀಡಿದ್ದರು ಎನ್ನಲಾಗಿತ್ತು.
ಅಲ್ಲದೆ ದರ್ಶನ್ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎನ್ನುವುದಕ್ಕೆ ಬೇಕಾದ ಸಾಕ್ಷಿಯನ್ನು ಕಲೆ ಹಾಕಲು ಐಟಿ ತಂಡ ದರ್ಶನ್ ಅವರ ಇಡೀ ಮನೆಯನ್ನು ಪರಿಶೀಲನೆ ಮಾಡಿತ್ತು. ದರ್ಶನ್ ಬಟ್ಟೆ, ಅವರ ಶೂ, ಅವರು ಮಲಗುವ ಕೋಣೆ, ವಾಸವಿದ್ದ ಮನೆ, ಕಾರು ಎಲ್ಲವನ್ನೂ ಪರಿಶೀಲನೆ ಮಾಡಲಾಗಿತ್ತು. ಈ ವೇಳೆ ಮಹತ್ವದ ಸಾಕ್ಷಿಗಳ ಜೊತೆಗೆ 40.40 ಲಕ್ಷ ಹಣವನ್ನೂ ಸೀಜ್ ಮಾಡಲಾಗಿತ್ತು.
ಆದರೀಗ ದರ್ಶನ್ ಆ ಹಣ ನಾನು ಕಷ್ಟಪಟ್ಉ ದುಡಿದ ಹಣ. ಅದರ ಅವಶ್ಯಕತೆ ಈಗ ನನಗೆ ತುಂಬಾ ಇದೆ. ಅದನ್ನು ವಾಪಸ್ ಕೊಡಿ ಎಂದು ಕೋರ್ಟ್ ಮೊರೆ ಹೋಗಿದ್ದಾರೆ. ಒಂದು ವೇಳೆ ಕೋರ್ಟ್ ಅನುಮತಿ ನೀಡಿದರೆ ದರ್ಶನ್ ಮನೆಯಿಂದ ಸೀಜ್ ಮಾಡಲಾಗಿದ್ದ ಹಣವನ್ನು ವಾಪಾಸ್ ಪಡೆಯಲಿದ್ದಾರೆ.
ಇನ್ನೂ ಜೈಲಿನಿಂದ ಹೊರ ಬಂದ ಬಳಿಕ ದರ್ಶನ್ ಬಯಸಿದ್ದೆಲ್ಲಾ ಸಿಗಲಾರಂಭಿಸಿದೆ. ಬಳ್ಳಾರಿ ಜೈಲಿನಿಂದ ಅನಾರೋಗ್ಯ ಕಾರಣ ನೀಡಿ ಮಧ್ಯಂತರ ಜಾಮೀನು ಪಡೆದು ಹೊರ ಬಂದ ದರ್ಶನ್ ಬಯಸಿದಂತೆ ಬಯಸಿದ ದಿನ ಪೂರ್ಣಾವಧಿ ಜಾಮೀನು ಪಡೆದರು. ಬಳಿಕ ಮೈಸೂರಿಗೆ ತೆರಳುವ ಅವಕಾಶವನ್ನು ಪಡೆದರು. ಈಗ ಮತ್ತೆ ಮೈಸೂರಿಗೆ ಹೋಗಲು ದರ್ಶನ್ ಅವರಿಗೆ ಕೋರ್ಟ್ ಅನುಮತಿ ನೀಡಿದೆ. ಹೀಗಾಗಿ ಅವರ ಹಣ ಕೂಡ ಅವರು ವಾಪಸ್ ಪಡೆಯುವ ಸಾಧ್ಯತೆ ಇದೆ.
ಇತ್ತ ಪವಿತ್ರಾ ಗೌಡ ಕೂಡ ತಾವು ದೆಹಲಿಗೆ ಹೋಗಬೇಕು ಎನ್ನುವ ಬೇಡಿಕೆಯನ್ನು ಕೋರ್ಟ್ ಮುಂದೆ ಇಟ್ಟಿದ್ದರು ಇದಕ್ಕೂ ಕೋರ್ಟ್ ಅಸ್ತು ಎಂದಿದೆ. ಒಟ್ಟಿನಲ್ಲಿ ಜೈಲಿನಿಂದ ಹೊರ ಬಂದ ಬಳಿಕ ದರ್ಶನ್ ಅವರಿಗೆ ಅದೃಷ್ಟದ ಕಾಲ ಶುರುವಾದಂತಿದೆ.












Click it and Unblock the Notifications