ನೆಲೆ ಇಲ್ಲದೇ ಆಶ್ರಮದ ಪಾಲಾದ ಹಿರಿಯ ನಟ ಸುದರ್ಶನ್ ಪತ್ನಿಯ ನೆರವಿಗೆ ನಿಂತ ದರ್ಶನ್
ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಹತ್ತಾರು ಹಿರಿಯ ಕಲಾವಿದರಿಗೆ ಈಗಾಗಲೇ ಸಹಾಯ ಹಸ್ತ ಚಾಚಿದ್ದಾರೆ. ಆದರೆ ಬಲಗೈಯಲ್ಲಿ ಮಾಡಿದ ಸಹಾಯ ಎಡಗೈಗೆ ಗೊತ್ತಾಗಬಾರದು ಎನ್ನುವ ಸಿದ್ಧಾಂತದ ಮೇಲೆ ದರ್ಶನ್ ಕೆಲಸ ಮಾಡುತ್ತಾರೆ. ತಾವೇ ಕಷ್ಟದ ದಿನಗಳನ್ನು ಎದುರಿಸುತ್ತಿದ್ದರೂ ಕೂಡ ದರ್ಶನ್ ಇತರರಿಗೆ ಸಹಾಯ ಮಾಡುವುದನ್ನು ತಪ್ಪಿಸಿಲ್ಲ.
ಕೊಲೆ ಪ್ರಕರಣ, ಜೈಲು, ಜಾಮೀನು ಈ ರೀತಿ ತಾವೇ ಸಂಕಷ್ಟದ ದಿನಗಳನ್ನು ಎದುರಿಸುತ್ತಿರುವ ನಟ ದರ್ಶನ್, ಆಶ್ರಮದ ಪಾಲಾಗಿದ್ದ ಹಿರಿಯ ನಟ ಸುದರ್ಶನ್ ಪತ್ನಿ ಶೈಲಶ್ರೀ ಅವರ ನೆರವಿಗೆ ನಿಂತಿದ್ದು, ಯಾರೂ ಇಲ್ಲದೇ ಆಶ್ರಮ ಪಾಲಾಗಿದ್ದ ಅವರ ಖರ್ಚುಗಳನ್ನು ನೋಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ನಿರ್ದೇಶಕ ಹಾಗೂ ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನಾಳಿದ ಕಲಾವಿದರ ಕುಟುಂಬದ ಕುಡಿಯೊಂದು ನೆಲೆ ಬೆಲೆಯಿಲ್ಲದೇ ಇದೇ ಬೆಂಗಳೂರಿನ ಆಶ್ರಮಕ್ಕೆ ಸೇರಿಕೊಂಡು ಆಶ್ರಯ ಪಡೆದಿರುವ ದುರಂತ ಸುದ್ದಿಯೊಂದರ ಹಿಂದೆ ಬಿದ್ದಿದ್ದೇನೆ. ಹೌದು, ಕನ್ನಡ ಚಿತ್ರರಂಗಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಆರ್.ಎನ್. ನಾಗೇಂದ್ರರಾಯರ ಮುದ್ದಿನ ಸೊಸೆ ಇಲ್ಲೇ ಈ ಕಾಂಕ್ರೀಟ್ ಕಾಡಿನ ನಡುವೆ ಕಳೆದು ಹೋಗಿದ್ದಾರೆ.
ಸುದರ್ಶನ್ ಅವರ ಸಾವಿನ ನಂತರ ದಿಕ್ಕಿಲ್ಲದ ಪರದೇಶಿಯಾಗಿ ಏಕಾಂಗಿ ಬದುಕು ಕಂಡುಕೊಂಡಿದ್ದ ಶೈಲಶ್ರೀ ಮೇಡಂ ಸೈಲೆಂಟ್ ಆಗಿ ಆಶ್ರಮ ಸೇರಿಕೊಂಡಿರುವ ಹೃದಯ ವಿದ್ರಾವಕ ಸುದ್ದಿಯೊಂದು ಬಂದಿದೆ. ಈ ಸುದ್ದಿಯ ಬೆನ್ನು ಹತ್ತಿ ಹೋದಾಗ ಸಿಕ್ಕ ವಿವರಗಳನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇನೆ.

ಖ್ಯಾತ ನಾಯಕ ನಟ ಸುದರ್ಶನ್ ಅವರ ಕಾಲಾನಂತರ ನಾಗರಬಾವಿಯ ಅಪಾರ್ಟ್ಮೆಂಟೊಂದರಲ್ಲಿ ಬದುಕು ನಡೆಸುತ್ತಿದ್ದರು ಶೈಲಶ್ರೀ. ಮಕ್ಕಳಿಗೆ ಸಂಗೀತ ಹೇಳಿಕೊಟ್ಟು ಅಷ್ಟೋ ಇಷ್ಟೋ ಸಂಪಾದಿಸುತ್ತಿದ್ದ ಈ ಕಲಾವಿದೆ ಹೇಗೋ ಜೀವನದ ದಾರಿ ಕಂಡುಕೊಂಡಿದ್ದರು. ಆದರೆ ಅಪಾರ್ಟ್ಮೆಂಟ್ ಓನರ್ ಆ ಬಿಲ್ಡಿಂಗ್ಅನ್ನು ನೆಲಸಮ ಮಾಡಿ ಮತ್ತೊಂದು ಬೃಹತ್ ಅಪಾರ್ಟ್ಮೆಂಟ್ ಕಟ್ಟಲು ತಯಾರಿ ನಡೆಸಿದಾಗ ಶೈಲಶ್ರೀ ಮೇಡಂ ಜಾಗ ಖಾಲಿ ಮಾಡಬೇಕಾಯಿತು.
ಒಂಟಿ ಜೀವ. ಎಲ್ಲಿಗೆ ಹೋಗುವುದೆಂದು ದಿಕ್ಕು ತೋಚದೇ ಕುಳಿತಿದ್ದಾಗ ಅವರಿಗೆ ದಿಕ್ಕಾದವರು ಕನ್ನಡದ ಮತ್ತೊಬ್ಬ ಹಿರಿಯ ನಟಿ. ಹೆಸರು ಬೇಡ ಬಿಡಿ, ಮುಂದೊಮ್ಮೆ ತಿಳಿಸುತ್ತೇನೆ. ಇವರ ಸಲಹೆಯಂತೆ ಶೈಲಶ್ರೀ ಆಶ್ರಮ ಸೇರಿಕೊಂಡರು. ಆಶ್ರಮದ ಖರ್ಚು ವೆಚ್ಚಗಳನ್ನು ಅದೇ ಹಿರಿಯ ನಟಿ ತಾತ್ಕಾಲಿಕವಾಗಿ ನೋಡಿಕೊಂಡರು. ಆದರೆ ದೀರ್ಘಕಾಲದ ತನಕ ಆರ್ಥಿಕವಾಗಿ ಸಹಾಯ ಮಾಡುವುದು ಅವರಿಗೂ ಕಷ್ಟವಾದಾಗ ದೊಡ್ಡ ನೆರವಿಗೆ ನಿಂತವರು ನಟ ದರ್ಶನ್ ತೂಗುದೀಪ.
ತಮ್ಮ ಸೋದರ ದಿನಕರ್ ತೂಗುದೀಪ ಅವರ ಮೂಲಕ ಶೈಲಶ್ರೀಯವರ ಕೊನೆಗಾಲದ ತನಕ ಈ ಸಹಾಯವನ್ನು ನೀಡಲು ದರ್ಶನ್ ತಾವಾಗಿಯೇ ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿಯಿದೆ. ಬಲಗೈ ಕೊಟ್ಟದ್ದು ಎಡಗೈಗೆ ಗೊತ್ತಾಗಬಾರದು ಎಂಬ ನಿಲುವಿನ ದರ್ಶನ್ ಎಷ್ಟೇ ಗುಪ್ತವಾಗಿ ಈ ದೊಡ್ಡ ಸಹಾಯವನ್ನು ಮಾಡಿದರೂ ಸುದ್ದಿ ಹೊರಬಿದ್ದಿದೆ.
ಈ ನಡುವೆ ಯುಟ್ಯೂಬ್ ಓನರ್ವೊಬ್ಬ ಶೈಲಶ್ರೀಯವರನ್ನು ಸಂದರ್ಶಿಸಿ ಏಳೆಂಟು ಎಪಿಸೋಡ್ ಮಾಡಿ ಹೋದವನು ಈ ಅಸಹಾಯಕ ನಟಿಯ ಹೆಸರು ಹೇಳಿಕೊಂಡು ನಾಲ್ಕಾರು ಲಕ್ಷ ಸಂಪಾದಿಸಿ, ಸ್ವಂತಕ್ಕೆ ಬ್ಯಾಂಕ್ ಬ್ಯಾಲೆನ್ಸ್ ಏರಿಸಿಕೊಂಡ ಸುದ್ದಿಯೂ ಹೊರಬಂದಿದೆ. ಇಂಥಾ ಅಮಾನುಷ ಕೃತ್ಯಕ್ಕೆ ಹೇಗಾದರೂ ಆತನಿಗೆ ಮನಸ್ಸು ಬಂತೋ ಗೊತ್ತಿಲ್ಲ. ಕಲೆಯ ಹೆಸರಿನಲ್ಲಿ ಮಾಧ್ಯಮವನ್ನು ಹೀಗೆ ದುರುಪಯೋಗ ಪಡಿಸಿಕೊಂಡರೆ ಕರ್ಮ ರಿಟರ್ನ್ಸ್ ಎನ್ನದೇ ವಿಧಿ ಇಲ್ಲ ಎಂದು ಗಣೇಶ್ ಕಾಸರಗೋಡು ತಮ್ಮ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.












Click it and Unblock the Notifications