'ನಟ ದರ್ಶನ್ ಅಭಿಮಾನಿ ಅಂತಾ ಬಿಗ್ ಬಾಸ್ನಿಂದ ರಿಜೆಕ್ಟ್'
ನಟ ದರ್ಶನ್ ಅವರ ಅಭಿಮಾನಿ ಅಂತಾ ಬಿಗ್ ಬಾಸ್ನಲ್ಲಿ ನನ್ನ ಫೋಟೋ ನೋಡುತ್ತಿದ್ದಂತೆ ರಿಜೆಕ್ಟ್ ಮಾಡಲಾಯಿತು ಎಂದು ನಟ ಹಾಗೂ ಜಿಮ್ ಟ್ರೈನರ್ ಅಂಜನ್ ದೀಪು ಹೇಳಿದ್ದಾರೆ. ಬಾಸ್ ಟಿವಿ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿದ ಅವರು, ತಾವು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶಕ್ಕೆ ಅಡ್ಡಿಯಾದ ಬಗ್ಗೆ ವಿವರಿಸಿದ್ದಾರೆ.
'ಬಿಗ್ ಬಾಸ್ನಿಂದ ನನಗೆ ನೇರವಾಗಿ ಆಫರ್ ಬಂದಿಲ್ಲ. ತುಂಬಾ ಜನ ನನಗೆ ಬಿಗ್ ಬಾಸ್ನವರು ಸಂಪರ್ಕದಲ್ಲಿದ್ದಾರೆ ನಾನು ನಿನ್ನ ವಿವರ ಕಳುಹಿಸುತ್ತೇನೆ ಅಂದರು. ನಾನು ಸರಿ ಕಳಿಸಿ ಅಂದೆ. ಅವರು ಕೂಡ ವಾಟ್ಸಪ್ನಲ್ಲಿ ಕಳುಹಿಸಿದ್ದರು. ಆದರೆ ನನ್ನ ಫೋಟೋ ನೋಡುತ್ತಿದ್ದಂತೆ ರಿಜೆಕ್ಟ್ ಮಾಡಿದರು. ಯಾಕೆಂದರೆ ಇಲ್ಲಿ ಫ್ಯಾನ್ಸ್ ವಾರ್ ವಿಷಯವಾಗುತ್ತದೆ'.

'ನನ್ನ ಫೋಟೋ ನೋಡುತ್ತಿದ್ದಂತೆ ಅಂಜನ್ ದೀಪು ಯಾರು? ಏನು ಮಾಡುತ್ತಿದ್ದಾರೆ? ಯಾರ ಅಭಿಮಾನಿ ಎನ್ನುವುದು ಮೊದಲು ಬರುತ್ತದೆ. ಆಗ ನಾನು ದರ್ಶನ್ ಸರ್ ಅಭಿಮಾನಿ ಅಂತಾ ಗೊತ್ತಾಗುತ್ತದೆ. ನಾನು ಅವತ್ತೂ ದರ್ಶನ್ ಸರ್ ಅಭಿಮಾನಿ, ಇವತ್ತು ದರ್ಶನ್ ಸರ್ ಅಭಿಮಾನಿ, ಮುಂದಕ್ಕೂ ದರ್ಶನ್ ಸರ್ ಅಭಿಮಾನಿ. ಈ ಬಿಗ್ ಬಾಸ್ನಲ್ಲಿ ಏನಾಗುತ್ತದೆ ಅಂದರೆ ದರ್ಶನ್ ಸರ್ ಅಭಿಮಾನಿ ನಾ ಅಂತಾ ಬೇಡ ಎಂದು ನಿರ್ಧರಿಸುತ್ತಾರೆ' ಎಂದರು.
'ಬಿಗ್ ಬಾಸ್ಗೆ ಹೋಗಲು ಮೊದಲು ನಮ್ಮ ಹಿನ್ನೆಲೆ ನೋಡುತ್ತಾರೆ ಅದರ ಜೊತೆಗೆ ಯಾರಾದರೂ ಪ್ರಭಾವಿ ಬೆಂಬಲ ಇರಬೇಕು. ಸಾಮಾನ್ಯವಾಗಿ ಸಣ್ಣ ಪುಟ್ಟವರ ಕೈಯಲ್ಲಿ ಹೇಳಿಸಿದರೆ ಆಗುವುದಿಲ್ಲ, ದೊಡ್ಡ ದೊಡ್ಡವರ ಕೈಯಲ್ಲೇ ಹೇಳಿಸಬೇಕು. ಅದರ ಜೊತೆಗೆ ಯಾರು ಎಷ್ಟು ದಿನ ಇರಬೇಕು ಎನ್ನುವುದು ಮೊದಲೇ ನಿರ್ಧಾರ ಆಗಿರುತ್ತದೆ. ಪೇಮೆಂಟ್ ವಿಚಾರ ಕೂಡ ಮುಖ್ಯವಾಗುತ್ತದೆ. ಅವರಿಗೆ ಅಷ್ಟು ಕೊಟ್ಟರು, ಇವರಿಗೆ ಇಷ್ಟು ಲಕ್ಷ ಕೊಟ್ಟರು ಎನ್ನುತ್ತಾರೆ. ಕೊಟ್ಟಿದ್ದನ್ನು ಯಾರೂ ಹೋಗಿ ನೋಡುವುದಿಲ್ಲ' ಎಂದು ಹೇಳಿದರು.

'ಅದರ ಒಳಗಡೆ ಏನು ನಡೆಯುತ್ತದೆ ಎನ್ನುವುದು ನೂರಕ್ಕೆ ನೂರು ನನಗೆ ಗೊತ್ತು. ಅದರ ಸತ್ಯ ಏನು ಅಂತಾ ನನಗೆ ಗೊತ್ತು. ಯಾಕೆಂದರೆ ಒಳಗೆ ಹೋಗಿರುವವರಲ್ಲಿ ನನ್ನ ಸ್ನೇಹಿತರು ಕೂಡ ಇದ್ದಾರೆ. ಅವರು ನನಗೆ ಈಗಾಗಲೇ ಎಲ್ಲಾ ಹೇಳಿದ್ದಾರೆ. ಒಳಗಡೆ ಏನಾಗುತ್ತದೆ ಅಂತಾ ಹೇಳಿದ್ದಾರೆ. ಹಾಗೆ ಗೊತ್ತಿದ್ದ ಮೇಲೂ ನಾನು ಮತ್ತೆ ಅಲ್ಲಿಗೆ ಹೇಗೆ ಹೋಗಲಿ. ಅಲ್ಲಿ ಹೋದ ಮೇಲೆ ನಿಮ್ಮನ್ನು ಅವರು ಬದಲಿಸಿ ಕಳುಹಿಸುತ್ತಾರೆ. ಅದನ್ನು ಬಿಟ್ಟು ಅಲ್ಲಿ ಕಲಿಯಲು ಏನು ಸಿಗುತ್ತದೆ. ಅಲ್ಲಿಗೆ ಹೋಗಿ ಬಂದ ಮೇಲೆ ಏನು ಮಾಡುತ್ತಿದ್ದೀಯಾ ಅಂತಾ ಕೇಳಿದರೆ ಹೋಟೆಲ್ ಉದ್ಘಾಟನೆ ಇದೆ. ಆ ಕಾರ್ಯಕ್ರಮ ಇದೆ. ಈ ಕಾರ್ಯಕ್ರಮ ಇದೆ ಅಂತಾರೆ ಅಷ್ಟೇ' ಎಂದು ನಟ ಹಾಗೂ ಜಿಮ್ ಟ್ರೈನರ್ ಅಂಜನ್ ದೀಪು ಹೇಳಿದ್ದಾರೆ.











Click it and Unblock the Notifications