ರಾಕೇಶ್ ಪೂಜಾರಿಯ ಆ ದೊಡ್ಡ ಕನಸು ನನಸು ಮಾಡ್ತೀವಿ: ಕಾಮಿಡಿ ಕಿಲಾಡಿಗಳು ಟೀಂ ಮಹತ್ವದ ನಿರ್ಧಾರ
ಇತ್ತೀಚೆಗೆ ಅಕಾಲಿಕ ಮರಣ ಹೊಂದಿರುವ ಕಾಮಿಡಿ ಕಿಲಾಡಿಗಳು ಶೋ ವಿನ್ನರ್ ರಾಕೇಶ್ ಪೂಜಾರಿ ಅವರ ಕನಸುಗಳು ಛಿದ್ರವಾಗಿವೆ. ಮನೆಯ ಜವಾಬ್ದಾರಿಯೊಂದಿಗೆ ತನ್ನ ತಂಗಿ ಮದುವೆ ಮಾಡಬೇಕೆನ್ನುವ ದೊಡ್ಡ ಕನಸು ಕಂಡಿದ್ದರು ರಾಕೇಶ್. ಆದರೆ ಹಠಾತ್ ಸಾವಿನಿಂದ ಅವರ ಕುಟುಂಬ ಚಿಂತಾಜನಕ ಸ್ಥಿತಿ ತಲುಪಿದೆ. ಮನೆಗೆ ಆಧಾರವಾಗಿದ್ದ ರಾಕೇಶ್ ಅವರನ್ನ ಕಳೆದುಕೊಂಡಿರುವ ಕುಟುಂಬಕ್ಕೆ ಮುಂದೆ ದಿಕ್ಕು ಯಾರು? ರಾಕೇಶ್ ತಂಗಿಯ ಮದುವೆ ಜವಾಬ್ದಾರಿ ಯಾರು ನಿಭಾಯಿಸುತ್ತಾರೆ? ಎನ್ನುವ ಚಿಂತೆಯಲ್ಲೇ ಮುಳುಗಿದೆ. ಇದೀಗ ರಾಕೇಶ್ ಪೂಜಾರಿ ಅವರ ಕನಸು ನನಸು ಮಾಡುವ ಬಗ್ಗೆ ಕಾಮಿಡಿ ಕಿಲಾಡಿಗಳು ಟೀಂ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಹೌದು, ಕಾಮಿಡಿ ಕಿಲಾಡಿಗಳು ಸೀಸನ್-3ರ ವಿನ್ನರ್ ಕೂಡ ಆಗಿರುವ ರಾಕೇಶ್ ಅವರಿಗೆ ಸಹ ಸ್ಪರ್ಧಿಗಳೆಲ್ಲರೂ ಉತ್ತಮ ಸ್ನೇಹಿತರಾಗಿದ್ದರು. ನಿನ್ನೆ ಅವರ ಹುಟ್ಟೂರಿನಲ್ಲೇ ಇಡೀ ಕಾಮಿಡಿ ಕಿಲಾಡಿಗಳು ಟೀಂ ಧಾವಿಸಿ, ನೋವಿನಲ್ಲೂ ಭಾಗಿಯಾಗಿದ್ದೇ ಇದಕ್ಕೆ ಸಾಕ್ಷಿ. ಗೆಳೆಯನ ಸಾವಿಗೆ ಕಣ್ಣೀರು ಸುರಿಸಿದ ಸ್ಪರ್ಧಿಗಳು ಅವರ ಕುಟುಂಬಕ್ಕೆ ಆಸರೆಯಾಗಲು ನಿರ್ಧರಿಸಿದ್ದಾರೆ.

ನಿರೂಪಕ ಮಾಸ್ಟರ್ ಆನಂದ್ ಕೂಡ ರಾಕೇಶ್ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಗೆಳೆಯನ ಸಾವಿನ ಬಗ್ಗೆ ನೋವಿನಲ್ಲೇ ಮಾತನಾಡಿರುವ ಆನಂದ್, ರಾಕೇಶ್ಗೆ ತನ್ನ ತಂಗಿ ಮದುವೆ ಮಾಡಬೇಕು ಎಂಬ ದೊಡ್ಡ ಕನಸಿತ್ತು. ಆದರೆ ರಾಕೇಶ್ ಈಗ ನಮ್ಮೊಂದಿಗೆ ಇಲ್ಲ. ಏನೇ ತಂದು ಮುಂದೆ ಇಟ್ಟರೂ, ಕೈಲಾಸವೇ ತಂದು ಮುಂದೆ ಇಟ್ರೂ ರಾಕೇಶ್ ತಂಗಿಗೆ ಖುಷಿ ಆಗಲ್ಲ. ನನ್ನ ಅಣ್ಣ ಇಲ್ಲ ಅನ್ನೋ ನೋವು ಅವರಿಗೆ ಸದಾ ಇರುತ್ತದೆ. ಹಾಗಾಗಿ ರಾಕೇಶ್ ಕನಸನ್ನು ನಾವು ಈಡೇರಿಸುತ್ತೇವೆ. ನಮ್ಮ ಕೈಲಾದ ಸಹಾಯವನ್ನು ನಾವು ಮಾಡುತ್ತೇವೆ. ಅವನು ಅಲ್ಲಿಂದಲೇ ಹರಸಲಿ ಎಂದು ಮಾಸ್ಟರ್ ಆನಂದ್ ಹೇಳಿದ್ದಾರೆ.
ರಾಕೇಶ್ ತಂಗಿಯ ಮದುವೆ ಮಾಡಿಸುವುದೇ ನಮ್ಮ ಮುಂದಿನ ದೊಡ್ಡ ಟಾರ್ಗೆಟ್. ಇದೇ ವಿಚಾರವಾಗಿ ನಾವೆಲ್ಲ ಚರ್ಚೆ ಮಾಡ್ತಿದ್ದೀವಿ. ಹೇಗಾದ್ರೂ ಮಾಡಿ ಚೆನ್ನಾಗಿ ನಡೆಸಿಕೊಡಬೇಕು ಎಂದುಕೊಂಡಿದ್ದೀವಿ. ನಾವು ಮದುವೆ ಏನೇ ಗ್ರ್ಯಾಂಡ್ ಆಗಿ ಮಾಡಬಹುದು. ಆದರೆ ಅಣ್ಣ ಇಲ್ಲ ಅನ್ನೋ ಭಾವನೆಯನ್ನ ನಾವು ಹೋಗಲಾಡಿಸಲು ಆಗಲ್ಲ. ಹಾಗಾಗಿ ನಮ್ಮಿಂದ ಏನಾಗುತ್ತೋ ಅದನ್ನಂತೂ ಮಾಡ್ತೀವಿ ಎಂದಿದ್ದಾರೆ.

ಕುಟುಂಬಕ್ಕೆ ಏನು ಮಾಡಬಹುದೋ ನೋಡೋಣ..
ರಾಕೇಶ್ ಅನುಕರಣೆ ಮಾಡುವಾಗ ಯಾರ ಮನಸ್ಸಿಗೂ ನೋವಾಗದಂತೆ ನೋಡಿಕೊಳ್ಳುತ್ತಿದ್ದ. ಅದು ಎಷ್ಟರಮಟ್ಟಿಗೆ ಅಂದ್ರೆ ಅವನು ಮಾಡುವ ಅನುಕರಣೆ ನೋಡಿ ಆ ಪಾತ್ರದವರೇ ಬಂದು ಆತನನ್ನು ಮೆಚ್ಚುತ್ತಿದ್ರು, ತಬ್ಬಿಕೊಳ್ಳುತ್ತಿದ್ರು. ರಾಕೇಶ್ ಒಳ್ಳೆ ಟೆಡ್ಡಿಬೇರ್ ರೀತಿ ಇದ್ದ, ಎಲ್ಲರಿಗೂ ಇಷ್ಟ ಆಗ್ತಿದ್ದ. ರಾಕೇಶ್ಗೆ ಒಳ್ಳೊಳ್ಳೆ ಅವಕಾಶಗಳು ಅರಸಿ ಬರುತ್ತಿದ್ದವು. ಹಲವು ಸಿನಿಮಾಗಳಲ್ಲೂ ನಟಿಸುತ್ತಿದ್ದ. ನಿನ್ನೆ ಎಲ್ಲೋ ಖುಷಿಯಾಗಿದ್ದೆವು. ಈಗ ದುಃಖದಲ್ಲಿದ್ದೇವೆ. ಅವನು ಪಡೆದುಕೊಂಡು ಬಂದಿದ್ದು ಇಷ್ಟೇ ಏನೋ ಅನಿಸುತ್ತಿದೆ ಎಂದು ಆನಂದ್ ಕಣ್ಣೀರಿಟ್ಟಿದ್ದಾರೆ.
ರಾಕೇಶ್ ತನ್ನ ತಾಯಿಯೊಂದಿಗೂ ತುಂಬಾ ಅಟ್ಯಾಚ್ಮೆಂಟ್ ಇಟ್ಟುಕೊಂಡಿದ್ದ. ಮುಂದೆ ಅವರ ಕುಟುಂಬ ನಿರ್ವಹಣೆ ಹೇಗೆ ಅನ್ನೋದೆ ಒಂದು ದೊಡ್ಡ ಪ್ರಶ್ನೆ. ನೋಡೋಣ ಈ ಮದುವೆ ವಿಚಾರ ಮುಗಿದ ಮೇಲೆ ಅವರ ಕುಟುಂಬಕ್ಕೆ ಏನು ಮಾಡಬಹುದು ಎಂಬ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ ಎಂದು ಮಾಸ್ಟರ್ ಆನಂದ್ ಭರವಸೆಯ ಮಾತುಗಳನ್ನಾಡಿದ್ದಾರೆ.












Click it and Unblock the Notifications