'ಗೋಧೂಳಿ ಲಗ್ನದಲ್ಲೇ ಪ್ರಪೋಸ್': ಬಿಗ್ ಬಾಸ್ ರಂಜಿತ್ ಇಂಟ್ರಸ್ಟಿಂಗ್ ಲವ್ ಸ್ಟೋರಿ
ಕನ್ನಡ ಕಿರುತೆರೆ ನಟ ಹಾಗೂ ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಯಾಗಿದ್ದ ರಂಜಿತ್ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಮಾರ್ಚ್ 06 ಗುರುವಾರದಂದು ಪ್ರೀತಿಸಿದ ಹುಡುಗಿಯ ಜೊತೆ ರಂಜಿತ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಟ ರಂಜಿತ್ ನಿಶ್ಚಿತಾರ್ಥ ಮಾಡಿಕೊಂಡ ಹುಡುಗಿಯ ಹೆಸರು ಮಾನಸ ಗೌಡ ಆಗಿದ್ದು, ಇವರು ವೃತ್ತಿಯಲ್ಲಿ ಫ್ಯಾಷನ್ ಡಿಸೈನರ್ ಆಗಿದ್ದಾರೆ.
ಇದೀಗ ರಂಜಿತ್ ಮೊದಲ ಬಾರಿಗೆ ಮಾನಸ ಗೌಡ ಅವರಿಗೆ ತಮ್ಮ ಪ್ರೀತಿ ಹೇಳಿಕೊಂಡ ದಿನದ ಬಗ್ಗೆ ಮಾತನಾಡಿದ್ದಾರೆ. ಬಾಸ್ ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, 'ಏನೇ ಮಾಡುವುದು ಇದ್ದರೂ ಗೋಧೂಳಿ ಲಗ್ನದಲ್ಲಿ ಮಾಡಿದೆ ಒಳ್ಳೆಯದು ಎನ್ನುವುದು ನನ್ನ ನಂಬಿಕೆ. ಹೀಗಾಗಿ ಆ ದಿನ ಪ್ರೀತಿ ಹೇಳಿಕೊಳ್ಳಬೇಕು ಎಂದು ನಿರ್ಧರಿಸಿ ಪಾರ್ಟಿ ಮುಗಿಸಿಕೊಂಡು ಅವರ ಬೋಟಿಕ್ ಹತ್ತಿರ ಹೋಗಿದ್ದೆ'.

'ಫೋನ್ ಮಾಡಿ ಕೆಳಗೆ ಬನ್ನಿ ಎಂದೆ, ಅವರು ಬಂದು ಕಾರಿನಲ್ಲಿ ಕುಳಿತುಕೊಂಡರು. ನಾನು ಗೋಧೂಳಿ ಲಗ್ನಕ್ಕೆ ಕಾಯುತ್ತಿದ್ದೆ. ಅವರು ಯಾಕಾಗಿ ಕಾಯುತ್ತಿದ್ದೀರಿ ಅಂತಾ ಕೇಳಿದರು. ನಾನು ಐ ಲವ್ ಯೂ ಹೇಳುವುದಕ್ಕೆ ಅಂತಾ ನೇರವಾಗಿ ಹೇಳಿದೆ. ಆ ದಿನ ಸಂಜೆ ನಾನೇ ಮೊದಲು ಅವರಿಗೆ ಪ್ರಪೋಸ್ ಮಾಡಿದೆ. ಆದರೆ ಇದುವರೆಗೂ ಒಂದು ರೋಸ್ ನಾನು ಅವರಿಗೆ ಕೊಟ್ಟಿಲ್ಲ. ಅವರೇ ನನಗೆ ಕೊಟ್ಟಿರುವುದು' ಎಂದರು.
'ಆ ದಿನ ಪ್ರಪೋಸ್ ಮಾಡಿದ ಮೇಲೆ ಅವರಿಂದ ಉತ್ತರ ಬರಲಿಲ್ಲ. ಅದಾದ ಮೇಲೆ ಒಂದು ದಿನ ಊಟಕ್ಕೆ ಹೋಗಿದ್ದೇವು. ಅಲ್ಲಿಂದ ಬಂದು ವಾಪಸ್ ಮನೆಗೆ ಹೋಗುವಾಗ ನಾನೇನೋ ಹೇಳಬೇಕು ಅಂದರು, ಹೇಳಿ ಅಂದೆ ಐ ಲವ್ ಯೂ ಟು ಎಂದು ಒಂದು ಹಗ್ ಕೊಟ್ಟು ಸೀದಾ ಹೋದರು. ನಾನು ಕೂಡ ಥ್ಯಾಂಕ್ಯೂ ಅಂತಾ ಹೇಳಿದೆ. ಅಲ್ಲಿಂದ ನಮ್ಮ ಪ್ರೀತಿ ಶುರುವಾಯ್ತು' ಎಂದು ಹೇಳಿದರು.

'ನಾನು ಲವರ್ ಬಾಯ್ ಅಲ್ಲ..ಎಲ್ಲದಕ್ಕೂ ಒಂದು ವಿಶೇಷವಾದ ಘಳಿಗೆ ಅಂತಾ ಇರುತ್ತದೆ. ನಾನು ಮೊದಲ ಬಾರಿಗೆ ಅವರ ಹಣೆಗೆ ಮುತ್ತು ಕೊಟ್ಟಿದ್ದು, ನಮ್ಮ ನಿಶ್ಚಿತಾರ್ಥದಲ್ಲಿಯೇ. ಯಾರೇ ಹುಡುಗಿ ಆಗಲಿ, ಅವಳು ನನ್ನ ಲವರ್ ಆದರೂ ಕೂಡ ಅವಳಿಗೆ ಮುಜುಗರ ಆಗುವಂತೆ ನಾವು ನಡೆದುಕೊಳ್ಳಬಾರದು. ಸುಮ್ಮನೆ ಕೈ ಹಿಡಿದುಕೊಂಡು ಕೂರುವುದು ಕೂಡ ಖುಷಿ ಕೊಡುತ್ತದೆ. ಅದು ಹೊರಗಡೆ ಇಲ್ಲ. ಈಗ ನಿಶ್ಚಿತಾರ್ಥ ಆದ ಮೇಲೆ ಕೈ ಹಿಡಿದುಕೊಂಡು ಓಡಾಡುತ್ತೇವೆ. ಕಾರಿನಲ್ಲಿ ಕುಳಿತಾಗ ನನ್ನ ಮುಖ ನೋಡಿಕೊಂಡು ಕುಳಿತುಕೊಳ್ಳುತ್ತಾಳೆ ಅಂತಹ ಕ್ಷಣಗಳೇ ನಮಗೆ ಖುಷಿಕೊಡುತ್ತದೆ' ಎಂದಿದ್ದಾರೆ.
ರಂಜಿತ್ ಬಗ್ಗೆ ಭಾವಿ ಪತ್ನಿ ಮಾನಸ ಗೌಡ ಹೇಳಿದ್ದೇನು?
ಇನ್ನು ರಂಜಿತ್ ಭಾವಿ ಪತ್ನಿ ಮಾನಸ ಗೌಡ ಕೂಡ ಮಾತನಾಡಿದ್ದು, 'ರಂಜಿತ್ ಅವರು ತುಂಬಾ ಸಿಂಪಲ್ ವ್ಯಕ್ತಿ, ಅವರಿಗೆ ರೋಸ್ ಕೊಡುವುದು, ಪ್ರಪೋಸ್ ಮಾಡುವುದು ಅದೆಲ್ಲಾ ಇಷ್ಟಪಡುವುದಿಲ್ಲ. ಅವರು ಸಿಂಪಲ್ ಆಗಿ ಇರಲು ಇಷ್ಟಪಡುತ್ತಾರೆ. ಅವರು ಪರಿಚಯವಾದ ಮೊದಮೊದಲೇ ಅವರ ಹುಡುಗಿ ಹೀಗೆ ಇರಬೇಕು ಎಂದೆಲ್ಲಾ ಹೇಳಿಕೊಂಡಿದ್ದರು. ಈ ಗುಣಗಳು ನನಗೆ ಹೋಲಿಕೆ ಆಗುತ್ತಲ್ಲಾ ಅಂತಾ ಅನಿಸಿತ್ತು. ಅವರು ಪ್ರಪೋಸ್ ಮಾಡಿದ ಮೇಲೆ ನನಗೂ ಇಷ್ಟ ಇದೆ ಅಂತಾ ಹೇಳಿದೆ' ಎಂದು ಹೇಳಿದರು.

ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಆಗಿದ್ದ ರಂಜಿತ್ ದಿಢೀರ್ ನಿಶ್ಚಿತಾರ್ಥ ಆಗಿ ಎಲ್ಲರಿಗೂ ಸಪ್ರೈಸ್ ಕೊಟ್ಟಿದ್ದರು. ಯಾಕೆಂದರೆ ರಂಜಿತ್ ಎಲ್ಲಿಯೂ ತಮ್ಮ ಪ್ರೀತಿ ಬಗ್ಗೆ ಹೇಳಿಕೊಂಡಿರಲಿಲ್ಲ. ಬದಲಿಗೆ ಈವರೆಗೂ ಯಾಕೆ ಮದುವೆಯಾಗಿಲ್ಲ ಎನ್ನುವುದರ ಬಗ್ಗೆ ಮಾತನಾಡಿದ್ದರು. ರಂಜಿತ್ ಅಮ್ಮನನ್ನು ಹೆಚ್ಚು ಇಷ್ಟ ಪಡುವ ಕಾರಣ ತಮ್ಮ ತಾಯಂತ ಮಡದಿ ಬೇಕು ಎಂದು ಬಯಸಿದ್ದರು.
'ಇಷ್ಟು ವರ್ಷ ಆದರೂ ನಾನ್ಯಾಕೆ ಮದುವೆ ಆಗಿಲ್ಲ ಅಂದರೆ ಬರುವ ಹುಡುಗಿಯಲ್ಲಿ ನನ್ನ ತಾಯಿ ಗುಣಗಳನ್ನು ಹುಡುಕುತ್ತಿದ್ದೇನೆ. ಆದರೆ ಅದು ಸಿಗುತ್ತಿಲ್ಲ. ಅದೇ ಕಾರಣಕ್ಕೆ ನಾನಿನ್ನೂ ಮದುವೆಯಾಗಿಲ್ಲ. ಆ ಜಾಗ ತುಂಬಲು ಬರುವವರಿಂದಲೇ ಸಾಧ್ಯ. ನನ್ನ ತಾಯಾಗಿ, ನನ್ನ ಹೆಂಡತಿಯಾಗಿ ಪ್ರತಿಯೊಂದು ಸಂಬಂಧವನ್ನು ತುಂಬಿ ಬರಬೇಕು. ಈ ಮನೆಗೆ ಯಾರೇ ಬಂದರೂ ಊಟ ಕೊಡದೇ, ನೀರು ಕೊಡದೇ ನನ್ನ ಅಮ್ಮ ಕಳುಹಿಸುತ್ತಿರಲಿಲ್ಲ. ಹೀಗಾಗಿ ಅವಳಲ್ಲೂ ಇದೇ ಗುಣ ಇರಬೇಕು. ಅದೇ ಗುಣಗಳನ್ನು ಹುಡುಕುತ್ತಿದ್ದೇನೆ' ಎಂದಿದ್ದರು. ಈಗ ತಮ್ಮ ಭಾವಿ ಪತ್ನಿ ಮಾನಸ ಗೌಡ ಬಗ್ಗೆ ಮಾತನಾಡುವಾಗ 'ಮಾನಸ ಅವರ ಕಣ್ಣುಗಳು ನನ್ನ ತಾಯಂತೆ ಇದೆ' ಎಂದು ಹೇಳಿದ್ದರು.
ಬಿಗ್ಬಾಸ್ನಿಂದ ಹೊರಬಂದಿದ್ದೇಕೆ ರಂಜಿತ್?
ನಟ ರಂಜಿತ್ ಬಿಗ್ ಬಾಸ್ ಕನ್ನಡ ಸೀಸನ್ 11ಕ್ಕೆ ಕಾಲಿಡುತ್ತಿದ್ದಂತೆ ಇವರು ಪಕ್ಕಾ ಫಿನಾಲೆಯ ಟಾಪ್ ಐದು ಸ್ಪರ್ಧಿಗಳಲ್ಲಿ ಒಬ್ಬರು ಎಂದು ಅನೇಕರು ಊಹಿಸಿದ್ದರು. ಬಿಗ್ ಬಾಸ್ ಮನೆಯಲ್ಲಿ ಕೆಲವೇ ದಿನಗಳು ಇದ್ದರೂ ಕೂಡ ರಂಜಿತ್ ತಮ್ಮದೇ ಆದ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದರು. ಹೀಗಾಗಿ ಅವರೆಲ್ಲಾ ರಂಜಿತ್ ಗೆದ್ದೇ ಗೆಲ್ಲುತ್ತಾರೆ ಎನ್ನುವ ನಿರೀಕ್ಷೆಯಲ್ಲಿದ್ದರು. ಆದರೆ ನಡೆದ ಒಂದು ಅಚಾತುರ್ಯದಿಂದ ರಂಜಿತ್ ಎಲಿಮಿನೇಟ್ ಆಗದೇ ನೇರವಾಗಿ ಬಿಗ್ ಬಾಸ್ ಮನೆಯಿಂದ ಹೊರಬಂದರು. ಇದು ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಮನೆಯೊಳಗಿದ್ದ ಸ್ಪರ್ಧಿಗಳಿಗೆ ಮಾತ್ರವಲ್ಲದೇ ಪ್ರೇಕ್ಷಕರಿಗೂ ಕೂಡ ಶಾಕ್ ಕೊಟ್ಟಿತ್ತು.
ಬಿಗ್ ಬಾಸ್ ಕನ್ನಡ ಸೀಸನ್ 11ರ ಆರಂಭದ ಕೆಲವು ವಾರಗಳಲ್ಲಿ ಲಾಯರ್ ಜಗದೀಶ್ ಹಾಗೂ ಇತರ ಸ್ಪರ್ಧಿಗಳ ನಡುವೆ ಜಟಾಪಟಿ ಜೋರಾಗಿಯೇ ನಡೆಯುತ್ತಿತ್ತು. ಹೆಣ್ಣು ಮಕ್ಕಳ ಬಗ್ಗೆ ಲಾಯರ್ ಜಗದೀಶ್ ಮಾತನಾಡಿದ್ದಾರೆ ಎಂದು ವಾದ-ಪ್ರತಿವಾದಗಳು ನಡೆಯುತ್ತಿದ್ದ ಸಂದರ್ಭದಲ್ಲಿ ರಂಜಿತ್, ಲಾಯರ್ ಜಗದೀಶ್ ಅವರನ್ನು ತಳ್ಳಿದ್ದಾರೆ. ಈ ಜಗಳ ಅತಿರೇಖಕ್ಕೆ ಹೋಗಿದ್ದು, ಕೊನೆಗೆ ಬಿಗ್ ಬಾಸ್ ಇಬ್ಬರು ಸ್ಪರ್ಧಿಗಳನ್ನು ನೇರವಾಗಿ ಮನೆಯಿಂದ ಹೊರಗೆ ಕಳುಹಿಸಿದರು. ಹೀಗಾಗಿ ರಂಜಿತ್ ಬಿಗ್ ಬಾಸ್ ಮನೆಯಿಂದ ಆಚೆ ಬರುವಂತಾಯಿತು.












Click it and Unblock the Notifications