Gold Suresh: ನಿಜಕ್ಕೂ ಗೋಲ್ಡ್ ಸುರೇಶ್ಗೆ ವ್ಯವಹಾರದಲ್ಲಿ ನಷ್ಟ ಆಯ್ತಾ? ಅಸಲಿಯತ್ತೇನು?
ಗೋಲ್ಡ್ ಸುರೇಶ್ ಏಕಾಏಕಿ ಬಿಗ್ ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ಅನೇಕ ಗೊಂದಲಗಳು ಸೃಷ್ಟಿಯಾದವು. ಮೊದಲು ಸುರೇಶ್ ತಂದೆಗೆ ಹುಷಾರಿಲ್ಲ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಬಳಿಕ ಅವರ ತಂದೆಯೇ ಈ ಗಾಳಿ ಸುದ್ದಿಗೆ ವಿಡಿಯೋ ಮೂಲಕ ಸ್ಪಷ್ಟನೆ ಕೊಟ್ಟರು. ಬಳಿಕ ಮಗಳಿಗೆ ಹುಷಾರಿಲ್ಲ, ಪತ್ನಿಗೆ ಹುಷಾರಿಲ್ಲ ಹೀಗೆ ಅನೇಕ ಸುದ್ದಿಗಳು ಮೊದಲು ಕೇಳಿಬಂದವು. ಬಳಿಕ ಬಿಗ್ ಬಾಸ್ ತಂಡದ ವಿರುದ್ಧವೇ ಎಲಿಮಿನೇಷನ್ ಬದಲಿಗೆ ನೇರವಾಗಿ ಕಳುಹಿಸಿದೆ ಎನ್ನುವ ಆರೋಪ ಕೇಳಿ ಬಂದಿತ್ತು.
ಈ ಎಲ್ಲಾ ಆರೋಪ ಹಾಗೂ ಪ್ರಶ್ನೆಗಳಿಗೆ ಕಿಚ್ಚ ಸುದೀಪ್ ಬಹಳ ಸ್ಪಷ್ಟವಾಗಿ ಉತ್ತರ ಕೊಟ್ಟಿದ್ದರು. ಬ್ಯುಸಿನೆಸ್ ನಷ್ಟದ ಪರಿಸ್ಥಿತಿಗೆ ಬಂದಿದ್ದು, ಅವರ ಕುಟುಂಬಕ್ಕೆ ಗೋಲ್ಡ್ ಸುರೇಶ್ ಅಗತ್ಯವಿದ್ದ ಕಾರಣ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದರು. ಹಾಗಿದ್ದರೆ ನಿಜಕ್ಕೂ ಗೋಲ್ಡ್ ಸುರೇಶ್ ಬ್ಯುಸಿನೆಸ್ ನಷ್ಟ ಆಯ್ತಾ?. ಅಷ್ಟಕ್ಕೂ ಆಗಿದ್ದೇನು? ಎನ್ನುವ ಪ್ರಶ್ನೆಗೆ ಸ್ವತಃ ಗೋಲ್ಡ್ ಸುರೇಶ್ ಉತ್ತರ ಕೊಟ್ಟಿದ್ದಾರೆ.

ಮಿರರ್ ಕನ್ನಡ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಮಾತನಾಡಿದ ಅವರು, 'ಬಿಗ್ ಬಾಸ್ಗೆ ಹೋಗುವಾಗ ಅಗ್ರಿಮೆಂಟ್ ಇರುತ್ತದೆ. ಅದರಲ್ಲೂ ಕೂಡ ಕೆಲವು ವಿಷಯಗಳನ್ನು ಬರೆದಿರುತ್ತಾರೆ. ಆ ಅಗ್ರಿಮೆಂಟ್ ಅಲ್ಲಿ ಏನಿರುತ್ತದೆ ಎನ್ನುವುದು ನಮಗೆ ಮಾತ್ರ ಗೊತ್ತಿರುತ್ತದೆ. ತುಂಬಾ ತುರ್ತು ಪರಿಸ್ಥಿತಿ ಇದ್ದಾಗ ಈ ರೀತಿ ಹೊರಗೆ ಬರಲು ಬಿಗ್ ಬಾಸ್ ತಂಡ ನನಗೆ ಅವಕಾಶ ಮಾಡಿಕೊಟ್ಟಿದ್ದಾರೆ' ಎಂದರು.
'ನಾನು ಬಿಗ್ ಬಾಸ್ಗೆ ಹೋಗಬೇಕು ಅಂದುಕೊಂಡಾಗ ನನ್ನಲ್ಲೊಂದು ಪ್ರಶ್ನೆ ಇತ್ತು. ನನ್ನ ಬ್ಯುಸಿನೆಸ್ ಅನ್ನು ಯಾರು ನೋಡಿಕೊಳ್ಳುತ್ತಾರೆ ಅಂತಾ. ಇದೊಂದು ದೊಡ್ಡ ಗೊಂದಲವೇ ನನ್ನ ಮನಸ್ಸಿನಲ್ಲಿ ಇತ್ತು. ಕೊನೆಯಲ್ಲಿ ನನ್ನ ಧರ್ಮ ಪತ್ನಿಗೆ ನಾನು ಈ ಜವಾಬ್ದಾರಿಯನ್ನು ವಹಿಸುತ್ತೇನೆ. ಆದರೆ ಅವರಿಗೆ ಬ್ಯುಸಿನೆಸ್ನಲ್ಲಿ ಯಾವುದೇ ವಿಚಾರ ಗೊತ್ತಿರುವುದಿಲ್ಲ. ಅವರು ಈ ಕ್ಷೇತ್ರದವರೇ ಅಲ್ಲ. ಅವರು ಓದಿರುವುದಕ್ಕೂ ಇದಕ್ಕೂ ಯಾವುದೇ ಸಂಬಂಧ ಇರುವುದಿಲ್ಲ' ಎಂದು ಹೇಳಿದರು.

'ಈ ರೀತಿ ಇದ್ದಾಗ ಅವರಿಗೆ ಕೆಲಸದ ಒತ್ತಡ ಜಾಸ್ತಿ ಆಗುತ್ತದೆ. ಅವರಿಗೆ ನಿರ್ಧಾರ ತೆಗೆದುಕೊಳ್ಳಲು ತುಂಬಾ ಗೊಂದಲ ಆಗುತ್ತದೆ. ನಾನು ಒಬ್ಬ ಮಾಲೀಕನಾಗಿ ತೆಗೆದುಕೊಳ್ಳುವ ನಿರ್ಧಾರ ಅವರಿಗೆ ತೆಗೆದುಕೊಳ್ಳಲು ಆಗುತ್ತಿರಲಿಲ್ಲ. ಆ ಒಂದು ಗೊಂದಲದಲ್ಲಿ ಅವರಿದ್ದರು ಹಾಗೂ ಇದೇ ರೀತಿ ಹೋದರೆ ಬ್ಯುಸಿನೆಸ್ ಕಂಟ್ರೋಲ್ ತಪ್ಪುತ್ತದೆ. ಹೀಗೆ ಬಿಟ್ಟರೆ ಆಗುವುದಿಲ್ಲ. ನಾನು ಬಂದು ಕಂಟ್ರೋಲ್ಗೆ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿತ್ತು. ಹೀಗಾಗಿ ಅವರ ಮನವಿ ಮೇರೆಗೆ ನಾನು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದೆ ಎಂದು' ಗೋಲ್ಡ್ ಸುರೇಶ್ ಹೇಳಿದ್ದಾರೆ.












Click it and Unblock the Notifications